ಮಹಾಲಿಂಗಪುರ: ಪ್ಲಾಸ್ಟಿಕ್ ಬಳಕೆ ಮಾಡಿ ಬಿಸಾಡಿದ ತ್ಯಾಜ್ಯದಿಂದ ಹಾನಿಕಾರಕ ರಾಸಾಯನಿಕಗಳು ಉತ್ಪತ್ತಿಯಾಗಿ ಮನುಕುಲಕ್ಕೆ ವಿವಿಧ ಕಾಯಿಲೆಗಳು ಬರುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಯು.ಎ.ಎಂ (ಆಯ್.ಎಸ್ಸಿ)ಅಂತಾರಾಷ್ಟ್ರೀಯ ಸಂಸ್ಥೆಯ ವಿದ್ಯಾರ್ಥಿ ಫ್ರಾನ್ಸ್ ದೇಶದ ಸೋರೇನ್ ಹೇಳಿದರು.
ಜತ್ತಿ ಫೌಂಡೇಷನ್, ಯ.ಎ.ಎಂ. ಕೆಎಲ್ಇ ಶಿಕ್ಷಣ ಸಂಸ್ಥೆ, ಕೆಜೆ ಸೋಮಯ್ಯ ಶಿಕ್ಷಣ ಸಂಸ್ಥೆ, ಸರ್ಕಾರಿ ಪ್ರೌಢಶಾಲೆ ಮತ್ತು ಪುರಸಭೆಯ ಸಹಯೋಗದಲ್ಲಿ ಬುಧವಾರ ಪ್ಲಾಸ್ಟಿಕ್ ಚೀಲಗಳ ನಿಷೇಧ ದಿನ ಮತ್ತು ಪ್ಲಾಸ್ಟಿಕ್ ಮುಕ್ತ ವಿಶ್ವ ಕಾರ್ಯಕ್ರಮದ ಅಂಗವಾಗಿ ಪ್ಲಾಗೋತ್ಥಾನ ಕಾರ್ಯಕ್ರಮ ನಡೆಯಿತು.
ಜತ್ತಿ ಫೌಂಡೇಶನ ಕಾರ್ಯಕರ್ತರು, ಸ್ಕೌಟ್ಸ್ ಮತ್ತು ಗೈಡ್ಸ್, ಕೆಎಲ್ಇ ಸಂಸ್ಥೆಯ ಪಿಯು ಮತ್ತು ಪದವಿ ಸೇರಿ 200 ವಿದ್ಯಾರ್ಥಿಗಳೊಂದಿಗೆ ಫ್ರಾನ್ಸ್ ದೇಶದ ಎಂಟು ಜನ ವಿದ್ಯಾರ್ಥಿಗಳ ಸಮೂಹವು ಹಲವು ತಂಡಗಳನ್ನು ರಚಿಸಿಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶೇಖರಿಸಿ, ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಕೆಯ ನಿಷೇಧದ ಜಾಗೃತಿ ಮೂಡಿಸಿ, ನಂತರ ಕೆಎಲ್ಇ ಪದವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಹೊರ ಸೂಸುವ ರಾಸಾಯನಿಕಗಳಿಂದ ವಾಯು ಮಂಡಲ ಕಲುಷಿತಗೊಂಡು ಮಾನವನ ಎಲುಬುಗಳಿಗೆ ಹಾನಿ, ಕ್ಯಾನ್ಸರ್, ಕಣ್ಣುಗಳಿಗೆ, ಚರ್ಮದ ಮೇಲೆ, ಉಸಿರಾಟಕ್ಕೆ, ತಲೆ ನೋವಿಗೆ, ದೇಹಕ್ಕೆ ಆಯಾಸ, ಬಂಜೆತನ ಹಾಗೂ ಪುರುಷತ್ವದ ಮೇಲೆ ಗಾಢ ಪ್ರಭಾವ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.
