Advertisement

ಪೋಷಣ್‌ ಮಾಹಿತಿಗೆ ಟ್ರ್ಯಾಕರ್‌ ಆ್ಯಪ್‌: ದೇಶಾದ್ಯಂತ ಏಕರೂಪದ ಮಾಹಿತಿ

12:24 AM Jul 17, 2022 | Team Udayavani |

ಕುಂದಾಪುರ: ಪೌಷ್ಟಿಕಾಂಶ ಕೊರತೆಯ ಮಕ್ಕಳು, ಗರ್ಭಿಣಿ – ಬಾಣಂತಿಯರ ಮಾಹಿತಿ ಸಂಗ್ರಹ ಹಾಗೂ ಅವರಿಗೆ ಕೊಡುವ ಪೌಷ್ಟಿಕ ಆಹಾರದ ಮಾಹಿತಿಯನ್ನು ದೇಶಾದ್ಯಂತ ಏಕರೂಪದಲ್ಲಿ ಬೆನ್ನತ್ತಲು “ಪೋಷಣ್‌ ಟ್ರ್ಯಾಕರ್‌’ ಮೊಬೈಲ್‌ ಅಪ್ಲಿಕೇಶನ್‌ ಅಂಗನವಾಡಿ ಕಾರ್ಯಕರ್ತೆಯರಿಗೂ ತರಲಾಗಿದೆ.

Advertisement

ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕಳೆದ ವರ್ಷ ಆ್ಯಪ್‌ ಮಾಡಿದ್ದು ರಾಜ್ಯದಲ್ಲಿ ಮುಂದಿನ ತಿಂಗಳಿಂದ ಅಂಗನವಾಡಿಯವರಿಗೆ ಹೊಣೆ ದೊರೆಯಲಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಎರಡು ಹಂತದ ತರಬೇತಿ ಆಗಿದೆ.

ಯೋಜನೆಯಡಿ ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರು 1,000 ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರ ಸೇವಿಸುವುದು, ರಕ್ತ ಹೀನತೆ, ಅತಿಸಾರ ಭೇದಿ ತಡೆ ಗಟ್ಟುವ ಮೂಲಕ ತಾಯಿ-ಮಗುವಿನ ಉತ್ತಮ ಆರೋಗ್ಯ ಕಾಪಾಡುವುದು ಉದ್ದೇಶ. ಸ್ನೇಹ ಆ್ಯಪ್‌ (ಸೊಲ್ಯೂಷನ್‌ ಫಾರ್‌ ನ್ಯೂಟ್ರಿಶನ್‌ ಆ್ಯಂಡ್‌ ಎಫೆಕ್ಟಿವ್‌ ಹೆಲ್ತ್‌ ಎಕ್ಸೆಸ್‌) ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ 2020ರಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗಿದೆ. ಆದರೆ ಇನ್ನು “ಪೋಷಣ್‌ ಟ್ರ್ಯಾಕರ್‌’ನಲ್ಲೇ ಎಲ್ಲ.

ದಾಖಲೆ
ಅಂಗನವಾಡಿ ಕಾರ್ಯಕರ್ತೆಯರ ಪ್ರೊಫೈಲ್‌ ಪುಟ, ಕುಂಠಿತ ಮತ್ತು ಕಡಿಮೆ ತೂಕದ ಮಕ್ಕಳ ಬೆಳವಣಿಗೆಯ ವಿವರ, ಫಲಾನುಭವಿಗಳ ಸ್ಥಿತಿ ಬದಲಾವಣೆ  ಸೂಚನೆಗಳು, ಒಂದು ಕಡೆಯಿಂದ‌ ಇನ್ನೊಂದು ಊರಿಗೆ ವಲಸೆ ಹೋದರೆ ಅದರ ವಿವರಗಳಿರುತ್ತವೆ. ಕಾರ್ಯಕರ್ತೆಯರು ಸರಳ ಇಂಗ್ಲಿಷ್‌ ನಲ್ಲಿ ವಿವರಗಳನ್ನು ತುಂಬಬೇಕು. ಸಾರ್ವಜನಿಕರು ಭರ್ತಿ ಮಾಡಲು ಅವಕಾಶ ಇಲ್ಲ.

ಭಾಷೆ ಆಯ್ಕೆ
ಕನ್ನಡ, ಇಂಗ್ಲಿಷ್‌, ಹಿಂದಿ ಸೇರಿದಂತೆ 22 ಭಾಷೆಗಳ ಆಯ್ಕೆಗಳಿವೆ. ಡೇಟಾ ಎಂಟ್ರಿಗಾಗಿ ಸೀಮಿತ ಕ್ಷೇತ್ರಗಳಿವೆ.

Advertisement

ಲೆಕ್ಕಾಚಾರ
ಮಗುವಿನ ಬೆಳವಣಿಗೆಯನ್ನು ಅಳೆಯಲು ಪೋಷಣ್‌ ಕ್ಯಾಲ್ಕುಲೇಟರನ್ನು ಇದರಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಸಾರ್ವಜನಿಕರಿಗೂ ಲಭ್ಯ.

