Advertisement

ಅಗ್ನಿ ಎಫೆಕ್ಟ್ ಯಾವಾಗ ಯಾ ಕಡೆ ತಿರಗತೈತೊ ಗೊತ್ತಿಲ್ಲ!

09:19 AM Jun 26, 2022 | Team Udayavani |

ಯಜಮಾನ್ತಿ ಹುಟ್ಟಿದ ಹಬ್ಬಕ್ಕ ರಾತ್ರಿ ಹನ್ಯಾಡ ಗಂಟೇಕನ ವಿಶ್‌ ಮಾಡ್ತೇನಿ ಅಂತೇಳಿ ಕೈಯಾಗ ಮೊಬೈಲ್‌ ಹಿಡ್ಕೊಂಡು ಎದರಗಡೆ ಗ್ವಾಡಿಮ್ಯಾಲ ಹಾಕಿದ್ದ ಗಡಿಯಾಳ ನೋಡ್ಕೊಂತ ಕುಂತಿದ್ಲು. ಊರಿಂದ ಗೆಳ್ಯಾ ಬ್ಯಾರೆ ಹೆಂಡ್ತಿ ಕರಕೊಂಡು ಬಂದಿದ್ದ. ಎಲ್ಲಾರೂ ಕೂಡಿ ವಿಶ್‌ ಮಾಡ್ತೇವಿ ಅಂತ ಕಾದ್ಲಂತ ಕಾಣತೈತಿ.

Advertisement

ಮಿಡ್‌ನೈಟಿನ್ಯಾಗ ದೇಶಕ್ಕ ಸ್ವಾತಂತ್ರ್ಯ ಸಿಕ್ಕಾಗ ದೇಶಾ ಆಳಾರು ಮಂದಿ ಮಲಗಿದಾಗ ಧ್ವಜಾಹಾರಿಸಿ ಖುಷಿ ಪಟ್ಟಂಗ ತಾನೂ ರಾತ್ರಿನ ಹುಟ್ಟಿದ ಹಬ್ಬದ ಸಂಭ್ರಮ ಪಡಬೇಕು ಅಂತ ಪ್ಲ್ಯಾನ್‌ ಇತ್ತಂತ ಕಾಣತೈತಿ. ನಾವು ದೇಶಕ್ಕ ಸ್ವಾತಂತ್ರ್ಯ ಬಂದಾಗ, ಸ್ವಾತಂತ್ರ್ಯ ದೇಶಕ್ಕ ಬಂದೇತಿ ನಮಗೇನಲ್ಲಲಾ ಅಂತೇಳಿ ಹೊತ್ಕೊಂಡು ಮಲಕೊಂಡ ಮಂದಿಯಂಗ ಹೆಂಡ್ತಿ ಬರ್ತ್‌ಡೆ ಮರತು ಮಲಕೊಂಡು ಬಿಟ್ನಿ.

ಕಾಂಗ್ರೆಸ್‌ ನ್ಯಾರು ದೇಶದ ಮುಂದಿನ ಪ್ರಧಾನಿ ಅಂದ್ಕೊಂಡಿರೊ ರಾಹುಲ್‌ ಗಾಂಧಿಗೆ ಇಡ್ಯಾರು ನೊಟೀಸ್‌ ಕೊಟ್ಟು ವಿಚಾರಣೆಗೆ ಕರದ್ರ ಇಡೀ ದೇಶಕ್ಕ ಏನೋ ಆಗೇತಿ ಅನ್ನಾರಂಗ ಕಾಂಗ್ರೆಸ್ಯಾಗ್‌ ಇರೋ ಬರೋ ನಾಯಕರೆಲ್ಲಾ ಊಟಾ ನಿದ್ದಿ ಬಿಟ್ಟು ಬೀದ್ಯಾಗಿಳಿದು ಹೋರಾಟ ಮಾಡಿದಂಗ, ಯಜಮಾನ್ತಿ ಸಲುವಾಗಿ ನಾನೂ ಏನರ ಮಾಡ್ತೇನಿ ಅಂತ ಲೆಕ್ಕಾಚಾರ ಹಾಕೊಂಡು ಕುಂತಿದ್ಲು ಅಂತ ಅನಸ್ತೈತಿ.

ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಮ್ಯಾಲ ಆರೋಪ ಕೇಳಿ ಬಂದಿದ್ಕ ಇಡ್ಯಾರು ವಿಚಾರಣೆಗೆ ಕರದ್ರ, ಅವರ್ನ ಎಲ್ಲಿ ಆರೆಸ್ಟ್‌ ಮಾಡಿ ತಿಹಾರ್‌ ಜೈಲಿಗಿ ಕಳಿಸಿ ಬಿಡ್ತಾರೋ ಅಂತೇಳಿ ಕಾಂಗ್ರೆಸ್ನ್ಯಾರು ಪ್ರತಿಭಟನೆ ಮಾಡಿ ತಾವ ಆರೆಸ್ಟ್‌ ಆಗಿ ಸೆಲ್ಪಿ ತಗಸ್ಕೊಂಡು ರಾಹುಲ್‌ ಗಾಂಧಿಗೆ ನಿಮ್‌ ಸಲುವಾಗಿ ನಾವ ಆರೆಸ್ಟ್‌ ಆಗೇವಿ ಅಂತೇಳಿ ಫೋಟೊ ಕಳಿಸಿದ್ದು ನೋಡಿ ಜನರು, ಅವರು ದೇಶದ ಸಮಸ್ಯೆಗಿಂತ ತಮ್ಮ ನಾಯಕನ ಮೆಚ್ಚಿಸಾಕ ಮಾಡಾಕತ್ತಾರು ಅಂತ ಮಾತಾಡ್ಕೊಳ್ಳುವಂಗಾತು.

ಈ ದೇಶದಾಗ ಗಾಂಧಿ ಫ್ಯಾಮಿಲಿ ವಿಚಾರಣೆ ಮಾಡೂದ್ಕಿಂತ ದೊಡ್‌ ಸಮಸ್ಯೆಗೋಳು ಭಾಳ ಅದಾವು. ಕೇಂದ್ರ ಸರ್ಕಾರ ದಿನ್ನಾ ಬೆಳಕಾದ್ರ ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ ರೇಟ್‌ ಏರಸ್ಕೋಂತನ ಹೊಂಟೇತಿ. ಅಡಗಿ ಸಾಮಾನು, ಕಾಯಿಪಲ್ಲೇ ರೇಟಂತೂ ನೂರರ ನೋಟಿಗೆ ಮರ್ಯಾದಿ ಇಲ್ಲದಂಗ ಮಾಡೇತಿ. ಅಂತಾದ್ರ ವಿರುದ್ಧ ರೋಡಿಗಿಳಿದು ಬ್ಯಾರಿಕೇಡ್‌ ಹತ್ತಿ, ಗದ್ಲಾ ಮಾಡಿದ್ರ ಜನರೂ ಸಪೋರ್ಟ್‌ ಮಾಡ್ತಿದ್ರೇನೊ ಅನಸ್ತೈತಿ. ಆದ್ರ, ಕಾಂಗ್ರೆಸ್ಸಿನ್ಯಾರಿಗೆ ಗಾಂಧಿ ಕುಟುಂಬ ಬಿಟ್ರ ಬ್ಯಾರೇ ಅಸ್ತಿತ್ವನ ಇಲ್ಲ. ಗಾಂಧಿ ಕುಟುಂಬದ ಕೈಯಾಗ ಅಧಿಕಾರ ಇದ್ರ ಮಾತ್ರ ಕಾಂಗ್ರೆಸ್‌ ಉಳ್ಸಾಕ ಸಾಧ್ಯ ಇಲ್ಲಾಂದ್ರ, ಎಲ್ಲಾ ರಾಜ್ಯದಾಗೂ ಒಬ್ಬೊಬ್ರು ಶರದ್‌ ಪವ್ವಾರ್‌ನಂಗ, ಮಮತಾ ಬ್ಯಾನರ್ಜಿಯಂಗ ಸಾಮಂತ ರಾಜರು ಹುಟ್ಕೊಂಡು ಕಾಂಗ್ರೆಸ್ಸಿಗೆ ಮಹಾ ಮಂಗಳಾರತಿ ಮಾಡ್ತಾರು ಅನ್ನೋ ಹೆದರಿಕಿ ಐತಿ, ಅದ್ಕ ಕಾಂಗ್ರೆಸ್ನ್ಯಾರು ದೇಶದಾಗ ಏನಾದ್ರೂ ತೆಲಿಕೆಡಿಸ್ಕೊಳ್ಳದಿದ್ರೂ, ಗಾಂಧಿ ಕುಟುಂಬಕ್ಕ ಒಂದು ನೋಟೀಸ್‌ ಹೋದ್ರು ಊಟಾ ನಿದ್ದಿ ಬಿಟ್ಟು ಅಂಗಿ ಹರಕೊಂಡು ಹೋರಾಡ್ತಾರು ಅನಸ್ತೈತಿ.

