Advertisement

ವಿಡಿಯೋ ಆಧರಿಸಿ ಪೊಲೀಸ್‌ ಜಾಲ

10:47 AM Mar 04, 2022 | Team Udayavani |

ಆಳಂದ: ಪಟ್ಟಣದ ಲಾಡ್ಲೆ ಮಶಾಕ್‌ ದರ್ಗಾದಲ್ಲಿನ ರಾಘವಚೈತನ್ಯ ಲಿಂಗದ ಪೂಜೆ ಮತ್ತು ಶುದ್ಧೀಕರಣ ವಿವಾದಕ್ಕೆ ಸಂಬಂಧಿಸಿದಂತೆ ಮಾ.1ರಂದು ಪಟ್ಟಣದಲ್ಲಿ ನಡೆದ ಗಲಭೆ ಪ್ರಕರಣದ ವಿಡಿಯೋ ಚಿತ್ರೀಕಣ ಆಧರಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

Advertisement

ಪಟ್ಟಣದಲ್ಲಿ ಮುಂದುವರಿದ 144ನೇ ಕಲಂ ನಿಷೇಧಾಜ್ಞೆ ಜಾರಿಯಿಂದ ಪೊಲೀಸರು ಗುರುವಾರ ಪಟ್ಟಣದಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಂಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲೇ ಬೃಹತ್‌ ಪ್ರಮಾಣದಲ್ಲಿ ನಡೆಯುತ್ತಿದ್ದ ಗುರುವಾರದ ಸಂತೆ ರದ್ದಾಗಿದೆ. ವ್ಯಾಪಾರ-ವಹಿವಾಟಿಗೆ ತೀವ್ರ ಹೊಡೆತ ಬಿದ್ದಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೆಳೆದ ತರಕಾರಿ ಸಹ ಮಾರಾಟವಾಗದೇ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಸಾರ್ವಜನಿಕರ ಮತ್ತು ಖಾಸಗಿ ಜೀಪು, ಕಾರು, ದ್ವಿಚಕ್ರ ವಾಹನಗಳ ಬೇಕಾಬಿಟ್ಟಿ ಓಡಾಡಕ್ಕೆ ತಡೆಯೊಡ್ಡಿದ್ದರಿಂದ ಪಟ್ಟಣದ ಪ್ರಮುಖ ರಸ್ತೆ, ಬಡಾವಣೆಗಳು ಬಿಕೋ ಎನ್ನುತ್ತಿವೆ.

ಆರೋಪಿಗಳ ಮೇಲೆ ಹಲವಾರು ಸೆಕ್ಷನ್‌

ಮಹಾ ಶಿವರಾತ್ರಿ ದಿನದಂದು ನಿಷೇಧಾಜ್ಞೆ ಜಾರಿಯಿದ್ದರೂ ಸ್ತ್ರೀ-ಪುರುಷರು ಸೇರಿ 2500ರಿಂದ 3000 ಮಂದಿ ಆದೇಶ ಉಲ್ಲಂಘಿಸಿ ಕೈಯಲ್ಲಿ ಕಲ್ಲು, ಬಡಿಗೆ, ಮಾರಕಾಸ್ತ್ರ ಹಿಡಿದುಕೊಂಡು ಪೂರ್ವನಿಯೋಜಿತ ಸಂಚು ರೂಪಿಸಿ ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನೆಡೆಸಿ, ಕರ್ತವ್ಯಕ್ಕೆ ಅಡೆತಡೆ ಮಾಡಿದ್ದಾರೆ. ಅಲ್ಲದೇ ಸರ್ಕಾರಿ ವಾಹನಗಳನ್ನು ಜಖಂ ಮಾಡಿದ್ದಾರೆ ಎಂದು 29/2022ಕಲಂ, 143, 147, 148, 353, 332, 333, 504, 307, 120(ಬಿ), 427, 149 ಐಪಿಸಿ ಮತ್ತು ಕಲಂ 03 ಸಾರ್ವಜನಿಕ ಆಸ್ತಿ ಹಾನಿ ಕಾಯ್ದೆ ಪ್ರಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ.

