ಕಚ್ಚಾ ಸಾಮಗ್ರಿಗಳು ಉತ್ತಮವಾಗಿದ್ದರೆ ಉತ್ಪನ್ನವೂ ಉತ್ತಮವಿರುತ್ತದೆ. ಸಂಘದ ಸ್ಥಾಪಕ ಡಾ| ಕೇಶವಬಲಿರಾಂ ಹೆಡಗೇವಾರ್ ಅವರು ದೇಶಕ್ಕಾಗಿ ಜೀವನವನ್ನು ಪೂರ್ಣ ಮುಡುಪಾಗಿಟ್ಟರು. ಅವರು ರಾಜಕೀಯ ಶಿಕ್ಷಣದಲ್ಲಿಯೂ (ಆಗ ಕಾಂಗ್ರೆಸ್ ಪ್ರಧಾನ ರಾಜಕೀಯ ಚಟುವಟಿಕೆಯ ಕೇಂದ್ರವಾಗಿದ್ದು ಅದರಲ್ಲಿ ಸಕ್ರಿಯರಾಗಿದ್ದರು) ಸಮಾಜ ಸುಧಾರಣೆಯಲ್ಲಿ ಮುಂಚೂಣಿಯಲ್ಲಿದ್ದರು. ಒಬ್ಬ ಉತ್ತಮ ವ್ಯಕ್ತಿ ನಿರ್ಮಾಣವಾಗಬೇಕಾದರೆ ಸಮಾಜದ ಗುಣಮಟ್ಟ ಅಗತ್ಯವಿದೆ.
ಗಾಂಧೀಜಿ, ತಿಲಕರು, ಸಾವರ್ಕರ್ ಎಲ್ಲರೊಂದಿಗೂ ಚರ್ಚಿಸಿದರು. ಆ ಬಳಿಕ ಆರ್ ಎಸ್ ಎಸ್ ಸ್ಥಾಪನೆಗೆ ಮುಂದಾದರು. ಆರ್ಎಸ್ಎಸ್ನ ಪರಮ ಕರ್ತವ್ಯವೇ ವ್ಯಕ್ತಿತ್ವಗಳನ್ನು ರೂಪಿಸುವುದು. ಅದೇ ಪರಮ ಗುರಿ. ನಾವೆಲ್ಲೂ ಬೋಧಿಸುವುದಿಲ್ಲ.
ಆದರೆ ನಮ್ಮ ಆಚರಣೆಯಿಂದಲೇ ವ್ಯಕ್ತಿಗಳು-ವ್ಯಕ್ತಿತ್ವಗಳು ನಿರ್ಮಾಣವಾಗುತ್ತವೆ. ಆ ಬಳಿಕ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುತ್ತಾರೆ. ಅದು ರಾಜಕೀಯ, ಕಲೆ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲೂ ಸ್ವಯಂ ಸೇವಕರಿದ್ದಾರೆ. ವ್ಯಕ್ತಿತ್ವವೆಂಬುದು ಮಾದರಿ ಎನ್ನುವ ಹಾಗೆ ನಿರ್ಮಾಣವಾದರೆ ಅಂಥ ವ್ಯಕ್ತಿಗಳಿಂದ ನಿರ್ಮಾಣವಾಗುವ ಸಮಾಜವೂ ಚೆನ್ನಾಗಿಯೇ ಇರಬಲ್ಲದು.
ಆರ್ಎಸ್ಎಸ್ ಯಾವುದೇ ಸರಕಾರದ ಅನುದಾನವಿಲ್ಲದೆ ಸಾವಿರಾರು ಸೇವಾ ಪ್ರಕಲ್ಪಗಳನ್ನು ನಡೆಸಿಕೊಂಡು ಬರುತ್ತಿದೆ. ಇತ್ತೀಚೆಗೆ ಕೊರೊನಾ ಕಾಲಘಟ್ಟದಲ್ಲಿ ಸಂಘದ ಕಾರ್ಯಕರ್ತರು ವಿವಿಧ ಸಂಘಟನೆಗಳ ಮೂಲಕ ಸೇವಾ ಕಾರ್ಯ ನಡೆಸಿದರು.
ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಮಾಜ ಅದನ್ನು ಮಾನ್ಯ ಮಾಡುತ್ತದೆ ಎಂಬುದಕ್ಕೆ ಇದೇ ಸ್ಪಷ್ಟ ಉದಾಹರಣೆ. ವಿದೇಶಗಳಲ್ಲೂ ಸಂಘದ ಸ್ವಯಂಸೇವಕರು ಹಿಂದೂ ಸ್ವಯಂಸೇವಕ ಸಂಘದ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವರು ದಾನಿಗಳು ಬಂದು ನಿಮಗೇನು ಬೇಕು ಹೇಳಿ ಕೊಡುತ್ತೇವೆ ಎನ್ನುತ್ತಾರೆ. ಆಗ ನಾವು ಏನನ್ನೂ ಕೇಳುವುದಿಲ್ಲ. ಬದಲಾಗಿ ನಮ್ಮ ಕಾರ್ಯಗಳನ್ನು ಪರಿಚಯಿಸುತ್ತೇವೆ. ಆ ಬಳಿಕ ಅವರೇ ನಿರ್ಧರಿಸುತ್ತಾರೆ.
– ಡಾ| ಮೋಹನ್ ಭಾಗವತ್ ಸರಸಂಘಚಾಲಕರು, ಆರೆಸ್ಸೆಸ್.