Advertisement

ಪ್ಲಾಸ್ಟಿಕ್‌ ತ್ಯಾಜ್ಯ ಮರುಬಳಕೆಗೆ ಪಾಲಿಕೆ ಹೆಜ್ಜೆ

09:57 AM May 23, 2022 | Team Udayavani |

ಹುಬ್ಬಳ್ಳಿ: ಮಹಾನಗರದಲ್ಲಿ ಹೇರಳವಾಗಿ ಸಂಗ್ರಹವಾಗುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಪೂರ್ಣವಾಗಿ ಮರುಬಳಕೆ ಮಾಡುವುದು, ಅದರ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಸಿದ್ಧಪಡಿಸುವ ಚಿಂತನೆಗೆ ಪಾಲಿಕೆ ಮುಂದಾಗಿದೆ.

Advertisement

ಒಮ್ಮೆ ಬಳಸುವ ಪ್ಲಾಸ್ಟಿಕ್‌ ವಸ್ತುಗಳ ಮರುಬಳಕೆಯಲ್ಲಿ ತೊಡಗಿರುವ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದು, ಅಂದುಕೊಂಡಂತೆ ಒಪ್ಪಂದವಾದರೆ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಗೃಹೋಪಯೋಗಿ ವಸ್ತುಗಳ ಘಟಕ ಸ್ಥಾಪನೆಯಾಗಲಿದೆ.

ಈಗಾಗಲೇ ಮಹಾನಗರ ಪಾಲಿಕೆ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಗೆ ಸ್ಪಷ್ಟ ರೂಪ ನೀಡಿದೆ. ಹಸಿತ್ಯಾಜ್ಯದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ ಯಶಸ್ವಿಯಾಗಿ ನಡೆದಿದೆ. ಆದರೆ ಒಣ ತ್ಯಾಜ್ಯದಿಂದ ಸಿಮೆಂಟ್‌ ಕಾರ್ಖಾನೆಗಳಿಗೆ ಬೇಕಾದ ಪರ್ಯಾಯ ಇಂಧನ ತಯಾರಿಕೆ ಇನ್ನೂ ಕೈಗೊಂಡಿಲ್ಲ.

ಸದ್ಯಕ್ಕೆ ಒಣ ತ್ಯಾಜ್ಯದಲ್ಲಿ ದೊರೆಯುವ ಮೌಲ್ಯಯುತ ತಾಜ್ಯವನ್ನು ವಿಂಗಡಿಸಿ ಮಾರಾಟ ಮಾಡುವ ಕೆಲಸ ನಡೆಯುತ್ತಿದೆ. ಇದೀಗ ಸಂಗ್ರಹವಾಗುತ್ತಿರುವ ತ್ಯಾಜ್ಯದಲ್ಲಿ ಶೇ.60 ಒಣತ್ಯಾಜ್ಯ ದೊರೆಯುತ್ತಿದೆ. ನಿತ್ಯ ಎಷ್ಟು ಪ್ರಮಾಣದಲ್ಲಿ ಯಾವ ವಸ್ತು ದೊರೆಯುತ್ತದೆ ಎನ್ನುವ ಅಧ್ಯಯನ ಕೂಡ ನಡೆಯುತ್ತಿದೆ. ಆದರೆ ಹೇರಳವಾಗಿ ದೊರೆಯುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯ ಮರುಬಳಕೆ ಅದರಲ್ಲೂ ಒಮ್ಮೆ ಬಳಸುವ ಪ್ಲಾಸ್ಟಿಕ್‌ ಬ್ಯಾಗ್‌ ಸೇರಿದಂತೆ ಇತರೆ ವಸ್ತುಗಳನ್ನು ಪುನಃ ಬಳಸುವುದು ಸವಾಲಾಗಿದ್ದು, ಇಂತಹ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಗೃಹೋಪಯೋಗಿ ವಸ್ತುಗಳ ತಯಾರಿಕೆ ಚಿಂತನೆಗಳು ನಡೆದಿವೆ.

Advertisement

ಮೈಸೂರಿನಲ್ಲಿ ಯಶಸ್ಸಿನ ಹೆಜ್ಜೆ:

