Advertisement

ಪೆರ್ಮುದೆ: ಗರಿಗಳ ರವಿವಾರ

08:33 PM Apr 14, 2019 | Team Udayavani |

ಕಾಸರಗೋಡು: ಪೆರ್ಮುದೆ ಸೈಂಟ್‌ ಲಾರೆನ್ಸ್‌ ದಿ ಮಾರ್ಟಿರ್‌ ಇಗರ್ಜಿಯಲ್ಲಿ ಗರಿಗಳ ಭಾನುವಾರ(ಪಾಮ್‌ ಸಂಡೇ) ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ವಾರಕ್ಕೆ ಚಾಲನೆಯಾಯಿತು.

Advertisement

ಗರಿಗಳ ಭಾನುವಾರದ ಅಂಗವಾಗಿ ದಿವ್ಯಬಲಿ ಪೂಜೆ ನಡೆಯಿತು. ಬೆಳಗ್ಗೆ ಗರಿಗಳ ಆಶೀರ್ವಚನ ನೆರವೇರಿಸಿದ ಬಳಿಕ ಜೆರುಸಲೇಮ್‌ಗೆ ವಿಜಯ ಪ್ರವೇಶಗೈದ ಯೇಸುವನ್ನು ಸ್ಮರಿಸಿ ಮೆರವಣಿಗೆಯ ಮೂಲಕ ಹೋಸಾನ್ನ ಸ್ತುತಿಯೊಂದಿಗೆ ಭಕ್ತರು ದೇವಾಲಯಕ್ಕೆ ಪ್ರವೇಶಿಸಿದರು. ದಿವ್ಯ ಬಲಿಪೂಜೆ ಸಂದರ್ಭ ಯೇಸುವಿನ ಅಂತ್ಯ ಕ್ಷಣದ ಯಾತನೆಯ ಕಥೆಯನ್ನು ಆಲಿಸಲಾಯಿತು.

ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್‌ ಫೆರ್ನಾಂಡಿಸ್‌ ದಿವ್ಯಬಲಿ ಪೂಜೆಯನ್ನು ನೆರವೇರಿಸಿ ವಿವಿಧ ವಿಧಿವಿಧಾನಗಳಿಗೆ ನೇತೃತ್ವ ನೀಡಿದರು.
ಇಗರ್ಜಿಯ ಪಾಲನ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್‌ ಡಿ’ಸೋಜ, ಕಾರ್ಯದರ್ಶಿ ಜೋನ್‌ ಓಡಂಗಲ್ಲು, ಗುರಿಕ್ಕಾರರಾದ ವಿನ್ಸೆಂಟ್‌ ಮೊಂತೆರೋ ಪೆರಿಯಡ್ಕ, ಜೋಸೆಫ್‌ ಕ್ರಾಸ್ತ ಪುಟ್ಟಮಾಣಿ, ಸಂತೋಷ್‌ ಮತ್ತಿತರರು ಉಪಸ್ಥಿತರಿದ್ದರು.

ಪಾಸ್ಖ ಹಬ್ಬದ ಹಿಂದಿನ ಭಾನುವಾರವನ್ನು ಪಾಮ್‌ ಸಂಡೇ ಎಂದು ಆಚರಿಸಲಾಗುತ್ತದೆ. ಯೇಸು ಶಿಲುಬೆಗೇರುವ ಮುನ್ನ ಶಿಷ್ಯರೊಂದಿಗೆ ಜೆರುಸಲೇಂ ಶಹರಕ್ಕೆ ಹೊರಟರು. ಓಲಿವ್‌ ಗುಡ್ಡದ ಬಳಿಯಿರುವ ಬೆತಗೆ ಮತ್ತು ಬೆಥಾಯಿನಿಗೆ ಬಂದಾಗ ಯೇಸು ತಮ್ಮ ಶಿಷ್ಯಂದಿರಲ್ಲಿ ಇಬ್ಬರನ್ನು ಕರೆದು ನಿಮ್ಮೆದುರಿಗಿರುವ ಆ ಹಳ್ಳಿಗೆ ಹೋಗಿರಿ. ಅಲ್ಲಿ ಕಟ್ಟಿ ಹಾಕಿರುವ ಹೇಸರಗತ್ತೆಯ ಮರಿಯನ್ನು ಬಿಚ್ಚಿ ತನ್ನಿ ಎಂದರು. ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದರು. ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಿದರು. ಯೇಸು ಅದನ್ನು ಹತ್ತಿ ಕುಳಿತರು.

ಅನೇಕರು ತಮ್ಮ ಹೊದಿಕೆಗಳನ್ನು ದಾರಿಯಲ್ಲಿ ಹಾಕಿದರು. ಇನ್ನೂ ಕೆಲವರು ತೋಟಗಳಿಂದ ಮರದ ರೆಂಬೆಗಳನ್ನು ಕಡಿದು ಹಾಕಿದರು.

Advertisement

ಯೇಸುವಿನ ಹಿಂದೆ ಹಾಗೂ ಮುಂದೆ ಇದ್ದವರು ಜಯವಾಗಲಿ. ಸರ್ವೇಶ್ವರನ ನಾಮದಲ್ಲಿ ಬರುವವರಿಗೆ ಮಂಗಳವಾಗಲಿ. ನಮ್ಮ ಪೂರ್ವಜ ದಾವೀದನ ಸಾಮ್ರಾಜ್ಯ ಉದಯವಾಗಲಿ. ಅದಕ್ಕೆ ಶುಭವಾಗಲಿ. ಮಹೋನ್ನತದಲ್ಲಿ ದೇವರಿಗೆ ಜಯವಾಗಲಿ ಎಂದು ಘೋಷಿಸಿದರು. ಯೇಸು ಕತ್ತೆಯ ಮೇಲೆ ಕುಳಿತು ಜೆರುಸಲೇಂಗೆ ಪ್ರವೇಶಿಸಿದಾಗ ಹೋಸನ್ನಾ ಸ್ತುತಿ ಹಾಡಿದ ಆ ಘಟನೆಯ ನೆನಪಿಗೆ ಪಾಮ್‌ ಸಂಡೆ ಆಚರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next