Advertisement

10 ರೂ. ಡಾಕ್ಟರ್‌ ಖ್ಯಾತಿಯ ಮಲ್ಹಾರ್‌ ರಾವ್‌ಗೆ ಪ್ರಧಾನಿ ಮೋದಿ ಮೆಚ್ಚುಗೆ:

09:47 AM Jul 25, 2022 | Team Udayavani |

ಕಲಬುರಗಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯ ಡಾ|ಮಲ್ಹಾರ್‌ ರಾವ್‌ ಮಲ್ಲೆ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ಭಾರತ ಕೋವಿಡ್‌ ವಿರುದ್ಧ ನಡೆಸಿದ 200 ಕೋಟಿ ಲಸಿಕೆ ಅಭಿಯಾನದಲ್ಲಿ ತಾವು ಕ್ರಮಿಸಿರುವ ದೂರ ಮತ್ತು ಹಾಕಿರುವ ಲಸಿಕೆ ಮುಂದಿನ ಪೀಳಿಗೆ ಭವಿಷ್ಯದೊಂದಿಗೆ ಬಲಿಷ್ಠ ಭಾರತ ಕಟ್ಟುವಲ್ಲಿ ಸಹಕಾರಿ ಎಂದು ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಜು.17ರಂದು ದೇಶದ 200 ಕೋಟಿ ಜನರಿಗೆ ಕೋವಿಡ್‌-19 ನಿರೋಧಕ ಲಸಿಕೆ ಹಾಕುವಲ್ಲಿ ಭಾರತ ಮೈಲುಗಲ್ಲು ಸ್ಥಾಪಿಸಿತ್ತು. ಆ ಆಚರಣೆ ಅಂಗವಾಗಿ ದೇಶದ ಹಲವಾರು ವೈದ್ಯರನ್ನು ಸೇರಿದಂತೆ ಎಲ್ಲ ವರ್ಗದ ಸೇವಕರನ್ನು ಪ್ರಧಾನಿ ಪ್ರಶಂಸಿಸಿದ್ದರು. ಅವರ ಸೇವೆಯನ್ನು ಸ್ಮರಿಸಿ ಪತ್ರವನ್ನು ಬರೆದಿದ್ದರು. ಅಲ್ಲದೆ, ಆಭಾರ ಮನ್ನಣೆ ಸಲ್ಲಿಸಿದ್ದರು. ಅದರೊಂದಿಗೆ ಸೇವೆ ಮಾಡಿದ ವ್ಯಕ್ತಿಯ ಕುಟುಂಬ ಸದಸ್ಯರನ್ನು ಸ್ಮರಿಸಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಅಂತಹದೊಂದು ಪತ್ರ ಕಲಬುರಗಿ ವಲಯದಲ್ಲಿ ಈಗ ಭಾರೀ ಸದ್ದು ಮಾಡುತ್ತಿದೆ.