ಈಗಾಗಲೇ ಮೈಸೂರು ಮಹಾನಗರ ಪಾಲಿಕೆ ಪ್ಲಾಸ್ಟಿಕ್‌ ತ್ಯಾಜ್ಯ ಸದ್ಬಳಕೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಜಾಗೃತ ಟೆಕ್‌ ಪ್ರೈವೇಟ್‌ ಲಿ. ಎನ್ನುವ ಕಂಪನಿ ಪಾಲಿಕೆ ಸಂಗ್ರಹಿಸುವ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕಚೇರಿ ಖುರ್ಚಿ, ಟೇಬಲ್‌, ಕಸದ ತೊಟ್ಟಿ, ಪೇವರ್, ಟೈಲ್ಸ್‌, ಉದ್ಯಾನದಲ್ಲಿನ ಆಸನ, ಹೀಗೆ ಹಲವು ವಸ್ತುಗಳ ತಯಾರಿಕೆಯಲ್ಲಿ ತೊಡಗಿದೆ. ಅಲ್ಲಿನ ಪಾಲಿಕೆ ಉಚಿತವಾಗಿ ಸ್ಥಳ, ಪ್ಲಾಸ್ಟಿಕ್‌ ತ್ಯಾಜ್ಯ ಪೂರೈಸುತ್ತಿದೆ. ಅಗತ್ಯ ಯಂತ್ರಗಳನ್ನು ಸಂಸ್ಥೆ ಅಳವಡಿಸಿಕೊಂಡಿದೆ. ಆದಾಯದಲ್ಲಿ ಕಂಪನಿ ಹಾಗೂ ಪಾಲಿಕೆ ಹಂಚಿಕೆ ಮಾಡಿಕೊಳ್ಳುತ್ತಿದೆ. ಪ್ರಸ್ತುತ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಹಾಗೂ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿ ಕಾರ್ಯವೈಖರಿ ವೀಕ್ಷಿಸಿದೆ. ಜಾಗೃತ ಕಂಪನಿ ಪ್ರಮುಖರು ನಗರಕ್ಕೆ ಆಗಮಿಸಿ ಇಲ್ಲಿನ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಪರಿಶೀಲಿಸಿದ್ದಾರೆ. ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿದ್ದು, ಒಂದು ಹಂತದ ಮಾತುಕತೆ ಮುಗಿದಿದೆ.

ಜಾಗೃತ ಕಂಪನಿಯ ಕಾರ್ಯವೈಖರಿ ಖುದ್ದಾಗಿ ಪರಿಶೀಲಿಸಿದ್ದೇವೆ. ಅವರು ಕೂಡ ಆಗಮಿಸಿ ನಮ್ಮ ಪಾಲಿಕೆ ಘನತಾಜ್ಯ ನಿರ್ವಹಣಾ ವ್ಯವಸ್ಥೆ ಪರಿಶೀಲಿಸಿದ್ದಾರೆ. ಪ್ಲಾಸ್ಟಿಕ್‌ನಿಂದ ಅವರು ಉತ್ಪಾದಿಸಿರುವ ವಸ್ತುಗಳು ಉತ್ತಮವಾಗಿವೆ. ಈಗಾಗಲೇ ಒಂದು ಹಂತದ ಮಾತುಕತೆ ಮಾಡಿದ್ದೇವೆ. ಯಂತ್ರ ಹಾಗೂ ಜಾಗ ಕೊಟ್ಟರೆ ಅದನ್ನು ನಿರ್ವಹಣೆ ಮಾಡುತ್ತೇವೆ. ಇದರಿಂದ ಬರುವ ಆದಾಯವನ್ನು ಪಾಲಿಕೆಯೊಂದಿಗೆ ಹಂಚಿಕೆ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 5 ಹಾಗೂ 10 ಟನ್‌ ಪ್ಲಾಸ್ಟಿಕ್‌ ನಿರ್ವಹಣೆ ಮಾಡುವ ಘಟಕದ ಕುರಿತ ಎರಡು ಪ್ರತ್ಯೇಕ ಪ್ರಸ್ತಾವನೆ ನೀಡುವಂತೆ ತಿಳಿಸಿದ್ದೇವೆ. ಘಟಕ ಆರಂಭವಾದರೆ ನಿರಂತರವಾಗಿ ನಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. –ಡಾ| ಬಿ.ಗೋಪಾಲಕೃಷ್ಣ, ಆಯುಕ್ತರು, ಮಹಾನಗರ ಪಾಲಿಕೆ

