Advertisement

ಕಾರವಾರ: ಕೋಣೆನಾಲಾದ ಕೊಚ್ಚೆಗೆ ಸಿಗಲಿದೆ ಮುಕ್ತಿ

03:37 PM Jan 08, 2023 | Team Udayavani |

ಕಾರವಾರ: ನ್ಯಾಶನಲ್‌ ಗ್ರೀನ್‌ ಟ್ರಿಬ್ಯೂನಲ್‌ ಸೂಚನೆಯಂತೆ ಇಲ್ಲಿನ ನಗರಸಭೆ ಕೋಣೆನಾಲಾದ ಕೊಳಚೆ ನೀರು ಅರಬ್ಬಿ ಸಮುದ್ರ ಸೇರದಂತೆ ನೋಡಿಕೊಳ್ಳಲು ಕ್ರಮಕ್ಕೆ ಮುಂದಾಗಿದ್ದು, ಕಾರವಾರ ನಗರ ಪ್ರವೇಶಿಸುತ್ತಿದ್ದಂತೆ ಮೂಗಿಗೆ ರಾಚುತ್ತಿದ್ದ ದುರ್ವಾಸನೆಗೆ ಕಡಿವಾಣ ಹಾಕಲು ಯೋಜನೆ ರೂಪಿಸಿ ಕಾರ್ಯೋನ್ಮುಖವಾಗಿದೆ.

Advertisement

ಕೋಣೆನಾಲಾ ಕೊಳಚೆ ನೀರು ಹರಿವ ನಗರದ ಮುಖ್ಯ ಕಾಲುವೆಯಾಗಿದ್ದು, ಅದು ಲಂಡನ್‌ ಬ್ರಿಜ್‌ ಬಳಿ ದೊಡ್ಡ ಕಾಲುವೆ ಮೂಲಕ ನೇರ ಅರಬ್ಬಿ ಸಮುದ್ರ ಸೇರುತ್ತಿತ್ತು. ಇದರಿಂದಾಗಿ ಸಮುದ್ರದ ಜಲಚರಗಳ ಮೇಲೆ ದುಷ್ಪರಿಣಾಮದ ಸಾಧ್ಯತೆಗಳಿವೆ ಎಂದು ಕಡಲಜೀವಿ ವಿಜ್ಞಾನಿಗಳು ಆತಂಕ
ವ್ಯಕ್ತಪಡಿಸಿದ್ದರು. ಹೀಗಾಗಿ ಈ ನೀರನ್ನು ಶುದ್ಧಗೊಳಿಸಿ ಗಾರ್ಡನ್‌ಗಳಲ್ಲಿರುವ ಗಿಡ ಮರಗಳಿಗೆ ಉಣಿಸಲು ಮುಂದಾಗಲಾಗಿದೆ.

ಈಗಾಗಲೇ 27.5 ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ಘಟಕ ನಿರ್ಮಾಣವಾಗಿದೆ. ಅಲ್ಲದೆ ಕೊಳಚೆ ನೀರನ್ನು ಪಂಪ್‌ ಮಾಡಲು ವಿದ್ಯುತ್‌ ಪಂಪ್‌ ಮತ್ತು ಎಲೆಕ್ಟ್ರಿಕಲ್‌ ವರ್ಕ್‌ಗೆ 5 ಲಕ್ಷ ರೂ. ಮೀಸಲಿಟ್ಟಿದ್ದು, ಇನ್ನು ಕೆಲ ದಿನಗಳಲ್ಲಿ ಈ ಸಂಬಂಧದ ಕಾರ್ಯಗಳು ಪ್ರಾರಂಭವಾಗಲಿದೆ. ತ್ಯಾಜ್ಯ ನೀರನ್ನು ಕೊಣೆನಾಲಾದಿಂದ ಎತ್ತಿ ಕೃತಕ ಪಾಂಡ್‌ಗೆ ವರ್ಗಾಯಿಸುವ ಅಧಿಕ ಶಕ್ತಿಯ ಪಂಪ್‌ ಸಹ ತರಿಸಲಾಗಿದೆ.