ಏನೇನು ಮಾಹಿತಿ
ಈ ಮೊಬೈಲ್‌ನಲ್ಲಿ ಕಾರ್ಯಕರ್ತೆಯರು “ಪೋಷ‌ಣ್‌ ಟ್ರ್ಯಾಕರ್‌’ ಅಳವಡಿಸಿಕೊಂಡು ಮಾಹಿತಿ ತುಂಬಬೇಕು. ಜಿಲ್ಲೆ, ರಾಜ್ಯ ಹಾಗೂ ಸಮಗ್ರ ದೇಶದ ಮಾಹಿತಿ ಒಂದೇ ಆ್ಯಪ್‌ ಮೂಲಕ ದೊರೆಯುವಂತೆ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಅಂಗನವಾಡಿ ಕೇಂದ್ರ, ಕಾರ್ಯಕರ್ತೆಯರ ಸೇವಾ ವಿತರಣೆಗಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಮಕ್ಕಳ ವಿವರ ಹಾಗೂ ಅವರಿಗೆ ಚುಚ್ಚುಮದ್ದುಗಳನ್ನು ಒದಗಿಸಬೇಕಾದ ವಿವರ, ಫಲಾನುಭವಿ ನಿರ್ವಹಣೆಯ ಮಾಹಿತಿ, ಫ‌ಲಾನುಭವಿಯ ಮನೆಗೆ ಆಹಾರವನ್ನು ಒದಗಿಸಿ ಸರಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲಿದೆ. ಕಾರ್ಯಕರ್ತೆಯರಿಗೆ ಮನೆ ಭೇಟಿ ಎಚ್ಚರಿಕೆಗಳನ್ನು ಈ ಆ್ಯಪ್‌ ನೀಡುತ್ತದೆ. ನೈಜ ಸಮಯದ ಹಾಜರಾತಿಯನ್ನು ದಾಖಲಿಸಬೇಕಾಗುತ್ತದೆ. ಇದು ಪೌಷ್ಟಿಕಾಂಶ ಕಾರ್ಯಕ್ರಮದ ಯಶಸ್ಸನ್ನು ಪರಿಣಾಮಕಾರಿಯಾಗಿ ಅಳೆಯಲು ಸಹಾಯಕವಾಗುತ್ತದೆ.

ಪೌಷ್ಟಿಕ ಮಕ್ಕಳ ಸಂಖ್ಯೆ
ದ.ಕ.ಜಿಲ್ಲೆ 2,792
ಉಡುಪಿ 2,687

ಮೊಬೈಲ್‌ ಸಮಸ್ಯೆ
ಎರಡು ವರ್ಷಗಳ ಹಿಂದೆ ನೀಡಿದ ಮೊಬೈಲ್‌ಗೆ ಸರಕಾರ ರೀಚಾರ್ಜ್‌ ಮಾಡದೇ 6 ತಿಂಗಳಾದವು. ಸಿಮ್‌ ಇಲಾಖೆಯ ಉನ್ನತ ಅಧಿಕಾರಿ ಹೆಸರಿನಲ್ಲಿ ಇರುವುದರಿಂದ ಸ್ಥಳೀಯವಾಗಿ ರೀಚಾರ್ಜ್‌ ಅಸಾಧ್ಯ. ಹಳೆಯ ಎಲ್‌ಜಿ ಕಂಪೆನಿಯ ಐಎಂಎಕ್ಸ್‌ 210 ಎಂಡಬ್ಲ್ಯು ಮೊಬೈಲ್‌ನಲ್ಲಿ ಹೊಸದಾದ ಆ್ಯಪ್‌ ಅಳವಡಿಕೆ ಸಾಧ್ಯವೇ ಎಂಬ ಅನುಮಾನಕ್ಕೆ ಪರಿಹಾರ ದೊರೆತಿಲ್ಲ. ಫ‌ಲಾನುಭವಿಯ ಮನೆಗೆ ಹೋದಲ್ಲೇ ಮಾಹಿತಿ ಅಪ್‌ಲೋಡ್‌ ಮಾಡಬೇಕು. ಗ್ರಾಮಾಂತರದಲ್ಲಿ, ಗುಡ್ಡಗಾಡಿನಲ್ಲಿ ನೆಟ್‌ವರ್ಕ್‌ ಇಲ್ಲದಿದ್ದರೆ ಮನೆ ಭೇಟಿ ಮಾಡಿಯೂ ಪ್ರಯೋಜನವಾಗದು.

“ಪೋಷಣ್‌ ಟ್ರ್ಯಾಕರ್‌’ ಕುರಿತು ಈಗಾಗಲೇ ಅಧಿಕಾರಿಗಳಿಗೆ ತರಬೇತಿ ಆಗಿದೆ. ಅಂಗನವಾಡಿ ಕಾರ್ಯಕರ್ತೆ
ಯರು ತರಬೇತಿ ಬಳಿಕ ಇದನ್ನು ಸರಕಾರ ನೀಡಿದ ಮೊಬೈಲ್‌ನಲ್ಲಿ ಅಳವಡಿಸಿಕೊಂಡು ಕಾರ್ಯಾರಂಭಿಸಲಿದ್ದಾರೆ.
– ಶ್ವೇತಾ,
ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next