Advertisement

ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ

02:44 PM Mar 04, 2023 | Team Udayavani |

ಕೋಲಾರ: ರಾಜ್ಯದ ಮೂಡಣ ದಿಕ್ಕಿನ ಮೊದಲ ವಿಧಾನಸಭಾ ಕ್ಷೇತ್ರ ಮುಳಬಾಗಿಲು. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದೆ. ಹಿಂದಿನ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿದ್ದ ಜೆಡಿಎಸ್‌ ಕ್ಷೇತ್ರವನ್ನು ಮರು ವಶಪಡಿಸಿಡಿಕೊಳ್ಳಲು ಸಜ್ಜಾಗುತ್ತಿದೆ.

Advertisement

ಕೊತ್ತೂರು ಮಂಜುನಾಥ್‌ರ ಬೆಂಬಲ ಪಡೆದು ಸ್ಪರ್ಧಿಸಿದರೆ ಗೆಲುವು ಸುಲಭ ಎಂಬ ಕಾರಣಕ್ಕೆ ಕಾಂಗ್ರೆಸ್‌ ನಿಂದ ಸ್ಪರ್ಧಿಸಲು ಅರ್ಧ ಡಜನ್‌ಗೂ ಹೆಚ್ಚು ಅಭ್ಯರ್ಥಿ ಗಳು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಇಲ್ಲಿ ಸ್ವಂತ ಬಲದಿಂದ ಗೆಲುವಿನ ಹಂತ ತಲುಪುವುದು ಕಷ್ಟ ಎಂಬ ಕಾರಣಕ್ಕೆ ಜೆಡಿಎಸ್‌, ಕಾಂಗ್ರೆಸ್‌ ವಿದ್ಯಮಾನಗಳತ್ತ ಚಿತ್ತ ನೆಟ್ಟಿದೆ.

2008ರಲ್ಲಿ ಕಾಂಗ್ರೆಸ್‌ನ ಅಮರೇಶ್‌ ಕೇಂದ್ರ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಬೆಂಬಲದಿಂದ ಶಾಸಕರಾಗಿದ್ದರು. ಆನಂತರ ಅಮರೇಶ್‌ ಮತ್ತು ಕೆ.ಎಚ್‌.ಮುನಿಯಪ್ಪ ನಡುವೆ ಮನಸ್ತಾಪ ಏರ್ಪಟ್ಟಿದ್ದರಿಂದ ಅಮರೇಶ್‌ ಪುನರಾಯ್ಕೆ ಆಗಿರಲಿಲ್ಲ.

2013ರ ಚುನಾವಣೆಯಲ್ಲಿ ಕೊತ್ತೂರು ಮಂಜುನಾಥ್‌ ಮುಳಬಾಗಿಲು ಮತದಾರ ರನ್ನು ಸೇವಾ ಕಾರ್ಯಕ್ರಮಗಳ ಮೂಲಕ ಮನ ಗೆದ್ದು ಪಕ್ಷೇತರ ಶಾಸಕರಾಗಿದ್ದರು. ಆದರೆ, ಅವರ ಜಾತಿ ಪ್ರಮಾಣ ಪತ್ರ ವಿವಾದಕ್ಕೆ ಸಿಲುಕ್ಕಿದ್ದರಿಂದ 2018ರ ಚುನಾವಣೆ ಯಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಆಗ ನಾಮಪತ್ರ ಸಲ್ಲಿಸಿದ್ದ ಎಚ್‌.ನಾಗೇಶ್‌ ಕಾಂಗ್ರೆಸ್‌ ಮತ್ತು ಕೊತ್ತೂರು ಮಂಜುನಾಥ್‌ ಬೆಂಬಲಿತ ಅಭ್ಯರ್ಥಿಯಾಗಿ ಕೇವಲ 20 ದಿನಗಳಲ್ಲಿ ಶಾಸಕರಾಗಿ ಬಿಟ್ಟಿದ್ದರು. ಅಲ್ಪ ಮತಗಳ ಅಂತರದಿಂದ ಜೆಡಿಎಸ್‌ನ ಸಮೃದ್ಧಿ ಮಂಜುನಾಥ್‌ ಪರಾಭವಗೊಂಡಿದ್ದರು.

