Advertisement

ಫೋನ್‌ ಕದ್ದಾಲಿಕೆ: ಸಿಬಿಐ ತನಿಖೆಗೆ ವಿರೋಧ

10:08 AM Aug 21, 2019 | Team Udayavani |

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ನಡೆಯಿತೆನ್ನಲಾದ ಟೆಲಿಫೋನ್‌ ಕದ್ದಾಲಿಕೆ ಪ್ರಕರಣವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಿಬಿಐ ತನಿಖೆಗೆ ಒಪ್ಪಿಸಿದ ಬೆನ್ನಲ್ಲೇ ಕಾಂಗ್ರೆಸ್‌, ಜೆಡಿಎಸ್‌ ಪಾಳಯದಲ್ಲಿ ಪ್ರತಿರೋಧದ ಕೂಗು ಕೇಳಿ ಬಂದಿದೆ. “ಪ್ರಕರಣವನ್ನು ಬೇಕೆಂದೇ ದೊಡ್ಡದು ಮಾಡಲಾಗುತ್ತಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರೆ, “ಸಿಬಿಐ ತನಿಖೆ ಅಗತ್ಯವಿರಲಿಲ್ಲ, ರಾಜ್ಯದ ಎಸ್‌ಐಟಿ, ಸಿಐಡಿ, ನ್ಯಾಯಾಂಗ ಸಮಿತಿಯಿಂದಲೇ ತನಿಖೆ ಮಾಡಿಸಬಹುದಿತ್ತು.’ ಎಂದು ಕಾಂಗ್ರೆಸ್‌ ನಾಯಕರು ಪ್ರತಿಕ್ರಿಯಿಸಿದ್ದಾರೆ.

Advertisement

ಆಪರೇಶನ್‌ ಕಮಲ ಸಿಬಿಐ ತನಿಖೆಗೆ ಕೊಡ್ತಾರಾ?
ಹುಬ್ಬಳ್ಳಿ: ಫೋನ್‌ ಕದ್ದಾಲಿಕೆ ಪ್ರಕರಣವನ್ನು ತಮ್ಮ ಸಲಹೆ ಮೇರೆಗೆ ಸಿಬಿಐಗೆ ನೀಡಿದ್ದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಹಾಗಿದ್ದರೆ “ಆಪರೇಶನ್‌ ಕಮಲ’ದಲ್ಲಿ ನೂರಾರು ಕೋಟಿ ರೂ.ವಹಿವಾಟು ನಡೆದಿದ್ದು, ಇದನ್ನು ಸಿಬಿಐಗೆ ಕೊಡಿ ಎಂದು ಒತ್ತಾಯಿಸುತ್ತೇನೆ, ಕೊಡುತ್ತಾರಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಫೋನ್‌ ಕದ್ದಾಲಿಕೆ ಪ್ರಕರಣ ವನ್ನು ನನ್ನ ಸಲಹೆಯಿಂದಲ್ಲ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಸೂಚನೆಯಂತೆ ಸಿಬಿಐ ತನಿಖೆಗೆ ನೀಡಿದ್ದಾರೆ. ನನ್ನಿಂದ ಸಲಹೆಯನ್ನೇ ಕೇಳದೆ, ಸಿದ್ದರಾಮಯ್ಯನವರ ಸಲಹೆಯಂತೆ ತನಿಖೆಗೆ ಆದೇಶಿಸಿದ್ದೇನೆಂದು ಸಿಎಂ ಸುಳ್ಳು ಹೇಳಿದ್ದಾರೆ ಎಂದರು.

ಸಿಬಿಐ ಮೇಲೆ ವ್ಯಾಮೋಹ: ಸಿಬಿಐ ಎಂದರೆ ಚೋರ್‌ ಬಚಾವೋ ಸಂಸ್ಥೆ ಎಂದು ಈ ಹಿಂದೆ ಬಿಜೆಪಿ ನಾಯಕರೇ ಹೇಳುತ್ತಿದ್ದರು. ಇದೀಗ ಅದೇ ಸಿಬಿಐ ಮೇಲೆ ಸಾಕಷ್ಟು ವ್ಯಾಮೋಹ ಬಂದು ಬಿಟ್ಟಿದೆ. ಫೋನ್‌ ಕದ್ದಾಲಿಕೆ ಪ್ರಕರಣವನ್ನು ರಾಜ್ಯದ ಎಸ್‌ಐಟಿ, ಸಿಐಡಿ, ನ್ಯಾಯಾಂಗ ಸಮಿತಿಯಿಂದ ತನಿಖೆ ಮಾಡಿಸಬಹುದಿತ್ತು. ಆದರೆ ಯಡಿಯೂರಪ್ಪನವರು ಸಿಬಿಐ ಸಂಸ್ಥೆ ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ. ಸಿಬಿಐ ಸಂಸ್ಥೆಯಿಂದ ಪ್ರಾಮಾಣಿಕ ತನಿಖೆಯಾಗಲ್ಲ ಎಂದರು.