ಯಾರು ಡಾ| ಮಲ್ಹೇರಾವ್‌?: ಡಾ|ಮಲ್ಹಾರ್‌ ರಾವ್‌ ಮಲ್ಲೇ ಮೂಲತಃ ಜೇವರ್ಗಿ ತಾಲೂಕಿನ ಮಲ್ಲೆ ಊರಿನವರು. ಜಮೀನುದಾರಿಕೆ ಕುಟುಂಬ. ಗ್ರಾಮೀಣ ಪ್ರದೇಶದವರಾದ್ದರಿಂದ ಸದಾ ಜನರಿಗಾಗಿ ಮಿಡಿಯುವ ವ್ಯಕ್ತಿ. ಅಪ್ಪ ದಿ| ಕಿಶನ್‌ರಾವ್‌ ಮಲ್ಲೆ ರೋಲ್‌ಮಾಡೆಲ್‌. ವಕೀಲರು ಅಲ್ಲದೆ, ಸಂಗೀತಗಾರರು. ಆದರೆ, ಮಲ್ಹಾರ್‌ರಾವ್‌ ಅವರ ಆಸಕ್ತಿಯಂತೆ ವೈದ್ಯಕೀಯ (ಎಂಬಿಬಿಎಸ್‌ -1974) ಪಾಸ್‌ ಆದ ಬಳಿಕ 1984ರಲ್ಲಿ ಕಾನೂನು ಪದವಿ ಪಡೆದು ಅಪ್ಪನ ವೃತ್ತಿ ಮುಂದುರಿಸಬೇಕು ಎಂದು ಕೊಂಡಿದ್ದಾಗಲೇ, “ಅಪ್ಪ ಬೈದು.. ನೀನು ಡಾಕ್ಟರಕಿ ಓದಿದಿ.. ಅದನ್ನೇ ಮುಂದುವರಿಸು ಎಂದ್ರು.. ಆಗ ದವಾಖಾನಿ ತೆರೆಯಲು ರೊಕ್ಕಾ ಕೊಡ್ರಿ ಅಂದ್ರ.. ರೊಕ್ಕ ಇಲ್ಲ.. ನೀನೇ ಶುರು ಮಾಡು ಅಂದಿದ್ದರು. 80 ರೂ.ನಲ್ಲಿ ದವಾಖಾನೆ ತೆರೆದು ಕಳೆದ 47 ವರ್ಷಗಳಿಂದ ವಿವಿಧ ರೋಗಗಳಿಗೆ ಕೇವಲ 10 ರೂ. ತಪಾಸಣೆ ಶುಲ್ಕದಲ್ಲಿ ಚಿಕಿತ್ಸೆ ನೀಡುತ್ತಾ ಇದ್ದೇನೆ’ ಎನ್ನುತ್ತಾರೆ ಡಾ| ಮಲ್ಹಾರ್‌ ರಾವ್‌ ಮಲ್ಲೆ.

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ನನಗೆ ಪತ್ರ ಬರೆದು ಪ್ರಶಂಸೆ ಮಾಡಿದ್ದಕ್ಕೆ ಭಾಳ್‌ ಖುಷಿಯಾಗಿದೆ. ಆದರೆ, ನಾನು ಕೋವಿಡ್‌ನ‌ಲ್ಲಿ ಕೆಲಸ ಮಾಡಿದ್ದನ್ನು ಯಾರು ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾನು ಸೇವೆ ಮಾಡುವುದನ್ನು ಮಾತ್ರ ಮಾಡಿದ್ದೇನೆ ಎನ್ನುವ ಮಲ್ಲೇ ಅವರ ಔದಾರ್ಯ ಮತ್ತು ಮಾನವೀಯ ಕಕ್ಕುಲಾತಿ ದೊಡ್ಡದು.

ಇದನ್ನೂ ಓದಿ: ಸೇನೆ ಸೇರುವ ಯುವಕ ಯುವತಿಯರಿಗೆ ಉಚಿತ ತರಬೇತಿ ನೀಡುವ ಮಾಜಿ ಸೈನಿಕರು

Advertisement

10 ರೂ. ಡಾಕ್ಟರ್ಆಗಿದ್ದು ಹೇಗೆ?

