Advertisement

ಜಿಲ್ಲೆಯಲ್ಲಿ ಗರಿಗೆದರಿದ ರಾಜಕೀಯ ಬಿರುಸು

11:50 AM Apr 01, 2023 | Team Udayavani |

ಮಂಡ್ಯ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ರಾ ಕೀಯ ಚಟುವಟಿಕೆಗಳು ಬಿರುಸು ಪಡೆದಿದೆ. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಜೊತೆಗೆ ಎಎಪಿ, ಬಿಎಸ್‌ಪಿ ಪಕ್ಷಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಚುನಾವಣೆ ಸ್ಪರ್ಧೆಗೆ ಸಿದ್ಧತೆ ಆರಂಭಿಸಿದ್ದಾರೆ.

Advertisement

ಈಗಾಗಲೇ ಜೆಡಿಎಸ್‌ ಏಳು ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಕಾಂಗ್ರೆಸ್‌ ಕೇವಲ ಮೂರು ಕ್ಷೇತ್ರಗಳಿಗೆ ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡಿದೆ. ಇನ್ನುಳಿದಂತೆ ನಾಲ್ಕು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿಲ್ಲ. ಇದರ ಜೊತೆಗೆ ಬಿಜೆಪಿ, ಎಎಪಿ, ಬಿಎಸ್‌ಪಿ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಳುಗಿವೆ.

ಹಾಲಿ ಶಾಸಕರಿಗೆ ಜೆಡಿಎಸ್‌ ಟಿಕೆಟ್‌: ಜೆಡಿಎಸ್‌ ಪಕ್ಷ ಈಗಾಗಲೇ ತಮ್ಮ ಹುರಿಯಾಳುಗಳನ್ನು ಘೋಷಣೆ ಮಾಡಿದ್ದು, ಕೆ.ಆರ್‌.ಪೇಟೆ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಹಾಲಿ ಶಾಸಕರಿಗೆ ಹೆಸರು ಅಂತಿಮ ಮಾಡಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಎಂ.ಶ್ರೀನಿವಾಸ್‌, ಮೇಲುಕೋಟೆಗೆ ಸಿ.ಎಸ್‌.ಪುಟ್ಟರಾಜು, ಮದ್ದೂರು ಡಿ.ಸಿ. ತಮ್ಮಣ್ಣ, ಮಳವಳ್ಳಿ ಡಾ.ಕೆ.ಅನ್ನದಾನಿ, ಶ್ರೀರಂಗಪಟ್ಟಣ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲ ಕೆ.ಸುರೇಶ್‌ಗೌಡ ಹಾಗೂ ಕೆ.ಆರ್‌. ಪೇಟೆಯಿಂದ ಜಿಪಂ ಮಾಜಿ ಸದಸ್ಯ ಎಚ್‌.ಟಿ. ಮಂಜುಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

ಕೈಗೆ ಆಯ್ಕೆ ಗೊಂದಲ: ಮೂರು ಕ್ಷೇತ್ರಗಳಿಗೆ ಮಾಜಿ ಶಾಸಕರಿಗೆ ಟಿಕೆಟ್‌ ಘೋಷಣೆ ಮಾಡಿರುವ ಕಾಂಗ್ರೆಸ್‌, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹೆಸರು ಅಂತಿಮಕ್ಕೆ ಗೊಂದಲ ಮುಂದುವರಿದಿದೆ. ನಾಗಮಂಗಲ ಎನ್‌. ಚಲುವರಾಯಸ್ವಾಮಿ, ಮಳವಳ್ಳಿ ಪಿ. ಎಂ.ನರೇಂದ್ರಸ್ವಾಮಿ ಹಾಗೂ ಶ್ರೀರಂಗಪಟ್ಟಣ ರಮೇಶ್‌ ಬಾಬು ಬಂಡಿಸಿದ್ದೇಗೌಡ ಹೆಸರು ಘೋಷಿಸಲಾಗಿದೆ. ಆದರೆ, ಮಂಡ್ಯ, ಮದ್ದೂರು, ಕೆ.ಆರ್‌.ಪೇಟೆ ಹಾಗೂ ಮೇಲುಕೋಟೆ ಕ್ಷೇತ್ರಗಳಿಗೆ ಆಕಾಂಕ್ಷಿತರ ನಡುವೆ ಪೈಪೋಟಿ ಇರುವುದರಿಂದ ಹೈಕಮಾಂಡ್‌ ನಾಯಕರಿಗೆ ತೀವ್ರ ತಲೆನೋವು ತಂದಿದೆ. ಅಲ್ಲದೆ, ಮಂಡ್ಯ ಕ್ಷೇತ್ರದಲ್ಲಿ ಮೂಲ-ವಲಸಿಗ ಫೈಟ್‌ ಬಿಟ್ಟು ಬಿಡದಂತೆ ಕಾಡುತ್ತಿದೆ. ಮದ್ದೂರಿನಲ್ಲಿ ಹೆಸರು ಅಂತಿಮವಾಗಿದ್ದೂರು ಘೋಷಣೆ ಬಾಕಿ ಇದೆ. ಕೆ.ಆರ್‌.ಪೇಟೆಯಲ್ಲಿ ಬಹುತೇಕ ಬಿ.ಎಲ್‌.ದೇವರಾಜು ಅವರ ಹೆಸರು ಅಂತಿಮವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ದರ್ಶನ್‌ಗೆ ಕೈ ಚಿಹ್ನೆಯಡಿ ಸ್ಪರ್ಧೆಗೆ ಒತ್ತಾಯ: ಮೇಲುಕೋಟೆ ಕ್ಷೇತ್ರದಿಂದ ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯಗೆ ಕಾಂಗ್ರೆಸ್‌ ಬೆಂಬಲ ಘೋಷಿಸಲು ನಿರ್ಧಾರ ಮಾಡಿದೆ. ಆದರೆ, ಕಾಂಗ್ರೆಸ್‌ ಚಿಹ್ನೆ ಹಸ್ತದ ಗುರುತಿನಡಿಯಲ್ಲಿಯೇ ಚುನಾವಣೆ ಎದುರಿಸುವಂತೆ ಸಲಹೆ ನೀಡಿದೆ. ಇದಕ್ಕೆ ದರ್ಶನ್‌ ಪುಟ್ಟಣ್ಣಯ್ಯ ಒಪ್ಪಿಗೆ ನೀಡಿಲ್ಲ. ಆದರೂ, ಕಾಂಗ್ರೆಸ್‌ ದರ್ಶನ್‌ಗೆ ಬೆಂಬಲ ನೀಡುವ ಕುರಿತಂತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಬಹುತೇಕ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿದೆ.

