Advertisement

ನಾಳೆ “ಕರ್ತವ್ಯ ಪಥ’ಉದ್ಘಾಟನೆ; ಪ್ರಧಾನಿ ಮೋದಿಯವರಿಂದ ಚಾಲನೆ

07:27 PM Sep 06, 2022 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನವೀಕರಿಸಲಾದ “ಕರ್ತವ್ಯ ಪಥ’ದ(ಸೆಂಟ್ರಲ್‌ ವಿಸ್ತಾ ಅವೆನ್ಯೂ) ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಪ್ರಧಾನ ಮಂತ್ರಿಗಳ ನೂತನ ಕಚೇರಿ ಸೇರಿದಂತೆ ಪ್ರಧಾನಿ ಕಾರ್ಯಾಲಯಗಳನ್ನು ಒಳಗೊಂಡಿರುವ “ಕರ್ತವ್ಯ ಪಥ’ವನ್ನು ಇದೇ ಗುರುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಸೆಂಟ್ರಲ್‌ ವಿಸ್ತಾ ಪುನರ್‌ಅಭಿವೃದ್ಧಿ ಯೋಜನೆಯ ಮೊದಲ ಕಾಮಗಾರಿ ಇದಾಗಿದೆ.

Advertisement

“ಕರ್ಥವ್ಯ ಪಥ’ದ ಸುತ್ತಮುತ್ತಲಿನ ಉದ್ಯಾನಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. 101 ಎಕರೆ ಜಾಗದಲ್ಲಿ ಹುಲ್ಲುಹಾಸು ಅಭಿವೃದ್ಧಿಪಡಿಸಲಾಗಿದೆ. ಈ ಆವರಣದಲ್ಲಿ ಒಟ್ಟು 4,087 ಮರಗಳು ಇವೆ. ಸುತ್ತಲಿನ ತೋಟಗಳಲ್ಲಿ ಗಿಡಗಳು ಮತ್ತು ಹುಲ್ಲನ್ನು ಬೆಳಸಲಾಗಿದೆ. ನವದೆಹಲಿಯ ವಿಜಯ್‌ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗಿನ ನವೀಕರಿಸಲಾದ ಮಾರ್ಗದಲ್ಲಿ ನಡಿಗೆದಾರರಿಗೆ ಅನುಕೂಲವಾಗುವಂತೆ 4 ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಕಾಲುವೆಗಳಿಗೆ ಅಡ್ಡಲಾಗಿ 16 ಶಾಶ್ವತ ಸೇತುವೆಗಳನ್ನು ನಿರ್ಮಿಸಲಾಗಿದೆ.

300 ಸಿಸಿಟಿವಿಗಳ ಅಳವಡಿಕೆ:
ಇಡೀ ಆವರಣದಲ್ಲಿ 422 ಕೆಂಪು ಗ್ರಾನೈಟ್‌ನ ಆಸನಗಳನ್ನು ನಿರ್ಮಿಸಲಾಗಿದೆ. 300 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. 1,117 ಕಾರುಗಳು ಮತ್ತು 35 ಬಸ್‌ಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. 50 ಮಂದಿ ಭದ್ರತಾ ಸಿಬ್ಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸುಮಾರು 1.1 ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾದ ಮಾರ್ಗ ಹಾಗೂ ಸುತ್ತಮುತ್ತಲಿನ ಉದ್ಯಾನಗಳಲ್ಲಿ 422 ಕೆಂಪು ಗ್ರಾನೈಟ್‌ನ ಆಸನಗಳನ್ನು ನಿರ್ಮಿಸಲಾಗಿದೆ.

16.5 ಕಿ.ಮೀ. ನಡಿಗೆ ಪಥ ನಿರ್ಮಾಣ:
ಕರ್ತವ್ಯ ಪಥ ಹಾಗೂ ಸುತ್ತಲೂ ಕೆಂಪು ಬಣ್ಣದ ಗ್ರಾನೈಟ್‌ನಿಂದ 16.5 ಕಿ.ಮೀ. ನಡಿಗೆ ಪಥ ನಿರ್ಮಿಸಲಾಗಿದೆ. ಮಾರ್ಗದುದ್ದಕ್ಕೂ 133 ಬೀದಿ ದೀಪಗಳು ಹಾಗೂ ಉದ್ಯಾನವನಗಳಲ್ಲಿ 800ಕ್ಕೂ ಹೆಚ್ಚು ಬೀದಿ ದೀಪಗಳನ್ನು ಅಳವಡಿಸಲಾಗಿದೆ. 650 ಆಧುನಿಕ ನಾಮಫ‌ಲಕಗಳನ್ನು ಅಳವಡಿಸಲಾಗಿದೆ. 150 ಕಸದಬುಟ್ಟಿಗಳನ್ನು ಅಳವಡಿಸಲಾಗಿದೆ.

