Advertisement

ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆಯಾಗಲಿ: ಮುತಾಲಿಕ್

02:15 PM Nov 25, 2021 | Team Udayavani |

ವಿಜಯಪುರ: ದೇಶದ್ರೋಹಿ ಕೃತ್ಯಕ್ಕೆ ಸಮಾನವಾದ ಮತಾಂತರವನ್ನು ತಡೆಯುವ ಕುರಿತು ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.

Advertisement

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಪೃಶ್ಯ ದಲಿತರು ಮಾತ್ರವಲ್ಲ ಮೇಲ್ವರ್ಗದ ಬ್ರಾಹ್ಮಣ, ಲಿಂಗಾಯತ, ಕುರುಬ ಹೀಗೆ ಮುಂದುವರೆದ ಸಮುದಾಯಗಳ ಜನರನ್ನೂ ಮತಾಂತರ ಮಾಡಲಾಗುತ್ತಿದೆ ಎಂದರು.

ಬೀದರ್, ಕಲಬುರ್ಗಿ ಭಾಗದಲ್ಲಿ ಮಾದಿಗ ಸಮುದಾಯ, ವಿಜಯಪುರ ಜಿಲ್ಲೆಯಲ್ಲಿ ಬಂಜಾರಾ ಸಮುದಾಯ, ದಾವಣಗೆರೆ, ಚಿತ್ರದುರ್ಗ ಭಾಗದಲ್ಲಿ ಲಿಂಗಾಯತರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರನ್ನೂ ಮತಾಂತರ ಮಾಡಲಾಗಿದೆ ಎಂದು ವಿವರಿಸಿದರು‌.

ಈ ದೇಶದ್ರೋಹಿ ಮತಾಂತರ ಕೃತ್ಯ ತಡೆಯುವ ಕುರಿತು ಕಾನೂನು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಮತಾಂತರ ತಡೆ ಕಾಯ್ದೆ ಜಾರಿಗಾಗಿ ಮಠಾಧೀಶರು ಮಠಗಳನ್ನು ಬಿಟ್ಟು ಹೊರಗೆ ಬರಬೇಕು ಎಂದು ಆಗ್ರಹಿಸಿದರು.

ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯ ಮಠಾಧೀಶರ ನಡೆ ಸ್ವಾಗತಾರ್ಹ ಹಾಗೂ ಮಾದರಿ. ರಾಜಕೀಯ, ಸ್ವಾರ್ಥ, ಹಿಂದೂ ಸಂಘಟನೆಗಳು ದುರ್ಬಲತೆಯೇ ಅನ್ಯ ಧರ್ಮೀಯರು ನಿರ್ಭಯವಾಗಿ ಮತಾಂತರ ಕೃತ್ಯ ನಡೆಯಲು ಕಾರಣವಾಗಿದೆ ಎಂದರು.

Advertisement

ಅಸ್ಪೃಶ್ಯತೆ ನಿವಾರಣೆ ವಿಷಯದಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ. ಮತಾಂತರದ ಬಳಿಕ ದಲಿತ ಕ್ರಿಶ್ಚಿಯನ್ ಎಂದು ಪ್ರತ್ಯೇಕಿಸಿದ್ದಾರೆ. ಆರಂಭದಲ್ಲಿ ಹಣದ ಅಮಿಷ ಒಡ್ಡಿ ಮತಾಂತರ ಮಾಡಿ, ನಂತರ ಮತಾಂತರ ಆದವರಿಂದಲೇ ಸುಲಿಗೆ ಮಾಡುವ ಕೃತ್ಯ ಮಾಡಲಾಗುತ್ತದೆ ಎಂಬುದನ್ನು ಮತಾಂತರ ಆಗುವವರು ಅರಿಯಬೇಕು ಎಂದರು.

ರಾತ್ರಿಯಿಂದ ಬೆಳಗಿನ ವರೆಗೆ ಮಸೀದಿ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಧ್ವನಿವರ್ಧಕ ಬಳಕೆ ನಿಷೇಧದ ಬಗ್ಗೆ ಸುಪ್ರೀಂ ಕೋರ್ಟ್ ಅದೇಶವಿದೆ. ಆದರೂ ಆದೇಶ ಉಲ್ಲಂಘಿಸಿ, ನ್ಯಾಯಾಂಗ ನಿಂದನೆ ಮಾಡುವ ಕೆಲಸ ನಡೆಯುತ್ತಲೇ ಇದೆ. ಹಲವು ಬಾರಿ ಮನವಿ ಮಾಡಿದರೂ ನಿಶ್ಯಬ್ಧ ವಲಯಗಳ ಪರಿಸರದ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಮಾಡಲಾಗುತ್ತದೆ. ಕೂಡಲೇ ಸರ್ಕಾರ, ಪೊಲೀಸರು ಮಸೀದಿಗಳಲ್ಲಿ ಮೈಕ್ ತೆಗೆಸದಿದ್ದರೆ ನಮ್ಮ ಸಂಘಟನೆಯೇ ಆ ಕೆಲಸ ಮಾಡಲಿದೆ ಎಂದರು.

