Advertisement

ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆಯ ಸಾಧ್ಯತೆ

09:15 PM Oct 12, 2019 | Team Udayavani |

ಮಂಗಳೂರು ನಗರ ಒಂದೊಮ್ಮೆ ಹಂಚು ಉದ್ದಿಮೆಗೆ ದೇಶವಿದೇಶಗಳಲ್ಲಿ ಗುರುತಿಸಿಕೊಂಡಿತ್ತು. ಮಂಗಳೂರು ಹಂಚು ಎಂಬ ಬ್ರಾಂಡ್‌ನಿಂದಲೇ ಇಲ್ಲಿನ ಹಂಚುಗಳು ಗುರುತಿಸಿಕೊಂಡಿದ್ದವು. ಮತ್ತು ಮಂಗಳೂರು ನಗರಕ್ಕೆ ಒಂದು ಅನನ್ಯತೆಯನ್ನು ತಂದುಕೊಟ್ಟಿದ್ದವು.. ಗೋಡಂಬಿ ಉದ್ಯಮಕ್ಕೆ ಅವಿಭಜತ ದಕ್ಷಿಣ ಕನ್ನಡ ಜಿಲ್ಲೆ ಹೆಸರುವಾಸಿಯಾಗಿದೆ ಮತ್ತು ಈಗಲೂ ಇಲ್ಲಿಂದ ವಿದೇಶಗಳಿಗೆ ಸಂಸ್ಕರಿತ ಗೋಡಂಬಿ ರಫ್ತು ಆಗುತ್ತಿದೆ. ಆತಿಥ್ಯ ಉದ್ಯಮದಲ್ಲಿ ಅನೇಕ ಹೊಸಬಗೆಯ ತಿಂಡಿಗಳನ್ನು ಪರಿಚಯಿಸಿದ ಹೆಗ್ಗಳಿಕೆ. ಜಿಲ್ಲೆಯದ್ದಾಗಿದೆ.

Advertisement

ಕರ್ನಾಟಕ ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ರೂಪಿಸಲು ಹಾಗೂ ಕೈಗಾರಿಕೆಗಳಿಗೆ ವಿಶೇಷ ರಿಯಯಿತಿ ಮತ್ತು ಉತ್ತೇಜನ ನೀಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಪುಟದ ಉಪಸಮಿತಿ ರಚನೆಗೊಂಡಿದೆ. ಕೈಗಾರಿಕೆ,ಕಂದಾಯ ಹಾಗೂ ಕಾನೂನು ಸಚಿವರು ಈ ಸಮಿತಿಯಲ್ಲಿರುತ್ತಾರೆ. ನೂತನ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿ, ಪ್ರೋತ್ಸಾಹದಾಯಕ ಕಾರ್ಯಕ್ರಮಗಳು ರೂಪುಗೊಳ್ಳುವ ನಿರೀಕ್ಷೆಗಳಿವೆ. ಈ ಅವಕಾಶಗಳ ಬಳಕೆಗೆ ರಾಜ್ಯದಲ್ಲಿ ಅತಿ ವೇಗದಲ್ಲಿ ಪ್ರಗತಿ ಸಾಧಿಸುತ್ತಿರುವ ಮಂಗಳೂರು ಮಹಾನಗರ ಈಗಿಂದಲೇ ಸಿದ್ಧಗೊಳ್ಳಬೇಕಾಗಿದೆ. ಇಲ್ಲಿನ ವಿವಿಧ ಪ್ರದೇಶಗಳನ್ನು ಅಲ್ಲಿರುವ ಅವಕಾಶಗಳಿಗೆ ಅನುಗುಣವಾಗಿ ಮತ್ತು ಅಲ್ಲಿ ಕೇಂದ್ರೀಕೃತಗೊಂಡಿರುವ ಕೈಗಾರಿಕಾ ಚಟುವಟಿಕೆಗಳ ನೆಲೆಯಲ್ಲಿ ವಿಭಿನ್ನ ಕೈಗಾರಿಕಾ ಕ್ಲಸ್ಟರ್‌ಗಳಾಗಿ ರೂಪಿಸಿ ಅಭಿವೃದ್ಧಿಪಡಿಸುವ ಕಾರ್ಯ ಯೋಜನೆಯೊಂದು ಸಿದ್ಧ‌ªಗೊಂಡರೆ ನಗರ ಕೈಗಾರಿಕಾ ಪ್ರದೇಶವಾಗಿ ವ್ಯವಸ್ಥಿತ ರೀತಿಯಲ್ಲಿ ಯೋಜನಾಬದ್ಧವಾಗಿ ರೂಪುಗೊಳ್ಳಲು ಪೂರಕವಾಗಬಹುದು. ಬೆಂಗಳೂರು ಹಾಗೂ ದೇಶದ ಇತರ ಕೆಲವು ನಗರಗಳಲ್ಲಿ ಈ ರೀತಿಯ ವ್ಯವಸ್ಥಿತ ಕೈಗಾರಿಕಾ ಕ್ಲಸ್ಟರ್‌ಗಳು ಸ್ಥಾಪನೆಯಾಗಿ ನಿರ್ದಿಷ್ಟ ಉತ್ಪನ್ನಗಳಿಗೆ ಗುರುತಿಸಿಕೊಂಡಿರುವ ಮಾದರಿಗಳಿವೆ.

