Advertisement

ಪೆಸ್ಸಿ ಕಂಪೆನಿಯ ಕೊಕ್‌ !

03:18 PM Jul 20, 2019 | Sriram |

ಹಳ್ಳಿಯಲ್ಲಿ ಬೆಳೆದ ಆಲೂಗಡ್ಡೆಯ ಮೇಲೆ ಅಮೆರಿಕ ಕಂಪನಿ ಹಕ್ಕು ಸ್ಥಾಪಿಸಲು ಹೊರಟಾಗ ಏನಾಯ್ತು ಗೊತ್ತಾ? ರೈತರ ತಲೆ ಮೇಲೆ ಬಿದ್ದ ಕೋಟಿ ರು. ದಂಡವನ್ನವರು ಕಟ್ಟಿದರಾ?

Advertisement

ಗುಜರಾತಿನ ಕೆಲವು ರೈತರು, ಹಲವಾರು ವರುಷಗಳಿಂದ ಆಲೂಗಡ್ಡೆ ಬೆಳೆಯುತ್ತಿದ್ದರು. ಈ ಬಾರಿ ಅವರಿಗೆ ಸಿಡಿಲೊಂದು ಕಾದಿತ್ತು. ಏಕೆಂದರೆ,ಅಮೆರಿಕಾದ ದೈತ್ಯ ಕಂಪೆನಿ ಪೆಪ್ಸಿಕೋ, 11 ರೈತರ ಮೇಲೆ 8 ಮೊಕದ್ದಮೆಗಳನ್ನು ಹೂಡಿತು. ತಮ್ಮ ಕಂಪನಿಯ ಬೌದಿಟಛಿಕ ಸ್ವತ್ತಾದ ಆಲೂಗಡ್ಡೆ ತಳಿಯನ್ನು ಕಾನೂನುಬಾಹಿರವಾಗಿ ಬೆಳೆಯುತ್ತಿದ್ದಾರೆ ಎಂಬುದು ಕಂಪನಿಯ ಆರೋಪವಾಗಿತ್ತು. ಇದಕ್ಕೆ ಪರಿಹಾರವಾಗಿ ಪ್ರತಿಯೊಬ್ಬ ರೈತನೂ 1.05 ಕೋಟಿ ರುಪಾಯಿ ಪಾವತಿಸಬೇಕೆಂಬುದು ಪೆಪ್ಸಿಕೋ ಕಂಪನಿಯ ಆಗ್ರಹ!

ಈ ಪ್ರಕರಣವನ್ನು ಇಡೀ ಜಗತ್ತೇ ನಿಬ್ಬೆರಗಾಗಿ ಗಮನಿಸಿತು. ಇದು ಪುಟಾಣಿ ಇರುವೆಯನ್ನು ದೈತ್ಯ ಆನೆ ಯುದ್ಧಕ್ಕೆ ಆಹ್ವಾನಿಸಿದಂತಿತ್ತು. 64 ಬಿಲಿಯನ್‌ ಡಾಲರ್‌ ವಾರ್ಷಿಕ ಆದಾಯ ಗಳಿಸುತ್ತಿರುವ ಪೆಪ್ಸಿಕೋ ಕಂಪೆನಿಗೆ,ಗುಜರಾತಿನ ಹಳ್ಳಿ ಮೂಲೆಯ ತುಂಡು ಜಮೀನಿನಲ್ಲಿ ಆಲೂಗಡ್ಡೆ ಬೆಳೆಯುವ ರೈತ ಯಾವ ರೀತಿಯಲ್ಲೂ ಸರಿಸಾಟಿಯಲ್ಲ.