Advertisement

ಇದನ್ನೂ ಓದಿ:ಲಸ್ಸಿ, ಸಟ್ಟುವಿನಂತಹ ಸ್ಥಳೀಯ ಪಾನೀಯಗಳನ್ನೇ ಕುಡಿಯಿರಿ ಪ್ಲೀಸ್‌!

ಹಂಗಂತ ಕೇಂದ್ರ ಸರ್ಕಾರ ಮಾಡಾಕತ್ತಿದ್ದು ಎಲ್ಲಾ ಬರೋಬರ್‌ ಐತೆಂತೇನಲ್ಲಾ. ರಾಹುಲ್‌ ಗಾಂಧಿನ ಇಡಿ ಮೂರು, ಮೂರು ದಿನಗಟ್ಟಲೇ ಕರದು ಕುಂದಸ್ಕೊಳ್ಳೋದ್ರಿಂದ ಅವರ ವಿರುದ್ಧದ ಆರೋಪಕ್ಕ ಏನಾದ್ರೂ ಲಾಜಿಕ್‌ ಎಂಡ್‌ ಸಿಗುವಂಗರ ಮಾಡ್ತಾರಾ, ಅದೂ ಇಲ್ಲ. ಸುಮ್ನ ಜನರಿಗೆ ಕೊರೊನಾ ಬಂದೈತಿ ಅಂತೇಳಿ ಹೆದರಿಸಿ ಔಷಧ ಕಂಪನ್ಯಾರ ಲಾಬಿಗಿ ಮಣದು ಬೂಸ್ಟರ ಡೋಸ್‌ ಕೊಟ್ಟಂಗ ಕಾಂಗ್ರೆಸ್‌ ನ್ಯಾರಿಗಿ ಒಂದು ಡೋಸ್‌ ಕೊಡಾಕ್‌ ಮಾಡಿರ್ತಾರು ಅಂತ ಅನಸ್ತೈತಿ.

ಈ ದೇಶದಾಗ ಅಧಿಕಾರದಾಗ ಇದ್ದಾರು ಯಾರ್ನ ಯಾವಾಗ ಬೇಕಾದ್ರೂ ಏನ್‌ ಬೇಕಾದ್‌ ಮಾಡಬೌದು ಅನ್ನೂದ್ರಾಗ ಕಾನೂನು ಎಲ್ಲಾರಿಗೂ ಒಂದ ಅಂತ ಅನಸ್ತೈತಿ. ಬ್ರಿಟೀಷರು ಜನರಿಗಿ ಏನೂ ತಿಳಿಬಾರ್ದು ಅಂತಹೇಳೆ ಮಂದಿ ಮಲಕೊಂಡಾಗ ರಾತ್ರಿ ಸ್ವಾತಂತ್ರ್ಯ ಕೊಟ್‌ ಹೋದ್ರು ಅನಸ್ತೈತಿ.

