Advertisement

ಮಾರ್ಗಸೂಚಿ ಪಾಲನೆಗೆ ಜನರ ನಿರ್ಲಕ್ಷ್ಯ

03:47 PM Aug 03, 2021 | Team Udayavani |

ದೇವನಹಳ್ಳಿ: ಬೆಂ.ಗ್ರಾ. ಜಿಲ್ಲೆಯಲ್ಲಿ ಲಾಕ್‌ಡೌನ್‌ ತೆರವಾದ ನಂತರ ಮಾರುಕಟ್ಟೆ, ರಸ್ತೆಗಳು, ಅಂಗಡಿಗಳ ಗ್ರಾಹಕರು ಮತ್ತು ಸಾರ್ವಜನಿಕರು ಸರಿಯಾಗಿ ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರವಿಲ್ಲದೆ ವ್ಯಾಪಾರ ವಹಿವಾಟು ಮಾಡುತ್ತಿರುವುದು ಕೋವಿಡ್‌ 3ನೇ ಅಲೆಯ ಆತಂಕ ಹೆಚ್ಚಾಗಿದೆ.

Advertisement

ಕೋವಿಡ್‌ ಹೊರಟು ಹೋಗಿದೆ ಎಂಬ ಭ್ರಮೆಯಲ್ಲಿ ಜನ ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಮೂಗಿನ ಕೆಳ ಭಾಗಕ್ಕೆ ಮಾಸ್ಕ್ ಅನ್ನು ಕಾಟಾಚಾರಕ್ಕೆ ಹಾಕಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ 37ರಿಂದ40 ಪ್ರಕರಣಗಳು ಕಂಡು ಬರುತ್ತಿದೆ. ಈಗಾಗಲೇ ಕೇರಳದಲ್ಲಿ ಕೋವಿಡ್‌ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲೂ ಕೋವಿಡ್‌ 3ನೇ ಅಲೆ ಭೀತಿಯಿದೆ. ಕೆಲವರು ನಾವು ಲಸಿಕೆ ಹಾಕಿಸಿಕೊಂಡಿದ್ದೇವೆ ನಮಗೆ ಕೋವಿಡ್‌ ಬರುವುದಿಲ್ಲ ಎಂಬ ಭ್ರಮೆಯಲ್ಲಿದ್ದಾರೆ.

ಸಾರ್ವಜನಿಕರಲ್ಲಿ ಕೋವಿಡ್‌ ಭೀತಿ: ಬೆಂ.ಗ್ರಾ ಜಿಲ್ಲೆಯ ನಾಲ್ಕು ತಾಲೂಕುಗಳ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಕೋವಿಡ್‌ ನಿಯಮಗಳನ್ನು ಜನ ಗಾಳಿಗೆ ತೂರಿ ಓಡಾಡುತ್ತಿದ್ದಾರೆ. ತರಕಾರಿ, ಹಣ್ಣು, ದಿನಸಿ,ಮಾಂಸದ ಅಂಗಡಿಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಮಾಜಿಕ ಅಂತರವಿಲ್ಲದೆ, ವ್ಯಾಪಾರಸ್ಥರು ಮತ್ತು ಗ್ರಾಹಕರುಮಾಸ್ಕ್ಇಲ್ಲದೆವ್ಯಾಪಾರವಹಿವಾಟುಗಳನ್ನು ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಎಪಿಎಂಸಿ ಮತ್ತು ತರಕಾರಿ ಮಾರುಕಟ್ಟೆಗಳು ಕೋವಿಡ್‌ ಹಾಟ್‌ಸ್ಪಾಟ್‌ಗಳಾಗಿ ಮಾರ್ಪಾಡು ಆಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಕೋವಿಡ್‌ ಭೀತಿ ಕಾಡುತ್ತಿದೆ.

ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮಾಸ್ಕ್  ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೋವಿಡ್‌ ತಡೆಗಟ್ಟಬಹುದು. ಬಸ್‌ ನಿಲ್ದಾಣಗಳಲ್ಲೂ ಮಾಸ್ಕ್ ಗಳಿಲ್ಲದೆ ಪ್ರಯಾಣಿಕರು ಬಸ್‌ಗಳಿಗೆಕಾಯುತ್ತಿರುತ್ತಾರೆ. ದ್ವಿಚಕ್ರ ವಾಹನ ಸವಾರರು ಮಾಸ್ಕ್ ಅರ್ಧಕ್ಕೆ ಮತ್ತು
ಮಾಸ್ಕ್ ಇಲ್ಲದೆ ಸಂಚರಿಸುತ್ತಾರೆ. ಬೆಂಗಳೂರಿಗೆ ನಾಲ್ಕು ತಾಲೂಕುಗಳು ಹೊಂದಿಕೊಂಡಿದ್ದು, ಬೆಂಗಳೂರಿನಿಂದ ಕೂಲಿ, ವ್ಯಾಪಾರ ಮತ್ತು ಇತರೆ ಕೆಲಸಗಳಿಗೆ ಬರುವುದರಿಂದ ಕೋವಿಡ್‌ ಭೀತಿ ಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಬ್ಬರ ಮೇಲೆ ಇನ್ನೊಬ್ಬರು ನಿಂತುಕೊಂಡು ವ್ಯಾಪಾರ ಮಾಡುವುದರಿಂದ ಕೋವಿಡ್‌ ಹೆಚ್ಚಳವಾಗುವ ಸಾಧ್ಯತೆಯಿದೆ.

ಮಾರುಕಟ್ಟೆಯತ್ತ ನಿಗಾವಹಿಸಿ: ಕೋವಿಡ್‌ 2ನೇ ಅಲೆಯ ಲಾಕ್‌ಡೌನ್‌ ಸಡಿಲಿಕೆ ನಂತರ ಎಲ್ಲಿ ನೋಡಿದರು ಜನವೋ ಜನ. ನಗರ ಪ್ರದೇಶಗಳಲ್ಲಿ ತರಕಾರಿ, ದಿನಸಿ, ಹೂ ಅಂಗಡಿ ಇತರೆ ಕಡೆಗಳಲ್ಲಿ ಗ್ರಾಹಕರು ಮತ್ತು ವ್ಯಾಪಾರಸ್ಥರು, ಮಾಸ್ಕ್ ಮತ್ತು ಸಾಮಾಜಿಕ ಅಂತರ ಇಲ್ಲದಿದ್ದರೆ ಕೂಡಲೇ ಪುರಸಭೆ ಮತ್ತು ನಗರಸಭೆ ಅಧಿಕಾರಿಗಳು ದಂಡ ವಿಧಿಸಬೇಕು. ಅಧಿಕಾರಿಗಳು ಮಾರುಕಟ್ಟೆ ಮತ್ತು ಬಜಾರ್‌ ರಸ್ತೆಗಳಲ್ಲಿ
ಮಾಸ್ಕ್  ಮತ್ತು ಸಾಮಾಜಿಕಅಂತರಕಾಯ್ದುಕೊಳ್ಳುವಂತೆ ಅರಿವು ಮೂಡಿಸಬೇಕು. ಮಾರುಕಟ್ಟೆಗಳ ಮೇಲೆ ಅಧಿಕಾರಿಗಳು ನಿಗಾವಹಿಸಬೇಕು. 3ನೇ ಅಲೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಈಗಾಗಲೇ ಜನಸಂದಣಿ ಕಡಿಮೆ ಮಾಡಲು ಅನೇಕ ಕಾರ್ಯಕ್ರಮ
ರೂಪಿಸಲಾಗುತ್ತಿದೆ.