ಆ ರೈತರು ಬೆಳೆಸುತ್ತಿದ್ದ “ಎಫ್ಎಲ್‌ 2027′ ಎಂಬ ಆಲೂಗಡ್ಡೆ ತಳಿ ತನ್ನ ಒಡೆತನದ್ದು. ಅದರ ಮೇಲೆ ತನ್ನ ಹಕ್ಕುಸ್ವಾಮ್ಯ ಇದೆ ಎಂಬುದು ಅದರ ವಾದ. ಭಾರತದ
ಕಾಯಿದೆಯ ಅನುಸಾರ 2016ರಲ್ಲಿ ತಾನು ದಾಖಲಿಸಿದ ಎರಡು ಆಲೂಗಡ್ಡೆ ತಳಿಗಳಲ್ಲಿ ಅದೂ ಒಂದು ಎಂದು ಕೋರ್ಟಿನಲ್ಲಿ ಪೆಪ್ಸಿಕೋ ಕಂಪೆನಿಯ ವಾದಿಸಿತು. ಆ
ಕಾಯಿದೆಯ ಪ್ರಕಾರ ಒಂದು ತಳಿಯನ್ನು ದಾಖಲಿಸಿದರೆ, ಅದರ ಉತ್ಪಾದನೆ, ಮಾರಾಟ, ವಿತರಣೆ, ಆಮದು ಮತ್ತು ರಫ್ತು – ಇವೆಲ್ಲದರ ಸಂಪೂರ್ಣ ಹಕ್ಕು ಆಯಾ ತಳಿಯ ತಳಿವರ್ಧಕನಿಗೆ ಸಿಗುತ್ತದೆ.

ಇದೆಂಥಾ ಕಾಯಿದೆ?
ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ, 2001 (ಪಿಪಿವಿ ಆಂಡ್‌ ಎಫ್ಆರ್‌ಎ).ಜಾಗತಿಕ ವಾಣಿಜ್ಯ ಸಂಘಟನೆಯ (ಡಬ್ಲ್ಯುಟಿಓ) ಬೇಡಿಕೆಯಂತೆ, ತಳಿವರ್ಧಕ (ವ್ಯಕ್ತಿ ಅಥವಾ ಸಂಸ್ಥೆ)ರ ಹಕ್ಕುಗಳ ರಕ್ಷಣೆಗಾಗಿ ಭಾರತ ಸರಕಾರ ಈ ಕಾಯಿದೆಯನ್ನು ಜಾರಿ ಮಾಡಿದೆ. ಇದರ ವಿಶೇಷತೆಯೆಂದರೆ ಜಗತ್ತಿನ ರೈತರ ಹಕ್ಕುಗಳ ರಕ್ಷಣೆಯ ವಿಧಿ ಒಳಗೊಂಡ ಏಕೈಕ ಕಾಯಿದೆ ಇದು.

Advertisement

ಮೊಕದ್ದಮೆ ಎದುರಿಸಿದ ರೈತರ ಮಾತು
ತಾವು ಆಲೂಗಡ್ಡೆ ಬೀಜ ಖರೀದಿಸಿದ್ದು ಸ್ಥಳೀಯ ಬೀಜದಂಗಡಿಯಿಂದ ಎನ್ನುತ್ತಾರೆ ರೈತರು. ಅವರಿಗೆ ಬೌದಿಟಛಿಕ ಸ್ವತ್ತಿನ ಹಕ್ಕು (ಐಪಿಆರ್‌) ಎಂದರೆ ಏನೆಂಬುದೇ ಗೊತ್ತಿಲ್ಲ. ನಮ್ಮ ದೇಶದಲ್ಲಿ ಯಾವನೇ ರೈತ, ಯಾವುದೇ ಬೆಳೆ ಬೆಳೆದು ಫ‌ಸಲು ಮಾರಾಟ ಮಾಡಬಹುದು ಎಂಬುದು ಆ ರೈತರ ನಂಬುಗೆ. ಈಗ ಆ ನಂಬುಗೆಯೇ ಅಲುಗಾಡಿದೆ. ಅಲ್ಲದೆ ಲಕ್ಷ ಸಂಪಾದಿಸಲು ತಿಣುಕಾಡುವ ಅವರ ತಲೆ ಮೇಲೆ ಕೋಟಿ ಪರಿಹಾರ ನೀಡಬೇಕಾಗಿ ಬಂದಿರುವುದರಿಂದ ಬೆಚ್ಚಿ ಬಿದ್ದಿದ್ದಾರೆ.