74 ಐತಿಹಾಸಿಕ ಕಂಬಗಳು ಮೇಲ್ದರ್ಜೆಗೆ:
ಕರ್ಥವ್ಯ ಪಥದ ಮಾರ್ಗದುದ್ದಕ್ಕೂ 74 ಐತಿಹಾಸಿಕ ಕಂಬಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಮಾರ್ಗದುದ್ದಕ್ಕೂ ಇದ್ದ 1,000ಕ್ಕೂ ಹೆಚ್ಚು ಕಾಂಕ್ರೀಟ್‌ ಬೋಲಾರ್ಡ್‌ಗಳನ್ನು ಬಿಳಿ ಮರಳುಗಲ್ಲಿನ ಬೋಲಾರ್ಡ್‌ಗಳಿಗೆ ಬದಲಾವಣೆ. ಅಲ್ಲದೇ ಈ ಹಿಂದೆ ಅಳವಡಿಸಿದ್ದ ಸರಪಳಿಯನ್ನು ತೆಗೆದುಹಾಕಿ, ನೂತನ ಸರಪಳಿ ಅಳವಡಿಸಲಾಗಿದೆ.

Advertisement

ಮಾರ್ಗ ಬದಲಾವಣೆ:
ಸೆ.8ರಂದು ಕರ್ಥವ್ಯ ಪಥದ ಉದ್ಘಾಟನೆ ಹಿನ್ನೆಲೆಯಲ್ಲಿ ಆ ಮಾರ್ಗದ ಸುತ್ತಮುತ್ತಲಿನ ರಸ್ತೆಗಳನ್ನು ಅಂದು ಸಂಜೆ 6ರಿಂದ 9 ಗಂಟೆವರೆಗೆ ಬಂದ್‌ ಮಾಡಲಾಗಿದೆ. ಸುಗಮ ಸಂಚಾರ ಹಾಗೂ ವಿವಿಐಪಿಗಳ ಭದ್ರತೆಗಾಗಿ ಈ ನಿರ್ಧಾರ ತಾಳಿದ್ದು, ಸಾರ್ವಜನಿಕರು ನಿಗದಿಪಡಿಸಿರುವ ಬದಲಿ ರಸ್ತೆಗಳಲ್ಲಿ ಪ್ರಯಾಣಿಸಬೇಕು ಎಂದು ದೆಹಲಿ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಸರ್ಕಾರಿ ರಜೆ:
ಗುರುವಾರದಂದು ಕರ್ಥವ್ಯ ಪಥದ ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳಿಗೆ ಮಧ್ಯಾಹ್ನ 4 ಗಂಟೆ ನಂತರ ರಜೆ ಘೋಷಿಸಲಾಗಿದೆ. ಅಲ್ಲದೇ ಸಾಧ್ಯವಿರುವವರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಹಾಗೂ ಅಂದು ಕಚೇರಿಗಳಿಗೆ ಬರುವವರು ಆದಷ್ಟು ಸಾರ್ವಜನಿಕ ಸಾರಿಗೆ ಬಳಸುವಂತೆ ಸುತ್ತೋಲೆ ಹೊರಡಿಸಿದೆ.

ಎಲ್ಲಿಂದ ಎಲಿಯವರೆಗೆ:
ವಿಜಯ್‌ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೆ ಮಾರ್ಗ ನವೀಕರಣ

74 ಐತಿಹಾಸಿಕ ಕಂಬಗಳು ಮೇಲ್ದರ್ಜೆಗೆ
900 ನೂತನ ಬೀದಿ ದೀಪಗಳ ಅಳವಡಿಕೆ
101 ಎಕರೆ ಜಾಗದಲ್ಲಿ ಹುಲ್ಲುಹಾಸು
16.5 ಕಿ.ಮೀ. ನಡಿಗೆ ಪಥ
1,117 ಕಾರುಗಳಿಗೆ ಪಾರ್ಕಿಂಗ್‌ ವ್ಯವಸ್ಥೆ
35 ಬಸ್‌ಗಳಿಗೆ ಪಾರ್ಕಿಂಗ್‌ ವ್ಯವಸ್ಥೆ
422 ಕೆಂಪು ಗ್ರಾನೈಟ್‌ನ ಆಸನಗಳ ನಿರ್ಮಾಣ
150 ಕಸದಬುಟ್ಟಿ ಅಳವಡಿಕೆ
650 ನೂತನ ನಾಮಫ‌ಲಕಗಳ ಅಳವಡಿಕೆ
16 ಶಾಶ್ವತ ಸೇತುವೆಗಳ ನಿರ್ಮಾಣ
300 ಸಿಸಿಟಿವಿಗಳ ಅಳವಡಿಕೆ
50 ಪ್ರತಿ ಶಿಫ್ಟ್ ನಲ್ಲಿರುವ ಭದ್ರತಾ ಸಿಬ್ಬಂದಿ
4 ನೂತನ ಅಂಡರ್‌ಪಾಸ್‌ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next