Advertisement

ಜನಸ್ತೋಮ, ಬಿಗಿ ಭದ್ರತೆಗೆ ಬಸವಳಿದ ಜನರು

12:15 PM Feb 20, 2018 | Team Udayavani |

ಮೈಸೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಗರಕ್ಕಾಗಮಿಸಿದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ಮೋದಿ ಆಗಮನದಿಂದಾಗಿ ಬಹುತೇಕ ಸಣ್ಣಪುಟ್ಟ ವ್ಯಾಪಾರಿಗಳು, ವಾಹನ ಸವಾರರು ಸೋಮವಾರ ದಿನವಿಡಿ ತೊಂದರೆ ಅನುಭವಿಸಿದರು.

Advertisement

ಸರ್ಕಾರಿ ಕಾರ್ಯಕ್ರಮ ಹಾಗೂ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಭಾಗವಹಿಸುವ ಸಲುವಾಗಿ ಫೆ.18ರಂದು ರಾತ್ರಿ ಮೈಸೂರಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಗರದಲ್ಲಿ ವಾಸ್ತವ್ಯ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ನರೇಂದ್ರ ಮೋದಿ ವಾಸ್ತವ್ಯ ಹೂಡಿದ್ದ ನಗರದ ಎಂ.ಜಿ.ರಸ್ತೆಯಲ್ಲಿರುವ ರ್ಯಾಡಿಸನ್‌ ಬ್ಲೂ ಹೋಟೆಲ್‌

ಹಾಗೂ ಪ್ರಧಾನಮಂತ್ರಿಗಳು ಸಂಚರಿಸುವ ರಸ್ತೆಗಳಲ್ಲಿ ಸೋಮವಾರ ಬೆಳಗ್ಗಿನಿಂದಲೇ ಜನ ಹಾಗೂ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಹೀಗಾಗಿ ರ್ಯಾಡಿಸನ್‌ ಬ್ಲೂ ಹೋಟೆಲ್‌ ಹಾಗೂ ಇನ್ನಿತರ ಭಾಗದ ಜನಜೀವನದ ಮೇಲೆ ಪರಿಣಾಮ ಉಂಟುಮಾಡಿತು.

ರೈತರ ವ್ಯಾಪಾರಕ್ಕೆ ಅಡ್ಡಿ: ನಗರದ ದಸರಾ ವಸ್ತುಪ್ರದರ್ಶನ ಮೈದಾನದ ಹಿಂಭಾಗದ ಎಂ.ಜಿ.ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಮೈಸೂರು ಜಿಲ್ಲೆಯ ರೈತರು ಪ್ರತಿನಿತ್ಯವೂ ತಾವು ಬೆಳೆದ ತರಕಾರಿ ಹಾಗೂ ಹಣ್ಣುಗಳ ಮಾರಾಟ ಮಾಡುತ್ತಾರೆ. ಹೀಗಾಗಿ ನಗರದ ಹಲವು ಭಾಗಗಳ ಜನರು ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಇಲ್ಲಿಗೆ ತೆರಳಿ ಸೊಪ್ಪು$, ತರಕಾರಿಗಳನ್ನು ಖರೀದಿಸುತ್ತಾರೆ.

ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಕಾರಣಕ್ಕೆ ಸುರಕ್ಷತೆಯ ಉದ್ದೇಶದಿಂದ ಈ ರಸ್ತೆಯಲ್ಲಿ ಭಾನುವಾರ ರಾತ್ರಿಯಿಂದಲೇ ಜನ ಹಾಗೂ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಹೀಗಾಗಿ ಸೋಮವಾರ ಬೆಳಗ್ಗೆ ಎಂದಿನಂತೆ ವ್ಯಾಪಾರಕ್ಕೆಂದು ಆಗಮಿಸಿದ್ದ ರೈತರಿಗೆ ಪೊಲೀಸರು ವ್ಯಾಪಾರ ನಡೆಸಲು ಅವಕಾಶ ನೀಡಲು ನಿರಾಕರಿಸಿದರು.