ಗೆದ್ದ ನಂತರ ಎಚ್‌.ನಾಗೇಶ್‌, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ, ಬಿಜೆಪಿ ಸರಕಾರ ಸುತ್ತಾಡಿ ಮತ್ತೇ ಈಗ ಕಾಂಗ್ರೆಸ್‌ ಸೇರಿದ್ದಾರೆ. ಆದರೆ, ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸುತ್ತಿಲ್ಲ. ಈ ಕಾರಣದಿಂದ ಕಾಂಗ್ರೆಸ್‌ ಟಿಕೆಟ್‌ ಗೆ ಪೈಪೋಟಿ ಹೆಚ್ಚಾಗುತ್ತಿದೆ. ಈ ಬಾರಿಯೂ ಕೊತ್ತೂರು ಮಂಜುನಾಥ್‌ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಾಗದ ಕಾರಣದಿಂದಾಗಿ ಅವರ ಬೆಂಬಲಿತ ಅಭ್ಯರ್ಥಿಯಾಗಲು ಹೆಚ್ಚು ಪೈಪೋಟಿ ನಡೆಯುತ್ತಿದೆ.

Advertisement

ಸದ್ದಾಂ ಸಾಂಭಯ್ಯ ಕ್ಷೇತ್ರ ಸುತ್ತಾಡಿ ಹೋಗಿದ್ದಾರೆ. ಇದೀಗ ಮದ್ದೂರಪ್ಪ ಕ್ಷೇತ್ರದ ನಾಯಕರನ್ನು ಪರಿಚಯ ಮಾಡಿಕೊಂಡು ಸಂಚರಿಸುತ್ತಿ ದ್ದಾರೆ. ಒಂದೆಡೆ ಕೊತ್ತೂರು ಮಂಜುನಾಥ್‌ ಮತ್ತೇ ನಾನೇ ಅಭ್ಯರ್ಥಿ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೊತ್ತೂರು ಮಂಜುನಾಥ್‌ ಸ್ಪರ್ಧಿಸದಿದ್ದರೂ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವುದು ವಾಸ್ತವ.

ಈ ಕಾರಣದಿಂದಲೇ ಒಂದು ವೇಳೆ ಕೊತ್ತೂರು ಸ್ಪರ್ಧಿಸದಿದ್ದರೆ ನಾವಿದ್ದೇವೆ ಎಂದು ಅರ್ಧ ಡಜನ್‌ಗೂ ಹೆಚ್ಚು ಮಂದಿ ಅಭ್ಯರ್ಥಿಗಳು ಪ್ರಯತ್ನಿಸುತ್ತಿದ್ದಾರೆ. ಇವರಲ್ಲಿ ಪ್ರಮುಖರಾಗಿರುವರು ಆನೇಕಲ್‌ ಮೂಲದ ಮದ್ದೂರಪ್ಪ, ಮತ್ತಷ್ಟು ಮಂದಿ ಮುಳಬಾಗಿಲು ಕ್ಷೇತ್ರದ ಮೇಲೆ ಕಣ್ಣಿಟ್ಟು ಹೈಕಮಾಂಡ್‌ ಮುಖಂಡರ ಒಪ್ಪಿಗೆಯಿಂದ ಕೊತ್ತೂರು ಮಂಜುನಾಥ್‌ ಬೆಂಬಲದಿಂದ ಸ್ಪರ್ಧಿಸಲು ತೆರೆ ಮರೆಯ ಪ್ರಯತ್ನ ಮಾಡುತ್ತಿದ್ದಾರೆ. ಕೊತ್ತೂರು ಮಂಜುನಾಥ್‌ ಅಲ್ಲದಿದ್ದರೆ ಯಾರು ಕಾಂಗ್ರೆಸ್‌ ಅಭ್ಯರ್ಥಿ ಎನ್ನುವುದೇ ಕುತೂಹಲ.

