Advertisement

ಬಡವರು ಕನಸುಗಳನ್ನು ಕಾಣುವುದು ಮಾತ್ರವಲ್ಲದೆ ಈಡೇರಿಸಿಕೊಳ್ಳಬಹುದು: ರಾಷ್ಟ್ರಪತಿ

03:05 PM Jul 25, 2022 | Team Udayavani |

ನವದೆಹಲಿ: ದೇಶದ ಉನ್ನತ ಸಾಂವಿಧಾನಿಕ ಹುದ್ದೆ ರಾಷ್ಟ್ರಪತಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು ಅವರು ‘ಭಾರತದಲ್ಲಿ ಬಡವರು ಕನಸುಗಳನ್ನು ಕಾಣುವುದು ಮಾತ್ರವಲ್ಲದೆ, ಆ ಆಕಾಂಕ್ಷೆಗಳನ್ನು ಈಡೇರಿಸಬಹುದು ಎಂಬುದನ್ನು ನನ್ನ ಚುನಾವಣೆ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.

Advertisement

ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಭಾರತದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಬೋಧಿಸಿದ ನಂತರ ಅವರು ಮಾಡಿದ ಭಾಷಣದಲ್ಲಿ ಮುರ್ಮು ಅವರು, ತನ್ನನ್ನು ಆಯ್ಕೆ ಮಾಡಿದ ಎಲ್ಲಾ ಸಂಸದರು ಮತ್ತು ಶಾಸಕರಿಗೆ ಧನ್ಯವಾದ ಅರ್ಪಿಸಿದರು.

ರಾಷ್ಟ್ರಪತಿ ಭವನವನ್ನು ತಲುಪಿರುವುದು ನನ್ನ ವೈಯಕ್ತಿಕ ಸಾಧನೆಯಲ್ಲ, ದೇಶದ ಎಲ್ಲಾ ಬಡವರ ಸಾಧನೆಯಾಗಿದೆ. ಭಾರತದಲ್ಲಿ ಬಡವರು ಕನಸು ಕಾಣುತ್ತಾರೆ ಮತ್ತು ಆ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ನನ್ನ ಚುನಾವಣೆ ಸಾಕ್ಷಿಯಾಗಿದೆ ಎಂದರು.

ಬಡ ಬುಡಕಟ್ಟು ಜನಾಂಗದ ಮನೆಯಲ್ಲಿ ಜನಿಸಿದ ಹೆಣ್ಣುಮಗಳು ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ತಲುಪುವುದು ಭಾರತದ ಪ್ರಜಾಪ್ರಭುತ್ವದ ಶಕ್ತಿಯಾಗಿದೆ.ಸಹಸ್ರಾರು ವರ್ಷಗಳಿಂದ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಜೀವನ ಸಾಗಿಸುತ್ತಿರುವ ಬುಡಕಟ್ಟು ಸಂಪ್ರದಾಯದಲ್ಲಿ ನಾನು ಹುಟ್ಟಿದ್ದೇನೆ. ನನ್ನ ಜೀವನದಲ್ಲಿ ಕಾಡುಗಳು ಮತ್ತು ಜಲಮೂಲಗಳ ಮಹತ್ವವನ್ನು ನಾನು ಅರಿತುಕೊಂಡಿದ್ದೇನೆ.
ನಾವು ಪ್ರಕೃತಿಯಿಂದ ಅಗತ್ಯವಾದ ಸಂಪನ್ಮೂಲಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಪ್ರಕೃತಿಯನ್ನು ಸಮಾನ ಗೌರವದಿಂದ ಸೇವೆ ಮಾಡುತ್ತೇವೆ ಎಂದರು.

ನೀವು ನಿಮ್ಮ ಭವಿಷ್ಯವನ್ನು ನಿರ್ಮಿಸುವುದು ಮಾತ್ರವಲ್ಲದೆ ಭವಿಷ್ಯದ ಭಾರತದ ಅಡಿಪಾಯವನ್ನೂ ಹಾಕುತ್ತಿದ್ದೀರಿ ಎಂದು ನಾನು ನಮ್ಮ ದೇಶದ ಯುವ ಜನಾಂಗಕ್ಕೆ ಹೇಳಲು ಬಯಸುತ್ತೇನೆ. ದೇಶದ ರಾಷ್ಟ್ರಪತಿಯಾಗಿ ನನಗೆ ನಿಮ್ಮ ಸಂಪೂರ್ಣ ಸಹಕಾರ ಸದಾ ಇರುತ್ತದೆ ಎಂದು ಭಾವಿಸಿದ್ದೇನೆ ಎಂದರು.

Advertisement

75 ವರ್ಷಗಳಲ್ಲಿ ಸಂಸದೀಯ ಪ್ರಜಾಪ್ರಭುತ್ವವಾಗಿ, ಭಾರತವು ಭಾಗವಹಿಸುವಿಕೆ ಮತ್ತು ಒಮ್ಮತದ ಮೂಲಕ ಪ್ರಗತಿಯ ಸಂಕಲ್ಪವನ್ನು ಮುನ್ನಡೆಸಿದೆ. ವೈವಿಧ್ಯತೆಗಳಿಂದ ಕೂಡಿರುವ ನಮ್ಮ ದೇಶದಲ್ಲಿ ಹಲವು ಭಾಷೆ, ಧರ್ಮ, ಪಂಥ, ಆಹಾರ ಪದ್ಧತಿ, ಜೀವನ ಪದ್ಧತಿ, ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ‘ಏಕ ಭಾರತ್ – ಶ್ರೇಷ್ಠ ಭಾರತ’ ಕಟ್ಟುವಲ್ಲಿ ಸಕ್ರಿಯರಾಗಿದ್ದೇವೆ ಎಂದರು.

ರಾಣಿ ಲಕ್ಷ್ಮೀಬಾಯಿ, ರಾಣಿ ವೇಲು ನಾಚಿಯಾರ್, ರಾಣಿ ಗೈದಿಂಲು ಮತ್ತು ರಾಣಿ ಚೆನ್ನಮ್ಮ ಅವರಂತಹ ಅನೇಕ ನಾಯಕಿಯರು ರಾಷ್ಟ್ರ ರಕ್ಷಣೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳಾ ಶಕ್ತಿಯ ಪಾತ್ರಕ್ಕೆ ಹೊಸ ಎತ್ತರವನ್ನು ನೀಡಿದ್ದರು ಎಂದರು.

ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ರಿಂದ ರಾಮ್ ನಾಥ್ ಕೋವಿಂದ್ ರವರೆಗೆ ಅನೇಕ ವ್ಯಕ್ತಿಗಳು ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ಹುದ್ದೆಯ ಜೊತೆಗೆ ಈ ಶ್ರೇಷ್ಠ ಸಂಪ್ರದಾಯವನ್ನು ಪ್ರತಿನಿಧಿಸುವ ಜವಾಬ್ದಾರಿಯನ್ನೂ ದೇಶ ನನಗೆ ವಹಿಸಿದೆ ಎಂದರು.

ತಮ್ಮ ಭಾಷಣದಲ್ಲಿ, ಸ್ವತಂತ್ರ ಭಾರತದ ನಾಗರಿಕರಿಂದ ಸ್ವಾತಂತ್ರ್ಯ ಹೋರಾಟಗಾರರು ಹೊಂದಿದ್ದ ನಿರೀಕ್ಷೆಗಳನ್ನು ಪೂರೈಸುವ ಪ್ರಯತ್ನಗಳನ್ನು ವೇಗಗೊಳಿಸುವುದನ್ನು ಒತ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next