Advertisement

ಮಹಾನಗರ ಪಾಲಿಕೆಗಳಿಗೆ “ಪೊಲೀಸ್‌ ಪವರ್‌’ಪ್ರಸ್ತಾವನೆಗೆ ಮರು ಜೀವ?

11:05 PM Oct 17, 2021 | Team Udayavani |

ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳಿಗೆ ಪೊಲೀಸ್‌ ಅಧಿಕಾರ ನೀಡುವ ಪ್ರಸ್ತಾವನೆ ಮರು ಜೀವ ಪಡೆದುಕೊಂಡಿದೆ.

Advertisement

ಸ್ಥಳೀಯ ಆಡಳಿತಗಳಿಗೆ ಪೊಲೀಸ್‌ ಅಧಿಕಾರ ನೀಡಬೇಕು ಎಂದು “ಕರ್ನಾಟಕ ಮಹಾ ನಗರ ಪಾಲಿಕೆಗಳ ಕಾಯ್ದೆ-1976’ರಲ್ಲಿ ಹೇಳಲಾಗಿದೆ ಹಾಗೂ ಎರಡನೇ ಆಡಳಿತ ಸುಧಾರಣ ಆಯೋಗ ಶಿಫಾರಸು ಮಾಡಿದೆ. ವಿಧಾನಸಭೆಯ ಅರ್ಜಿಗಳ ಸಮಿತಿ ಸಹ ಸ್ಥಳೀಯ ಸರಕಾರಗಳಿಗೆ ಪೊಲೀಸ್‌ ಅಧಿಕಾರ ನೀಡುವ ಬಗ್ಗೆ 2015ರ ಜುಲೈ 17ರಂದು ಶಿಫಾರಸು ಮಾಡಿತ್ತು. ಇದೇ ವಿಚಾರವಾಗಿ ಚರ್ಚೆ ನಡೆದಾಗ 2015ರಲ್ಲೇ ಆಗಿನ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಭರವಸೆ ಕೊಟ್ಟಿದ್ದರು.

ಈಗ ಪಾಲಿಕೆಗಳ ಅಧಿಕಾರಿ ಮತ್ತು ಸಿಬಂದಿಗೆ ಪೊಲೀಸ್‌ ಅಧಿಕಾರ ನೀಡಲು ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ-1976ರ ಕಲಂ 492ಗೆ ತಿದ್ದುಪಡಿ ತರಲು ಪ್ರಸ್ತಾವನೆ ಸಲ್ಲಿಸುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಜುಲೈ 23 ಹಾಗೂ ಸೆ. 9ಕ್ಕೆ ನಗರಾಭಿವೃದ್ಧಿ ಇಲಾಖೆ ಪತ್ರ ಬರೆದಿದೆ.

ಪೌರಾಡಳಿತ ನಿರ್ದೇಶನಾಲಯದಿಂದ ಪ್ರಸ್ತಾವನೆ ಸ್ವೀಕರಿಸಿದ ಬಳಿಕ ಸಂಬಂಧಪಟ್ಟ ಇಲಾಖೆಗಳ ಅಭಿಪ್ರಾಯ ಮತ್ತು ಸಹಮತ ಪಡೆದುಕೊಂಡು ಪರಿಶೀಲಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಹೇಳಿದೆ. ಅಂದುಕೊಂಡಂತೆ ಎಲ್ಲವೂ ನಿಗದಿತ ಅವಧಿ ಯಲ್ಲಿ ಮುಗಿದರೆ ಪಾಲಿಕೆಗಳಿಗೆ ಶೀಘ್ರದಲ್ಲೇ ಪೊಲೀಸ್‌ ಅಧಿಕಾರ ಸಿಗುವ ಸಾಧ್ಯತೆಯಿದೆ.