ಜೆಡಿಎಸ್‌ನಿಂದ ಹಿಂದಿನ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಸಮೃದ್ಧಿ ಮಂಜುನಾಥ್‌ ಮತ್ತೇ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದ್ದಾರೆ. ಸೋತಾಗಿನಿಂದಲೂ ಕ್ಷೇತ್ರದಲ್ಲೇ ಇದ್ದು ಜನರ ಮನಸು ಗೆಲ್ಲಲು ಸಮೃದ್ಧಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಆಲಂಗೂರು ಶಿವಣ್ಣ ತಂಡ ಇವರಿಂದ ದೂರ ಕಾಪಾಡಿಕೊಳ್ಳುತ್ತಿರುವುದು ಕೊಂಚ ಹಿನ್ನಡೆಯಾಗಿದೆ. ಆದರೂ, ಸಮೃದ್ಧಿ ಕ್ಷೇತ್ರದಾದ್ಯಂತ ಸಂಚರಿಸಿ ತಮ್ಮದೇ ಅಭಿಮಾನಿ ಪಡೆ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಡಳಿತಾರೂಢ ಬಿಜೆಪಿಗೆ ಇಲ್ಲಿ ಬೇರು ಮಟ್ಟದ ಬಲ ಇಲ್ಲದೇ ಇರುವುದರಿಂದ ಪಕ್ಷದ ಅಭ್ಯರ್ಥಿಯಾಗಲು ಅಂತ ಪೈಪೋಟಿ ಕಾಣಿಸುತ್ತಿಲ್ಲ. ಸಂಸದ ಮುನಿಸ್ವಾಮಿ ಹಿಂದೂ ಸಮಾಜೋತ್ಸವಗಳ ಮೂಲಕ ವಿವಾದಾಸ್ಪದ ಹೇಳಿಕೆ ನೀಡುವು ಮೂಲಕ ಹಿಂದೂ ಮತದಾರರ ಮನಗೆಲ್ಲುವ ಪ್ರಯತ್ನ ಮಾಡಿದ್ದರು. ಆದರೆ, ಅದು ನಿರೀಕ್ಷಿತ ಮಟ್ಟದಲ್ಲಿ ಫ‌ಲ ಕೊಟ್ಟಂತೆ ಕಾಣುತ್ತಿಲ್ಲ. ಕೆಲವು ದಿನ ಸಂಸದ ಮುನಿಸ್ವಾಮಿ ಪತ್ನಿ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ವದಂತಿ ಹರಡಿತ್ತು. ಆದರೆ, ಸದ್ಯಕ್ಕೆ ಅಂತ ಪ್ರಯತ್ನಗಳು ಕಾಣಿಸುತ್ತಿಲ್ಲ.

ಬಿಜೆಪಿಯಿಂದ ಯಾರಾದರೂ ಅಭ್ಯರ್ಥಿಯಾಗಲೇ ಬೇಕು. ಆ ಕಾರಣಕ್ಕಾಗಿ ಶೀಗೆಹಳ್ಳಿ ಸುಂದರ್‌ ಸಂಸದ ಮುನಿಸ್ವಾಮಿ ಹಿಂದೆ ಸುತ್ತಾಡುತ್ತಾ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿದ್ದಾರೆ. ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ. ಕೊತ್ತೂರು ಮಂಜುನಾಥ್‌ ಸಂಬಂಧಿಕರು ಕೆಲವರು ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಜಾತಿ ಪ್ರಮಾಣ ಪತ್ರ ಕೈಕೊಟ್ಟಿದ್ದರಿಂದ ಹಿಂದಕ್ಕೆ ಸರಿಯುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಸಮೃದ್ಧಿ ವಿರುದ್ಧ ಮುನಿಸಿಕೊಂಡಿರುವ ಸ್ವಾಭಿಮಾನಿ ಜೆಡಿಎಸ್‌ ಮುಖಂಡ ಆಲಂಗೂರು ಶ್ರೀನಿವಾಸ್‌ ಮತ್ತು ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಬೆಂಬಲಿಗರು ಒಗ್ಗೂಡಿ ಹಿಂದೊಮ್ಮೆ ಸ್ಪರ್ಧಿಸಿ ಹೋಗಿದ್ದ ಆದಿನಾರಾಯಣರನ್ನು ಅಭ್ಯರ್ಥಿಯಾಗಿಸುವ ಪ್ರಯತ್ನ ನಡೆಸುತ್ತಿದೆಯೆಂದು ಹೇಳಲಾಗುತ್ತಿದೆ.

ಇದು ಇನ್ನೂ ಖಚಿತಪಟ್ಟಿಲ್ಲ. ಆಮ್‌ ಆದ್ಮಿ ಪಕ್ಷದಿಂದ ದಲಿತ ಹೋರಾಟಗಾರರಾದ ಕೀಲು ಹೊಳಲಿ ಸತೀಶ್‌ ಮತ್ತು ಸಂಗಸಂದ್ರ ವಿಜಯ ಕುಮಾರ್‌ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿದ್ದಾರೆ. ಇವರಿಬ್ಬರಲ್ಲಿ ಯಾರೇ ಅಭ್ಯರ್ಥಿಯಾದರೂ ಕಾರ್ಮಿಕ ವರ್ಗ, ಅಲ್ಪಸಂಖ್ಯಾತರು ಹಾಗೂ ದಲಿತ ವರ್ಗದ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಒಟ್ಟಾರೆ ಮುಳಬಾಗಿಲು ಕ್ಷೇತ್ರದಿಂದ ಹಿಂದೆ ಸೋತಿದ್ದ ಜೆಡಿಎಸ್‌ನ ಸಮೃದ್ಧಿ ಮಂಜುನಾಥ್‌ ಮತ್ತು ಕೊತ್ತೂರು ಮಂಜುನಾಥ್‌ ಬೆಂಬಲದಿಂದ ಆಗಲಿರುವ ಕಾಂಗ್ರೆಸ್‌ ಅಭ್ಯರ್ಥಿ ನಡುವೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನಡೆಯುವ ಸೂಚನೆಗಳು ಸಿಗುತ್ತಿವೆ.

