Advertisement

ಭರವಸೆಯಾಗೇ ಉಳಿದ ವಿಮಾನ ಯಾನ

11:50 AM Jul 16, 2019 | Team Udayavani |

ಬೀದರ: ನಗರದಲ್ಲಿ ನಾಗರಿಕ ವಿಮಾನಯಾನ ಸೇವೆ ಪ್ರಾರಂಭಿಸುವ ನಿಟ್ಟಿನಲ್ಲಿ 13 ವರ್ಷಗಳ ಹಿಂದೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಟರ್ಮಿನಲ್ ಸಂಪೂರ್ಣ ಹಾಳಾಗಿದ್ದು, ಜನರ ತೆರಿಗೆ ಹಣ ಪೋಲಾಗಿದೆ.

Advertisement

ಬೀದರ ನಗರದಲ್ಲಿ ನಾಗರಿಕ ವಿಮಾನಯಾನ ಸೇವೆ ಪ್ರಾರಂಭಿಸುವ ನಿಟ್ಟಿನಲ್ಲಿ ಸರ್ಕಾರ 4ಕೋಟಿ ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣಕ್ಕೆ ಮಂಜೂರು ನೀಡಿತ್ತು. ತಾತ್ಕಾಲಿಕವಾಗಿ ಟರ್ಮಿನಲ್ ನಿರ್ಮಾಣಗೊಂಡಿದ್ದರೂ ಕೂಡ ನಾಗರಿಕ ವಿಮಾನ ಇಲ್ಲಿಂದ ಆರಂಭವಾಗಿಲ್ಲ. ಅಲ್ಲದೆ, ಟರ್ಮಿನಲ್ ಕಾಮಗಾರಿ ವಿರುದ್ಧ ಕೂಡ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸುತ್ತ್ತಿದ್ದು, ಗುತ್ತಿಗೆದಾರರು ಸೂಕ್ತವಾಗಿ ಟರ್ಮಿನಲ್ ನಿರ್ಮಿಸಿದ್ದರೆ ಇಂದು ದೊಡ್ಡಮಟ್ಟದಲ್ಲಿ ದುರಸ್ತಿ ಕಾಮಗಾರಿ ಬರುತ್ತಿರಲಿಲ್ಲ. ಟರ್ಮಿನಲ್ನ ಟೈಲ್ಸ್ಗಳು ಕಿತ್ತು ಹೋಗಿವೆ. ಮೇಲ್ಛಾವಣಿ ಪೂರ್ತಿ ಹಾಳಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕಳೆದ ಬಜೆಟ್ ಅಧಿವೇಶನದಲ್ಲಿ ಇಲ್ಲಿನ ಟರ್ಮಿನಲ್ ದುರಸ್ತಿ ಸೇರಿದಂತೆ ಇತರೆ ಕಾಮಗಾರಿಗಾಗಿ 32 ಕೋಟಿ ಅನುದಾನ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದ್ದು, ಇಂದಿಗೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಯೋಜನಾಧಿಕಾರಿ ಬಲಭೀಮ ಕಾಂಬಳೆ ಮಾಹಿತಿ ನೀಡಿದ್ದಾರೆ. ಟರ್ಮಿನಲ್ ಸುತ್ತಲಿನ ಪ್ರದೇಶದಲ್ಲಿ ಹೆಚ್ಚುವರಿ ಭೂಮಿ ಅವಶ್ಯಕತೆ ಇರುವ ಕಾರಣ ಈಗಾಗಲೇ ಭೂಮಿ ಗುರುತಿಸಲಾಗಿದೆ. ದಾಖಲೆಗಳನ್ನು ಸಿದ್ದಪಡಿಸಿದ್ದು, ಕೆಲ ದಿನಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.

