Advertisement

Politics: ಕಾಂಗ್ರೆಸ್‌ಗೆ ಆಪರೇಶನ್‌ ಭಯ; ರೆಸಾರ್ಟ್‌ ರಾಜಕಾರಣ ಆರಂಭ?

12:15 AM Dec 03, 2023 | Team Udayavani |

ಹೊಸದಿಲ್ಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ರವಿವಾರ ನಡೆಯಲಿದ್ದು, 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾದ ಈ ರಾಜ್ಯಗಳ ಫ‌ಲಿತಾಂಶವು ಯಾರಿಗೆ ವರವಾಗಿ ಪರಿಣಮಿಸಲಿದೆ ಎಂಬ ಕುತೂಹಲ ದೇಶಾದ್ಯಂತ ಮನೆ ಮಾಡಿದೆ. ಇದರ ನಡುವೆಯೇ ಈ ರಾಜ್ಯಗಳಲ್ಲಿ “ರೆಸಾರ್ಟ್‌’ ರಾಜಕಾರಣದ ಆಟ ಕೂಡ ಆರಂಭವಾಗಿದೆ.

Advertisement

ರಾಜಸ್ಥಾನದಲ್ಲಿ ಅತಂತ್ರ ಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಇದ್ದು, ತೆಲಂಗಾಣದಲ್ಲಿ ಫೋಟೋ ಫಿನಿಶ್‌ ಫ‌ಲಿತಾಂಶ ಬರಬಹುದು ಹಾಗೂ ಮಧ್ಯಪ್ರದೇಶದಲ್ಲೂ ಸ್ಪಷ್ಟ ಬಹುಮತ ಯಾರಿಗೆಂದು ಹೇಳಲಾಗದು ಎಂದು ಇತ್ತೀಚೆಗೆ ಪ್ರಕಟವಾದ ಮತಗಟ್ಟೆ ಸಮೀಕ್ಷೆ ಗಳು ತಿಳಿಸಿವೆ. ಹೀಗಾಗಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಗಳಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಬಿಆರ್‌ಎಸ್‌ ತನ್ನ ಶಾಸಕರನ್ನು ಖರೀದಿಸಬಹುದು ಎಂಬ ಭೀತಿ ಕಾಂಗ್ರೆಸ್‌ಗಿದೆ.

ಗೆಲ್ಲುವವರು ಯಾರು?
ಪಂಚರಾಜ್ಯಗಳ ಪೈಕಿ ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಫ‌ಲಿತಾಂಶ ರವಿವಾರ ಪ್ರಕಟಗೊಳ್ಳಲಿದ್ದು, ಮಿಜೋರಾಂನಲ್ಲಿ ಸೋಮವಾರ ಮತ ಎಣಿಕೆ ನಡೆಯಲಿದೆ. ರವಿವಾರ ಬೆಳಗ್ಗೆ 8ರಿಂದ ಎಣಿಕೆ ಆರಂಭವಾಗಲಿದೆ. ಅಪರಾಹ್ನ 2ರ ವೇಳೆಗೆ ಬಹುತೇಕ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆಯಿದೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಫ‌ಲಿತಾಂಶವು ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳಿಗೂ ಮಹತ್ವದ್ದಾಗಿದೆ.

ತೆಲಂಗಾಣಕ್ಕೆ ಕರ್ನಾಟಕದ ನಾಯಕರ ದಂಡು
ಕೈ ನಾಯಕರನ್ನು “ಆಪರೇಶನ್‌’ ಗುಮ್ಮ ಕಾಡತೊಡಗಿದ್ದು, “ನಮ್ಮ ಅಭ್ಯರ್ಥಿಗಳನ್ನು ಈಗಾಗಲೇ ಬೇರೆ ಬೇರೆ ಪಕ್ಷಗಳು ಸಂಪರ್ಕ ಮಾಡಿವೆ’ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಗೋವಾ ಪರಿಸ್ಥಿತಿ ತೆಲಂಗಾಣದಲ್ಲಿ ಮರುಕಳಿಸದಿರಲಿ ಎಂಬಂತೆ ಕರ್ನಾಟಕದ ನಾಯಕರ ದಂಡೇ ತೆಲಂಗಾಣಕ್ಕೆ ಧಾವಿಸುತ್ತಿದೆ. ಇದೆಲ್ಲದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅದರ ಬಿಸಿ ಕರ್ನಾಟಕಕ್ಕೂ ತಾಕುತ್ತಿದೆ. ಈಗಾಗಲೇ ಡಿ.ಕೆ. ಶಿವಕುಮಾರ್‌ ಮತ್ತು ಗಡಿಭಾಗದ ಕೆಲವು ಶಾಸಕರು ತೆಲಂಗಾಣಕ್ಕೆ ಹಾರಿದ್ದು, ಗೆಲುವು ಖಚಿತ ಎನ್ನಬಹುದಾದ ಅಭ್ಯರ್ಥಿಗಳನ್ನು ಹಿಡಿದಿಡಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇವರಲ್ಲದೆ ರವಿವಾರ ಬೆಳಗ್ಗೆ ಸಚಿವರಾದ ಕೆ.ಎಚ್‌. ಮುನಿಯಪ್ಪ, ಈಶ್ವರ ಖಂಡ್ರೆ, ಜಮೀರ್‌ ಅಹಮ್ಮದ್‌ ಹಾಗೂ ಕೆಲವು ಶಾಸಕರು ತಮ್ಮ ಬೆಂಬಲಿಗರೊಂದಿಗೆ ತೆಲಂಗಾಣಕ್ಕೆ ದೌಡಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಭೀತಿ : ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತುರುಸಿನ ಹಣಾಹಣಿ ಇರುವ ಕಾರಣ ಅತ್ಯಂತ ಕಡಿಮೆ ಅಂತರದಲ್ಲಿ ಗೆದ್ದರೆ ವಿಪಕ್ಷಗಳು ತಮ್ಮ ಶಾಸಕರನ್ನು ಖರೀದಿಸಿ ಸರಕಾರ ರಚನೆಗೆ ಮುಂದಾಗಬಹುದು ಎಂಬ ಆತಂಕ ಕಾಂಗ್ರೆಸ್‌ನಲ್ಲಿದೆ. ಹೀಗಾಗಿ ಈ ರಾಜ್ಯಗಳ ಕಾಂಗ್ರೆಸ್‌ ಶಾಸಕರು ಬಿಜೆಪಿಯ ಬಲೆಗೆ ಬೀಳದಂತೆ ತಡೆಯಲು ಹೈಕಮಾಂಡ್‌ ರೆಸಾರ್ಟ್‌ಗಳ ಬಾಗಿಲು ತಟ್ಟತೊಡಗಿದೆ. ಎರಡೂ ರಾಜ್ಯಗಳ ಶಾಸಕರನ್ನು ಬೆಂಗಳೂರು ಅಥವಾ ಜೈಪುರಕ್ಕೆ ಕರೆದೊಯ್ಯುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಯಾ ರಾಜ್ಯಗಳ ಉಸ್ತುವಾರಿಗಳು ಹಾಗೂ ವೀಕ್ಷಕರು ಅಲ್ಲೇ ಇದ್ದು, ಪರಿಸ್ಥಿತಿ ಮೇಲೆ ಕಣ್ಣಿಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Advertisement