ಪೆಪ್ಸಿಕೋ ಕಂಪೆನಿ ಏನೆನ್ನುತ್ತಿದೆ?
ರೈತರಿಂದ ಪರಿಹಾರ ವಸೂಲಿ ಬೇಡಿಕೆ ಹಿಂತೆಗೆಯಬೇಕಾದರ ಆ ರೈತರು ತಮ್ಮ ಒಪ್ಪಂದ ಕೃಷಿ ಯೋಜನೆಗೆ ಸೇರಬೇಕು ಎನ್ನುತ್ತಿದೆ. ಇಲ್ಲವಾದರೆ,ತಾವಿನ್ನು ಮುಂದೆ “ಎಫ್ಎಲ್‌ 2027′ ಆಲೂಗಡ್ಡೆ ತಳಿಯನ್ನು ಬೆಳೆಯುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು ಎಂಬ ಶರತ್ತನ್ನು ವಿಧಿಸಿದೆ.ಅಮೆರಿಕಾದ ಪೆಪ್ಸಿಕೋ ಕಂಪೆನಿಯ ಭಾರತೀಯ ಉಪಕಂಪೆನಿಪೆಪ್ಸಿಕೋ ಇಂಡಿಯಾ ಹೋಲ್ಡಿಂಗ. ಇದು ರೈತರು ಮತ್ತು ಶೈತ್ಯಾಗಾರ ಮಾಲೀಕರ ಮೇಲೆ ಎಂಟು ಮೊಕದ್ದಮೆಗಳನ್ನು ಹೂಡಿದೆ.

‌ಆದರೆ ಕಾನೂನು ಪರಿಣತರ ಮತ್ತು ರೈತಪರ ಸಂಘಟನೆಗಳ ಅಭಿಪ್ರಾಯೆಂದರೆ, ಆ ಕಾಯಿದೆಯ ಸೆಕ್ಷನ್‌1) (4) ಅನುಸಾರ ರೈತರ ಹಕ್ಕುಗಳಿಗೆ ಸಂಪೂರ್ಣ ರಕ್ಷಣೆ ಲಭ್ಯ.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಬೀಜ ಮತ್ತು ತಳಿಗಳ ವಿಷಯದಲ್ಲಿ, ಈ ಕಾಯಿದೆ ಜಾರಿಗೆ ಬರುವ ಮುಂಚೆ ರೈತರ ಹಕ್ಕುಗಳು ಹೇಗಿತ್ತೋ ಹಾಗೆಯೇ ಇರುತ್ತದೆ. ಇದಕ್ಕೆ ಒಂದು ನಿರ್ಬಂಧ ಏನೆಂದರೆ, ಈ ಕಾಯಿದೆಯ ಅನುಸಾರ ರಕ್ಷಿಸಲಾದ ಯಾವುದೇ ತಳಿಯ ಬ್ರಾಂಡೆಡ್‌ ಬೀಜಗಳನ್ನು ಮಾರುವ ಹಕ್ಕು ರೈತರಿಗಿಲ್ಲ.

ಕಂಪನಿಗಳದ್ದೇ ಪಾರಮ್ಯ
ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ ಪ್ರಾಧಿಕಾರ, ರೈತರು ಅಭಿವೃದ್ದಿಪಡಿಸಿದ ಮತ್ತು ದೇಸಿ ತಳಿಗಳ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಆತಂಕಕ್ಕೆ ಕಾರಣ. ಉದಾಹರಣೆಗೆ, ಪ್ರಾಧಿಕಾರವು ಆಲೂಗಡ್ಡೆಯ 25 ತಳಿಗಳನ್ನು ಆ ಕಾಯಿದೆ ಅನುಸಾರ ನೋಂದಾಯಿಸಿದೆ. ಅವುಗಳಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಆರ್‌ ) 15 ತಳಿಗಳಿದ್ದು, ಉಳಿದ 10 ತಳಿಗಳು ಖಾಸಗಿ ಸಂಸ್ಥೆಗಳದ್ದು.

