Advertisement

ಪೈಪ್‌ ಕಾಂಪೋಸ್ಟ್‌’ಮನೆಯೊಳಗಿನ ತ್ಯಾಜ್ಯ; ಹಿತ್ತಲಿನಲ್ಲಿ ಹಸುರಿನ ಹೊನ್ನು

09:59 AM Jan 06, 2020 | mahesh |

ಅಡುಗೆ ಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆಯನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ಲಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು, ಈರುಳ್ಳಿ ಸಿಪ್ಪೆ ಇದೊಂದನ್ನೂ ತುಂಬಿಸಬಾರದು.

Advertisement

ಮನೆಯಲ್ಲಿನ ತ್ಯಾಜ್ಯಗಳನ್ನು ತಿಪ್ಪೆಗೆ ಎಸೆದರೆ ದುರ್ವಾಸನೆ ಬೀರುತ್ತವೆ. ರೋಗಕಾರಕ ಅಣುಗಳ ಸೃಷ್ಟಿಗೆ ಕಾರಣವಾಗುತ್ತವೆ. ಆದರೆ ಇದೇ ತ್ಯಾಜ್ಯವನ್ನು ಗೊಬ್ಬರವಾಗಿಸಿದರೆ ಹಿತ್ತಲಿನಲ್ಲಿ ಹಸುರಿನ ಹೊನ್ನು ಬೆಳೆಯಬಹುದು. ಇದಕ್ಕೆ ಪ್ರತ್ಯಕ್ಷ ನಿದರ್ಶನವೆಂದರೆ ಗುರುವಾಯನಕೆರೆಯ ರಾಜಗೋಪಾಲ ಭಟ್ಟರು.

ಕೆಲವು ವರ್ಷಗಳ ಹಿಂದೆಯೇ ಅವರು ಕಸವನ್ನು ರಸವಾಗಿಸುವ ವಿದ್ಯೆಯಲ್ಲಿ ಪರಿಣತರು. ಏನಿದು ಈ ವಿದ್ಯೆಯೆಂದು ತಿಳಿಯಬೇಕಾದರೆ, ಅವರ ಮನೆಯಂಗಳದ ಸುತ್ತಲೂ ಇರುವ ವೈವಿಧ್ಯಮಯ ಗಿಡಗಳ ಸಾಲಿನಲ್ಲೊಮ್ಮೆ ಸುತ್ತಬೇಕು. ಕಣ್ಣಿಗೆ ರಾಚುವ ಹಚ್ಚ ಹಸುರಿನ ನಡುವೆ ನೆಲದಲ್ಲಿ ಅಲ್ಲಲ್ಲಿ ಹೂಳಿದ ಪೈಪುಗಳು ಗಮನ ಸೆಳೆಯುತ್ತವೆ. ಈ ಪೈಪುಗಳಲ್ಲಿದೆ ರಾಜಗೋಪಾಲ ಭಟ್ಟರು ತ್ಯಾಜ್ಯವನ್ನು ಹಸುರ ಸಿರಿಯ ಚಿನ್ನವಾಗಿಸುವ ಗುಟ್ಟು.

ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಪೈಪ್‌ ಕಾಂಪೋಸ್ಟ್‌ ಮೂಲಕ ಗೊಬ್ಬರ ಪಡೆದವರು. ಅದು ಪೈಪು ಕಾಂಪೋಸ್ಟ್‌. ವರ್ಷಗಳ ಹಿಂದೆಯೇ ಗ್ರಾಮ ಪಂಚಾಯತ್‌ಗಳಿಗೆ ಇದರ ಪ್ರಯೋಜನದ ಬಗೆಗೆ ಜನರ ಗಮನ ಸೆಳೆಯುವಂತೆ ಆದೇಶಗಳು ಬಂದಿದ್ದರೂ ಅಳವಡಿಸಿದ ಅಧಿಕಾರಿ ವರ್ಗ ಅಪರೂಪ. ಆದರೆ ಭಟ್ಟರು ಅದನ್ನು ಅಳವಡಿಸಿಕೊಂಡು ಮಾದರಿಯಾಗಿದ್ದಾರೆ. ನಿರ್ವಹಣೆಯನ್ನೂ ಅವರು ಉತ್ತಮವಾಗಿ ಮಾಡುತ್ತಾರೆ. ಪೇಟೆ-ಪಟ್ಟಣಗಳಲ್ಲಿರುವವರು ಕೂಡ ಪೈಪ್‌ ಕಾಂಪೋಸ್ಟಿನ ಲಾಭ ಹೊಂದಬಹುದೆಂದು ಹೇಳುತ್ತಾರೆ.

