Advertisement

ಪ್ಲಾಸ್ಟಿಕ್‌ ಮುಕ್ತ ಆದೇಶ; ಸುತ್ತೋಲೆಗಷ್ಟೇ ಸೀಮಿತ

12:22 AM Jul 14, 2019 | Sriram |

ವಿಶೇಷ ವರದಿ-ಸುರತ್ಕಲ್‌: ಸ್ಮಾರ್ಟ್‌ ಸಿಟಿಯಾಗುತ್ತಿರುವ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಸರದ ಮೇಲೆ ದುಷ್ಪರಿಣಾಮ ಬೀರಿ ಮಾರಕವಾಗುತ್ತಿರುವ ಪ್ಲಾಸ್ಟಿಕ್‌ನಿಂದ ಮುಕ್ತ ಮಾಡಬೇಕು ಎನ್ನುವ ಜಿಲ್ಲಾಡಳಿತದ ಆದೇಶ ಸುತ್ತೋಲೆಗಷ್ಟೇ ಸಿಮೀತವಾಗಿರುವಂತೆ ಕಾಣುತ್ತಿದೆ.


Advertisement

ಈಗಲೂ ಮಾರುಕಟ್ಟೆ ಸಹಿತ ವ್ಯಾಪಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮುಂದುವರಿದಿದೆ. ಸಾರ್ವಜನಿಕರ ಕೈಯ್ಯಲ್ಲಿ ಪ್ಲಾಸ್ಟಿಕ್‌ ಚೀಲವಿದ್ದರೆ 200 ರೂ.ದಂಡ ಹಾಕಲು ಪಾಲಿಕೆ ಸೂಚಿಸಿದ್ದರೂ ಮಾರಾಟ ನಿಲ್ಲಿಸಲು ಸಾಧ್ಯವಾಗಿಲ್ಲ.
ಸುರತ್ಕಲ್‌, ಕೃಷ್ಣಾಪುರ ಸಹಿತ ಬೃಹತ್‌ ಕಾಲುವೆ ನಂದಿನಿ ನದಿಗೆ ಸೇರುವ ಪಡ್ರೆಯಲ್ಲಿ ಕಳೆದ ವಾರದಲ್ಲಿ ಟನ್‌ ಗಟ್ಟಲೆ ಪ್ಲಾಸ್ಟಿಕ್‌ ಕೈ ಚೀಲದಿಂದ ಹಿಡಿದು ಬಾಟಲಿ, ಪ್ಲಾಸ್ಟಿಕ್‌ನ ಫಾಸ್ಟ್‌ ಫ‌ುಡ್‌ ಪ್ಯಾಕೆಟ್‌ಗಳು ಸಹಿತ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. ಸಂತೆ, ಬೃಹತ್‌ ಬಜಾರ್‌, ಹೋಲ್‌ ಸೇಲ್‌ ಕೇಂದ್ರಗಳ ಅಂಗಡಿಗಳಲ್ಲಿ ಎಗ್ಗಿಲ್ಲದೆ ಬಳಕೆಯಾಗುತ್ತಿದೆ. ಜತೆಗೆ ಕಾಲುವೆ, ಚರಂಡಿಗಳನ್ನು ಬ್ಲಾಕ್‌ ಮಾಡುವಷ್ಟು ಕಂಟಕವಾಗಿದೆ. ಇದು ನೇರವಾಗಿ ನಂದಿನಿ ನದಿ, ಇಲ್ಲವೆ ಫ‌ಲ್ಗುಣಿ ನದಿಯ ಒಡಲು ಸೇರುತ್ತಿದೆ.

ಸಂತೆ ವ್ಯಾಪಾರ ಕೇಂದ್ರವೊಂದರಲ್ಲೇ ಸಾವಿರ ಗಟ್ಟಲೆ ಕೆ.ಜಿ. ಪ್ಲಾಸ್ಟಿಕ್‌ ಬಳಸಿ ನಿತ್ಯದ ಸಾಮಾನುಗಳನ್ನು ನೂರು, ಇನ್ನೂರು, ಅರ್ಧ, ಒಂದು ಕೆ.ಜಿ.ಗಳಂತೆ ಪ್ಯಾಕ್‌ ಮಾಡಿ ಮಾರಾಟ ಮಾಡಲಾಗುತ್ತಿದೆ. ನಿಷೇಧಿ ತ ಪ್ಲಾಸ್ಟಿಕ್‌ ಬಳಸಿಯೇ ರಾಜಾ ರೋಷವಾಗಿ ಸಾಮಾನು ಕಟ್ಟಿ ಕೊಡಲಾಗುತ್ತದೆ. ಬಜಾರ್‌ಗಳಲ್ಲಿಯೂ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಕೆ.ಜಿ. ಗಟ್ಟಲೆ ದಿನಸಿ ಸಾಮಾನು ಕಟ್ಟಿ ಸಿದ್ಧ ಪಡಿಸಿ ಇಡಲಾಗುತ್ತಿದೆ.