ಆ ಕಾಯಿದೆ ಜಾರಿಯಾಗಿ 20 ವರ್ಷಗಳು ದಾಟುತ್ತಿದ್ದರೂ, ರೈತರು ಅಭಿವೃದಿಟಛಿಪಡಿಸಿದ ಯಾವುದೇ ಆಲೂಗಡ್ಡೆ ತಳಿಯನ್ನು ಕಾಯಿದೆಯ ಅನುಸಾರ ನೋಂದಾಯಿಸಲಾಗಿಲ್ಲ. ಫೆಬ್ರವರಿ 2018ರ ತನಕ ವೆರೈಟೀಸ್‌ ಆಫ್ ಕಾಮನ್‌ ನಾಲೆಜ್‌ (ವಿಸಿಕೆ – ಸಾಮಾನ್ಯ ಬಳಕೆಯ ತಳಿಗಳು) ಗುಂಪಿನಲ್ಲಿ ನೋಂದಾಯಿಸಲಾದ 320 ತಳಿಗಳಲ್ಲಿ ಹೆಚ್ಚುಕಡಿಮೆ ಎಲ್ಲವೂ ಬೀಜ ಕಂಪೆನಿಗಳ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ. ಈ ರೈತವಿರೋಧಿ ಮತ್ತು ಸಂಸತ್ತಿನ ಆಶಯ ವಿರೋಧಿ ಬೆಳವಣಿಗೆಯನ್ನು ತಡೆಯಲೇಬೇಕಾಗಿದೆ.

ದಂಡ ತೆರದಿದ್ದರೆ ಹೇಗೆ?
“ಭಾರತೀಯ ಕಿಸಾನ್‌ ಸಂಘ’, “ಬೀಜ ಅಧಿಕಾರ ವೇದಿಕೆ’ ಸೇರಿದಂತೆ ಹಲವು ರೈತ ಹಾಗೂ ರೈತಪರ ಸಂಘಟನೆಗಳು ಪೆಪ್ಸಿಕೋ ಕಂಪೆನಿ ಮೊಕದ್ದಮೆ ಹೂಡಿದ್ದನ್ನು ತೀವ್ರವಾಗಿ ಪ್ರತಿಭಟಿಸಿದವು. ನಾಗರಿಕ ಹಕ್ಕು ರಕ್ಷಣಾ ಸಂಘಟನೆಗಳೂ ಸಿಡಿದೆದ್ದವು. ಪೆಪ್ಸಿಕೋ ಕಂಪೆನಿಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿದವು.
ಅಂತಿಮವಾಗಿ, 10 ಮೇ 2019ರಂದು ಪೆಪ್ಸಿಕೋ ಕಂಪೆನಿ ಎಲ್ಲ ಮೊಕದ್ದಮೆಗಳನ್ನೂ ಹಿಂದಕ್ಕೆ ಪಡೆಯಿತು. ಇದು ರೈತಪರ ಹೋರಾಟಕ್ಕೆ ಸಂದ ದೊಡ್ಡ ಜಯ. ಆದರೆ, ದೈತ್ಯ
ಕಂಪೆನಿಯೊಂದು ಬಡಪಾಯಿ ರೈತರನ್ನು ಹೆದರಿಸಿದ್ದಕ್ಕೆ ಮತ್ತು ಸತಾಯಿಸಿದ್ದಕ್ಕೆ, ಮಾನಸಿಕವಾಗಿ ಜರ್ಝರಿತವಾಗಿಸಿದ್ದಕ್ಕೆ ಪರಿಹಾರ ಪಾವತಿಸಬೇಡವೇ?
ಈ ಪ್ರಶ್ನೆ ಹಾಗೆಯೇ ಉಳಿದಿದೆ. ಇಂತಹ ಘಟನೆ ಮರುಕಳಿಸದಂತೆ, ಕೇಂದ್ರ ಸರಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ರೈತಾಪಿ ವರ್ಗದ ಮನವಿ.

-ಅಡ್ಡೂರು ಕೃಷ್ಣರಾವ್

Advertisement

Udayavani is now on Telegram. Click here to join our channel and stay updated with the latest news.

Next