Advertisement

ಶ್ರೀಗಳಿಗೂ ರಾಜಕೀಯಕ್ಕೂ ಅದೇನೋ ನಂಟು!

11:08 PM Dec 29, 2019 | Lakshmi GovindaRaj |

ಮಣಿಪಾಲ: ಕಾವಿ ವಸ್ತ್ರ, ಅನುಷ್ಠಾನ, ಉಪಾಸನೆಗಳ ಕಟ್ಟುನಿಟ್ಟು ಇದ್ದರೂ ಪೇಜಾವರ ಶ್ರೀಗಳಿಗೂ ರಾಜಕೀಯಕ್ಕೂ ಅದೇನೋ ನಂಟು. ಕೊನೆಯವರೆಗೂ ರಾಜಕಾರಣಿಗಳು, ರಾಜಕೀಯ ಅವರನ್ನು ಬಿಟ್ಟಿರಲಿಲ್ಲ. ರಾಜಕೀಯ ವಿದ್ಯಮಾನಗಳ ಬಗ್ಗೆ ಅವರು ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದರು. ಇತ್ತೀಚೆಗೆ ಕರ್ನಾಟಕದ ವಿದ್ಯಮಾನಗಳ ಬಗ್ಗೆಯೇ ಅವರು ಪ್ರತಿಕ್ರಿಯಿಸಿದ್ದು, ಈಗಿನ ರಾಜಕೀಯದಲ್ಲಿ ನೈತಿಕತೆ ಕುಸಿದಿದೆ ಎಂದು ನೇರವಾಗಿಯೇ ಹೇಳಿದ್ದರು.

Advertisement

ಪೇಜಾವರ ಶ್ರೀಗಳ ಮತ್ತು ರಾಜಕೀಯದ ನಂಟು ಇಂದು ನಿನ್ನೆಯದಲ್ಲ. ಅಷ್ಟಮಠಗಳಲ್ಲೇ ಅತಿ ಹೆಚ್ಚು ರಾಜಕೀಯ ಸಂಪರ್ಕ ಹೊಂದಿದ್ದ ಯತಿವರೇಣ್ಯರು ಅವರು. ಈ ಸಂಪರ್ಕಗಳನ್ನು ಅವರು ಸ್ವಂತಕ್ಕಾಗಿ ಬಳಸಿಕೊಂಡಿದ್ದಿಲ್ಲ. ಬದಲಿಗೆ ತಾನು ಮಾಡುತ್ತಿರುವ ಕೆಲಸಗಳಿಗಾಗಿ ಬಳಸಿಕೊಂಡಿದ್ದರು. ಸಂತ ಸಮ್ಮೇಳನ, ವಿಶ್ವಹಿಂದೂ ಪರಿಷತ್‌ನೊಂದಿಗಿನ ಒಡನಾಟದೊಂದಿಗೆ ಅವರಿಗೆ ರಾಜಕೀಯ ವ್ಯಕ್ತಿಗಳ ಪರಿಚಯ ಲಭ್ಯವಾಗಿತ್ತು.

ರಾಜ್ಯದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪನವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರೆಗೆ ಅವರಿಗೆ ರಾಜಕಾರಣಿಗಳೊಂದಿಗೆ ಸಂಪರ್ಕ ಇತ್ತು. ಇದಕ್ಕೆ ಕಾಂಗ್ರೆಸ್‌, ಬಿಜೆಪಿ ಎಂಬ ಭೇದ ಇರಲಿಲ್ಲ. ಅವರ ಅಂತಿಮ ದಿನಗಳ ಸಂದರ್ಭದ ಪಕ್ಷ- ಜಾತಿ, ಮತಗಳ ಭೇದವಿಲ್ಲದೆ ಹಲವಾರು ರಾಜಕೀಯ ನಾಯಕರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದರು.

ಪೇಜಾವರ ಶ್ರೀಗಳು ಎಲ್ಲ ರಾಜಕೀಯ ವ್ಯಕ್ತಿಗಳೊಂದಿಗೆ ಪರಿಚಯರಾಗಿದ್ದರಿಂದಲೋ ಏನೋ, ಅವರ ಮಾತಿಗೆ ರಾಜಕೀಯ ವಲಯದಲ್ಲಿ ವಿಶೇಷ ತೂಕ ಇರುತ್ತಿತ್ತು. ಕೆಲವು ನಾಯಕರಂತೂ ಪೇಜಾವರರ ಮಾತುಗಳನ್ನು ಮೀರಿ ನಡೆಯೆವು ಎಂಬಷ್ಟರ ಮಟ್ಟಿಗೆ ಗೌರವ ಭಾವ ಹೊಂದಿದ್ದರು. ಇದೇ ಕಾರಣಕ್ಕೆ ಪ್ರಮುಖ ರಾಜಕೀಯ ವಿದ್ಯಮಾನಗಳಾದಾಗ ಪತ್ರಕರ್ತರು ಪೇಜಾವರ ಶ್ರೀಗಳ ಪ್ರತಿಕ್ರಿಯೆ ಕೇಳುತ್ತಿದ್ದರು. ಅವರ ಅಭಿಪ್ರಾಯವೂ ಒಂದು ಚರ್ಚೆಗೆ ನಾಂದಿಯಾಗುತ್ತಿತ್ತು.

ರಾಮಜನ್ಮಭೂಮಿ ಆಂದೋಲನದ ಬಳಿಕವಂತೂ ಪೇಜಾವರ ಶ್ರೀಗಳ ಹೆಸರು ರಾಜಕೀಯ ವಲಯದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿತ್ತು. ಅವರು ಆಂದೋಲನದ ಮುಂಚೂಣಿಯಲ್ಲಿದ್ದದ್ದು ಮತ್ತು ಅವರ ನಿರ್ಧಾರಗಳಿಗೆ ಸಿಕ್ಕ ಮನ್ನಣೆಯಿಂದಾಗಿ ರಾಜಕೀಯ ವಲಯ ಅವರ ಮಾತುಗಳನ್ನು ಕೇಳುತ್ತಿತ್ತು. ಧರ್ಮವು ಪ್ರಬಲವಾಗಿದ್ದು ರಾಜಕೀಯಕ್ಕೆ ನಿರ್ದೇಶನ ನೀಡುವಂತಿರಬೇಕು. ಇದರಿಂದ ಬೆಳವಣಿಗೆ ಸಾಧ್ಯ ಎಂಬ ರೀತಿಯ ಆಶಯವನ್ನು ಅವರು ಹೊಂದಿದ್ದರು. ಇದಕ್ಕೆ ರಾಜಕಾರಣಿಗಳು ಸಲಹೆ ಕೇಳಿದರೆ ಅವರು ತುಂಬು ಮನಸ್ಸಿನಿಂದ ಮಾರ್ಗದರ್ಶನ ಮಾಡುತ್ತಿದ್ದುದು ನಿದರ್ಶನವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next