ಸದ್ಬಳಕೆಯಾಗುತ್ತಿಲ್ಲ ಒಣತ್ಯಾಜ್ಯ

ಮಹಾನಗರದಲ್ಲಿ ನಿತ್ಯ 220 ಟನ್‌ ಒಣತ್ಯಾಜ್ಯ ದೊರೆಯುತ್ತಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಸುಮಾರು 30 ಟನ್‌ ಹೆಚ್ಚುವರಿ ಒಣತ್ಯಾಜ್ಯ ದೊರೆಯಲಿದೆ. ಹಸಿ ತಾಜ್ಯವನ್ನು ಕಾಂಪೋಸ್ಟ್‌ ಗೊಬ್ಬರ ತಯಾರಿಕೆಗೆ ಬಳಸಲಾಗುತ್ತಿದ್ದು, ಗೊಬ್ಬರ ಜನರಿಗೆ ಕೂಡ ದೊರೆಯುತ್ತಿದೆ. ಆದರೆ ಒಣತಾಜ್ಯ ಸದ್ಬಳಕೆಯಾಗುತ್ತಿಲ್ಲ. ಎನ್‌ಟಿಪಿಸಿಗೆ ಒಣತಾಜ್ಯ ನೀಡಿ ಪರ್ಯಾಯ ಇಂಧನ ತಯಾರಿಸುವ ಯೋಜನೆಯಿದೆ. ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಪ್ರಕಾರ ನಿತ್ಯ 200 ಟನ್‌ ಒಣತ್ಯಾಜ್ಯ ನೀಡುವುದಾಗಿದೆ. ಆದರೆ ಸದ್ಯಕ್ಕೆ ಎನ್‌ಟಿಪಿಸಿ ಘಟನೆ ಆರಂಭವಾಗುವ ಲಕ್ಷಣಗಳಿಲ್ಲ. ಹೀಗಾಗಿ ಒಣತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ.2023ರ ವೇಳೆಗೆ ಎನ್‌ಟಿಪಿಸಿ ಆರಂಭವಾಗುವ ಲಕ್ಷಣಗಳಿವೆ ಎನ್ನಲಾಗುತ್ತಿದ್ದರೂ ಘಟಕ ಸ್ಥಾಪನೆಯಾಗಿ ಕಾರ್ಯಾರಂಭ ಮಾಡಲು ಇನ್ನೆಷ್ಟು ವರ್ಷಗಳು ಬೇಕು ಎನ್ನುವ ಮಾತುಗಳು ಕೂಡ ಇವೆ. ಹೀಗಾಗಿ ಅಲ್ಲಿಯವರೆಗೆ ಹಾಗೂ ಮುಂದಿನ ದಿನಗಳಿಗೂ ಪ್ಲಾಸ್ಟಿಕ್‌ ಮರುಬಳಕೆ ಉಪಕ್ರಮ ಅಗತ್ಯವಾಗಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯಕ್ಕೆ 220 ಟನ್‌ಗೂ ಹೆಚ್ಚಿನ ಒಣತ್ಯಾಜ್ಯ ದೊರೆಯುತ್ತಿದೆ. ಅಲ್ಲದೆ ಈಗಾಗಲೇ ಕಸದ ಮಡ್ಡಿಯಲ್ಲಿ ಸಂಗ್ರಹವಾಗಿರುವ ಲಕ್ಷಾಂತರ ಟನ್‌ ತ್ಯಾಜ್ಯದಲ್ಲಿ ಒಂದಿಷ್ಟು ಪ್ಲಾಸ್ಟಿಕ್‌ ದೊರೆಯಲಿದೆ. ನಿತ್ಯ ಕನಿಷ್ಟ 40-50 ಟನ್‌ ಪ್ಲಾಸ್ಟಿಕ್‌ ತಾಜ್ಯ ದೊರೆಯಲಿದೆ. ಹೀಗಾಗಿ ಜಾಗೃತ ಕಂಪನಿ ಆರಂಭಿಸುವ ಘಟಕ ದೀರ್ಘಾವಧಿಗೆ ಮುಂದುವರಿಯಲಿದೆ ಎನ್ನುವ ಲೆಕ್ಕಾಚಾರ ಪಾಲಿಕೆ ಅಧಿಕಾರಿಗಳಲ್ಲಿದೆ.

ಕರಾರುಗಳೇನು? ಬೇಡಿಕೆಗಳೇನು?

ಈಗಾಗಲೇ ಮೊದಲ ಹಂತದ ಮಾತುಕತೆ ಪ್ರಕಾರ 5 ಅಥವಾ 10 ಟನ್‌ ಸಾಮರ್ಥ್ಯದ ಘಟಕ ಅಗತ್ಯ ಎನ್ನುವುದು ಪಾಲಿಕೆ ನಿರೀಕ್ಷೆಯಾಗಿದೆ. ಪ್ಲಾಸ್ಟಿಕ್‌ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುದರಿಂದ ಈ ಘಟಕ ಸೂಕ್ತ ಎನ್ನುವ ಅಭಿಪ್ರಾಯವಿದೆ. ಹೀಗಾಗಿ ಎರಡನೇ ಹಂತದ ಮಾತುಕತೆಗೆ ಪಾಲಿಕೆ ಮುಂದಾಗಿದೆ. ಘಟಕ ಆರಂಭಿಸಲು ಪಾಲಿಕೆ ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕು. ಉತ್ಪನ್ನಗಳ ಪೈಕಿ ಪೇವರ್ ಸೇರಿದಂತೆ ಕೆಲವನ್ನು ಬಳಸಲು ಪಾಲಿಕೆ ಮೊದಲ ಆದ್ಯತೆ ನೀಡಬೇಕು ಎನ್ನುವ ಒಂದಿಷ್ಟು ಬೇಡಿಕೆಗಳನ್ನಿಟ್ಟಿದ್ದಾರೆ. ಇದರಿಂದ ಬರುವ ಆದಾಯದಲ್ಲಿ ಪಾಲಿಕೆಗೆ ಒಂದಿಷ್ಟು ದೊರೆಯಲಿದೆ. ಪರಿಸರಕ್ಕೆ ಮಾರಕವಾಗಿರುವ ವಸ್ತು ಮರುಬಳಕೆಯಾಗುವ ಮೂಲಕ ಪಾಲಿಕೆಗೂ ಒಂದಿಷ್ಟು ಆದಾಯದ ಮೂಲವಾಗಲಿದೆ. ಅಂದುಕೊಂಡಂತೆ ನಡೆದರೆ ಮಹಾನಗರದ ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಒಂದಿಷ್ಟು ಮುಕ್ತಿ ದೊರೆತಂತಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next