ಅಳವಡಿಕೆ ಹೇಗೆ?
ನಾಲ್ಕು ಮಿಲಿ ಲೀಟರ್‌ ದಪ್ಪವಿರುವ ಉತ್ತಮ ಗುಣಮಟ್ಟದ ಬಲವಾದ ಪಿವಿಸಿ ಪೈಪು ಆಯ್ದುಕೊಳ್ಳಬೇಕು. ಹತ್ತು ಇಂಚು ಅಗಲವಾದ ಬಾಯಿ ಇದ್ದರೆ ಉತ್ತಮ. ಒಂದೂವರೆ ಮೀಟರ್‌ ಉದ್ದದ ಪೈಪಿನ ಕಾಲುಭಾಗವನ್ನು ಮಣ್ಣಿನ ಗುಂಡಿ ತೋಡಿ ಹೂಳಬೇಕು. ಗ್ರಾನೈಟ್‌ ತುಂಡು ಮತ್ತು ಮರಳು ಬಳಸಿ ಬುಡವನ್ನು ಗಟ್ಟಿ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಒಳಗೆ ಎರೆಹುಳಗಳಿದ್ದರೆ ಬುಡದಲ್ಲಿ ಇಲಿಗಳು ಕೊರೆದು ಹಾನಿ ಮಾಡುತ್ತವೆ. ಅಡುಗೆ ಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆ ಇದನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ನಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು, ಈರುಳ್ಳಿ ಸಿಪ್ಪೆ ಇದೊಂದನ್ನೂ ತುಂಬಿಸಬಾರದು. ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಜೀವಾಣುಗಳಿಗೆ ಇದೆಲ್ಲವೂ ಹಾನಿ ಮಾಡುತ್ತವೆಯಂತೆ. ನೀರಿನಂಶ ಶೇ. 50ಕ್ಕಿಂತ ಹೆಚ್ಚಿದ್ದರೂ ಗೊಬ್ಬರ ಚೆನ್ನಾಗಿರುವುದಿಲ್ಲ. ಪೈಪು ಭರ್ತಿಯಾದ ಬಳಿಕ ಲಭ್ಯವಿದ್ದರೆ ಎರೆಹುಳುಗಳ ಮರಿಗಳನ್ನು ಒಳಗೆ ಬಿಡಬಹುದು. ಬಳಿಕ ಮುಚ್ಚಳ ಹಾಕಬೇಕು. ಆದರೆ ಭದ್ರವಾಗಿ ಮುಚ್ಚಳ ಹಾಕಬಾರದು. ಒಳಗೆ ಗಾಳಿಯಾಡಲು ಅವಕಾಶ ಬೇಕು. ಇದರಿಂದ ತುಂಬಿದ ತ್ಯಾಜ್ಯವನ್ನು ನಾವು ಕಲಸುವ ಪ್ರಕ್ರಿಯೆ ಅಗತ್ಯ ಬೀಳುವುದಿಲ್ಲ. ಗಾಳಿಯೇ ಆ ಕ್ರಿಯೆಯನ್ನು ನಡೆಸಿ ಮೂರು ತಿಂಗಳಲ್ಲಿ ಹದನಾದ ಗೊಬ್ಬರವಾಗಿ ಮಾರ್ಪಡಿಸುತ್ತದೆಂಬುದು ಭಟ್ಟರು ಹೇಳುವ ವಿವರಣೆ.

