ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20 ಮತ್ತು 21 ರಂದು ಬೆಂಗಳೂರು ಮತ್ತು ಮೈಸೂರು ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಲಿದ್ದು, ರಾಜಧಾನಿಯಲ್ಲಿ ಎರಡು ಭರ್ಜರಿ ರೋಡ್ ಶೋ ಗಳನ್ನೂ ನಡೆಸಲು ಸಿದ್ಧತೆ ನಡೆಸಲಾಗಿದೆ.
ಜೂನ್ 20ಕ್ಕೆ ಬೆಂಗಳೂರು ಉತ್ತರ ಹಾಗೂ ದಕ್ಷಿಣದಲ್ಲಿ ರೋಡ್ ಶೋ ನಡೆಸಲು ಸಿದ್ದತೆ ನಡೆಸಲಾಗಿದ್ದು, ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ,ಮಲ್ಲೇಶ್ವರಂ ನಲ್ಲಿ ರೋಡ್ ಶೋ ನಡೆಸಲಾಗುತ್ತಿದೆ.
ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ ಸೇರಿದಂತೆ ಹಲವು ಕಡೆ ರೋಡ್ ಶೋ ನಡೆಸಲಾಗುತ್ತಿದ್ದು, ಒಟ್ಟು 12 ಕಿಲೋ ಮೀಟರ್ ರೋಡ್ ಶೋಗೆ ಸಿದ್ದತೆ ನಡೆಸಲಾಗುತ್ತಿದೆ. ಒಂದು ಕಡೆ ಸಾರ್ವಜನಿಕ ಸಭೆ ನಡೆಯಲಿದ್ದು, ಇನ್ನೆರಡು ಕಡೆ ರೋಡ್ ಶೋಗೆ ಅಗತ್ಯ ಸಿದ್ದತೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೂರ್ವ ಸಿದ್ದತಾ ಸಭೆ
Related Articles
ಪ್ರಧಾನಿಗಳು ಬಹಳ ದಿನಗಳ ನಂತರ ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಬೇರೆ ರಾಜ್ಯಗಳಿಗೆ ಹೋದಾಗ ಅಭೂತಪೂರ್ವ ಬೆಂಬಲ ಸಿಕ್ಕಿದೆ.ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನಂತರ ಪ್ರವಾಸ ಕೈಗೊಂಡಿದ್ದಾರೆ. ಬಿಜೆಪಿ ಇಲ್ಲದ ಕಡೆಯೂ ದೊಡ್ಡ ಬೆಂಬಲ ಅವರಿಗೆ ಸಿಕ್ಕಿದೆ.ಮೊನ್ನೆ ತಮಿಳುನಾಡಿಗೆ ಹೋಗಿದ್ದಾದ ಎಷ್ಟೊಂದು ಜನರ ಬೆಂಬಲ ಸಿಕ್ಕಿತ್ತು ಎಂಬುದನ್ನು ನೋಡಿದ್ದೇವೆ. ಇದೇ ರೀತಿ ಹಲವು ರಾಜ್ಯಗಳಲ್ಲೂ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇದು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ. ನಮ್ಮ ರಾಜ್ಯದಲ್ಲಿ ಮುಂದೆ ಚುನಾವಣೆ ಬರುತ್ತಿದೆ.
ಈ ವರ್ಷ ಚುನಾವಣಾ ವರ್ಷ ಕೂಡ. ಅವರ ಈ ಕಾರ್ಯಕ್ರಮ ವನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಅವರು ಪೂರ್ವ ಸಿದ್ದತಾ ಸಭೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಯಲಹಂಕದಿಂದ ಪ್ರಧಾನಿ ಬರುವಾಗ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರಿಂದ ಸ್ವಾಗತ ಕೋರಬೇಕು. ಸಾರ್ವಜನಿಕ ಸಭೆಗೆ 50 ರಿಂದ 60 ಸಾವಿರ ಜನರ ಸೇರಿಸುವ ಗುರಿ ಹೊಂದಿದ್ದೇವೆ. ಅಲ್ಲಿ ಜನರಿಗೆ ಸರ್ಕಾರದಿಂದ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಜನರನ್ನು ಕರೆಸುವುದು ನಿಮ್ಮ ಜವಬ್ದಾರಿ. ಹೀಗಾಗಿ ಜನರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು. 18ನೇ ತಾರೀಕಿನ ಒಳಗೆ ಎಲ್ಲ ರೀತಿಯ ಸಿದ್ದತೆ ಆಗಬೇಕು. ಪ್ರಧಾನಿಗಳ ಕಾರ್ಯಕ್ರಮ ಗಂಭೀರವಾಗಿ ತೆಗೆದುಕೊಂಡು, ಶ್ರಮ ವಹಿಸಬೇಕು ಎಂದು ಸಿಎಂ ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.