ಸರ್ಕಾರ ತ್ವರಿತವಾಗಿ ಮತಾಂತರ ಕಾಯ್ದೆ ಜಾರಿಯ ಬಳಿಕ ನೈಜ ಅನುಷ್ಠಾನ ಮಾಡಬೇಕು. ಸರ್ಕಾರ ಕಾನೂನು ಜಾರಿಗೆ ತರಲು ಎಲ್ಲರೂ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು

ಸರ್ಕಾರ ಕಾನೂನು ಜಾರಿಗೆ ತರುವಲ್ಲಿ ವಿಳಂಬ ಮಾಡಿದಲ್ಲಿ, ಮತಾಂತರಿ‌ ಕಾರ್ಯದಲ್ಲಿ ತೊಡಗಿವರು ತಕ್ಷಣ ತಮ್ಮ ಕೃತ್ಯ ನಿಲ್ಲಿಸಬೇಕು. ಇಲ್ಲವಾದಲ್ಲಿ ಹಳ್ಳಿಗಳಿಗೆ ತೆರಳಿ ಮತಾಂತರ ಮಾಡುವರನ್ನು ನಮ್ಮ ಸಂಘಟನೆಯ ಕಾರ್ಯಕರ್ತರು ಸಿಕ್ಕಲ್ಲಿ ಒದೆಯುತ್ತೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:ಅಧಿಕಾರಕ್ಕೇರಿದ ಕೆಲವೇ ಗಂಟೆಗಳಲ್ಲಿ ಸ್ವೀಡನ್ ನ ಮೊದಲ ಮಹಿಳಾ ಪ್ರಧಾನಿ ರಾಜೀನಾಮೆ!

ಹೊಸದುರ್ಗ ಶಾಸಕ ಗೂಳೊಹಟ್ಟಿ ಶೇಖರ ಮನೆಗೆ ಮತಾಂತರಿಗಳು ಪ್ರವೇಶಿಸಿದ್ದು, ಶಾಸಕರ ತಾಯಿಯನ್ನೇ ಮತಾಂತರ ಮಾಡುವಷ್ಟು ನಿರ್ಭೀತಿಯ ವರ್ತನೆ ನಡೆದಿದೆ. ಈ ಬಗ್ಗೆ ಸ್ವತಃ ಶಾಸಕ ಗೂಳಿಹಟ್ಟಿ ಶೇಖರ ಸದನದಲ್ಲೇ ತಮ್ಮ ಕುಟುಂಬದ ಸದಸ್ಯರನ್ನು ಮತಾಂತರ ಮಾಡಿದ ಬಗ್ಗೆ ಧ್ವನಿ ಎತ್ತಿದ್ದಾರೆ. ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸಂಘಟನೆಯ ನಾಯಕರಿಗೆ ಪತ್ರ ಬರೆದು ಮತಾಂತರಗೊಂಡಿರುವ ಲಿಂಗಾಯತರನ್ನು ಮಾತೃ ಧರ್ಮಕ್ಕೆ ಕರೆ ತರುವ ಬಗ್ಗೆ ಪತ್ರ ಬರೆದು, ಮತಾಂತರದ ವಿರುದ್ಧ ಧ್ವನಿ ಎತ್ತಿರುವುದು ಮತಾಂತರದ ಜಾಲ ವ್ಯಾಪಕವಾಗಿರುವ ಅಪಾಯವನ್ನು ಮನವರಿಕೆ ಮಾಡಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೀಗಾಗಿ ರಾಜ್ಯದಲ್ಲೂ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಎಲ್ಲರೂ ಒಗ್ಗೂಡಿ ಧ್ವನಿ ಎತ್ತಬೇಕು,‌ ಹೋರಾಟಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಾಮಾಣಿಕತೆ, ಹಿಂದೂ ಪ್ರಖರ ಹೋರಾಟಗಾರರಿಗೆ ರಾಜಕೀಯದಲ್ಲಿ ಅವಕಾಶವಿಲ್ಲ. ಹೀಗಾಗಿ ರಾಜಕೀಯ ಆಸಕ್ತಿ ಕಳೆದುಕೊಂಡಿರುವ ನಾನು ಹಿಂದೂ ದರ್ಮ ಸಂರಕ್ಷಣೆಗಾಗಿ ನನ್ನನ್ನು ಸಂಪೂರ್ಣ ಸಮರ್ಪಿಸಿ ಕೊಂಡಿದ್ದೇನೆ ಎಂದರು.

ಜಿಲ್ಲಾಧ್ಯಕ್ಷ ರಾಕೇಶ ಮಠ, ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್ಲ, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಆನಂದ ಕುಲಕರ್ಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next