ಪ್ರಥಮ ಹಂತದಲ್ಲಿ ಕಾನೂನು-ಸುವ್ಯವಸ್ಥೆಯ ಅಧಿಕಾರ ಅಲ್ಲದಿದ್ದರೂ, ಸ್ಥಳೀಯ ಸರಕಾರಗಳ ವ್ಯಾಪ್ತಿಯಲ್ಲಿ ನಡೆಯುವ ಒತ್ತುವರಿ, ಕಳ್ಳತನ, ಇತರ ಉಲ್ಲಂಘನೆಗಳನ್ನು ತಡೆಗಟ್ಟಲು ಸರಕಾರ ಅರಣ್ಯ ಇಲಾಖೆಗೆ ಪೊಲೀಸ್‌ ಅಧಿಕಾರ ನೀಡಿರುವ ಮಾದರಿಯಲ್ಲಿ ಸ್ಥಳೀಯ ಆಡಳಿತಗಳ ಅಧಿಕಾರಿ, ಸಿಬಂದಿಗೆ ಪೊಲೀಸ್‌ ಅಧಿಕಾರ ಕೋರಿ 2014ರಲ್ಲಿ ವಿಧಾನ ಸಭೆಯ ಅರ್ಜಿಗಳ ಸಮಿತಿಗೆ ಅರ್ಜಿ ಸಲ್ಲಿಕೆಯಾಗಿತ್ತು.

Advertisement

ಮಹತ್ವ ಯಾಕೆ?
ಸದ್ಯದ ಕರ್ನಾಟಕ ಪೊಲೀಸ್‌ ಕಾಯ್ದೆ- 1963ರ ಕಲಂ 92ರಲ್ಲಿ ಮುನ್ಸಿಪಲ್‌ ಆಡಳಿ ತಕ್ಕೆ ಸಂಬಂಧಿಸಿ ಪೊಲೀಸರು ಯಾವ ಕರ್ತವ್ಯಗಳನ್ನು ಮಾಡಬೇಕೆಂದು ತಿಳಿಸಲಾಗಿದೆ. ಆದರೆ, ವಾಸ್ತವಿಕವಾಗಿ ಅನೇಕ ವರ್ಷಗಳಿಂದ ಪೊಲೀಸ್‌ ಇಲಾಖೆ ಆಡಳಿತಾತ್ಮಕ ಕಾರಣಗಳಿಗಾಗಿ ಕಲಂ 92ನ್ನು ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ-1976ರ ಕಲಂ 489(ಎ)(ಬಿ)ನ್ನು ಸ್ವಯಂಸ್ಫೂರ್ತಿಯಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಫ‌ಲವಾಗಿದೆ. ಇದಕ್ಕೆ ಪ್ರತಿಯಾಗಿ ಸೂಕ್ತ ಪೊಲೀಸ್‌ ಅಧಿಕಾರವಿಲ್ಲದ ಸ್ಥಳೀಯ ಸಂಸ್ಥೆಗಳ ಅಧಿಕಾರಿ, ಸಿಬಂದಿ ಸಾರ್ವಜನಿಕ ನಿಂದನೆಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಈಗಿರುವ ವ್ಯವಸ್ಥೆ
ನಗರಾಡಳಿತ ಪ್ರದೇಶದಲ್ಲಿ ಕರ್ನಾಟಕ ಪೊಲೀಸ್‌ ಕಾಯ್ದೆ-1993ರಲ್ಲಿ ಕಲಂ 92ರಲ್ಲಿ ತಿಳಿಸಿದ ಹಾಗೂ ಮಹಾನಗರ ಪಾಲಿಕೆಗಳ ಕಾಯ್ದೆಯಲ್ಲಿ ಹೇಳಲಾದ ಶಿಸ್ತನ್ನು ನಾಗರಿಕರು ಉಲ್ಲಂ ಸಿದರೆ ಮಹಾನಗರ ಪಾಲಿಕೆಗಳ ಕಾಯ್ದೆ-1976ರ ಕಲಂ 477ರ ಪ್ರಕಾರ ಲಿಖೀತವಾಗಿ ಪೊಲೀಸರಿಗೆ ದೂರು ನೀಡಬೇಕು. ಪೊಲೀಸರು ಆರೋಪಿಯನ್ನು ಜೆಎಂಎಫ್ಸಿ ಮುಂದೆ ಹಾಜರುಪಡಿಸಬೇಕು. ಕೋರ್ಟ್‌ ತೀರ್ಪಿನ ಬಳಿಕ ಅಪರಾಧಿಗೆ ದಂಡ ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಸಣ್ಣಪುಟ್ಟ ಉಲ್ಲಂಘನೆಗಳನ್ನು ಈ ಪ್ರಕಾರ ಪ್ರಾಯೋಗಿಕವಾಗಿ ನಿಯಂತ್ರಿಸುವುದು ಕಷ್ಟದ ಕೆಲಸವಾಗಿದೆ.