ಮಲ್ಹಾರ್‌ ರಾವ್‌ ಅವರ ಪತ್ನಿ ಲತಾ ಮನೆ ಯಜಮಾನತಿ. “ಎಂದಿಗೂ 10 ರೂ.ನಲ್ಲೇ ಏಕೆ ಚಿಕಿತ್ಸೆ ಕೊಡ್ತಿರಿ’ ಎಂದು ಪ್ರಶ್ನೆ ಮಾಡದೆಯೇ ಅನುಸರಿಸಿಕೊಂಡು ಬಂದವರು. ಮೂವರು ಪುತ್ರಿಯರು, ಓರ್ವ ಪುತ್ರ ಇರುವ ತುಂಬಿದ ಸಂಸಾರ. ಸಣ್ಣ ಮಗಳು ಡಾಕ್ಟರ್‌ ಮತ್ತು ಮೊಮ್ಮಗಳು ಕೂಡ ಡೆಂಟಿಸ್ಟ್‌. ಪುತ್ರ ಆರ್ಕಿಟೆಕ್ಟ್ ಎಲ್ಲವೂ ಶೈಕ್ಷಣಿಕವಾಗಿ ಉನ್ನತ ಸ್ಥಾಯಿಗೇರಿದ ಕುಟುಂಬ. ಡಾ| ಮಲ್ಹಾರ್‌ ರಾವ್‌ ಮಲ್ಲೇ 47 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ರೋಗಿಗಳನ್ನು ಉಪಚರಿಸಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಿದ್ದಾರೆ. 1975ರಿಂದ ವೃತ್ತಿ ಶುರು ಮಾಡಿದ್ದಾಗ ಶುಲ್ಕವೇ ಪಡೆಯುತ್ತಿರಲಿಲ್ಲ. ಉಚಿತವಾಗಿ ತಪಾಸಣೆ ಮಾಡುತ್ತಿದ್ದರು. ಬಳಿಕ 2000ರಲ್ಲಿ ಪ್ರೈವೇಟ್‌ ಮೆಡಿಕಲ್‌ ಪ್ರ್ಯಾಕ್ಟೀಸ್‌ ಆ್ಯಕ್ಟ್ ಅಡಿ ಶುಲ್ಕದ ಮಾಹಿತಿ ಕೇಳಿದಾಗ 10 ರೂ. ಅಂತ ಬರೆಯಿಸಿದ್ದರು. ಅದನ್ನೂ ಇಂದಿನವರೆಗೂ ಪಾಲಿಸುತ್ತಿದ್ದಾರೆ. ಈಗಂತೂ 10 ರೂ. ಡಾಕ್ಟರ್‌ ಅಂತಲೇ ಫೇಮಸ್‌. ನಗರದ ಜಗತ್‌ ವೃತ್ತದ ಸನಿಹದಲ್ಲೇ ಕ್ಲಿನಿಕ್‌ ಇದೆ. ಪ್ರಗತಿಪರ ವಿಚಾರದವರಾದರೂ ಜನರ ದೈವಿಭಕ್ತಿಗೆ ತಲೆಬಾಗುತ್ತಾರೆ. ಊರಲ್ಲಿ ನಾಲ್ಕು ದೇವಸ್ಥಾನಗಳನ್ನು ಕಟ್ಟಿಸಿ ಸ್ವಂತ ಊರಿನ ಜನರಿಗೆ ದೇವರ ಕೃಪೆ ದಕ್ಕುವಂತೆ ಮಾಡಿದ್ದಾರೆ.

ನಾನು ಯಾವುದನ್ನು ಮುಟ್ಟುವ ಪ್ರಯತ್ನ ಮಾಡಿಲ್ಲ. ಸುಮ್ಮನೆ ಸೇವೆ ಮಾಡುತ್ತಿದ್ದೇನೆ. 10 ರೂ. ಗಳಲ್ಲಿ ಚಿಕಿತ್ಸೆ ನೀಡುವುದು ನನಗೆ ಕೀಳನ್ನಿಸಿಲ್ಲ. ಹಣದ ಜರೂರತ್ತಿಗಿಂತ ಸೇವೆ ಮಾಡಬೇಕನ್ನಿಸಿತು. ಅದಲ್ಲದೆ, ಎಷ್ಟು ದಿನ ಭೂಮಿಯಲ್ಲಿರುತ್ತೇವೆ. ಹೋಗುವಾಗ ಎಲ್ಲವೂ ಬಿಟ್ಟೇ ಹೋಗಬೇಕಲ್ಲ. ಅದಕ್ಕಾಗಿ ಹಣದ ಹಿಂದೆ ಓಡಿಲ್ಲ. ಅಪ್ಪ ಕಿಶನರಾವ್‌ ನನ್ನ ಆದರ್ಶ ಮತ್ತು ಮಾರ್ಗದರ್ಶಕರು. ಅವರು ವಕೀಲರಾದರೂ ಹಣದ ಹಿಂದೆ ಓಡಿಲ್ಲ. ಜಮೀನುದಾರಿಕೆ ಕುಟುಂಬವಾದ್ದರಿಂದ ರೊಕ್ಕ ನನ್ನ ಮೊದಲ ಆದ್ಯತೆ ಆಗಿಲ್ಲ. –ಡಾ| ಮಲ್ಹಾರ್ರಾವ್ಮಲ್ಲೇ ವೈದ್ಯರು

-ಸೂರ್ಯಕಾಂತ್ಎಂ.ಜಮಾದಾರ್

Advertisement

Udayavani is now on Telegram. Click here to join our channel and stay updated with the latest news.

Next