ಎಲ್ಲೆಲ್ಲಿ?
ಹೊಟೇಲ್‌, ಬೇಕರಿ, ಟೀ ಸ್ಟಾಲ್‌, ದಿನಸಿ ಅಂಗಡಿ, ಹಣ್ಣಿನ ಅಂಗಡಿ, ಬಾರ್‌, ಮಾಂಸದ ಅಂಗಡಿ, ತರಕಾರಿ ಅಂಗಡಿ, ಹೂವಿನ ಅಂಗಡಿ ಸಹಿತ ಎಲ್ಲೆಡೆ ಪ್ಲಾಸ್ಟಿಕ್‌ ಬಳಕೆಯಾಗುತ್ತಿವೆ. ಮಳೆ ಬಂದಾಗ ಚರಂಡಿಗಳಲ್ಲಿ ನೀರು ಹರಿಯದೇ ತಡೆಯೊಡ್ಡುವ ಪ್ಲಾಸ್ಟಿಕ್‌ ಮಲಿನಕ್ಕೆ ಕಾರಣವಾಗುತ್ತಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವೊಂದರಲ್ಲೇ ನಿತ್ಯ ಸುಮಾರು ಐದು ಟನ್‌ಗಳಷ್ಟು ತ್ಯಾಜ್ಯ ಸಂಗ್ರಹವಾದರೆ, ಇದರಲ್ಲಿ ಸುಮಾರು ಒಂದು ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವಿರುತ್ತದೆ. ರಾತ್ರಿಯಾಗುತ್ತಿದ್ದಂತೆ ಅಂಗಡಿಗಳ ಮುಂದೆ ಬಿದ್ದಿರುವ ಪ್ಲಾಸ್ಟಿಕ್‌ ಅನ್ನು ಗುಡ್ಡೆ ಹಾಕಿ ಸುಡುವ ಕಾರ್ಯ ನಡೆದರೆ, ಇನ್ನು ಕೆಲವು ಬೀದಿಗಳಲ್ಲಿ ತ್ಯಾಜ್ಯವಾಗಿ ಚರಂಡಿ ಸೇರುತ್ತಿದೆ.

ಆದೇಶಕ್ಕಷ್ಟೇ ಸಿಮೀತ
ರಾಜ್ಯ ಸರಕಾರ 2017ರ ಜನವರಿ 30ರಂದು ಗ್ರಾ.ಪಂ.ಗಳಲ್ಲಿ ಪ್ಲಾಸ್ಟಿಕ್‌ ಮಾರಾಟವನ್ನು ನಿಷೇ ಧಿಸಿ ಸುತ್ತೋಲೆ ಹೊರಡಿಸಿ ಎರಡು ವರ್ಷ ಕಳೆದರೂ ಕಡ್ಡಾಯವಾಗಿ ಅನುಷ್ಠಾನ ಮಾಡುವಲ್ಲಿ ಅ ಧಿಕಾರಿಗಳು ವಿಫಲವಾಗಿದ್ದಾರೆ. 40 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆ, ಮಾರಾಟ ಮಾಡುವಂತಿಲ್ಲ.

Advertisement

ಈ ಬಗ್ಗೆ ಕೋರ್ಟ್‌ ಮತ್ತು ಸರಕಾರ ಆದೇಶ ಕೇವಲ ಕಡತಗಳಿಗಷ್ಟೇ ಸೀಮಿತವಾಗಿದೆ. ಈಗಲೂ ಚೇಳಾçರು, ಸೂರಿಂಜೆ, ಜೋಕಟ್ಟೆ ಸಹಿತ ಗ್ರಾಮಗಳಲ್ಲಿ ಸಾಕಷ್ಟು ಪ್ಲಾಸ್ಟಿಕ್‌ ಕೈಚೀಲಗಳು ಬಳಕೆಯಾಗುತ್ತಿವೆ.