Advertisement

ಮತ್ತೊಂದೆಡೆ ಹೊಸ ಅನ್ಸಾರಿ ಮೊಹಲ್ಲಾ, ದರ್ಗಾ ಕ್ರಾಸ್‌ ನಿವಾಸಿಗಳ ಮೇಲೆ ದಾಖಲಾದ ಮೂವರ ಮೇಲಿನ ಪ್ರಕರಣ ಸಂಖ್ಯೆ 28/2022 ಕಲಂ 120, 120 (ಬಿ), 153(ಎ), ಸೆಕ್ಸನ್‌ ಐಪಿಸಿಯಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. 144 ಕಲಂ ನಿಷೇದಾಜ್ಞೆ ಜಾರಿಯಿದ್ದಾಗ ಕರ್ತವ್ಯ ನಿರತ ಪೊಲೀಸರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಇಕ್ಬಾಲ್‌ ಅನ್ಸಾರಿ ಸೇರಿದಂತೆ ಹಲವರ ವಿರುದ್ಧ 26/2022 ಕಲಂ 143, 147, 341, 307, 353, 120(ಬಿ), 504, 506 ಅಲ್ಲದೆ 149 ಐಪಿಸಿ ಪ್ರಕರಣ ದಾಖಲಾಗಿದೆ. ಇಮ್ರಾನ್‌ ಅನ್ಸಾರಿ, ಅಬ್ರಾಹರ್‌ ಅನ್ಸಾರಿ ಮೇಲೆ ಎಫ್‌ಐಆರ್‌ ಸಂಖ್ಯೆ 27/2022 ಕಲಂ 120, 120(ಬಿ), 153 (ಎ) ಐಪಿಸಿ ಪ್ರಕಾರ ಪ್ರಕರಣಗಳು ದಾಖಲಾಗಿವೆ.

ಸಂಚು ರೂಪಿಸಿದವರ ವಿರುದ್ಧವೂ ಪ್ರಕರಣ

ರಾಘವಚೈತನ್ಯ ಲಿಂಗದ ಪೂಜೆಗೆ ಬರುವ ಸಾರ್ವಜನಿಕರು ಮತ್ತು ಕರ್ತವ್ಯ ನಿರ್ವಹಿಸುವ ಪೋಲಿಸರ ಮೇಲೆ ದಾಳಿ ಮಾಡಿ, ಕಲ್ಲುಗಳಿಂದ ಹೊಡೆದು ಜೀವಕ್ಕೆ ಹಾನಿಯುಂಟು ಮಾಡುವ ಸಂಚು ರೂಪಿಸಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ಕೆಲವು ಮುಸ್ಲಿಂರು ಒಳಸಂಚು ರೂಪಿಸಿ ಕಲ್ಲುಗಳನ್ನು ದರ್ಗಾದ ಸುತ್ತಲಿನ ಕಟ್ಟಡಗಳ ಎದುರು, ಪಕ್ಕದಲ್ಲಿ ವಿವಿಧ ಟ್ರಾÂಕ್ಟರ್‌ಗಳ ಮೂಲಕ ತಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ಸಂಖ್ಯೆ 25/2022 ಕಲಂ 120, 120(ಬಿ), 153 (ಎ) ಐಪಿಸಿಯಂತೆ ಮುಖಂಡರು, ಮಹಿಳೆಯರು, ಯುವಕರನ್ನು ಒಳಗೊಂಡು ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ವ್ಯಾಪಕ ಜಾಲಬೀಸಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಸಂಬಂಧಿತ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಸದ್ಯ ಪಟ್ಟಣದಲ್ಲಿ ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ. ಮುಂಜಾಗ್ರತೆ ಕ್ರಮವಾಗಿ ಎಲ್ಲೆಡೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಮಾರ್ಚ್‌ 5ರ ವರೆಗೆ 144ನೇ ಕಲಂ ನಿಷೇಧಾಜ್ಞೆ ಜಾರಿಯಿದೆ. ಸಾರ್ವಜನಿಕರು ಸಹಕರಿಸಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು. -ಮಂಜುನಾಥ ಸಿಲ್ವರ್‌, ಸಿಪಿಐ, ಆಳಂದ

ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ. 167 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಗುರುವಾರ ಮತ್ತೆ ಮೂವರನ್ನು ಬಂಧಿಸಲಾಗಿದೆ. ಬಂಧನ ಕಾರ್ಯಾಚರಣೆ ಮುಂದುವರಿಸಲಾಗಿದೆ. ತಪ್ಪಿತಸ್ಥರಾದ ಯಾರನ್ನು ಬಿಡುವುದಿಲ್ಲ. 144ನೇ ಕಲಂ ನಿಷೇದಾಜ್ಞೆ ಉಲ್ಲಂಘನೆಯ ಇನ್ನೊಂದು ಗುಂಪಿನ ವಿರುದ್ಧ ಪ್ರಕರಣ ದಾಖಲಿಸುವ ಕುರಿತ ನಿರ್ಧಾರ ಮೇಲಧಿಕಾರಿಗಳ ಹಂತದಲ್ಲಿದೆ. -ತಿರುಮಲ್ಲೇಶ, ಪಿಎಸ್‌ಐ, ಆಳಂದ

Advertisement

Udayavani is now on Telegram. Click here to join our channel and stay updated with the latest news.

Next