ಕಾಂಗ್ರೆಸ್‌ನ್ಯಾರು ಸುಳ್‌ ಇತಿಹಾಸ ಬರಿಸಿ ಸಾಲಿ ಹುಡುಗೂರ್‌ ಅಷ್ಟ ಅಲ್ಲಾ ದೇಶದ ಜನರ ದಾರಿ ತಪ್ಪಿಸ್ಯಾರು ಅಂತ ಇರೋ ಬರೋ ಇತಿಹಾಸ ಬದಲಸ್ತೇವಿ ಅಂತೇಳಿ, ದೇಶದ ಗಡಿ ಕಾಯೋ ಯೋಧರ್ನೂ ಕಾಂಟ್ರ್ಯಾಕ್ಟ್ ಮ್ಯಾಲ್‌ ತೊಗೊಳ್ಳು ಪ್ಲ್ಯಾನ್‌ ಮಾಡಾಕತ್ತಾರು. ಮಿಲಟ್ರಾಗ ನೌಕರಿ ಸಿಕ್ಕೇತಿ ಅಂತೇಳಿ ಯಾರರ ಹುಡುಗೂರು ಮದುವ್ಯಾದ್ರ, ಯಾಡ್‌ ವರ್ಷ ಕಳಿದ್ರಾಗ ಕೆಲಸಾ ಕಳಕೊಂಡು ಮನಿಗಿ ಬಂದು ಕುಂತ್ರ ಅವನ ಪರಿಸ್ಥಿತಿ ಏನು. ಅವನ ನಂಬಿ ಬಂದಿರೋ ಹುಡುಗಿ ಪರಿಸ್ಥಿತಿ ಏನು. ಗಂಡ ಮಿಲಟ್ರ್ಯಾಗ್‌ ಅದಾನಂತೇಳಿ ನಂಬಿ ಬಂದಾಕಿಗೆ ನಾಕ್‌ ವರ್ಷದಾಗ ಗಂಡ ಮನ್ಯಾಗ ಬಂದು ರಿಕಾಮಿ ಅಡ್ಯಾಡಾಕತ್ರ ಅಕಿ ಜೀವನಾ ಹೆಂಗ್‌ ನಡಸ್ತಾಳು. ನೌಕರಿ ಇಲ್ಲದ ಗಂಡನ ಕೂಡ ಎಲ್ಲಿ ಒದ್ಯಾಡುದು ಅಂತೇಳಿ ಆ ಹೆಣ್ಮಗಳು ಅವನ ಬಿಟ್ಟು ಹೋಗೂದಿಲ್ಲಂತೇನ ಗ್ಯಾರೆಂಟಿ? ಇದು ಬರೇ ನೌಕರಿ ಪ್ರಶ್ನೆ ಅಲ್ಲಾ, ಇದರಿಂದ ಸಮಾಜ, ಕುಟುಂಬದ ಮ್ಯಾಲ್‌ ಆಗೂ ಪರಿಣಾಮಾನೂ ಸರ್ಕಾರ ಯೋಚನೆ ಮಾಡಬೇಕು ಅಂತ ಅನಸ್ತೈತಿ. ನಾಕ್‌ ವರ್ಷ ಜಾಸ್ತಿ ಪಗಾರ ಕೊಟ್ಟು ದುಡುಸ್ಕೊ ಬದ್ಲು, ಯಾಡ್‌ ಸಾವಿರ ಕಡಿಮಿ ಕೊಟ್ರೂ ಚಿಂತಿಲ್ಲ. ಕಾಯಂ ನೌಕರಿ ಕೊಟ್ರ, ಅವರಿಗೂ ಒಂದು ನಂಬಿಕಿ ಬರತೈತಿ. ದೇಶಾ ಕಾಯಾಕ್‌ ಅಂದ್ರ ನಮ್‌ ದೇಶದ ಯುವಕರು ಮನಿ ಮಠಾ ಬಿಟ್ಟು ಹೋಗಾಕ್‌ ರೆಡಿ ಅದಾರು.

ಆದ್ರ, ಕೇಂದ್ರ ಸರ್ಕಾರ ಯಾ ಲೆಕ್ಕದಾಗ ಈ ಯೋಜನೆ ಜಾರಿ ಮಾಡಾಕ್‌ ಹೊಂಟಾರೊ ಗೊತ್ತಿಲ್ಲ. ಆದ್ರ, ಹರೇದ್‌ ಹುಡುಗೂರ್‌ ವಿಚಾರದಾಗ ಸರ್ಕಾರ ನಿರ್ಧಾರ ಮಾಡಬೇಕಾದ್ರ ಹತ್‌ ಸರಿ ಯೋಚನೆ ಮಾಡೂದು ಚೊಲೊ ಅನಸ್ತೈತಿ. ಯಾಕಂದ್ರ, ಹರೇದ್‌ ಹುಡುಗೂರ್‌ ವಿಚಾರದಾಗ ಕೈ ಹಾಕೂದು ಅಂದ್ರ ತೊಗರ್ಕಾನ್‌ ಜೇನಿಗಿ ಕಲ್ಲ ಒಗದಂಗ, ಮೊದ್ಲ ಯುಥ್ಸ್ ಎಲ್ಲಾ ಬಿಜೆಪಿ ನಂಬಿರೋ ಓಟ್‌ ಬ್ಯಾಂಕ್‌. ಅದ ಡಿಸ್ಟರ್ಬ್ ಆದ್ರ ಮುಂದಿನ ಸಾರಿ ತೊಂದ್ರಿ ಅಕ್ಕೇತಿ ಅನಸ್ತೈತಿ.

