Advertisement

ನಿಷೇಧಿತ ಪ್ಲಾಸ್ಟಿಕ್‌ ಮಾರಾಟದ ಮೇಲೆ ಪಾಲಿಕೆ ನಿಗಾ

10:00 AM May 10, 2022 | Team Udayavani |

ಮಹಾನಗರ: ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಾಡುವುದು ಅಪರಾಧ ಎಂದು ರಾಜ್ಯ ಸರಕಾರ ಈಗಗಾಲೇ ಸೂಚನೆ ನೀಡಿದರೂ ನಗರದ ಕೆಲವೊಂದು ಅಂಗಡಿಗಳಲ್ಲಿ ಅವುಗಳನ್ನು ಮಾರಾಟ ಮಾಡಲಾಗು ತ್ತಿದೆ. ಈ ವಿಚಾರವನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದ್ದು, ನಾಲ್ಕು ತಂಡ ರಚಿಸಿ, ನಗರದೆಲ್ಲೆಡೆ ಕಾರ್ಯಾ ಚರಣೆ ಸಿದ್ಧವಾಗಿದೆ.

Advertisement

ಪಾಲಿಕೆಯ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತ, ಮಲೇರಿಯಾ ಮೇಲ್ವಿಚಾರಕರು, ಎಂಪಿಡಬ್ಲ್ಯು ಕಾರ್ಯಕರ್ತರು ಸಹಿತ ಒಂದು ತಂಡದಲ್ಲಿ ಐದು ಮಂದಿ ಅಧಿಕಾರಿಗಳು ಇರಲಿದ್ದಾರೆ. ಮುಖ್ಯವಾಗಿ ವಾರದಲ್ಲಿ ಎರಡು ದಿನಗಳ ಕಾಲ ನಗರದ ವಿವಿಧ ಭಾಗದ ಅಂಗಡಿಗಳಿಗೆ ತೆರಳಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಮಾಲಕರಿಗೆ ಸೂಚನೆ ನೀಡಲಾಗುತ್ತದೆ. ಆದರೂ, ಪುನರಾವರ್ತನೆ ಯಾದರೆ ದುಬಾರಿ ದಂಡದ ಜತೆಗೆ ಪರವಾನಿಗೆ ರದ್ದು ಗೊಳಿಸಲು ನಿರ್ಧಾರವನ್ನೂ ಕೈಗೊಳ್ಳಲಾಗಿದೆ.

500 – 10,000 ರೂ.ವರೆಗೆ ದಂಡ

ಪಾಲಿಕೆ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿ, ಮಾನವ ಮತ್ತಿತರ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಪ್ಲಾಸ್ಟಿಕ್‌ ಭಿತ್ತಿಚಿತ್ರ, ಪ್ಲಾಸ್ಟಿಕ್‌ ತೋರಣ, ಫ್ಲೆಕ್ಸ್‌, ಬಾವುಟ, ಪ್ಲಾಸ್ಟಿಕ್‌ ತಟ್ಟೆ, ಪ್ಲಾಸ್ಟಿಕ್‌ ಲೋಟ, ಪ್ಲಾಸ್ಟಿಕ್‌ ಚಮಚ, ಕ್ಲಿಂಗ್‌ ಫಿಲ್ಮ್ಸ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್‌ ಹಾಳೆ, ಥರ್ಮೋಕೋಲ್‌ ಮತ್ತು ಪ್ಲಾಸ್ಟಿಕ್‌ ಮೈಕ್ರೋ ಬೀಡ್‌ನಿಂದ ತಯಾರಾದ ವಸ್ತುಗಳ ತಯಾರಿಕೆ, ಸರಬರಾಜು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಹಲವು ಉದ್ದಿಮೆದಾರರು, ವ್ಯಾಪಾರಸ್ಥರು, ರಸ್ತೆ ಬದಿಯ ವ್ಯಾಪಾರಸ್ಥರು ಇವುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕಠಿನ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ. ಈ ರೀತಿ, ನಿಯಮ ಉಲ್ಲಂಘಿಸುವ ಉದ್ದಿಮೆದಾರರಿಂದ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡು 500 ರೂ.ಯಿಂದ 10,000 ರೂ.ವರೆಗೆ ದಂಡ ವಿಧಿಸಲು ಈ ತಂಡ ಮುಂದಾಗಿದೆ.