Advertisement

ಇದರಿಂದಾಗಿ ವ್ಯಾಪಾರಕ್ಕೆಂದು ಆಗಮಿಸಿದ್ದ ಅನೇಕ ರೈತರ ಸೋಮವಾರ ಬೆಳಗ್ಗೆ 10 ಗಂಟೆಗೆಲ್ಲಾ ಯಾವುದೇ ವ್ಯಾಪಾರವಿಲ್ಲದೆ ತಮ್ಮ ಊರುಗಳಿಗೆ ಮರಳಿದರು. ಈ ನಡುವೆ ಬೆಳಗ್ಗೆ 11 ಗಂಟೆ ವೇಳೆಗೆ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ನೀಡಿದರೂ, ಯಾವುದೇ ಗ್ರಾಹಕರು ಇತ್ತ ಸುಳಿಯಲಿಲ್ಲ, ಪರಿಣಾಮ ಇಲ್ಲಿನ ವ್ಯಾಪಾರಿಗಳ ನಿತ್ಯದ ವ್ಯಾಪಾರ ವಹಿವಾಟಿನಲ್ಲಿ ಶೇ.90 ಅನುಭವಿಸಬೇಕಾಯಿತು.

ಬಿಕೋ ಎನ್ನುತ್ತಿದ್ದ ಮಾಲ್‌: ಇನ್ನು ಮೋದಿ ವಾಸ್ತವ್ಯ ಹೂಡಿದ್ದ ರ್ಯಾಡಿಸನ್‌ ಬ್ಲೂ ಹೋಟೆಲ್‌ಗೆ ಹೊಂದಿಕೊಂಡಂತಿರುವ ಮಾಲ್‌ ಆಫ್ ಮೈಸೂರಿನ ಅಂಗಡಿಗಳ ಮೇಲೂ ಮೋದಿ ಆಗಮನದ ಎಫೆಕ್ಟ್ ಕಂಡುಬಂತು. ಭದ್ರತಾ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಾಲ್‌ನಲ್ಲಿರುವ ಬಹುತೇಕ ಅಂಗಡಿಗಳನ್ನು ಬಂದ್‌ ಮಾಡಿಸಲಾಗಿತ್ತು, ಯಾವುದೇ ಸಾರ್ವಜನಿಕರಿಗೂ ಮಾಲ್‌ಗೆ ತೆರಳಲು ಅವಕಾಶ ನೀಡದ ಪರಿಣಾಮ ಇಡೀ ಮಾಲ್‌ ಆಫ್ ಮೈಸೂರು ಜನರಿಲ್ಲದೆ ಬಿಕೋ ಎನ್ನುತ್ತಿತ್ತು.

ಎಲ್ಲೆಲ್ಲೂ ಟ್ರಾಫಿಕ್‌ಜಾಮ್‌: ಇನ್ನು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ ಪರಿಣಾಮ ಸುತ್ತಮುತ್ತಲಿನ ರಸ್ತೆಗಳಲ್ಲಿ ಮಧ್ಯಾಹ್ನ 3.45ರಿಂದಲೇ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲಾಗಿತ್ತು.

ಇದರಿಂದಾಗಿ ನಗರದ ಪ್ರಮುಖ ರಸ್ತೆಗಳಾದ ಡಿ.ದೇವರಾಜ ಅರಸು ರಸ್ತೆ, ಶಿವರಾಂಪೇಟೆ ರಸ್ತೆ, ವಾಲ್ಮೀಕಿ ರಸ್ತೆ, ಯಾದವಗಿರಿ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಹೆಚ್ಚಿನ ಟ್ರಾಫಿಕ್‌ ಜಾಮ್‌ ಹಾಗೂ ನಿಧಾನಗತಿಯ ವಾಹನ ಸಂಚಾರ ಕಂಡುಬಂತು.

ಅಲ್ಲದೆ ಮೋದಿ ಸಂಚರಿಸಬೇಕಿದ್ದ ಮೈಸೂರು-ನಂಜನಗೂಡು ರಸ್ತೆ, ಮೈಸೂರು-ಹುಣಸೂರು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದ ಪರಿಣಾಮ ಹೊರ ಜಿಲ್ಲೆಗಳಿಂದ ಆಗಮಿಸಿದ ಸಾರಿಗೆ ಬಸ್‌ಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು.