ಮಂಗಳೂರು ನಗರ ಒಂದೊಮ್ಮೆ ಹಂಚು ಉದ್ದಿಮೆಗೆ ದೇಶವಿದೇಶಗಳಲ್ಲಿ ಗುರುತಿಸಿಕೊಂಡಿತ್ತು. ಮಂಗಳೂರು ಹಂಚು ಎಂಬ ಬ್ರಾಂಡ್‌ನಿಂದಲೇ ಇಲ್ಲಿನ ಹಂಚುಗಳು ಗುರುತಿಸಿಕೊಂಡಿತ್ತು. ಗೋಡಂಬಿ ಉದ್ಯಮಕ್ಕೆ ಅವಿಭಜತ ದ.ಕ. ಜಿಲ್ಲೆ ಹೆಸರುವಾಸಿಯಾಗಿದೆ. ಆತಿಥ್ಯ ಉದ್ಯಮ ದಲ್ಲಿ ಅನೇಕ ಹೊಸಬಗೆಯ ತಿಂಡಿಗಳನ್ನು ಪರಿಚಯಿಸಿದ ಹೆಗ್ಗಳಿಕ ಜಿಲ್ಲೆಯದ್ದಾಗಿದೆ. ವಿದೇಶಗಳಿಗೆ ಸಂಬಾರ ಜೀನಸುಗಳ ರಫ್ತು ಮತ್ತು ಆಮದು ವ್ಯವಹಾರದ ಹೆಬ್ಟಾಗಿಲು ಕೂಡ ಮಂಗಳೂರು ಆಗಿತ್ತು. ಅನಂತರದ ಕಾಲಘಟ್ಟದಲ್ಲಿ ಮಂಗಳೂರು ಉದ್ಯಮ ಕ್ಷೇತ್ರಗಳಲ್ಲಿ ದೇಶದ ಪ್ರಮುಖ ನಗರಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ವಾಸ್ತವಾಂಶ.

ಸಾಧ್ಯತೆಗಳು
ದ. ಕ.ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಪಾರ್ಕ್‌, ಜವುಳಿ ( ಆ್ಯಪೆರಾಲ್‌) ಪಾರ್ಕ್‌, ಆಹಾರ ಸಂಸ್ಕರಣಾ ಉದ್ಯಮ ಪಾರ್ಕ್‌ ,ಐಟಿ ಪಾರ್ಕ್‌, ಕೊಕೊನಟ್‌ ಪಾರ್ಕ್‌ , ಜಾಷಧ ತಯಾರಿ ಪಾರ್ಕ್‌, ಆಟೋಮೊಬೈಲ್‌ ಪಾರ್ಕ್‌ ಮುಂತಾದ ಯೋಜನೆಗಳು ಬಹಳಷ್ಟು ಸಮಯದಿಂದ ಪ್ರಸ್ತಾವನೆಯಲ್ಲಿವೆ. ಇವುಗಳನ್ನು ಕಾರ್ಯರೂಪಕ್ಕೆ ತಂದು ಕ್ಲಸ್ಟರ್‌ ರೂಪದಲ್ಲಿ ವಿಂಗಡಿಸಿ ಅನುಷ್ಠಾನಗೊಳಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬಹುದಾಗಿದೆ.

ನಗರದ ಮುಡಿಪು ಈಗಾಗಲೇ ಐಟಿ ಉದ್ದಿಮೆ ಅಭಿವೃದ್ಧಿಗೆ ಗುರುತಿಸಲಾಗಿದೆ. ಕೈರಂಗಳ ಐಟಿ ಎಸ್‌ಇಝಡ್‌ನ‌ಲ್ಲಿ 80 ಎಕ್ರೆ ಮೀಸಲಿರಿಸಲಾಗಿದೆ. ಇನ್ಫೋಸಿಸ್‌ನ ಬೃಹತ್‌ ಕ್ಯಾಂಪಸ್‌ ಮುಡಿಪು ಬಳಿ ಈಗಾಗಲೇ ಕಾರ್ಯಾಚರಿಸುತ್ತಿದೆ. ಮಂಗಳೂರು ಬಿಟ್ಟರೆ ರಾಜ್ಯದ 2ನೇ ಐಟಿ ಹಬ್‌ ಆಗುವ ಎಲ್ಲಾ ಅರ್ಹತೆ ಮತ್ತು ಅವಕಾಶಗಳನ್ನು ಹೊಂದಿದೆ. ಮುಡಿಪು ಪ್ರದೇಶವನ್ನು ಐಟಿ ಉದ್ದಿಮೆಗಳ ಕ್ಲಸ್ಟರ್‌ ಆಗಿ ಅಭಿವೃದ್ಧಿಗೊಳಿಸಲು ಹೆಚ್ಚಿನ ಅವಕಾಶಗಳಿವೆ. ಮುಡಿಪು ಬಳಿಯ ಕೆನರಾ ಕೈಗಾರಿಕಾಭಿವೃದ್ದಿ ಪ್ರದೇಶದಲ್ಲಿ 80 ಎಕ್ರೆ ಪ್ರದೇಶವಿದೆ. ಯಾವುದಾದರೂ ಒಂದು ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಿ ಈ ಪ್ರದೇಶವನ್ನು ಕ್ಲಸ್ಟರ್‌ ಆಗಿ ಬೆಳೆಸಬಹುದಾಗಿದೆ. ಔಷಧ ತಯಾರಿ ಪಾರ್ಕ್‌ ಅನ್ನು ಇಲ್ಲಿ ಸ್ಥಾಪಿಸುವ ಪ್ರಸ್ತಾವನೆ ಹಿಂದೊಮ್ಮೆ ಕೇಳಿಬಂದಿತ್ತು. ಮಂಗಳೂರು ಬೈಕಂಪಾಡಿಯಲ್ಲಿ ಜೆಸ್ಕೋ ಉದ್ದಿಮೆಗೆ ಸ್ವಾಧೀನಪಡಿಸಲಾಗಿದ್ದ ಭೂಮಿಯಲ್ಲಿ ಒಂದು ಭಾಗವನ್ನು ವಶಪಡಿಸಿಕೊಂಡು ಅಲ್ಲಿ ಆಟೋಮೊಬೈಲ್‌ ಪಾರ್ಕ್‌ ಸ್ಥಾಪನೆ ಪ್ರಸ್ತಾವನೆ ಮಾಡಲಾಗಿತ್ತು. ಕಾರು, ವ್ಯಾನ್‌ ಸೇರಿದಂತೆ ಲಘುವಾಹನಗಳು, ಲಾರಿ, ಬಸ್‌ ಸೇರಿದಂತೆ ಭಾರಿ ವಾಹನಗಳಿಗೆ ಪೂರಕ ಬಿಡಿಭಾಗಗಳನ್ನು ಸರಬರಾಜು ಮಾಡುವ ಕೆಲವು ಕೈಗಾರಿಕೆಗಳು ಬೈಕಂಪಾಡಿ ಪರಿಸರದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿವೆ. ಬ್ರೇಕ್‌ ಡ್ರಮ್‌, ಲೀಪ್‌ ಸ್ಪ್ರಿಂಗ್‌, ಸೂ, ನಟ್‌ ಮುಂತಾದುವುಗಳು ಇದರಲ್ಲಿ ಸೇರಿವೆ. ವಿದೇಶಿಗಳಿಗೂ ರಫ್ತು ಆಗುತ್ತಿವೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಕಂಪೆನಿಗಳ, ಎಲ್ಲ ಮಾದರಿಗಳ ಕಾರುಗಳು, ವಾಹನಗಳ ಶೋರೂಂಗಳು , ಸರ್ವಿಸ್‌ ಕೇಂದ್ರಗಳು ಮಂಗಳೂರಿನಲ್ಲಿವೆ. ಐಷರಾಮಿ ಅತ್ಯಂತ ದುಬಾರಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಂಗಳೂರಿನಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಇದರ ಕಂಪೆನಿಗಳು ತಮ್ಮ ಶೋರೂಂಗಳನ್ನು, ಸರ್ವಿಸ್‌ ಕೇಂದ್ರಗಳನ್ನು ಸುತ್ತಮುತ್ತಲ ನಾಲ್ಕೈದು ಜಿಲ್ಲೆಗಳನ್ನು ಕೇಂದ್ರೀಕರಿಸಿಕೊಂಡು ಮಂಗಳೂರಿನಲ್ಲಿ ತೆರೆದಿವೆ. ಕಾರು ತಯಾರಿಕಾ ಕಂಪೆನಿಗಳು ಕೂಡ ಮಂಗಳೂರಿನಲ್ಲಿ ತಮ್ಮ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ತೋರ್ಪಡಿಸಿದ್ದವು. ಆದರೆ ಬಳಿಕ ಕಾರಣಾಂತರಗಳಿಗೆ ಇದು ಸಾಕಾರಗೊಳ್ಳಲಿಲ್ಲ. ಗಂಜಿಮಠದ ರಪು¤ ಉತ್ತೇಜನ ಹೂಡಿಕೆ ಪಾರ್ಕ್‌ನಲ್ಲಿ ( ಇಪಿಐಪಿ) ಕಾರ್ಯಾಚರಿಸುತ್ತಿದೆ. ಬೈಕಂಪಾಡಿ, ಯೆಯ್ನಾಡಿ, ಕಾರ್ನಾಡ್‌ ಸೇರಿದಂತೆ ದ. ಕ. ದಲ್ಲಿ ಒಟ್ಟು 15 ಕೈಗಾರಿಕಾ ಪ್ರದೇಶಗಳಿವೆ.