ಕೊಳಚೆ ನೀರನ್ನು ಶುದ್ಧೀಕರಿಸಿದ ನಂತರ ಅದನ್ನು ಪುನಃ ಸಮುದ್ರಕ್ಕೆ ಬಿಡದೆ ನಗರಸಭೆ ನಿರ್ವಹಿಸುತ್ತಿರುವ ಬೀಚ್‌ ಗಾರ್ಡನ್‌ ಮತ್ತು ಹೆದ್ದಾರಿಗೆ ಹೊಂದಿಕೊಂಡಂತೆ ನೆಟ್ಟಿರುವ ಗಿಡಮರಗಳಿಗೆ ಶುದ್ಧೀಕರಿಸಿದ ನೀರನ್ನು ಬಳಸಲು ಪೈಪ್‌ಲೈನ್‌ ಸಹ ಹಾಕಲಾಗುತ್ತಿದೆ. ಒಟ್ಟು 32.5 ಲಕ್ಷ ರೂ. ವೆಚ್ಚದಲ್ಲಿ ಕೊಣೆನಾಲಾದ ಕೊಳಚೆ ನೀರಿನ ಸದ್ಬಳಕೆಗೆ ನಗರಸಭೆ ಸಕಲ ಸಿದ್ಧತೆಗಳನ್ನು ವೈಜ್ಞಾನಿಕವಾಗಿ ಮಾಡಿಕೊಂಡಿದೆ. ಅಲ್ಲದೇ ಕೋಣೆನಾಲಾದ ನೀರನ್ನು ಶುದ್ಧೀಕರಿಸುವ ಮೊದಲ ಹಂತವಾಗಿ ಕೆಯುಐಡಿಎಫ್‌ಸಿ ನಿರ್ಮಿಸಿದ ಕಟ್ಟಡದ ಬಳಿ ಕೊಳಚೆ ನೀರನ್ನು ಕೀಟಾಣು ಮುಕ್ತ ನೀರನ್ನಾಗಿ ಮಾಡಲು ಜಪಾನ್‌ ತಂತ್ರಜ್ಞಾನದ ವಾಟರ್‌ ರೀಸೈಕಲಿಂಗ್‌ ಘಟಕ ಪ್ರತ್ಯೇಕವಾಗಿ ಪ್ರಾಯೋಗಿಕ ಕಾರ್ಯದಲ್ಲಿ ನಿರತವಾಗಿದೆ. ನಗರಸಭೆ ಯೋಜನೆ ಅಂದುಕೊಂಡಂತೆ ಯಶಸ್ವಿಯಾದರೆ ನ್ಯಾಶನಲ್‌ ಗ್ರೀನ್‌ ಟ್ರಿಬ್ಯೂನಲ್‌ ಪ್ರಶಂಸೆಗೆ ಪಾತ್ರವಾಗಲು ಇನ್ನೊಂದೇ ಹೆಜ್ಜೆ ಬಾಕಿಯಿದೆ.

ದಶಕಗಳ ಸಮಸ್ಯೆ
ಕಳೆದ ಅನೇಕ ವರ್ಷಗಳಿಂದ ಕೊಳಚೆ ನೀರು ಸಮುದ್ರ ಸೇರುತ್ತಿರುವ ವಿಷಯ ಹಸಿರು ನ್ಯಾಯಪೀಠ ಹಾಗೂ ನ್ಯಾಶನಲ್‌ ಗ್ರೀನ್‌ ಟ್ರಿಬ್ಯೂನಲ್‌ ತನಕ ತಲುಪಿದ್ದವು. ಕಾರವಾರ ಕೊಳಚೆ ನಗರ ಎಂಬ ಕುಖ್ಯಾತಿಗೆ ಎನ್‌ಜಿಟಿ ದಂಡ ಸಹ ವಿಧಿ ಸಿತ್ತು. ಕಸ ಸಂಗ್ರಹಣೆ ಮತ್ತು ಸುಸಜ್ಜಿತ ನಿರ್ವಹಣೆಗೆ ಶಿರವಾಡದಲ್ಲಿ ಘನತ್ಯಾಜ್ಯ ಘಟಕ ಹೊಂದಿದ್ದರೂ ಸಹ ಕೋಣೆನಾಲಾ ನಗರಸಭೆಗೆ ದೊಡ್ಡ ಶಾಪವಾಗಿ ಪರಿಣಮಿಸಿತ್ತು.