ಹಲವು ನಾಯಕರಿಗೆ ಅಳಿವು- ಉಳಿವಿನ ಪ್ರಶ್ನೆ
ಈ ಫ‌ಲಿತಾಂಶವು ಕೆಲವು ಘಟಾನುಘಟಿ ನಾಯಕರಿಗೆ ಅಳಿವು-ಉಳಿವಿನ ಪ್ರಶ್ನೆಯೂ ಹೌದು. ರಾಜಸ್ಥಾನದಲ್ಲಿ ಹಾಲಿ ಸಿಎಂ ಅಶೋಕ್‌ ಗೆಹ್ಲೋಟ್‌ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಪಕ್ಷದೊಳಗಿನ ಒಳಜಗಳವೂ ಇವರಿಗೆ ಮುಳ್ಳಾಗುವ ಸಾಧ್ಯತೆಯಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡರೆ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ಇಬ್ಬರೂ ಹೈಕಮಾಂಡ್‌ ವಿಶ್ವಾಸ ಕಳೆದುಕೊಳ್ಳಲಿದ್ದಾರೆ. ಒಂದು ವೇಳೆ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೇರಿ ಬಿಜೆಪಿ ಸೋಲುಂಡರೆ ಮಾಜಿ ಸಿಎಂ ವಸುಂಧರಾ ರಾಜೇ ಅವರ ರಾಜಕೀಯ ಜೀವನ ಕೊನೆಯಾಯಿತೆಂದೇ ಅರ್ಥ. ಇದೇ ರೀತಿ ಮಧ್ಯಪ್ರದೇಶದ್ದು ಹಾಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಮಾಜಿ ಸಿಎಂ ಕಮಲ್‌ನಾಥ್‌ ಅವರಿಗೆ ನಿರ್ಣಾಯಕ ಚುನಾವಣೆ.

ಸಿಎಂ ಹುದ್ದೆ ಸಿಗಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ ಈ ಬಾರಿ ಸಿಎಂ ಸ್ಥಾನ ಸಿಗಲಿದೆ ಎಂಬ ಆಸೆಯಲ್ಲಿದ್ದಾರೆ. ಬಿಜೆಪಿ ಸೋತರೆ ಇವರ ಕನಸು ಭಗ್ನವಾಗಲಿದೆ. ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರ ಕ್ಕೇರಲಿದೆ ಎಂದು ಸಮೀಕ್ಷೆಗಳು ಹೇಳಿದ್ದು, ಇದು ನಿಜವಾದರೆ ಬಿಜೆಪಿಯ ಡಾ| ರಮಣ್‌ ಸಿಂಗ್‌ ಅವರ ರಾಜಕೀಯ ಜೀವನ ಅಂತ್ಯವಾಗುವ ಸಾಧ್ಯತೆಯೇ ಹೆಚ್ಚು. ತೆಲಂಗಾಣದಲ್ಲಿ ಬಿಆರ್‌ಎಸ್‌ ಅನ್ನು ಮಣಿಸುವಲ್ಲಿ ಕಾಂಗ್ರೆಸ್‌ ಯಶಸ್ವಿ ಯಾದರೆ ಮುಖಭಂಗ ಅನುಭವಿಸುವುದರ ಜತೆಗೆ ರಾಷ್ಟ್ರ ರಾಜಕಾರಣಕ್ಕೆ ತೆರಳುವ ಕೆ. ಚಂದ್ರಶೇಖರ್‌ ರಾವ್‌ ಕನಸು ಕಮರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next