ಸಿಬಿಐಗೆ ವಹಿಸಿರುವುದು ಸೂಕ್ತವಲ್ಲ
ವಿಜಯಪುರ: ಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಕೊಡುವಂತಹ ಅವಶ್ಯಕತೆ ಇರಲಿಲ್ಲ. ಸಿಎಂ ಯಡಿಯೂರಪ್ಪ ಅವರ ನಿರ್ಧಾರ ಸೂಕ್ತವಲ್ಲ ಎಂದು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ನಾವೇನೂ ಕೇಳಿರಲಿಲ್ಲ. ನಮ್ಮ ಪೊಲೀಸ್‌ ಇಲಾಖೆಯಲ್ಲೇ ಸಿಬಿಐ ಕೂಡ ತನಿಖೆ ಮಾಡಲಾಗದ ಪ್ರಕರಣ ಭೇದಿಸಿರುವ ದಕ್ಷ ಅಧಿಕಾರಿಗಳಿದ್ದಾರೆ. ಸಿಬಿಐ ಸಂಸ್ಥೆಯಿಂದ ತನಿಖೆ ಆಗದ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣ ಬೇಧಿ ಸಿದ್ದೇ ಕರ್ನಾಟಕ ಪೊಲೀಸ್‌ ಎಂಬುದನ್ನು ಮರೆಯಬಾರದು. ರಾಜ್ಯದ ಗೃಹ ಸಚಿವನಾಗಿ ಕೆಲಸ ಮಾಡಿರುವ ನನಗೆ ರಾಜ್ಯದ ಪೊಲೀಸರಲ್ಲಿನ ದಕ್ಷತೆ ಕುರಿತು ಹೆಮ್ಮೆ ಇದೆ. ಇತರೆ ವ್ಯವಸ್ಥೆಯಲ್ಲಿ ಇರುವಂತೆ ಕೆಲ ಪೊಲೀಸರಲ್ಲಿ ಲೋಪ ಇರಬಹುದು, ಹಾಗಂತ ಇಡೀ ಇಲಾಖೆ ಮೇಲೆ ನಂಬಿಕೆ ಇರಿಸದಿದ್ದರೆ ಹೇಗೆ ಎಂದರು.

ಡಿಕೆಶಿ ಮನೆಯಲ್ಲೇ ಫೋನ್‌ ಕದ್ದಾಲಿಕೆ
ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಮನೆಯಲ್ಲಿಯೇ ಒಂದು ಡಿವೈಸ್‌ ಇಟ್ಟುಕೊಂಡು ಎಲ್ಲರ ಫೋನ್‌ ಟ್ಯಾಪಿಂಗ್‌ ಮಾಡುತ್ತಾರೆಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಆರೋಪಿಸಿದ್ದಾರೆ. ಅನರ್ಹ ಶಾಸಕರ ಗುಂಪಿನ ನಾಯಕ ರಮೇಶ್‌ ಜಾರಕಿಹೊಳಿ ಅವರನ್ನು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅವರೊಂದಿಗೆ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿ, ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. 2 ವರ್ಷಗಳಿಂದ ನನ್ನ ದೂರವಾಣಿ ಕದ್ದಾಲಿಕೆ ಮಾಡಲಾ ಗು ತ್ತಿತ್ತು. ಡಿ.ಕೆ. ಶಿವಕುಮಾರ್‌ ಅವರು ಲಕ್ಷಾಂತರ ರೂ.ಕೊಟ್ಟು ತಮ್ಮ ಮನೆಯ ಲ್ಲಿಯೇ ಫೋನ್‌ ಟ್ಯಾಪಿಂಗ್‌ ಮಷಿನ್‌ ಇಟ್ಟುಕೊಂಡಿದ್ದಾರೆ. ಆ ಮೂಲಕ ಎಲ್ಲರ ಕಾಲ್‌ ರೆಕಾರ್ಡ್‌ ಮಾಡುತ್ತಾರೆ ಎಂದು ಹೇಳಿದರು. ಇದೊಂದು ಗಂಭೀರ ಪ್ರಕರಣ. ಬೆಂಗಳೂರು ಪೊಲೀಸ್‌ ಆಯು ಕ್ತರಿಗೆ ದೂರು ನೀಡುತ್ತೇನೆ. ಸಿಬಿಐ ತನಿಖೆಯಿಂದ ಸಂಪೂರ್ಣ ಮಾಹಿತಿ ಹೊರಗೆ ಬರುತ್ತದೆ ಎಂದರು.