ಅದರಂತೆ ಕೊಡಗು, ಕೇರಳ, ಹಾಸನ, ಮಂಗಳೂರಿನಿಂದ ನಗರಕ್ಕಾಗಮಿಸಿದ ಬಸ್ಸುಗಳು ಯಾದವಗಿರಿ, ಬಂಬೂಬಜಾರ್‌ ಮಾರ್ಗವಾಗಿ ಗ್ರಾಮಾಂತರ ಬಸ್‌ನಿಲ್ದಾಣಕ್ಕೆ ತೆರಳಲು ಅವಕಾಶ ನೀಡಲಾಗಿದ್ದರಿಂದ ಯಾದವಗಿರಿಯ ಆಕಾಶವಾಣಿ ವೃತ್ತದಿಂದ ಬಂಬೂಬಜಾರ್‌ ರಸ್ತೆಯಲ್ಲಿ ಬೃಹತ್‌ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಸಾಮಾನ್ಯವಾಗಿ ಮೈಸೂರು ನಗರಕ್ಕೆ ಪ್ರತಿನಿತ್ಯ ಅಂದಾಜು 4 ಸಾವಿರ ಪ್ರವಾಸಿಗರು ಮೈಸೂರು ಮೃಗಾಲಯ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಆದರೆ, ಪ್ರಧಾನಿ ಮೋದಿ ಮೈಸೂರು ಭೇಟಿ ಹಿನ್ನೆಲೆಯಲ್ಲಿ ಸೋಮವಾರ ಮೈಸೂರಿಗೆ ಆಗಮಿಸಿದ ಪ್ರವಾಸಿಗರ ಸಂಖ್ಯೆ 2,500ಕ್ಕೆ ಇಳಿದಿತ್ತು.

ಅಡ್ಡಾದಿಡ್ಡಿ ಪಾರ್ಕಿಂಗ್‌: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶಕ್ಕಾಗಿ ಮೈಸೂರು ಸೇರಿದಂತೆ ನಾನಾ ಕಡೆಗಳಿಂದ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಆಗಮಿಸಿದ್ದರು. ಇದಕ್ಕಾಗಿ ಪಕ್ಷದ ನಾಯಕರು ಸಾರಿಗೆ ಸಂಸ್ಥೆ ಅಥವಾ ಖಾಸಗಿ ಬಸ್‌ಗಳ ವ್ಯವಸ್ಥೆಯನ್ನು ಮಾಡಿದ್ದರು.

ಹೀಗೆ ನಾನಾ ಕಡೆಗಳಿಂದ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರನ್ನು ಕರೆತಂದಿದ್ದ ಬಸ್‌ಗಳನ್ನು ಸರಸ್ವತಿಪುರಂನ ಅಗ್ನಿಶಾಮಕ ದಳ ಮತ್ತು ಜೆಎಸ್‌ಎಸ್‌ ಮಹಿಳಾ ಕಾಲೇಜು ಸಮೀಪದ ರಸ್ತೆಗಳಲ್ಲಿ ಅಡ್ಡದಿಡ್ಡಿಯಾಗಿ ನಿಲುಗಡೆ ಮಾಡಿದ್ದರ ಪರಿಣಾಮ, ಈ ಭಾಗದಲ್ಲೂ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು.

ಕರ್ನಾಟಕ ನಂ.1: ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡುವ ವಾಹನ ನಗರದ ಕೆಲ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ವಿಶೇಷವಾಗಿ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಪ್ರಧಾನಿ ಮೋದಿ ಸಂಚರಿಸಿದ ಜೆಎಲ್‌ಬಿ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿ ಸೇರಿದಂತೆ ಇನ್ನಿತರ ರಸ್ತೆಗಳಲ್ಲಿ ಈ ವಾಹನವನ್ನು ನಿಲ್ಲಿಸಲಾಗಿತ್ತು.

ಎಲ್ಲೆಲ್ಲೂ ಜನಸ್ತೋಮ: ನಗರದ ಮಹಾರಾಜ ಕಾಲೇಜು ಮೈದಾನಲ್ಲಿ ನಡೆದ ಬಿಜೆಪಿ ಸಮಾವೇಶದ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಸಾಕಷ್ಟು ಜನರು ಆಗಮಿಸಿದ್ದರು. ಇದರಿಂದಾಗಿ ಸಮಾವೇಶ ನಡೆದ ಮಹಾರಾಜ ಕಾಲೇಜು ಮೈದಾನ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರೀ ಜನಸ್ತೋಮ ಕಂಡುಬಂತು.

