Advertisement

BSY ವಿರುದ್ಧ ಪೋಕ್ಸೋ ಕೇಸು: ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಆದೇಶ

12:13 AM Mar 16, 2024 | Team Udayavani |

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಸದಾಶಿವನಗ‌ರ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಡಿಜಿಪಿ ಸೂಚನೆ ಮೇರೆಗೆ ಸಿಐಡಿಗೆ ವರ್ಗಾಯಿಸಲಾಗಿದೆ.

Advertisement

ಬೇಗೂರು ನಿವಾಸಿ 53 ವರ್ಷದ ಮಹಿಳೆ ನೀಡಿದ ದೂರಿನಲ್ಲಿ, ಫೆ. 2ರಂದು ಪುತ್ರಿ ಜತೆ ಬಿಎಸ್‌ವೈ ಅವರ ಮನೆಗೆ ಹೋಗಿದ್ದೆ. ತನ್ನ ಮಗಳ ಮೇಲೆ ಅತ್ಯಾಚಾರವಾಗಿದ್ದು, ಈ ಬಗ್ಗೆ ಎಸ್‌ಐಟಿ ರಚನೆ ಮಾಡಿ ನ್ಯಾಯ ಕೊಡಿಸುವಂತೆ ಅವರನ್ನು ಭೇಟಿಯಾಗಿದ್ದೆವು. ಈ ವೇಳೆ ಯಡಿಯೂರಪ್ಪ ಅವರು ನನ್ನ ಪುತ್ರಿಯನ್ನು ಕೋಣೆಯೊಂದಕ್ಕೆ ಕರೆದೊಯ್ದು ಐದು ನಿಮಿಷ ಮಾತನಾಡಿದ್ದಾರೆ. ಈ ವೇಳೆ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಬಳಿಕ ಕೋಣೆಯಿಂದ ಹೊರ ಬಂದ ಪುತ್ರಿ ಘಟನೆಯನ್ನು ತನ್ನ ಬಳಿ ವಿವರಿಸಿದ್ದಳು. ಬಿಎಸ್‌ವೈ ಅವರನ್ನು ಪ್ರಶ್ನಿಸಿದಾಗ, ಆಕೆಗೆ ಆತ್ಯಾಚಾರ ಆಗಿದೆಯೋ? ಇಲ್ಲವೋ ಎಂಬ ಬಗ್ಗೆ ತಿಳಿಯಲು ಕರೆದೊಯ್ದಿದ್ದೆ ಎಂದರು. ಬಳಿಕ ಬಿಎಸ್‌ವೈ ತಮ್ಮ ಬಳಿ ಕ್ಷಮೆ ಕೇಳಿ, ನಿಮಗೆ ಮೋಸ ಆಗಿರುವ ಬಗ್ಗೆ ನಾನು ಸಹಾಯ ಮಾಡುತ್ತೇನೆಂದು ಹೇಳಿದರು. ಆದರೆ ನನ್ನ ವಿಚಾರವನ್ನು ಹೊರಗಡೆ ತಿಳಿಸಬಾರದು ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ತಾಯಿ ದೂರು ನೀಡಿದ್ದಾರೆ.

ಷಡ್ಯಂತ್ರ: ಜೋಷಿ
ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ರಚಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ವಯಸ್ಸು ಮತ್ತು ವರ್ಚಸ್ಸಿಗೆ ಗೌರವ ಕೊಡಬೇಕು. ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಪೋಕೊÕ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಅವರು ಆರೋಪಮುಕ್ತರಾಗಿ ಹೊರಬರುತ್ತಾರೆ ಎಂದರು.