ವಿಮಾನಯಾನ ಭರವಸೆಗೆ ಸೀಮಿತ: ಜಿಲ್ಲೆಯ ಜನಪ್ರತಿನಿಧಿಗಳು ಅನೇಕ ವರ್ಷಗಳಿಂದ ವಿಮಾನಯಾನ ಶುರು ಮಾಡುವುದಾಗಿ ಹೇಳುತ್ತಾ ಬಂದಿದ್ದು, ಈ ವರ್ಷ ಶುರುವಾಗುತ್ತೆ, ಮುಂದಿನ ಆರು ತಿಂಗಳಲ್ಲಿ, ಮೂರು ತಿಂಗಳಲ್ಲಿ ಶುರುವಾಗಲಿದೆ ಎಂದು ಹೇಳಿ ಅನೇಕ ವರ್ಷಗಳು ಕಳೆದರೂ ಕೂಡ ಜನಪ್ರತಿನಿಧಿಗಳು ನೀಡಿದ ಭರವಸೆ ಈಡೇರಿಲ್ಲ. ಅಲ್ಲದೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ವಿವಿಧ ಪಕ್ಷದ ಮುಖಂಡರು ಬೀದರ ನಗರದಲ್ಲಿ 2019ರ ಆಗಸ್ಟ್‌ ತಿಂಗಳವರೆಗೆ ನಾಗರಿಕ ವಿಮಾನಯಾನ ಶುರು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇಂದಿಗೂ ಕೂಡ ಕಾಮಗಾರಿ ಪ್ರಾರಂಭಿಸುವ ನಿಟ್ಟಿಲ್ಲಿ ಯಾವ ಜನಪ್ರತಿನಿಧಿಗಳೂ ಮುಂದಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಹಾಗೂ ಸಂಸದ ಭಗವಂತ ಖೂಬಾ ಅವರು ಆಗಸ್ಟ್‌ ತಿಂಗಳಲ್ಲಿ ಬೀದರ ನಗರದಿಂದ ನಾಗರಿಕ ವಿಮಾನ ಯಾನ ಶುರು ಆಗುತ್ತದೆ ಎಂಬ ಭರವಸೆಗಳನ್ನು ನೀಡಿದ್ದರು. ಆಗಸ್ಟ್‌ ತಿಂಗಳಲ್ಲಿ ವಿಮಾನಯಾನ ಚಾಲನೆ ಸಿಗುವುದು ಬಹುತೇಕ ಅನುಮಾನವಾಗಿದ್ದು, ರಾಜಕಾರಣಿಗಳ ಭರವಸೆ ಮತ್ತೆ ಹುಸಿಯಾಗುವ ಸಾಧ್ಯತೆ ಇದೆ ಎಂಬುದು ನಿಚ್ಚಳವಾಗುವ ಲಕ್ಷಣಗಳಿವೆ.

ಸಚಿವರಿಂದ ಸಾಧ್ಯವಿಲ್ಲವೇ?: ಸದ್ಯ ಬೀದರ್‌ ಜಿಲ್ಲೆಯಲ್ಲಿ ಮೂರು ಜನ ಸಚಿವರು ಇದ್ದಾರೆ. ಸಹಕಾರ, ಗಣಿ ಮತ್ತು ಭೂ-ವಿಜ್ಞಾನ ಹಾಗೂ ಕ್ರೀಡಾ ಸಚಿವರಿದ್ದು, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ನಗರದಲ್ಲಿ ವಿಮಾನ ಯಾನ ಶುರು ಮಾಡಿಸಲು ಯಾಕೆ ಪ್ರಯತ್ನಿಸುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಮೂರು ಜನ ಸಚಿವರು ಸರ್ಕಾರದ ಮೇಲೆ ಒತ್ತಾಡ ಹಾಕಿದ್ದರೆ ಶ್ರೀಘ್ರದಲ್ಲಿ ಸಾರ್ವಜನಿಕರಿಗೆ ವಿಮಾನ ಯಾನ ಸೇವೆ ದೊರೆಯುತ್ತದೆ. ಆದರೆ, ಸಚಿವರು ವಿಮಾನಯಾನ ಆರಂಭಕ್ಕೆ ಹೆಚ್ಚು ಆಸಕ್ತಿ ತೋರಿಸಬೇಕು ಎಂಬ ಬೇಡಿಕೆ ಜನರದಾಗಿದೆ.

Advertisement

•ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next