ದೇಶದಾಗ ಪರಿಸ್ಥಿತಿ ಹೆಂಗೈತೊ ಗೊತ್ತಿಲ್ಲಾ. ಆದ್ರ, ರಾಜ್ಯದಾಗ ಮಾತ್ರ ಬಿಜೆಪಿ ಕಂಡಿಷನ್‌ ತ್ರಾಸ್‌ ಐತಿ. ಜನರಿಗೆ ಕಾಂಗ್ರೆಸ್‌ಮ್ಯಾಲ್‌ ಪ್ರೀತಿ ಐತೊ ಏನ್‌ ಬಿಜೆಪಿ ಮ್ಯಾಲ್‌ ಸಿಟೈತೊ ಗೊತ್ತಿಲ್ಲ. ರಾಜ್ಯದಾಗ ನಡ್ಯಾಕತ್ತಿರೋ ಬೈ ಎಲೆಕ್ಷನ್ಸ್‌, ಪರಿಷತ್‌ ಚುನಾವಣೆಗೋಳ ರಿಸಲ್ಟ್ ನೋಡಿದ್ರ ಕಾಂಗ್ರೆಸ್‌ ಪ್ರತಿಪಕ್ಷದಾಗ ಇದ್ರೂ ಬಿಜೆಪಿಗಿಂತ ಚೊಲೊ ರಿಸಲ್ಟ್ ಬರಾಕತ್ತಾವು. ಮೊನ್ನಿ ನಡದಿರೋ ಟೀಚರ್ಸು, ಡಿಗ್ರಿಯಾರ್ದ ಎಲೆಕ್ಷನ್‌ ರಿಸಲ್ಟ್ ನೋಡಿದ್ರ, ಕಾಂಗ್ರೆಸ್‌ ಅನಾಯಾಸ ಯಾಡ್‌ ಸೀಟ್‌ ಗೆತ್ತು.

ಬಿಜೆಪ್ಯಾರು ಯಡಿಯೂರಪ್ಪ ಇಲ್ಲದನ ಗೆದ್ದು ತೋರಸ್ತೇವಿ ಅಂತ ಕಸರತ್ತು ನಡಿಸಿದ್ರು ಅಂತ ಅನಸ್ತೆçತಿ. ಮೈಸೂರಾಗ ನಾನ ಗೆಲ್ಲಸ್ಕೊಂಡು ಬರತೇನಿ ಅಂತ ಸೋಮಣ್ಣೋರು, ಯಡಿಯೂರಪ್ಪನ ಅಲ್ಲಿಗೆ ಬಂದ್‌ ಗೊಡ್ಲಿಲ್ಲಂತ. ಬೆಳಗಾವದಾಗೂ ಯಡಿಯೂರಪ್ಪಗ ಸ್ವಲ್ಪ ಜವಾಬ್ದಾರಿ ತೊಗೊಂಡು ಗೆಲ್ಲಿಸಿಕೊಡ್ರಿ ಅಂತ ಯಾರೂ ಹೇಳಲಿಲ್ಲಂತ. ಅದ್ಕ ಅವರು ಸೈಲೆಂಟ್‌ ಆಗಿದ್ದು ಬಿಜೆಪಿಗೆ ಹೊಡ್ತಾ ಕೊಟ್ತು ಅಂತ ಅನಸ್ತೈತಿ.

ಸುಮ್ನ ನೆಗ್ಲೆಕ್ಟ್ ಮಾಡಿದ್ರ ಯವಾಗ ಅಗ್ನಿ ಎಫೆಕ್ಟ್ ಯಾರ ಮ್ಯಾಲ್‌ ಅಕ್ಕೇತೊ ಗೊತ್ತಿಲ್ಲ. ಹಂಗಾಗೇ ನಾನೂ ಬೆಳಕಾಗೂದ್ರಾಗ ಎದ್ದು ಯಜಮಾನ್ತಿಗೆ ಬರ್ಥ್ ಡೆ ವಿಶ್‌ ಮಾಡಿ ಸೇಫಾದೆ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next