Advertisement

ಸೆಗಣಿ ಹಾಕಬೇಕು
ಲಭ್ಯವಿದ್ದರೆ ವಾರಕ್ಕೊಮ್ಮೆ ಸೆಗಣಿಯನ್ನು ಕರಗಿಸಿ ಪೈಪಿನೊಳಗೆ ಹಾಕಬಹುದು. ಇನ್ನು ಇದರೊಳಗಿನಿಂದ ದುರ್ವಾಸನೆ ಬರತೊಡಗಿದರೆ ಒಳಗೆ ಕೊಳೆಯುವ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿಲ್ಲ ಎಂದರ್ಥವಂತೆ. ಚಳಿಗಾಲದಲ್ಲಿ ಗೊಬ್ಬರವಾಗಲು ಸ್ವಲ್ಪ ಹೆಚ್ಚು ಅವಧಿ ಬೇಕು. ಬೇಸಗೆಯಲ್ಲಿ ಬೇಗನೆ ಆಗುತ್ತದೆ. ಹಲಸಿನಂತಹ ಮರಗಳು ಪೈಪಿನ ಬಳಿ ಇದ್ದರೆ ಅದರ ಬೇರುಗಳು ಒಳಗೆ ಪ್ರವೇಶಿಸಿ ಗೊಬ್ಬರವನ್ನು ಮೊದಲೇ ತಿಂದುಬಿಡುತ್ತವೆ. ಹೀಗಾಗಿ ಎಚ್ಚರಿಕೆಯಿಂದ ಸ್ಥಳದ ಆಯ್ಕೆ ಮಾಡಬೇಕು.

ಹುಡಿ ಗೊಬ್ಬರ ಲಭ್ಯ
ಒಂದು ಪೈಪಿನಲ್ಲಿ ಒಂದು ಅಡಿ ವ್ಯಾಸದಷ್ಟು ಹುಡಿ ಗೊಬ್ಬರ ಸಿಗುತ್ತದೆ. ಭಟ್ಟರು ರಾಸಾಯನಿಕ ಬಳಸದೆ ಇದೇ ಗೊಬ್ಬರ ಮಾತ್ರ ಬಳಸಿ ತೊಂಡೆ, ಬೆಂಡೆ, ಬಸಳೆಯಂತಹ ತರಕಾರಿಗಳು, ಬಾಳೆ, ವಿಧವಿಧದ ಹೂಗಿಡಗಳನ್ನು ಬೆಳೆಯಬಹುದೆಂಬುದನ್ನು ಸುಂದರವಾದ ತಮ್ಮ ಹಿತ್ತಿಲಿನ ಗಿಡಗಳ ಸಾಕ್ಷ್ಯದ ಮೂಲಕ ತೋರಿಸುತ್ತಾರೆ. ಒಂದು ಸ್ಥಾವರಕ್ಕೆ ಸುಮಾರು ಎರಡು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೂ ಅದರಿಂದ ಪರಿಸರವೂ ಸ್ವತ್ಛವಾಗುತ್ತದೆ. ಕೃಷಿಗೂ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರ ಭಟ್ಟರದು. ಎಲ್ಲರ ಮನೆಯ ಹಿತ್ತಿಲಲ್ಲೂ ಇದರ ಅಳವಡಿಕೆ ಬಲು ಸುಲಭ ಎನ್ನುತ್ತಾರವರು.

ನಾಲ್ಕು ಮಿಲಿ ಲೀಟರ್‌ ದಪ್ಪವಿರುವ ಉತ್ತಮ ಗುಣಮಟ್ಟದ ಬಲವಾದ ಪಿವಿಸಿ ಪೈಪು ಆಯ್ದುಕೊಳ್ಳಬೇಕು. ಹತ್ತು ಇಂಚು ಅಗಲವಾದ ಬಾಯಿ ಇದ್ದರೆ ಉತ್ತಮ. ಒಂದೂವರೆ ಮೀಟರ್‌ ಉದ್ದದ ಪೈಪಿನ ಕಾಲುಭಾಗವನ್ನು ಮಣ್ಣಿನ ಗುಂಡಿ ತೋಡಿ ಹೂಳಬೇಕು. ಗ್ರಾನೈಟ್‌ ತುಂಡು ಮತ್ತು ಮರಳು ಬಳಸಿ ಬುಡವನ್ನು ಗಟ್ಟಿ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಒಳಗೆ ಎರೆಹುಳಗಳಿದ್ದರೆ ಬುಡದಲ್ಲಿ ಇಲಿಗಳು ಕೊರೆದು ಹಾನಿ ಮಾಡುತ್ತವೆ.

– ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next