Advertisement

ಪ್ರಹ್ಲಾದ್ ಜೋಶಿ ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ: ಹೆಚ್ ಡಿಕೆ ಆಕ್ರೋಶ

05:43 PM Feb 05, 2023 | Team Udayavani |

ಬೆಂಗಳೂರು: ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣ ವರ್ಗ ಪ್ರಹ್ಲಾದ್ ಜೋಶಿಯವರದ್ದು ಎಂದು ಕೇಂದ್ರ ಸಚಿವರ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಬೆಂಗಳೂರಿನ ದಾಸರಹಳ್ಳಿಯಲ್ಲಿ ಮಾತನಾಡಿದ ಹೆಚ್ ಡಿಕೆ, ಜೋಶಿ ಅವರು ನೀಡಿದ್ದ ”ನವಗ್ರಹ ಯಾತ್ರೆ” ಹೇಳಿಕೆ ಕುರಿತು ಕೆಂಡಾಮಂಡಲರಾದರು. ”ಪಂಚರತ್ನ ಯೋಜನೆ ಜನಸ್ಪಂದನೆ ನೋಡಿ ಅವರು ಹೆದರಿದ್ದಾರೆ.ಪ್ರಹ್ಲಾದ್ ಜೋಶಿಯನ್ನ ಚುನಾವಣೆ ನಂತರ ಸಿಎಂ ಮಾಡಬೇಕು ಅಂತ ಸಂಘ ಪರಿವಾರ ನಿರ್ಧರಿಸಿದೆ. ಜೋಶಿ ಅವರು ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ. ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ.ಶೃಂಗೇರಿಯ ಮಠ ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು.ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರು ಇವರು. ನಮ್ಮ ಭಾಗದ ಹಳೆಯ ಬ್ರಾಹ್ಮಣರಂತೆ ಅಲ್ಲ. ಇವರು ಶೃಂಗೇರಿ ಮಠಕ್ಕೆ ಸೇರಿದವರಲ್ಲ. ಮರಾಠಿ ಪೇಶ್ವೆ ಸಮುದಾಯಕ್ಕೆ ಸೇರಿದವರು. ಶೃಂಗೇರಿ ಮಠವನ್ನು ಒಡೆದವರು.ನಮ್ಮ ಭಾಗದ ಹಳೇ ಬ್ರಾಹ್ಮಣರು ಸರ್ವೇ ಜನಾಃ ಸುಖಿನೋ ಭವಂತು ಅನ್ನುವವರು, ಸರ್ವ ಜನರ ಕ್ಷೇಮ ಬಯಸುವವರು” ಎಂದಿದ್ದಾರೆ.

ಬಿಜೆಪಿಯ ಹುನ್ನಾರ, ಆರ್ ಎಸ್ ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನ ಹಾಳು ಮಾಡುತ್ತಾರೆ. ದೆಹಲಿಯಲ್ಲಿ ಎಂಟು ಜನ ಉಪ ಮುಖ್ಯಮಂತ್ರಿ ಮಾಡುವ ಸಭೆ ಮಾಡಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಎಂಟು ಜನ ಯಾರು ಅಂತ ಹೆಸರು ಬೇಕಾದರೂ ಕೊಡುತ್ತೇನೆ ಎಂದರು.

ಮಾರ್ಚ್ ನಲ್ಲಿ ಬೆಂಗಳೂರಿನಲ್ಲಿ ಪಂಚರತ್ನ ರಥಯಾತ್ರೆ ಸಾಗಲಿದೆ. ಈ ತಿಂಗಳ 27 ರ ವರೆಗೂ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ಶಿವರಾತ್ರಿ ಒಂದು ದಿನ ಮಾತ್ರ ಬಿಡುವು ನೀಡುತ್ತೇವೆ. ಮಾರ್ಚ್ ನಲ್ಲಿ ಹಾಸನ, ಮೈಸೂರು, ಬೆಂಗಳೂರಿನಲ್ಲಿ ರಥಯಾತ್ರೆ. ಬೆಂಗಳೂರಿನಲ್ಲಿ 8ರಿಂದ 10 ಕ್ಷೇತ್ರ ಗೆಲ್ಲಬೇಕಿದೆ.ಮಾರ್ಚ್ 20-25ಕ್ಕೆ ಸಮಾರೋಪ ಬೃಹತ್ ಕಾರ್ಯಕ್ರಮ ಮಾಡಲಾಗುವುದು ಎಂದರು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ನಮ್ಮ ಶಾಸಕ ಮಂಜುನಾಥ್ ಇದ್ದಾರೆ. ಅವರ ಕಾರ್ಯಕ್ರಮ ಮಾಡಲು ಬಿಡದೆ ತೊಂದರೆ ಕೊಡ್ತಿದ್ದಾರೆ. ಟೆಂಡರ್ ಪ್ರೋಸೆಸ್ ಮಾಡಲು ಬಿಡದೆ ಕಿರುಕುಳ ನೀಡಿದ್ದಾರೆ. ಸದಾನಂದ ಗೌಡರು ಸೇರಿದಂತೆ ಹಲವರು ಅಡ್ಡಗಾಲು ಹಾಕಿದ್ದಾರೆ.ಜನಮನ್ನಣೆ ನೀಡದೆ ಕಿರುಕುಳ ನೀಡ್ತಿದ್ದಾರೆ. ಕ್ಷುಲ್ಲಕ ಕಾರಣದಿಂದ ಬೆಂಗಳೂರು ನಗರ ಸೇರದಂತೆ ಎಲ್ಲೆಡೆ ಬಿಜೆಪಿ ತನ್ನ ಸ್ಥಾನ ಕಳೆದುಕೊಳ್ಳಲಿದೆ ಎಂದು ಹರಿಹಾಯ್ದರು.