Advertisement

ಕೋವಿಡ್‌ ತಡೆಗೆ ಲಸಿಕಾ ಅಭಿಯಾನ: ಬೆಂ.ಗ್ರಾ. ಜಿಲ್ಲೆಯಲ್ಲಿ ಕೋವಿಡ್‌ ತಡೆಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ವಿವಿಧಕಡೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲ ಡೋಸ್‌ 3.73 ಲಕ್ಷ ಜನರು ಮತ್ತು 2ನೇ ಡೋಸ್‌ 97,335 ಮಂದಿ ಲಸಿಕೆ ಪಡೆದಿದ್ದಾರೆ. ಒಟ್ಟು ಮೊದಲ ಮತ್ತು ಎರಡನೇ ಡೋಸ್‌ ಸೇರಿ 4.70 ಲಕ್ಷ ಮಂದಿ ಜಿಲ್ಲೆಯಲ್ಲಿ ಲಸಿಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಂದೇ ದಿನ 20 ಸಾವಿರ ಡೋಸ್‌ ಲಸಿಕೆ ಬಂದಿರುವುದರಿಂದ ಮೊದಲ ಮತ್ತು ಎರಡನೇ ಡೋಸ್‌ ಪಡೆಯಲು ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ. 8 ಲಕ್ಷ ಲಸಿಕೆ ನೀಡುವ ‌ ಗುರಿಯನ್ನುಜಿಲ್ಲೆಯಲ್ಲಿ ಇಟ್ಟುಕೊಳ್ಳಲಾಗಿದೆ. ಪ್ರತಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಸಮರ್ಪಕ ಲಸಿಕೆ ಸಿಗುವಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಲಸಿಕೆಗಳನ್ನು ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ.43ರಷ್ಟು ಲಸಿಕೆ ನೀಡಲಾಗಿದೆ.

ಪ್ರಾಣ ಉಳಿಸಿಕೊಳ್ಳಲು ಲಸಿಕೆಹಾಕಿಸಿಕೊಳಿ
ದೇವನಹಳ್ಳಿ: ಕೋವಿಡ್‌ ದಿಂದ ಪ್ರಾಣ ಉಳಿಸಿಕೊಳ್ಳಬೇಕಾದರೆ ಲಸಿಕೆ ಹಾಕಿಸಿಕೊಳ್ಳಬೇಕು. ನೀವು ನಿಮ್ಮ ಕುಟುಂಬ ರಕ್ಷಣೆ ಮಾಡಿಕೊಳ್ಳಬೇಕಾದರೆ ತಪ್ಪದೆ ‌ ಲಸಿಕೆ ಹಾಕಿಸಿಕೊಳ್ಳಿಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ತಿಪ್ಪೇಸ್ವಾಮಿ ತಿಳಿಸಿದರು. ಪಟ್ಟಣದ ಲಯನ್ಸ್‌ ಸೇವಾ ಭವನದ ಕೋವಿಡ್‌ ಲಸಿಕಾ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ವಿತರಣೆಯನ್ನು ಪರಿಶೀಲಿಸಿ ಮಾತನಾಡಿ, ಬೆಂ.ಗ್ರಾ. ಜಿಲ್ಲೆಗೆ 20 ಸಾವಿರ ಡೋಸ್‌ ಲಸಿಕೆ ಬಂದಿದ್ದು, ಆಂದೋಲನ ಮಾಡಿ ಜನರಿಗೆ ಲಸಿಕೆ ನೀಡಲಾಗುವುದು. ಪ್ರತಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಲಸಿಕೆ ಪಡೆಯುವಂತೆ ಅರಿವು ಮೂಡಿಸಲಾಗುತ್ತಿದೆ. ಜನರು ಲಸಿಕೆ ಹಾಕಿಸಿಕೊಂಡರೆ ಯಾವುದೇ ಅಡ್ಡಪರಿಣಾಮವಿಲ್ಲ.

ಸರ್ಕಾರದ ನಿರ್ದೇಶನದಂತೆ ಲಸಿಕೆ ವಿತರಣೆ ಮಾಡಲಾಗುವುದು. ಮೇಘ ಆಂದೋಲನ ನಡೆಸಿ 20 ಸಾವಿರ ಡೋಸನ್ನು ಜನರಿಗೆ ನೀಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದ್ದು,ಸಾರ್ವಜನಿಕರು ಲಸಿಕೆ ತೆಗೆದುಕೊಳ್ಳುವಂತೆ ಆಗಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್‌,ಲಯನ್ಸ್‌ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌(ಲಚ್ಚಿ) ಹಾಜರಿದ್ದರು.

-ಎಸ್‌.ಮಹೇಶ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next