Advertisement

ಅಳೆದು ತೂಗುತ್ತಿರುವ ಬಿಜೆಪಿ: ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಯಲ್ಲಿರುವ ಕಮಲ ಪಾಳೆಯ ಅಭ್ಯರ್ಥಿಗಳ ಆಯ್ಕೆಗೆ ಮಾಡಲು ಅಳೆದು ತೂಗುತ್ತಿದೆ. ಈಗಾಗಲೇ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಜಿಲ್ಲೆಗೆ ಭೇಟಿ ನೀಡಿ, ಪಕ್ಷದ ಹುಮ್ಮಸ್ಸು ಹೆಚ್ಚಿಸಿರುವು ದರಿಂದ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲು ಮುಂದಾಗಿದೆ. ಅಲ್ಲದೆ, ಬಿಜೆಪಿ ನಾಮಪತ್ರ ಸಲ್ಲಿಕೆಗೆ ಕಡೇ ದಿನಾಂಕಕ್ಕೆ ಮೂರ್‍ನಾಲ್ಕು ದಿನಗಳಿರುವಾಗ ಟಿಕೆಟ್‌ ಘೋಷಣೆ ಮಾಡುವುದು ಸಾಮಾನ್ಯವಾಗಿದೆ. ಅದರಂತೆ ಈ ಬಾರಿ ಯೂ ಕುತೂಹಲ, ನಿರೀಕ್ಷೆ ಹೆಚ್ಚಿಸಿಯೇ ಅಭ್ಯರ್ಥಿಗಳ ಘೋಷಣೆ ಮಾಡಲಿದೆಯೇ ಕಾದು ನೋಡಬೇಕು.

ಸಂಭಾವ್ಯ ಅಭ್ಯರ್ಥಿಗಳಿಗೆ ಸಿಗಲಿದೆಯೇ ಟಿಕೆಟ್‌ : ಈಗಾಗಲೇ ಜಿಲ್ಲೆಯಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳಾಗಿ ಗುರುತಿಸಿಕೊಂಡಿರುವವರಿಗೆ ಟಿಕೆಟ್‌ ಸಿಗಲಿದೆಯೇ ಎಂಬ ಕುತೂಹಲ ಹೆಚ್ಚಿಸಿದೆ. ಮಂಡ್ಯ ಕ್ಷೇತ್ರದಿಂದ ಅಶೋಕ್‌ ಜಯರಾಂ, ಮದ್ದೂರಿನಿಂದ ಮನ್‌ಮುಲ್‌ ನಿರ್ದೇಶಕ ಎಸ್‌.ಪಿ.ಸ್ವಾಮಿ, ಮಳವಳ್ಳಿಯಿಂದ ಬಿ.ಮುನಿರಾಜು, ಶ್ರೀರಂಗಪಟ್ಟಣದಿಂದ ಇಂಡುವಾಳು ಎಸ್‌. ಸಚ್ಚಿದಾನಂದ, ಮೇಲುಕೋಟೆಯಿಂದ ಡಾ.ಇಂದ್ರೇಶ್‌, ಕೆ.ಆರ್‌.ಪೇಟೆ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ನಾಗಮಂಗಲದಿಂದ ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ಅಥವಾ ಫೈಟರ್‌ ರವಿಗೆ ಟಿಕೆಟ್‌ ಸಿಗುವ ನಿರೀಕ್ಷೆಯಿದೆ.

ಹೆಚ್ಚಿದ ಪಕ್ಷಾಂತರ ಪರ್ವ : ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪಕ್ಷಾಂತರ ಪರ್ವ ಹೆಚ್ಚಿದೆ. ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಒಂದು ಪಕ್ಷದಿಂದ ಮತ್ತೂಂದು ಪಕ್ಷಕ್ಕೆ ಹಾರುವ ಚಟುವಟಿಕೆಗಳು ಬಿರುಸುಗೊಂಡಿವೆ. ಶ್ರೀರಂಗಪಟ್ಟಣ, ಮೇಲುಕೋಟೆ, ಮದ್ದೂರು, ಕೆ.ಆರ್‌.ಪೇಟೆ, ಮಳವಳ್ಳಿಯಲ್ಲಿ ಮೂರು ಪಕ್ಷಗಳ ಕಾರ್ಯಕರ್ತರು ಬೇರೆ ಬೇರೆ ಪಕ್ಷಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಅಲ್ಲದೆ, ಅಭ್ಯರ್ಥಿಗಳು, ಆಕಾಂಕ್ಷಿತರು ಬೇರೆ ಪಕ್ಷಗಳ ಕಾರ್ಯಕರ್ತರ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next