Advertisement

ಪಿಲಿಕುಳ ಈಗಾಗಲೇ ಪ್ರವಾಸೋದ್ಯಮ ಕೇಂದ್ರವಾಗಿ ಗುರುತಿಸಿಕೊಂಡಿದೆ. ವಾಮಂಜೂರು, ಪಿಲಿಕುಳ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿವೆ. ಇದರ ಪಕ್ಕದಲ್ಲಿ ಫಲ್ಗುಣಿ ನದಿ ಹರಿಯುತ್ತಿದೆ. ನದಿಯನ್ನು ಒಂದು ಜಲಯಾನ ತಾಣವಾಗಿ ರೂಪಿಸುವ ಪ್ರಸ್ತಾವನೆ ಈ ಹಿಂದೆ ಕೇಳಿಬಂದಿತ್ತು. ಪಿಲಿಕುಳ ಪರಿಸರದಲ್ಲಿ ಈಗಾಗಲೇ ಸುಸಜ್ಜಿತ ಗಾಲ್ಫ್ಕೋರ್ಟ್‌ ಕೂಡ ಇದೆ. ವಾಟರ್‌ ಸ್ಪೋಟ್ಸ್‌  ತಾಣವಿದೆ. ಬೋಟಿಂಗ್‌ ವ್ಯವಸ್ಥೆ ಇದೆ. ಇಲ್ಲಿನ ಅವಕಾಶಗಳನ್ನು ಬಳಸಿಕೊಂಡು ಇಲ್ಲಿ ಫಿಲಂಸಿಟಿ ಸ್ಥಾಪಿಸುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸಬಹುದಾಗಿದೆ.

ಮಂಗಳೂರಿನಲ್ಲಿ ಸರ್ವಋತು ಬಂದರು, ರೈಲು ಮಾರ್ಗ ಹಾಗೂ ವಿಮಾನ ನಿಲ್ದಾಣಗಳಿರುವುದರಿಂದ ಉದ್ಯಮಗಳ ಸ್ಥಾಪನೆಗೆ ಅನುಕೂಲಕರವಾಗಿದೆ.

ಕರ್ನಾಟಕದಲ್ಲಿ ಈ ಹಿಂದಿನ ಸರಕಾರ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಚೀನಾ ಮಾದರಿಯಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ನಿರ್ಧರಿಸಿತ್ತು. ಕೊಪ್ಪಳದಲ್ಲಿ ಟಾಯ್ಸ ಕ್ಲಸ್ಟರ್‌ ಹಾಗೂ ಬಳ್ಳಾರಿಯಲ್ಲಿ ಜವಳಿ ಕ್ಲಸ್ಟರ್‌ಗಳು ಈಗಾಗಲೇ ಆರಂಭಗೊಂಡಿವೆ. ಚಿಕ್ಕಬಳ್ಳಾಪುರದಲ್ಲಿ ಮೊಬೈಲ್‌ ಫೋನ್ಸ್‌, ಮೈಸೂರಿನಲ್ಲಿ ಪ್ರಿಂಟೆಡ್‌ ಸಕೂಟ್‌ ಬೋರ್ಡ್ಸ್‌, ಹಾಸನದಲ್ಲಿ ಟೈಲ್ಸ್‌, ಕಲಬುರಗಿಯಲ್ಲಿ ಸೋಲಾರ್‌ ಪ್ಯಾನಲ್ಸ್‌, ಚಿತ್ರದುರ್ಗದಲ್ಲಿ ಎಲ್‌ಇಡಿ ಲೈಟ್ಸ್‌, ಬೀದರ್‌ನಲ್ಲಿ ಕೃಷಿ ಉಪಕರಣಗಳು ಹಾಗೂ ತುಮಕೂರಿನಲ್ಲಿ ಸೋರ್ಟ್ಸ್ ಗೂಡ್ಸ್‌ ಕ್ಲಸ್ಟರ್‌ಗಳು ಸ್ಥಾಪಿಸಲು ಸರಕಾರ ಕಾರ್ಯಯೋಜನೆ ರೂಪಿಸಿತ್ತು . ಒಟ್ಟು 9 ಉತ್ಪನ್ನ ಪ್ರವರ್ಗಗಳಲ್ಲಿ ಪ್ರಸ್ತುತ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಸಿದ್ಧಗೊಂಡಿತ್ತು. ಇದರಿಂದ 9 ಲಕ್ಷ ಮಂದಿಗೆ ಉದ್ಯೋಗ ಲಭಿಸಲಿದೆ ನಿರೀಕ್ಷಿಸಲಾಗಿತ್ತು.

ಮಂಗಳೂರು ನಗರದಲ್ಲೂ ಇಲ್ಲಿನ ಅವಕಾಶಗಳನ್ನು ಪರಿಗಣಿಸಿಕೊಂಡು ಉತ್ಪನ್ನ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿ ಅದನ್ನು ಅಭಿವೃದ್ಧಿಪಡಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಿ ಉತ್ಪನ್ನ ಕೇಂದ್ರವಾಗಿ ಗುರುತಿಸುವಂತೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಒಂದಷ್ಟು ಚಿಂತನೆ ನಡೆಸಬಹುದಾಗಿದೆ.

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next