ಜತ್ತಿ ಫೌಂಡೇಷನ್ನ ಧೃವ ಜತ್ತಿ ಮಾತನಾಡಿ, ಪ್ಲಾಸ್ಟಿಕ್ ನಿಂದ ತಯಾರಾದ ವಸ್ತುಗಳಿಂದ ನೀರಿನ ಮೂಲಗಳು, ನದಿ, ಹಳ್ಳ,ಕೊಳ್ಳಗಳು, ಸಸ್ಯ ರಾಶಿ ಹಾಗೂ ಕೃಷಿ ಭೂಮಿಗಳು ಹದಗೆಟ್ಟು ಹೋಗುತ್ತಿವೆ. 2050 ರ ಹೊತ್ತಿಗೆ ಸಮುದ್ರದಲ್ಲಿಯ ಒಟ್ಟಾರೆ ಮೀನುಗಳಿಗಿಂತ ಪ್ಲಾಸ್ಟಿಕ್ ತ್ಯಾಜ್ಯವೇ ತುಂಬಿ ಸಮುದ್ರ ಜೀವಿಗಳಿಗೆ ಕಂಟಕವಾಗಲಿದೆ. ನಾವು ಈಗಿನಿಂದಲೇ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಮುಕ್ತಕ್ಕಾಗಿ ಜಾಗೃತಿ ಅಭಿಯಾನ ಆರಂಭಿಸಬೇಕು. ಇದರಿಂದ ಭವಿಷ್ಯದಲ್ಲಿ ನೆಮ್ಮದಿ ಸಿಗಲಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆ ಘೋರ ಪರಿಣಾಮ ಎದುರಿಸುವುದು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಫ್ರಾನ್ಸ್ ದೇಶದ ವಿದ್ಯಾರ್ಥಿಗಳಾದ ಸೋರೇನ್, ಲಾರಾ, ಇಜಿಯಾ, ಲಿಯಾನ್, ಹೇಯೂಗೋ, ಲುರೆಂಜೋ, ಇನೇಜ್ ಮತ್ತು ಪುರಸಭೆ ಮುಖ್ಯಾ ಧಿಕಾರಿ ಈರಣ್ಣ ದಡ್ಡಿ, ವ್ಯವಸ್ಥಾಪಕ ಎಸ್.ಎನ್. ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಮುಗಳಖೋಡ, ಕಿರಿಯ ಆರೋಗ್ಯ ನಿರೀಕ್ಷಕರಾದ ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ಪದವಿ ಕಾಲೇಜಿನ ಪ್ರಾಚಾರ್ಯ ಕೆ.ಎಂ. ಅವರಾದಿ, ಉಪಪ್ರಾಚಾರ್ಯ ಬಿ.ಎನ್. ಅರಕೇರಿ, ಉಪನ್ಯಾಸಕರಾದ ಎಲ್.ಬಿ. ತುಪ್ಪದ, ಶಿವಲಿಂಗ ಸಿದ್ನಾಳ, ರವಿ ಕಲ್ಲೋಳ್ಳಿ, ಪುರಸಭೆಯ ಮಹಾಲಿಂಗಪ್ಪ ಮುಗಳಖೋಡ, ರಾಜು ಹೂಗಾರ, ಸಿದ್ದು ಅಳ್ಳಿಮಟ್ಟಿ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವಮಠ, ಸ್ಕೌಟ್ಸ್ ಮತ್ತು ಗೈಡ್ಸ್ನ ಸ್ವಪ್ನ ಅನಿಗೋಳ, ಶಿವಲಿಂಗಪ್ಪ ಜುಟ್ನಟ್ಟಿ, ಸದಾಶಿವ ಕವಟಗಿ, ಸುರೇಶ ಬಾಡಗಿ, ತನುಜಾ ಬಾಡಗಿ, ಜತ್ತಿ ಫೌಂಡೇಷನ್ ಗೋಪಾಲ ಕರೆಪ್ಪನ್ನವರ, ವಿಜಯ ಬಿರಾದಾರ, ಶಶಿಕಾಂತ ಖಂಡ್ರೆ, ಸುರೇಶ ಸೇರಿದಂತೆ ಹಲವರು ಇದ್ದರು.