ಕೆಲವೊಂದಕ್ಕೆ ಮಾತ್ರ ವಿನಾಯಿತಿ

Advertisement

ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಮಾಡಲು ಕೆಲವೊಂದು ವಲಯದಲ್ಲಿ ಮಾತ್ರ ವಿನಾಯಿತಿ ನೀಡಲಾಗಿದೆ. ಎಸ್‌ ಇಝಡ್‌, ರಫ್ತು ಉದ್ದೇಶಿತ ಘಟಕಗಳಲ್ಲಿ ಸ್ಥಾಪಿತವಾದ ಪ್ಲಾಸ್ಟಿಕ್‌ ಉದ್ಯಮದಲ್ಲಿ ರಫ್ತು ಮಾಡುವ ಉದ್ದೇಶಕ್ಕೆಂದು ಪ್ರತ್ಯೇಕವಾಗಿ, ರಫ್ತು ಆರ್ಡರ್‌ ಮೇರೆಗೆ ಉತ್ಪಾದಿಸಲ್ಪಡುವ ಪ್ಲಾಸ್ಟಿಕ್‌ ವಸ್ತುಗಳು, ಸಾಮಗ್ರಿಗಳನ್ನು ಬಳಸುವುದಕ್ಕೆ ಮೊದಲು ಉತ್ಪಾದನ/ಸಂಸ್ಕರಣ ಘಟಕಗಳಲ್ಲಿ ಪ್ಯಾಕ್‌ ಮಾಡಿ ಸೀಲ್‌ ಮಾಡಲು ಬಳಸುವ, ಸಾಮಗ್ರಿಗಳ ಪ್ಯಾಕೇಜಿಂಗ್‌ ಮಾಡುವ ಸಂದರ್ಭ ಅವಿಭಾಜ್ಯವಾಗಿ ಉಪಯೋಗಿಸುವ ಪ್ಲಾಸ್ಟಿಕ್‌ ಬ್ಯಾಗ್‌ ಗಳು, ಸರಕಾರಿ ಇಲಾಖೆಗಳಿಂದ ಅಥವಾ ಇತರ ಸಂಬಂಧಪಟ್ಟ ಸಂಸ್ಥೆಗಳಿಂದ ಸ್ವೀಕೃತವಾದ ಆರ್ಡರ್‌ಗೆ ಎದುರಾಗಿ ಅರಣ್ಯ ಮತ್ತು ತೋಟಗಾರಿಕೆ ನರ್ಸರಿಗಳಲ್ಲಿ ಬಳಸುವ ಪ್ಲಾಸ್ಟಿಕ್‌ ಚೀಲಗಳು, ಹಾಳೆಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳ (ಹೈನು ಉತ್ಪನ್ನಗಳು) ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್‌ಗಳಿಗೆ ವಿನಾಯಿತಿ ನೀಡಲಾಗಿದೆ. ಕಾರ್ಯಾಚರಣೆ ಆರಂಭ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಪಾಲಿಕೆಯಿಂದ ನಾಲ್ಕು ತಂಡ ರಚಿಸಲಾಗಿದ್ದು, ನಗರದ ವಿವಿಧ ಪ್ರದೇಶಗಳಲ್ಲಿನ ಅಂಗಡಿಗಳಿಗೆ ತೆರಳಿ ಕಾರ್ಯಾಚರಣೆ ನಡೆಸುತ್ತೇವೆ. ಪ್ರತೀ ದಿನ ಈ ಕಾರ್ಯಾಚರಣೆ ನಡೆಯಲಿದ್ದು, ಮುಖ್ಯವಾಗಿ ವಾರದಲ್ಲಿ ಎರಡು ದಿನಗಳ ಕಾಲ ಕಾರ್ಯಾಚರಣೆ ತೀವ್ರಗೊಳಿಸುತ್ತೇವೆ. – ಶಬರೀನಾಥ್‌, ಪಾಲಿಕೆ ಪರಿಸರ ಅಭಿಯಂತ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next