Advertisement

ಕಾಣೆ ಸುದ್ದಿಗೆ ಪೂಜಾ ಗರಂ

10:27 AM Aug 21, 2017 | |

ನಟಿ ಪೂಜಾಗಾಂಧಿ ಕಾಣೆಯಾಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಪೂಜಾಗಾಂಧಿ ನಿಜಕ್ಕೂ ಕಾಣೆಯಾಗಿದ್ದರಾ? ಈ ಪ್ರಶ್ನೆಗೆ ಸ್ವತಃ ಪೂಜಾಗಾಂಧಿ ಅವರೇ ಉತ್ತರವಾಗಿದ್ದಾರೆ. ಅವರೇ ಹೇಳುವಂತೆ, “ನಾನು ಎಲ್ಲೂ ಹೋಗಿಲ್ಲ. ಪೂನಾಗೆ ಹೋಗಿದ್ದೆ. ಪೂನಾದಿಂದ ಸುಮಾರು ಹತ್ತು ಕಿಲೋಮೀಟರ್‌ ದೂರ ಇರುವಂತಹ ಆನಂದ ಪ್ರಿಯ ರೀಟ್ರೀಸ್‌ ಎಂಬ ಸ್ಥಳದಲ್ಲಿ ಯೋಗ ಶಿಕ್ಷಣಕ್ಕೆ ಹೋಗಿದ್ದೆ.

Advertisement

ಅಲ್ಲಿ ನಮ್ಮ ಗುರೂಜೀ ಪರಮಹಂಸ ಯೋಗಾನಂದ ಇದ್ದಾರೆ. ನಾನು ಆಗಾಗ ಅಲ್ಲಿಗೆ ಹೋಗುತ್ತಿರುತ್ತೇನೆ. ಇತ್ತೀಚೆಗೂ ನಾನು ಅಲ್ಲಿಗೆ ಹೋಗಿದ್ದೆ. ಆದರೆ, ಯಾರೋ, ನಾನು ಕಾಣೆಯಾಗಿದ್ದೇನೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದನ್ನು ಕೇಳಿ ನನಗೆ ನಗು ಬಂತು. ಯಾಕೆಂದರೆ, ಕೇವಲ ಎರಡು ಮೂರು ಗಂಟೆ ನನ್ನ ಫೋನ್‌ ಕಾಲ್‌ ಸಿಗಲಿಲ್ಲ ಅಂದಾಕ್ಷಣ, ಹೀಗೆಲ್ಲ ಸುದ್ದಿ ಹರಡಿದರೆ ಹೇಗೆ? ನನ್ನ ಫೋನ್‌ ಅಲ್ಲಿ ನಾಟ್‌ ರೀಚಬಲ್‌ ಆಗಿತ್ತು.

ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಯಾರಿಗೂ ನಾನು ಮಾತನಾಡಲು ಸಿಕ್ಕಿಲ್ಲ. ಈಗ ಬೆಂಗಳೂರಿಗೆ ಬಂದಿದ್ದೇನೆ. ಒಂದೆರೆಡು ದಿನ ಫೋನ್‌ಗೆ ಸಿಗದೇ ಇದ್ದರೆ, ಹೀಗೆಲ್ಲ ಆಗುತ್ತೆ ಅಂತ ಗೊತ್ತಿರಲಿಲ್ಲ. ಒಂದು ವೇಳೆ ಕಾಣೆಯಾದವರನ್ನು ಪತ್ತೆ ಹಚ್ಚೋಕೆ ಪೊಲೀಸರು 24 ಗಂಟೆ ಸಮಯ ತೆಗೆದುಕೊಳ್ಳುತ್ತಾರೆ. ಆದರೆ, ಒಂದೆರೆಡು ಗಂಟೆ ಫೋನ್‌ ನಾಟ್‌ ರೀಚಬಲ್‌ ಆಗಿದ್ದಾಕ್ಷಣ, ಕಾಣೆಯಾಗಿದ್ದಾರೆ ಅನ್ನೋದು ಹೇಗೆ? ವಿನಾಕಾರಣ ಸುದ್ದಿ ಹಬ್ಬಿಸುವ ಮುನ್ನ, ಸ್ವಲ್ಪ ಯೋಚಿಸಬೇಕು’ ಎನ್ನುತ್ತಾರೆ ಪೂಜಾಗಾಂಧಿ.

ಪೂಜಾಗಾಂಧಿ ಅಭಿನಯಿಸುತ್ತಿರುವ “ಉತಾಹಿ’ ಶೇ. 50 ರಷ್ಟು ಚಿತ್ರೀಕರಣವಾಗಿದೆ. ಇಷ್ಟರಲ್ಲೇ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. “ಉತಾಹಿ’ ಕನ್ನಡ, ತಮಿಳು, ತೆಲುಗು, ಮಲಯಾಳಿ, ಮರಾಠಿ ಭಾಷೆಯಲ್ಲಿ ತಯಾರಾಗುತ್ತಿದೆ. ಉಳಿದಂತೆ, ಶ್ರೀನಿವಾಸ್‌ರಾಜ್‌ ನಿರ್ದೇಶನದ “3′ ಸಿನಿಮಾ ಕೂಡ ರೆಡಿಯಾಗುತ್ತಿದೆ. ಅತ್ತ, ಪೂಜಾಗಾಂಧಿ ಅವರ ಬ್ಯಾನರ್‌ನಲ್ಲಿ ನಿರ್ಮಾಣಗೊಳ್ಳಲಿರುವ “ಬ್ಲ್ಯಾಕ್‌ ವರ್ಸಸ್‌ ವೈಟ್‌’ ಚಿತ್ರಕ್ಕೂ ತಯಾರಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next