ಅರ್ಜಿಗಳ ಸಮಿತಿ ಹೇಳಿದ್ದು
ಅರ್ಜಿಗಳ ಸಮಿತಿಯು ಸ್ಥಳೀಯ ಆಡಳಿತಗಳಿಗೆ ಪೊಲೀಸ್‌ ಅಧಿಕಾರ ನೀಡುವ ವಿಚಾರ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ- 1976ರಲ್ಲಿ ಹೇಳಿದೆ. ಕಾಯ್ದೆ ಜಾರಿಯಾಗಿ 38 ವರ್ಷ ಕಳೆದರೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಎಂ. ವೀರಪ್ಪ ಮೊಲಿ ನೇತೃತ್ವದ 2ನೇ ಆಡಳಿತ ಸುಧಾರಣ ಆಯೋಗ ಸಹ ಶಿಫಾರಸು ಮಾಡಿದೆ. ಪೌರಾಡಳಿಯ ನಿರ್ದೇಶನಾಲಯವೂ ಪೊಲೀಸ್‌ ಅಧಿಕಾರ ನೀಡುವ ಬಗ್ಗೆ ಶಿಫಾರಸು ಮಾಡಿದೆ. ಈ ಕುರಿತು ಕ್ರಮ ಕೈಗೊಳ್ಳುವು ದಾಗಿ 2015ರ ಎ.16ರಂದು ನಗರಾಭಿವೃದ್ಧಿ ಇಲಾಖೆ ಅರ್ಜಿ ಸಮಿತಿಗೆ ಭರವಸೆ ನೀಡಿತ್ತು. ಹೀಗಾಗಿ, ಪೊಲೀಸ್‌ ಅಧಿಕಾರ ನೀಡುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳ ಬೇಕು ಎಂದು ವಿಧಾನಸಭೆಯ ಅರ್ಜಿಗಳ ಸಮಿತಿ 2015ರ ಜು.17ರಂದು ಸದನಕ್ಕೆ ಒಪ್ಪಿಸಿದ ವರದಿಯಲ್ಲಿ ಹೇಳಿದೆ.

ಪೊಲೀಸ್‌ ಅಧಿಕಾರ ಚರ್ಚೆ ಮುನ್ನಲೆಗೆ ಬಂದಿದ್ದು ಹೇಗೆ?
ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ, ನೀರು ಸರಬರಾಜು, ರಸ್ತೆ ಸಂಚಾರ ನಿರ್ವಹಣೆ, ಆರೋಗ್ಯ, ಪ್ರಾಥಮಿಕ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜನರ ಆಕಾಂಕ್ಷೆಗೆ ಅನುಗುಣ ವಾಗಿ ಕಾರ್ಯನಿರ್ವಹಿಸಲು ಅಸಮರ್ಥವಾಗಿರುವುದರಿಂದ ಅವ್ಯವಸ್ಥೆಗಳ ಬಗ್ಗೆ ಪ್ರಸ್ತಾಪಿಸಿ ಸ್ಥಳೀಯ ಸರಕಾರಗಳಿಗೆ ಯೂರೋಪ್‌ ಮಾದರಿಯಲ್ಲಿ ಪೊಲೀಸ್‌ ಅಧಿಕಾರ ನೀಡುವ ಬಗ್ಗೆ ಪರಿಶೀಲಿಸಿ ಸರಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಪ್ರಥಮ ಹಂತದಲ್ಲಿ ಕಾನೂನು – ಸುವ್ಯವಸ್ಥೆ ಅಧಿಕಾರ ಅಲ್ಲದಿದ್ದರೂ, ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಒತ್ತುವರಿ, ಕಳ್ಳತನ, ಇತರ ಉಲ್ಲಂಘನೆಗಳ ಎಂದು ಹುಬ್ಬಳ್ಳಿಯ ಮಾಜಿ ಮೇಯರ್‌ ಡಾ| ಪಾಂಡುರಂಗ ಪಾಟೀಲ್‌ 2014ರ ಸೆ.22ರಂದು ವಿಧಾನಸಭೆಯ ಅರ್ಜಿ ಸಮಿತಿಗೆ ಮನವಿ ಸಲ್ಲಿಸಿದ್ದರು.

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next