ಮಾತಿನ ನಡುವೆ ಕಾಲ್ಕಿತ್ತರು: ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯೂಡಿಯೂರಪ್ಪ ಭಾಷಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು. ಎಂದಿನಂತೆ ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ ಭಾಷಣಕ್ಕೆ ನೆರೆದಿದ್ದ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜೈಕಾರ ಕೂಗಿದರು.

ಆದರೆ, ಮೋದಿ ಭಾಷಣದ ನಡುವೆಯೇ ಹಿಂದಿ ಅರ್ಥವಾಗದ ಹಾಗೂ ಬೇರೆ ಬೇರೆ ಊರುಗಳಿಂದ ಬಂದಿದ್ದ ಜನರು ಮೋದಿ ಭಾಷಣದ ನಡುವೆಯೇ, ತಂಡೋಪ ತಂಡವಾಗಿ ಮಹಾರಾಜ ಮೈದಾನದಿಂದ ಕಾಲ್ಕಿತ್ತರು. ಅಷ್ಟೇ ಅಲ್ಲದೆ ಸಮಾವೇಶದ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಮೈದಾನದ ಸುತ್ತಲೂ ಹಾಕಲಾಗಿದ್ದ ಫ್ಲೆಕ್ಸ್‌, ಕಟೌಟ್‌ಗಳ ಜತೆಗೆ ಬಿಜೆಪಿ ಪಕ್ಷದ ಬಾವುಟಗಳನ್ನು ಹೊತ್ತೂಯ್ದರು.

ಬಿಸಿಲಿಗೆ ಬಸವಳಿದರು: ಮೋದಿ ಭಾಷಣ ಕೇಳಲೆಂದು ಬಂದಿದ್ದ ಜನರು ಮಧ್ಯಾಹ್ನದ ಸುಡುಬಿಸಿಲಿನ ತಾಪಕ್ಕೆ ಹೈರಾಣದರು. ಸೂರ್ಯನ ಎದುರು ಬಿಸಲಿನ ತಾಪಕ್ಕೆ ತತ್ತರಿಸಿದ ಜನರು, ಸಮಾವೇಶಕ್ಕಾಗಿ ಹಾಕಿದ್ದ ಆಸನಗನ್ನು ಬಿಟ್ಟು, ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತಲಿನ ಮರಗಳ ನೆರಳಿನಲ್ಲಿ ಕುಳಿತು ಎಲ್‌ಇಡಿ ಪರೆದೆಯಲ್ಲಿ ಮೋದಿ ಭಾಷಣ ಕೇಳಿದರು. ಇದರಿಂದಾಗಿ ವೇದಿಕೆ ಮುಂಭಾಗದ ಕೊನೆಯಲ್ಲಿ ಅಳವಡಿಸಿದ್ದ ನೂರಾರು ಕುರ್ಚಿಗಳು ಖಾಲಿ ಖಾಲಿ ಕಂಡವು.

ಹೆಲಿಕಾಪ್ಟರ್‌ ವೀಕ್ಷಣೆಗೆ ಆಸಕ್ತಿ: ನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ, ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಶ್ರವಣಬೆಳಗೊಳದಿಂದ ನೇರವಾಗಿ ಮೈಸೂರು ವಿವಿಯ ನ್ಪೋಟ್ಸ್‌ ಪೆವಿಲಿಯನ್‌ ಮೈದಾನದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‌ಗೆ ವಿಶೇಷ ಹೆಲಿಕಾಪ್ಟರ್‌ ಮೂಲಕ ಆಗಮಿಸಿದರು. ಮೋದಿ ಆಗಮನದ ನಿರೀಕ್ಷೆಯಲ್ಲಿ ಹಲವು ಹೊತ್ತಿನಿಂದಲೇ ಕಾದುಕುಳಿತಿದ್ದ ಸಾವಿರಾರು ಮಂದಿ, ಮೋದಿ ಆಗಮಿಸಿದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ನೋಡಲು ಮುಗಿಬಿದ್ದರು.