Advertisement

ಸಿಬಿಐ ತನಿಖೆಗೆ ಶೆಟ್ಟರ್‌ ಸ್ವಾಗತ
ಬೆಂಗಳೂರು: ಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಮುಖ್ಯಮಂತ್ರಿ ನಿರ್ಧಾರವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಸ್ವಾಗತಿಸಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಟೆಲಿಫೋನ್‌ ಕದ್ದಾಲಿಕೆ ಮಾಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿರುವುದನ್ನು ಸ್ವಾಗತಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ಅನರ್ಹಗೊಂಡ ಶಾಸಕ ಮುನಿರತ್ನ ಪ್ರತಿಕ್ರಿಯಿಸಿ, ಹಲವರ ಪೋನ್‌ ಕದ್ದಾಲಿಕೆಯಾಗಿದೆ. ಮೊದಲು ದಾಖಲೆ ಇರಲಿಲ್ಲ. ಈಗ ದಾಖಲೆ ಸಿಕ್ಕಿದೆ. ನನ್ನ ಫೋನ್‌ ಮಾತ್ರವಲ್ಲದೆ ಬಹಳಷ್ಟು ಮಂದಿಯ ಫೋನ್‌ ಕದ್ದಾಲಿಕೆಯಾಗಿದೆ ಎಂದರು.

ಟೆಲಿಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿತ್ತೆ? ರಾಜ್ಯದ ತನಿಖಾ ಸಂಸ್ಥೆ ಮೇಲೆ ಯಡಿಯೂರಪ್ಪ ಅವರಿಗೆ ನಂಬಿಕೆ ಇಲ್ಲವೇ? ಐಎಂಎ ಪ್ರಕರಣ ಹಾಗೂ ಗೌರಿ ಲಂಕೇಶ್‌ ಹತ್ಯೆ ಪ್ರಕರಣಗಳನ್ನು ಪತ್ತೆ ಮಾಡಿದ್ದು ನಮ್ಮ ಎಸ್‌ಐಟಿ ಅಲ್ಲವೇ? ಎಸ್‌ಐಟಿಗೇ ಪ್ರಕರಣವನ್ನು ವಹಿಸಬಹುದಿತ್ತು.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಟೆಲಿಫೋನ್‌ ಕದ್ದಾಲಿಕೆ ಆರೋಪದ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮಣಿಸಲು ಅಸಾಧ್ಯ. ಕುಮಾರಸ್ವಾಮಿ ಯಾವುದೇ ತಪ್ಪು ಮಾಡಿಲ್ಲ. ಸಿಬಿಐ ತನಿಖೆ ಮೂಲಕ ಬೆದರಿಸಲು ಬಂದರೆ ಹೆದರುವುದಿಲ್ಲ. ಇದು ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಹುನ್ನಾರ.
-ಅನಿತಾಕುಮಾರಸ್ವಾಮಿ, ಶಾಸಕಿ

ಪೋನ್‌ ಕರೆಗಳ ಕದ್ದಾಲಿಕೆ ಪ್ರಕರಣ ಬಗ್ಗೆ ಸಿಬಿಐ ತನಿಖೆ ಯಿಂದ ಸತ್ಯ ಬಯಲಾಗುತ್ತದೆ. ನಾನೊಬ್ಬ ಶಾಸಕನಾಗಿ ದ್ದರೂ ನನ್ನ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಆಡಳಿತ ನಡೆಸಲು ಜೆಡಿಎಸ್‌ ಮುಖಂಡರು ಬಿಡಲಿಲ್ಲ. ನನಗೆ ಉಸಿರು ಕಟ್ಟಿದ ವಾತಾವರಣ ನಿರ್ಮಾಣವಾಗಿತ್ತು.
-ನಾರಾಯಣಗೌಡ, ಅನರ್ಹ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next