Advertisement

ನಾನು ಸಿಎಂ ಆಗಿದ್ದಾಗ ಈ ಭಾಗಕ್ಕೆ ಕೋಟ್ಯಂತರ ಹಣ ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಬಂದ ಬಳಿಕ ಅದೆಲ್ಲವನ್ನೂ ವಾಪಸ್ ಪಡೆದರು. ಈ ಭಾಗದ ಮಾಜಿ ಶಾಸಕ, ಸದಾನಂದಗೌಡ ಇಬ್ಬರೂ ಸೇರಿ ಅನುದಾನಕ್ಕೆ ಕೊಕ್ಕೆ ಹಾಕಿದರು ಎಂದರು.

ವಿದೇಶಕ್ಕೆ ಹೋಗಿ ಪಾಠ ಕಲಿತು ಬಂದಿಲ್ಲ.ಪ್ರತೀ ದಿನ ನನ್ನ ಮನೆಗೆ ಅನೇಕರು ಸಮಸ್ಯೆ ಹೇಳಿಕೊಂಡು ಬರ್ತಾರೆ. ಮನೆ ಬಾಗಿಲಿಗೆ ಬಂದ ಹೆಣ್ಣುಮಕ್ಕಳು ಕಣ್ಣೀರು ಹಾಕ್ತಾರೆ. ದಾಸರಹಳ್ಳಿಯ ಕ್ಷೇತ್ರದಲ್ಲಿ ಹುಟ್ಟಿದವರಲ್ಲ.ತುಮಕೂರು, ಮಧುಗಿರಿ, ಪಾವಗಡ ಬೇರೆ ಬೇರೆ ಭಾಗದಿಂದ ಇಲ್ಲಿಗೆ ಬಂದವರು.ರಾಜ್ಯದಲ್ಲಿ ಪ್ರತೀ ಬಡ ಕುಟುಂಬದ ಮಕ್ಕಳ ಶಿಕ್ಷಣ ನೀಡುವ ಗುರಿ ಇದೆ. ಉತ್ತಮ ಶಿಕ್ಷಕರ ನೇಮಕ ಮಾಡುತ್ತೇನೆ.ಸರ್ಕಾರದಿಂದ ವಿಮೆ ಹಣ ತಂದು ಕಟ್ಟುತ್ತೇವೆ. ಬೆಳಗ್ಗೆ ಹೊರಟಾಗ ಕೆ.ಆರ್ ಪೇಟೆ ತಾಲೂಕಿನ ಬಡ ಕುಟುಂಬ ಬಂದಿತ್ತು.60ಲಕ್ಷ ಸಾಲ ಮಾಡಿದ್ದು, ನೀವು ಕೈ ಹಿಡಿಯದಿದ್ದರೆ ಆತ್ಮ ಹತ್ಯೆ ಮಾಡಿಕೊಳ್ಳೋದಾಗಿ ಹೇಳಿದರು. ಇಂತ ಬಡ ಕುಟುಂಬ ಅನೇಕ ಇವೆ. ಪ್ರತೀ ಕುಟುಂಬಕ್ಕೆ 15-20 ಸಾವಿರ ಆದಾಯ ಬರುವ ಕಾರ್ಯಕ್ರಮ ರೂಪಿಸಲು ಚಾಲನೆ ನೀಡಿದ್ದೇವೆ. ನಗರ, ಗ್ರಾಮೀಣ ಪ್ರದೇಶದಲ್ಲಿ ಮುಂದಿನ ಐದು ವರ್ಷದಲ್ಲಿ ಮನೆ ಇಲ್ಲ ಅಂತ ಯಾವುದೇ ಕುಟುಂಬ ಹೇಳಬಾರದು. ಐದು ಲಕ್ಷ ಮನೆ ಕಟ್ಟಿಕೊಡಲಾಗುವುದು ಎಂದರು.