Advertisement

ಕೈಗೂಡದ ಹಲವು ಪ್ರಯತ್ನ
ತ್ಯಾಜ್ಯ ನೀರು ಭೂಮಿಯನ್ನು ಸೇರದಂತೆ ಕೋಣೆನಾಲಾ ಕಾಲುವೆಗೆ 18 ವರ್ಷಗಳ ಹಿಂದೆ ಟೈಲ್ಸ್‌ ಅಳವಡಿಸಲಾಗಿತ್ತು. ತ್ಯಾಜ್ಯ ನೀರಿನಿಂದ ಸಂಗ್ರಹವಾಗುವ ಹೂಳನ್ನು ಗೊಬ್ಬರವಾಗಿ ಪರಿವರ್ತಿಸುವ ಕಾರ್ಯ ಸಹ ಒಂದು ವರ್ಷ ಜಾರಿಯಲ್ಲಿತ್ತು. ಆದರೆ ಈ ಯೋಜನೆಯಲ್ಲಿ ನಿರ್ಣಾಯಕ ಫಲಿತಾಂಶ ಬರಲಿಲ್ಲ. ಹೀಗಾಗಿ ಕೋಣೆನಾಲಾ ಕೊಳಚೆ ನೀರು ಸಮಸ್ಯೆ ಹಾಗೇ ಉಳಿದುಕೊಂಡಿತ್ತು. 18 ವರ್ಷಗಳ ನಂತರ ಕೋಣೆನಾಲಾ ಕೊಳಚೆ ಕಾಲುವೆಯ ಪುನರ್‌ ನಿರ್ಮಾಣ ಹಾಗೂ ಅದಕ್ಕೆ ಸ್ಲ್ಯಾಬ್‌ ಹಾಕುವುದು ಸೇರಿದಂತೆ ಕೊಳಚೆ ನೀರು ಶುದ್ಧಿಗೆ ಹಲವು ಪ್ರಸಿದ್ಧ ಕಂಪನಿಗಳಿಂದ ಮಾರ್ಗದರ್ಶನವನ್ನು ಸಹ ನಗರಸಭೆ ಪಡೆದಕೊಂಡಿತ್ತು. ಯೋಜನೆಗೆ 100 ಕೋಟಿ ಖರ್ಚಾದರೂ ಅಡ್ಡಿಯಿಲ್ಲ ಮುಖ್ಯಮಂತ್ರಿ ಬಳಿ ನಿಯೋಗ ಹೋಗಿ ಹಣ ತರಬೇಕು ಎಂಬ ಚರ್ಚೆಗಳು ನಡೆದಿದ್ದವು. ಆದರೆ ಕೊರೊನಾ ಸಾಂಕ್ರಾಮಿಕದ ಎರಡು ವರ್ಷದಲ್ಲಿ ಈ ಸಮಸ್ಯೆ ಹಾಗೆ ಉಳಿದು ಹೋಯಿತು. ಇದೀಗ ಕೋಣೆನಾಲಾ ನಿರ್ವಹಣೆ ವಿಷಯ ಮುನ್ನೆಲೆಗೆ ಬಂದಿದೆ. ಕೊಣೆನಾಲಾದ ಕೊಳಚೆ ನೀರು ಸಮುದ್ರಕ್ಕೆ ಸೇರದಂತೆ ನೋಡಿಕೊಳ್ಳಿ ಎಂದು ಪರಿಸರ ಸಂಬಂಧ ನ್ಯಾಯಾಲಯಗಳು ಸೂಚಿಸುವ ಹಂತಕ್ಕೆ ಸಮಸ್ಯೆ ಬೃಹದಾಕಾರವಾಗಿ ಬೆಳೆದಿತ್ತು. ಇದನ್ನು ಮನಗಂಡ ನಗರಸಭೆ ಸಮುದ್ರಕ್ಕೆ ಕೊಳಚೆ ನೀರು ಸೇರುವ ಜಾಗದಲ್ಲಿ ಪ್ಲಾಂಟ್‌ ಹಾಕಲು ಮುಂದಾಗಿ, ಶುದ್ಧೀಕರಿಸಿದ ನೀರನ್ನು ಕಡಲತೀರದ ಗಾರ್ಡನ್‌ ಗಿಡಗಳಿಗೆ ಬಳಸಲು ಯೋಜನೆ ರೂಪಿಸಿದೆ. ಯೋಜನೆ ಇನ್ನೇನು ಒಂದು ತಿಂಗಳೊಳಗೆ ಅನುಷ್ಠಾನವೂ ಆಗಲಿದೆ. ಇದು ಯಶಸ್ವಿಯಾದಲ್ಲಿ ನಗರಸಭೆಯ ಮುಡಿಗೆ ಕಿರೀಟವೊಂದು ಪ್ರಾಪ್ತವಾಗಲಿದೆ.