ಮುಳಬಾಗಿಲು ಕ್ಷೇತ್ರದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿ ರುವುದು ಕೊತ್ತೂರು ಮಂಜುನಾಥ್‌ ಮತ್ತು ನಾನು ಮಾತ್ರ. ಚುನಾವಣೆ ಎಂದು ಬಂದಾಗ ಯಾರೇ ಅಭ್ಯರ್ಥಿಯಾದರೂ ಎದುರಿಸಲು ಸಿದ್ಧ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಬೆಂಬಲದಿಂದ ಗೆಲ್ಲುವ ವಿಶ್ವಾಸವಿದೆ. ● ಸಮೃದ್ಧಿ ಮಂಜುನಾಥ್‌.(ಜೆಡಿಎಸ್‌)

ಕಳೆದ ಎರಡು ವರ್ಷ ಗಳಿಂದಲೂ ಮುಳ ಬಾಗಿಲು ಕ್ಷೇತ್ರದಲ್ಲಿ ಪ್ರಚಾರ ಬಯಸದೆ ಸಮಾಜ ಸೇವೆಮಾಡುತ್ತಿದ್ದು, ಬಹುತೇಕ ಮುಖಂಡರನ್ನು ಸಂಪರ್ಕಿಸಿ ಒಲವು ಗಿಟ್ಟಿಸಿಕೊಂಡಿದ್ದೇನೆ. ಕೊತ್ತೂರು ಮಂಜುನಾಥ್‌ ಸಹಕಾರ ನೀಡಿದರೆ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಸಿದ್ಧ. ● ಬಿ.ಮದ್ದೂರಪ್ಪ, (ಕಾಂಗ್ರೆಸ್‌ ಆಕಾಂಕ್ಷಿ)

ಮುಳ ಬಾಗಿಲು ಕ್ಷೇತ್ರದಲ್ಲಿ ಕೊತ್ತೂರು ಮಂಜು ನಾಥ್‌, ಸಮೃದ್ಧಿ ಮಂಜುನಾಥ್‌ ಮಾತ್ರ ಬಲಿಷ್ಠವಾಗಿಲ್ಲ, ಬಿಜೆಪಿ ಕೂಡ ಪ್ರಬಲವಾಗಿದೆ. ದುಡ್ಡಿನ ಚುನಾವಣೆಗೆ ಪ್ರಜ್ಞಾವಂತರು ವಿದ್ಯಾವಂತರು ಯುವಕರು ಬೆಲೆ ಕೊಡಲ್ಲ, ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗೆ ಮತದಾರರು ಬಿಜೆಪಿ ಬೆಂಬಲಿಸುತ್ತಾರೆ. ● ಸೀಗೇಹಳ್ಳಿ ಸುಂದರ್‌ (ಬಿಜೆಪಿ) ‌

ಮುಳ ಬಾಗಿಲು ಕ್ಷೇತ್ರದಿಂದ ನಾನೇ ಸ್ಪರ್ಧಿಸುವೆ, ಸಾಧ್ಯವಾ ಗದಿದ್ದರೆ ಸ್ಥಳೀಯರೊಬ್ಬರಿಗೆ ಬೆಂಬಲ ವ್ಯಕ್ತಪಡಿಸುವೆ. ● ಕೊತ್ತೂರು ಮಂಜುನಾಥ್‌. (ಕಾಂಗ್ರೆಸ್‌)

ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲವೆಂಬ ಜೆಡಿಎಸ್‌ ಆರೋಪಗಳಲ್ಲಿ ಹುರುಳಿಲ್ಲ. ಎಂತದ್ದೇ ವೇದಿಕೆಯಲ್ಲಿ ಈ ಕುರಿತು ಬಹಿರಂಗ ಚರ್ಚೆಗೆ ಸಿದ್ಧವಿದ್ದೇನೆ. ● ಎಚ್‌.ನಾಗೇಶ್‌, ಶಾಸಕರು.

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next