ಕಾಯಿಲೆಗೂ ಕಾರಣ
ಭಾರತದ ಸಂವಿಧಾನ ಕಲಂ 48ಎ ಅನ್ವಯ ಇದೀಗ ದೈನಂದಿನ ಬಳಕೆಯಲ್ಲಿರುವ ಪ್ಲಾಸ್ಟಿಕ್‌ ವಸ್ತುಗಳು, ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳು, ಪ್ಲಾಸ್ಟಿಕ್‌ ಭಿತ್ತಿಪತ್ರಗಳು, ಪ್ಲಾಸ್ಟಿಕ್‌ ತೋರಣ, ಫ್ಲೆಕ್ಸ್‌, ಬಾವುಟ, ಪ್ಲಾಸ್ಟಿಕ್‌ ತಟ್ಟೆ, ಪ್ಲಾಸ್ಟಿಕ್‌ ಲೋಟ, ಪ್ಲಾಸ್ಟಿಕ್‌ ಚಮಚಗಳು, ಕ್ಲಿಂಗ್‌ ಫಿಲ್ಮ್ಸ್ ಮತ್ತು ಊಟದ ವೇಳೆ ಹರಡುವ ಪ್ಲಾಸ್ಟಿಕ್‌ ಹಾಳೆಗಳು, ಥರ್ಮೋಕೋಲ್‌ನಿಂದ ತಯಾರಾದ ವಸ್ತುಗಳ ಬಳಕೆ ನಿಷಿದ್ಧ. ಆದರೆ ಫ್ಲೆಕ್ಸ್‌ ಸಹಿತ ಪುನರ್‌ಬಳಕೆಗೆ ಸಾಧ್ಯವಾಗದ ಪ್ಲಾಸ್ಟಿಕ್‌ ಬಳಕೆಯಾಗುತ್ತಲೇ ಇದೆ. ಪ್ಲಾಸ್ಟಿಕ್‌ ಹಲವು ಬಗೆಯ ಕಾಯಿಲೆಗೂ ಕಾರಣವಾಗುತ್ತಿದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ.

 ಪರಿಶೀಲಿಸಿ ಕ್ರಮ
ನಿಷೇಧಿ ತ ಪ್ಲಾಸ್ಟಿಕ್‌ ಮಾರಾಟವನ್ನು ಅಕ್ಟೋಬರ್‌ ಒಳಗೆ ಸಂಪೂರ್ಣವಾಗಿ ನಿಲ್ಲಿಸಲು ರಾಜ್ಯ ಸರಕಾರ ಸೂಚಿಸಿದೆ. ಹಸಿರು ಪೀಠದ ನಿರ್ದೇಶನವಿದೆ. ಹೀಗಾಗಿ ಎಲ್ಲೆಡೆ ಮಾರಾಟ ಕೇಂದ್ರಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ದಂಡ ವಿ ಧಿಸುತ್ತಿದ್ದೇವೆ. ಮನೆ, ಅಪಾರ್ಟ್‌ಮೆಂಟ್‌ಗೆ ತೆರಳಿ ಆರೋಗ್ಯಾ ಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
 - ಡಾ| ಮಂಜಯ್ಯ ಶೆಟ್ಟಿ,
ಆರೋಗ್ಯಾ ಧಿಕಾರಿ ಮನಪಾ

 ನಿಷೇಧಿತ ಕ್ಯಾರಿ ಬ್ಯಾಗ್‌ ಉತ್ಪಾದಿಸುತ್ತಿಲ್ಲ
ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ನಿಷೇ ಧಿತ ಕ್ಯಾರಿ ಬ್ಯಾಗ್‌ ಉತ್ಪಾದನೆ ಆಗುತ್ತಿಲ್ಲ. ಸ್ವಚ್ಛ ಪರಿಸರಕ್ಕೆ ಸಹಕರಿಸಲು ಪ್ಲಾಸ್ಟಿಕ್‌ ಉತ್ಪಾದಕರ ಸಂಘ ಸದಾ ಸಿದ್ಧ. ಆದರೆ ಮುಂಬಯಿ ಮತ್ತಿತರ ಕಡೆಗಳಿಂದ ಬರುವ ಪ್ಲಾಸ್ಟಿಕ್‌ ಮೇಲೆ ನಿಗಾ ಇಲ್ಲದಿರುವ ಕಾರಣ ಬಳಕೆಯ ಅಂಕಿ ಅಂಶ ಸಿಗುವುದೂ ಕಷ್ಟಸಾಧ್ಯ. ಪುನರ್‌ ಬಳಕೆ ಆಗುವ ಪ್ಲಾಸ್ಟಿಕ್‌ಗಳನ್ನು ವ್ಯವಸ್ಥಿತವಾಗಿ ತಂದು ಕೊಟ್ಟಲ್ಲಿ ಬೈಕಂಪಾಡಿಯಲ್ಲಿರುವ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಸರಕಾರವು ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಏಕಾ ಏಕಿ ದಂಡ ಹಾಕುವುದು ಸರಿಯಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಜನರೂ ಪ್ಲಾಸ್ಟಿಕ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು.
– ನಝೀರ್‌, ಅಧ್ಯಕ್ಷರು, ಪ್ಲಾಸ್ಟಿಕ್‌ ಉತ್ಪನ್ನಗಳ ಉತ್ಪಾದಕರ ಸಂಘ, ಬೈಕಂಪಾಡಿ

Advertisement

Udayavani is now on Telegram. Click here to join our channel and stay updated with the latest news.

Next