Advertisement

ಮಾಜಿ ಸಿಎಂ ಜಗದೀಶ ಶೆಟ್ಟರ್‌ಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಕ್ಕಿದರೆ ನನಗೆ ಅತ್ಯಂತ ಖುಷಿ ಆಗುತ್ತದೆ. ಪ್ರಧಾನಿ ಮೋದಿಗೆ ಬೆಂಬಲ ನೀಡಲು ಯುವಪಡೆ ಸನ್ನದ್ಧವಾಗಿದೆ. ಅದಕ್ಕೆ ಮತ್ತಷ್ಟು ವೇಗ ನೀಡಲು “ದೇಶಕ್ಕಾಗಿ ನನ್ನ ಮತ’ ಅಭಿಯಾನ ಚುರುಕುಗೊಳಿಸಲಾಗುತ್ತಿದೆ. ಶೇ.90 ಹೊಸ ಮತದಾರರು ಮೋದಿ ಪರವಾಗಿದ್ದಾರೆ. ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದರು.

ಕಾನೂನು ಮೂಲಕವೇ ಹೋರಾಟ: ಬಿಎಸ್‌ವೈ
ಬೆಂಗಳೂರು: ಉಪಕಾರ ಮಾಡಿದವರಿಗೆ ಈ ರೀತಿ ಕಾನೂನಿನ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ನಿರೀಕ್ಷೆ ಮಾಡಿರಲಿಲ್ಲ. ಇರಲಿ ಬಿಡಿ. ಕಾನೂನು ಮೂಲಕವೇ ಹೋರಾಟ ಮಾಡುತ್ತೇನೆ. ಇದರಲ್ಲಿ ರಾಜಕೀಯ ಬೆರೆಸಲು ನಾನು ಇಷ್ಟಪಡುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಪ್ರಕರಣ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದೂ ವರೆ ತಿಂಗಳ ಹಿಂದೆ ನಮ್ಮ ಮನೆಗೆ ಮಹಿಳೆ ಕಣ್ಣೀರು ಹಾಕುತ್ತಾ ಬಂದಿದ್ದರು. ನನಗೆ ಅನ್ಯಾಯವಾಗಿದೆ ನ್ಯಾಯ ಒದಗಿಸಿ ಎಂದು ಕೇಳಿಕೊಂಡಿದ್ದರು. ನಾನೇ ಆ ಮಹಿಳೆಯನ್ನು ನಗರ ಪೊಲೀಸ್‌ ಆಯುಕ್ತರ ಬಳಿ ಕಳುಹಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದೆ. ಈಗ ಯಾರೋ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಕಾನೂನು ಮೂಲಕವೇ ಹೋರಾಟ ಮಾಡುತ್ತೇನೆ ಎಂದರು.

ಮಹಿಳೆ ನೀಡಿದ ದೂರಿನ ಮೇಲೆ ಮಾಜಿ ಸಿಎಂ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಆ ಮಹಿಳೆ ದೂರನ್ನು ಟೈಪ್‌ ಮಾಡಿ ಕೊಟ್ಟಿದ್ದಾರೆ. ಕೈಯಲ್ಲಿ ಬರೆದು ಕೊಟ್ಟಿಲ್ಲ. ದೂರು ಕೊಟ್ಟ ಕೂಡಲೇ ಬಂಧನ ಮಾಡಲಾಗುವುದಿಲ್ಲ. ತನಿಖೆ ನಡೆಸಿ ಬಳಿಕ ಸತ್ಯ ದೃಢಪಟ್ಟರೆ ಕ್ರಮ ಕೈಗೊಳ್ಳಲಾಗುವುದು. ಮತ್ತೂಂದೆಡೆ ದೂರು ಕೊಟ್ಟ ಮಹಿಳೆಗೆ ಮಾನಸಿಕ ಅಸ್ವಸ್ಥತೆ ಇದೆ ಎಂದೂ ಹೇಳುತ್ತಾರೆ. ಇದೆಲ್ಲವೂ ತನಿಖೆಯಿಂದ ಗೊತ್ತಾಗಲಿದೆ.
– ಡಾ| ಜಿ.ಪರಮೇಶ್ವರ, ಗೃಹ ಸಚಿವ

ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಸರಕಾರದಲ್ಲಿ ಸಮರ್ಥ ಗೃಹಮಂತ್ರಿಯಾಗಿ ಪರಮೇಶ್ವರ್‌ ಇದ್ದಾರೆ. ಅವರು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಈ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ.
-ಡಿ.ಕೆ.ಶಿವಕುಮಾರ್‌, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next