Advertisement

ಪೊಲೀಸ್‌ ವರ್ಸಸ್‌ ಬಿಜೆಪಿ: ಜೈಪುರದಲ್ಲಿ ಸಿಎಂ ಗೆಹಲೋಟ್ ಮನೆಯತ್ತ ತೆರಳುತ್ತಿದ್ದವರಿಗೆ ತಡೆ

10:37 PM Mar 11, 2023 | Team Udayavani |

ಜೈಪುರ: ಪುಲ್ವಾಮ ಬಾಂಬ್‌ ಸ್ಫೋಟದಲ್ಲಿ ಹುತಾತ್ಮರಾಗಿದ್ದ ಯೋಧರ ಪತ್ನಿಯರಿಗೆ ನ್ಯಾಯ ಸಿಗಬೇಕೆಂಬ ಹೋರಾಟ ಶನಿವಾರ ಹಿಂಸಾತ್ಮಕ ರೂಪ ತಾಳಿದೆ. ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮೂವರು ಹುತಾತ್ಮ ಯೋಧರ ಪತ್ನಿಯರನ್ನು ಶುಕ್ರವಾರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

Advertisement

ಇವರನ್ನು ಭೇಟಿ ಮಾಡಲು ತೆರಳುತ್ತಿದ್ದ ಬಿಜೆಪಿ ಸಂಸದ ಕಿರೋಡಿ ಲಾಲ್‌ ಮೀನಾರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದರು. ಈ ವೇಳೆ ತನ್ನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಮೀನಾ ಆರೋಪಿಸಿದ್ದರು. ಅನಂತರ ನಂತರ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ನಿವಾಸದತ್ತ ಮೆರವಣಿಗೆ ಆರಂಭಿಸಿದರು. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ತಡೆದ ಹಿನ್ನೆಲೆಯಲ್ಲಿ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಆರಂಭಿಸಿದರು. ಬ್ಯಾರೆಕೇಡ್‌ಗಳನ್ನು ಕೂಡ ಉದ್ರಿಕ್ತರು ಧ್ವಂಸಗೊಳಿಸಿದ್ದಾರೆ. ಜತೆಗೆ ಕೆಲವು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಆಸ್ಪತ್ರೆಗೆ ದಾಖಲಾದ ಮೀನಾ: ಬಿಜೆಪಿ ಸಂಸದ ಕಿರೋಡಿ ಲಾಲ್‌ ಮೀನಾ ಶುಕ್ರವಾರ ವಿಧವೆಯೊಬ್ಬರನ್ನು ಭೇಟಿ ಮಾಡಲು ಚೊಮು ನಗರದತ್ತ ಸಾಗಿದ್ದಾಗ; ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆಗ ಮೀನಾ ತನ್ನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಗೋವಿಂದಗಢದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಾದರು. ನಂತರ ಸವಾಯಿ ಮಾನ್‌ಸಿಂಗ್‌ ಆಸ್ಪತ್ರೆಗೆ ಸ್ಥಳಾಂತರವಾದರು.

ಗೆಹ್ಲೋಟ್ ಭೇಟಿ:
ಯೋಧರ ಪತ್ನಿಯರ ನಿಯೋಗದ ಜತೆಗೆ ಸಿಎಂ ಅಶೋಕ್‌ ಗೆಹ್ಲೋಟ್ ಭೇಟಿಯಾಗಿ ಅವರ ಅಹವಾಲು ಆಲಿಸಿದರು. ಬಳಿಕ ಟ್ವೀಟ್‌ ಮಾಡಿದ ಅವರು ಯೋಧರ ತ್ಯಾಗವನ್ನು ಮರೆಯಲಾಗದು. ಅವರಿಗೆ ನನ್ನ ನಮನಗಳು ಎಂದು ಬರೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಅವರ ಬಗ್ಗೆ ಗೌರವ ಹೊಂದಿದೆ ಎಂದು ಹೇಳಿದ್ದಾರೆ.

ಹೋರಾಟದ ಹಿನ್ನೆಲೆಯೇನು?
ಫೆ.28ರಿಂದ ಜೈಪುರದಲ್ಲಿರುವ ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ನಿವಾಸದೆದುರು ಮೂವರು ಹುತಾತ್ಮ ಯೋಧರ ಪತ್ನಿಯರು ಧರಣಿ ಆರಂಭಿಸಿದ್ದರು. ಕೆಲವು ದಿನಗಳ ಹಿಂದಷ್ಟೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸರ್ಕಾರಿ ನಿಯಮಗಳನ್ನು ಬದಲಾಯಿಸೇಕು, ಹುತಾತ್ಮ ಯೋಧರ ಮಕ್ಕಳಿಗೆ ಮಾತ್ರವಲ್ಲ, ಮಾನವೀಯ ನೆಲೆಯಲ್ಲಿ ಕುಟುಂಬಸ್ಥರಿಗೂ ನೌಕರಿ ಸಿಗುವಂತೆ ಮಾಡಬೇಕು. ಯೋಧರ ಹಳ್ಳಿಗಳಿಗೆ ರಸ್ತೆ ನಿರ್ಮಿಸಬೇಕು, ಅವರ ವಿಗ್ರಹ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next