ಕೋಣೆನಾಲಾದ ಕೊಳಚೆ ನೀರು ಶುದ್ದೀಕರಿಸಲು ಲಂಡನ್‌ ಬ್ರಿಜ್‌ ಸಮೀಪ, ಕಡಲತೀರದಲ್ಲಿ ಪಾಂಡ್‌ ನಿರ್ಮಿಸಲಾಗಿದೆ. ಕೊಳಚೆ ನೀರನ್ನು ಶುದ್ಧೀಕರಿಸಿ ನಗರಸಭೆಯ ಗಾರ್ಡನ್‌, ಬೀಚ್‌ ಗಾರ್ಡನ್‌ಗೆ ಬಳಸಲು ಪೈಪ್‌ಲೈನ್‌ ಹಾಕಲಾಗುತ್ತಿದೆ. ಎಲೆಕ್ಟ್ರಿಕಲ್‌ ಕೆಲಸ ಬಾಕಿ ಇದೆ. ಇದಕ್ಕೆ ಸಂಬಂಧಿಸಿದ ಸಾಮಗ್ರಿ ಸಹ ಬಂದಿವೆ. ಯೋಜನೆ ನಾವು ಅಂದುಕೊಂಡ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಸಮಸ್ಯೆಗೆ ಪರಿಹಾರ ಸಿಕ್ಕಂತೆ. ಈ ಯೋಜನೆ ಯಶಸ್ಸು ಕಾಣುವ ಆಶಾವಾದ ನಮ್ಮದು.-ಆರ್‌.ಪಿ. ನಾಯ್ಕ ಪೌರಾಯುಕ್ತರು, ನಗರಸಭೆ, ಕಾರವಾರ

ದುರ್ವಾಸನೆಯ ಶಿಕ್ಷೆ
ನಗರದ ಮಾಲಾದೇವಿ ಕ್ರೀಡಾಂಗಣದ ಪಕ್ಕದಿಂದ ಹಿಡಿದು ನಗರದ ಲಂಡನ್‌ ಬ್ರಿಜ್‌ ವರೆಗಿನ ಮುಖ್ಯ ಕಾಲುವೆ ಕೊಳಚೆ ನೀರಿನಿಂದ ದುರ್ವಾಸನೆ ಮತ್ತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಕೊಳಚೆ ನೀರು ಹರಿವ ಮುಖ್ಯ ಕಾಲುವೆ ಮಾರ್ಗದಲ್ಲಿ ಕ್ರೀಡಾಂಗಣ, ಗುರುಭವನ, ಶಾಲಾ ಕಾಲೇಜು, ಅನೇಕ ಕಚೇರಿ, ಆಯುರ್ವೇದ ಆಸ್ಪತ್ರೆಗಳಿವೆ. ನಗರದ ಮುಖ್ಯ ಹೋಟೆಲ್‌, ಲಾಡ್ಜ್ ಗಳು, ಜನವಸತಿ ಪ್ರದೇಶ, ಬ್ಯಾಂಕ್‌ಗಳು ಸಹ ಇವೆ. ಈ ಕೊಳಚೆ ನೀರಿನ ವಾಸನೆಯನ್ನು ಈ ಎಲ್ಲ ಸರ್ಕಾರಿ ಕಚೇರಿ ಸಿಬ್ಬಂದಿ ಅನುಭವಿಸುವಂತಾಗಿದೆ. ಕೋಣೆನಾಲಾದ ಹೂಳನ್ನು ಪ್ರತಿವರ್ಷ ತೆಗೆಯಲು ಹಾಗೂ ನೀರಿಗೆ ಔಷಧಿ ಸಿಂಪಡಿಸಲು ನಗರಸಭೆ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಆದರೆ ಕೆಲ ದಶಕಗಳಿಂದ ಸಮಸ್ಯೆ ಮಾತ್ರ ಹಾಗೇ ಉಳಿದಿದೆ.

ವರದಿ -ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next