ಇನ್ನೂ ಬಿಜೆಪಿ ಸಮಾವೇಶ ಮುಗಿಯುತ್ತಿದ್ದಂತೆ ಪ್ರಧಾನಿ ಹೆಲಿಕಾಪ್ಟರ್‌ ತೆರಳಲು ಮುಂದಾದ ಸಂದರ್ಭದಲ್ಲೂ, ಅನೇಕರು ಹೆಲಿಕಾಪ್ಟರ್‌ ನೋಡಲು ಉತ್ಸುಕರಾದರು. ಪೆವಿಲಿಯನ್‌ ಮೈದಾನದ ಸುತ್ತಲೂ ನೆರೆದಿದ್ದ ಜನರು ಹೆಲಿಕಾಪ್ಟರ್‌ ಟೇಕ್‌ಆಫ್ ಆಗುವುದನ್ನು ಕಂಡು ಸಂಭ್ರಮಿಸುವ ಜತೆಗೆ, ಹೆಲಿಕ್ಯಾಪ್ಟರ್‌ ಆಗಸದತ್ತ ಹಾರುವುದನ್ನು ಕಂಡು ಮೋದಿ ಅವರತ್ತ ಕೈ ಬೀಸಿ ಖುಷಿಪಟ್ಟರು.

ನೀರು-ಮಜ್ಜಿಗೆಗೆ ದುಂಬಾಲು: ಸಮಾವೇಶಕ್ಕೆ ಆಗಮಿಸಿದ ಜನರಿಗೆಂದು ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತಲು ಉಚಿತವಾಗಿ ಕುಡಿಯುವ ನೀರಿನ ಹಾಗೂ ಮಜ್ಜಿಗೆ ಪ್ಯಾಕೇಟ್‌ಗಳನ್ನು ವಿತರಿಸಲಾಯಿತು. ಹೀಗಾಗಿ ಸಮಾವೇಶಕ್ಕೆಂದು ಬಂದಿದ್ದ ಸಾವಿರಾರು ಮಂದಿ ಬಿಸಿಲಿನ ತಾಪಕ್ಕೆ ಬಸವಳಿದು, ಕುಡಿಯುವ ನೀರು ಹಾಗೂ ಮಜ್ಜಿಗೆ ಪ್ಯಾಕೇಟ್‌ಗಳನ್ನು ಪಡೆಯಲು ಭಾರೀ ಸಂಖ್ಯೆಯಲ್ಲಿ ದುಂಬಾಲು ಬಿದ್ದರು. ಇನ್ನೂ ಸಮಾವೇಶ ನಡೆದ ಮೈದಾನದ ಸುತ್ತಲೂ ಚುರುಮುರಿ, ಐಸ್‌ಕ್ರೀಂ, ಸೌತೇಕಾಯಿ ಮುಂತಾದ ತಿಂಡಿ-ತಿನಿಸುಗಳ ವ್ಯಾಪಾರ-ವಹಿವಾಟು ಜೋರಾಗಿತ್ತು.

ಅಭಿಪ್ರಾಯ ಸಂಗ್ರಹ: ಮಹಾರಾಜ ಕಾಲೇಜಿನಲ್ಲಿ ನಡೆದ ಬಿಜೆಪಿ ಸಮಾವೇಶದ ನಡುವೆಯೇ ಪಕ್ಷದ ಕಾರ್ಯಕರ್ತರು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು. ಇದಕ್ಕಾಗಿ ಮೈದಾನದಲ್ಲಿ ಮಳಿಗೆಯೊಂದನ್ನು ತೆರೆದಿದ್ದ ಪಕ್ಷದ ಕಾರ್ಯಕರ್ತರು, ನವಭಾರತಕ್ಕಾಗಿ ನವಕರ್ನಾಟಕ ಜನಪರಶಕ್ತಿ ಶೀರ್ಷಿಕೆ ಹೊಂದಿದ್ದ ಕರಪತ್ರಗಳನ್ನು ಸಾರ್ವಜನಿಕರಿಗೆ ನೀಡಿ ಅವರುಗಳಿಂದ ಅಭಿಪ್ರಾಯ ಸಂಗ್ರಹಿಸಿದರು.

ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆಸಲಾದ ಈ ಅಭಿಪ್ರಾಯ ಸಂಗ್ರಹದಲ್ಲಿ ಜನರಿಂದ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

* ಸಿ.ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next