ನವದೆಹಲಿ:“ಭಾರತದ ಶ್ರೇಷ್ಠ ಯುಗವು ಸಮೀಪಿಸುತ್ತಿದೆ. ನಮ್ಮ ಇಡೀ ಪಕ್ಷವು ದೇಶದ ಅಭಿವೃದ್ಧಿಗೆ ತನ್ನನ್ನು ತಾನು ಅರ್ಪಿಸಿಕೊಂಡು, “ಅಮೃತ ಕಾಲ’ವನ್ನು (2047ರವರೆಗಿನ 25 ವರ್ಷಗಳ ಅವಧಿ) “ಕರ್ತವ್ಯ ಕಾಲ’ವಾಗಿ ರೂಪಿಸಬೇಕು.’
ಇದು ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ನೀಡಿದ ಕರೆ.
2024ರ ಲೋಕಸಭೆ ಚುನಾವಣೆಗೆ ಇನ್ನು ನಮಗೆ ಉಳಿದಿರುವುದು 400 ದಿನಗಳು ಮಾತ್ರ. ಪಕ್ಷದ ಪದಾಧಿಕಾರಿಗಳೆಲ್ಲರೂ ಚುನಾವಣೆಯ ಲಾಭ-ನಷ್ಟದ ಲೆಕ್ಕಾಚಾರವನ್ನು ಬದಿಗಿಟ್ಟು ಬೋಹ್ರಾಗಳು, ಪಸ್ಮಂದಾ, ಸಿಖ್ಗಳು ಮುಂತಾದ ಅಲ್ಪಸಂಖ್ಯಾತರೂ ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವನ್ನೂ ತಲುಪಬೇಕು. ತಮ್ಮನ್ನು ತಾವು ಅರ್ಪಿಸಿಕೊಂಡು ಎಲ್ಲರನ್ನೂ ತಲುಪುವಂತಾಗಬೇಕು ಎಂದು ಮೋದಿ ಹೇಳಿದರು.
ಮೋದಿಯವರ ಈ ಭಾಷಣವು ಕೇಸರಿ ಪಕ್ಷವನ್ನು ಮತ್ತಷ್ಟು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಅವರಿಗಿರುವ ದೂರದೃಷ್ಟಿಯನ್ನು ತೋರಿಸಿತು ಎಂದು ಕಾರ್ಯಕಾರಿಣಿಯಲ್ಲಿ ಭಾಗಿಯಾಗಿದ್ದ ಅನೇಕರು ಅಭಿಪ್ರಾಯಪಟ್ಟರು. ಜತೆಗೆ, ತಮ್ಮ ಭಾಷಣದುದ್ದಕ್ಕೂ ಮೋದಿ ಅವರು “ಸೂಫಿ ತತ್ವ’ದ ಬಗ್ಗೆ ಅತಿ ಹೆಚ್ಚು ಪ್ರಸ್ತಾಪಿಸಿದರು ಎಂದೂ ಹಲವು ಹೇಳಿದರು. ಅಲ್ಲದೇ, ಬೇರೆ ಬೇರೆ ವಲಯಗಳಿಗೆ ಸೇರಿದ ವೃತ್ತಿಪರರನ್ನು ಸಂಪರ್ಕಿಸಿ, ವಿಶ್ವವಿದ್ಯಾಲಯಗಳು, ಚರ್ಚುಗಳೊಂದಿಗೂ ಸಂಪರ್ಕ ಸಾಧಿಸಿ ಎಂದೂ ಕರೆ ನೀಡಿದ್ದಾಗಿಯೂ ತಿಳಿಸಿದರು.
Related Articles
ಇದೇ ವೇಳೆ, ಅತಿಯಾದ ಆತ್ಮವಿಶ್ವಾಸ ಬೇಡ ಎಂಬುದನ್ನೂ ಒತ್ತಿ ಹೇಳಿದ ಮೋದಿ, ಇದಕ್ಕೆ 1998ರ ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಸೋಲನ್ನು ಉದಾಹರಣೆಯಾಗಿ ನೀಡಿದರು.
ಮೋದಿ ಸಲಹೆಗಳೇನು?
– ದೇಶದ ಅಭಿವೃದ್ಧಿಗೆ ಪಣತೊಟ್ಟು “ಅಮೃತ ಕಾಲ’ವನ್ನು “ಕರ್ತವ್ಯ ಕಾಲ’ವಾಗಿ ರೂಪಿಸಿ.
– ಸಮಾಜದ ಪ್ರತಿಯೊಂದು ವರ್ಗವನ್ನೂ ತಲುಪಿ. ಆದರೆ ಅತಿಯಾದ ಆತ್ಮವಿಶ್ವಾಸ ಬೇಡ.
– ಬಿಜೆಪಿ ಈಗ ಕೇವಲ ರಾಜಕೀಯ ಚಳವಳಿಯಲ್ಲ, ಅದೊಂದು ಸಾಮಾಜಿಕ ಚಳವಳಿ
– 18-25ರ ವಯೋಮಾನದವರಿಗೆ ಹಿಂದಿನ ಸರ್ಕಾರಗಳ ಭ್ರಷ್ಟಾಚಾರ, ದುರಾಡಳಿತದ ಬಗ್ಗೆ ಗೊತ್ತಿಲ್ಲ
– ಅವರಿಗೆ ಈ ಕುರಿತು ಮಾಹಿತಿ ನೀಡುವ, ಜಾಗೃತಿ ಮೂಡಿಸುವ ಕೆಲಸವಾಗಬೇಕು
– ಗಡಿ ಗ್ರಾಮಗಳಲ್ಲಿ ಪಕ್ಷದ ವಿವಿಧ ಮೋರ್ಚಾಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಬೇಕು
ಮೋದಿ ನಾಯಕತ್ವಕ್ಕೆ ಬಹುಪರಾಕ್
ಭಾರತವನ್ನು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬದಲಾಯಿಸುವಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವದ ಪಾತ್ರವನ್ನು ಶ್ಲಾ ಸಿ ಸಾಮಾಜಿಕ-ಆರ್ಥಿಕ ನಿರ್ಣಯವನ್ನು ಬಿಜೆಪಿ ಕಾರ್ಯಕಾರಿಣಿ ಕೈಗೊಂಡಿದೆ. ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತಿವೆ ಎಂದೂ ನಿರ್ಣಯದಲ್ಲಿ ಉಲ್ಲೇಖೀಸಲಾಗಿದೆ.
ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಂದರೆ ಕಳೆದ 9 ವರ್ಷಗಳಲ್ಲಿ ಜಾಗತಿಕವಾಗಿ ಭಾರತದ ವರ್ಚಸ್ಸು ವೃದ್ಧಿಸಿದೆ. ಹಿಂದೆಲ್ಲ ಬಿಕ್ಕಟ್ಟು ಎದುರಾದಾಗ ಭಾರತ ಬೇರೆ ದೇಶಗಳನ್ನು ಅವಲಂಬಿಸಬೇಕಾಗಿತ್ತು. ಈಗ ಎಲ್ಲ ಸವಾಲುಗಳನ್ನೂ ಎದುರಿಸಿ, ಇತರರಿಗೂ ನೆರವಾಗುತ್ತಿದೆ.
– ಎಸ್.ಜೈಶಂಕರ್, ವಿದೇಶಾಂಗ ಸಚಿವ