ಶಿವರಾಮ ಕಾರಂತ ಬಡಾವಣೆ ಇದೆ.ನೀವ್ಯಾರು ಹೆದರೋ ಅವಶ್ಯಕತೆ ಇಲ್ಲ. ಚುನಾವಣೆ ಇನ್ನ ಮೂರು ತಿಂಗಳಲ್ಲಿ ಬರುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ಬಡಾವಣೆಗೆ ಶಾಶ್ವತ ಪರಿಹಾರ ನೀಡುತ್ತೇನೆ ಎಂದರು.

ಸ್ಯಾಂಟ್ರೋ ರವಿ ಅರೆಸ್ಟ್ ಮಾಡಿದ್ದಾರೆ, ಯಾರ ಹೆಸರೂ ಹೊರಗೆ ಬರುವುದಿಲ್ಲ.ಅಂತ ಬಿಜೆಪಿ ಸರ್ಕಾರ ಈಗ ಇರುವುದು. ನಮ್ಮ ಸರ್ಕಾರ ಬಂದ್ರೆ ಕಳ್ಳ, ಸುಳ್ಳರನ್ನ ಒಳಗೆ ಹಾಕಿಸುತ್ತೇನೆ. ಬಿಬಿಎಂಪಿಗೆ ಸೇರಿಸುವ ಕೆಲಸ ಮಾಡಿ, ಅಭಿವೃದ್ಧಿ ಆಗಿದ್ದರೆ ಕುಮಾರಸ್ವಾಮಿ ಅವಧಿಯಲ್ಲಿ.ಆ ಕಾಲದಲ್ಲಿ ದುಡ್ಡು ಲೂಟಿ ಮಾಡಿದರೆ, ಇವತ್ತು ಬಿಜೆಪಿ ಮನೆಯಲ್ಲಿ ಇರುತ್ತಿತ್ತು. ಕಾರ್ಯಕ್ರಮ ಅನುಷ್ಠಾನಕ್ಕೆ ತರದೆ ಆರ್. ಅಶೋಕ್ ಲೂಟಿ ಹೊಡೆಯುತ್ತಿದ್ದಾರೆ.ನಿಮ್ಮ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ.ನೀವ್ಯಾರು ತಲೆ ಕೆಡಿಸಿಕೊಳ್ಳಬೇಡಿ. ಈ ನಾಡಿನಲ್ಲಿ ಜನತಾದಳ ಸರ್ಕಾರ ಬರಲಿದೆ ಎಂದರು.

ಟೋಪಿ ಹಾಕಿ ಕೆಲಸ !

61 ದಿನಗಳ ರಾತ್ರಿ, ಹಗಲು ಕ್ಷೇತ್ರ ಸುತ್ತುವ ಕೆಲಸ ಮಾಡಿದ್ದೇನೆ. ನೀವು ಮಂಜಣ್ಣ ಅವರನ್ನ ಮತ್ತೆ ಆಯ್ಕೆ ಮಾಡಿ, ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದರು.

”ಮಂಜಣ್ಣ ನೀನು ಹೊಸದಾಗಿ ಆಯ್ಕೆಯಾಗಿದ್ದೀಯಾ. ಪಕ್ಕದ ಕ್ಷೇತ್ರದಲ್ಲಿ ಟೋಪಿ ಹಾಕಿ ಕೆಲಸ ಮಾಡ್ತಿದ್ದಾರೆ. ಅವರ ಬಳಿ ಅನುಭವ ತಗೋ ಎಂದು ಕುಮಾರಸ್ವಾಮಿ ಹೇಳಿದರು. ಶಾಸಕ ಮಂಜುನಾಥ್ ಪ್ರತಿಕ್ರಿಯಿಸಿ, ಅಣ್ಣ ನನಗೆ ಅಂತ ಸಹವಾಸ ಬೇಡ. ಅಂತಹ ಕೆಲಸ ಮಾಡೋದು ಒಂದೇ, ಮನೆಯಲ್ಲಿರೋದು ಒಂದೆ ಎಂದರು.

ಅತ್ಯಂತ ಪ್ರಾಮಾಣಿಕ ವ್ಯಕ್ತಿ ಮಂಜಣ್ಣ.ಪ್ರಾಮಾಣಿಕ ವ್ಯಕ್ತಿಯನ್ನ ಆರಿಸಿದ್ದೀರಿ ಎಂದು ಕುಮಾರಸ್ವಾಮಿ ಹಾಡಿ ಹೊಗಳಿದರು.

Advertisement

Udayavani is now on Telegram. Click here to join our channel and stay updated with the latest news.

Next