Advertisement

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

10:59 PM Sep 18, 2021 | Team Udayavani |

ಭಾರತ ಹಳ್ಳಿಗಳ ದೇಶ. ಒಟ್ಟಾರೆ ಜನಸಂಖ್ಯೆಯ ಶೇ. 70ಕ್ಕೂ ಹೆಚ್ಚು ಜನರು ಇಂದಿಗೂ ಹಳ್ಳಿಗಳಲ್ಲಿಯೇ ವಾಸಿಸುತ್ತಿದ್ದಾರೆ. ನಗರದ ಆಡಂಬರ, ಮಲಿನ ಪರಿಸರದ ಅರಿವೇ ಇಲ್ಲದೆ ಹಳ್ಳಿಯ ಪರಿಶುದ್ಧ ಗಾಳಿ, ಆರೋಗ್ಯಯುತ ಆಹಾರ, ಸ್ವತ್ಛಂದ ಪರಿಸರದ ನಡುವೆ ಜೀವನ ಸಾಗಿಸುವ ಜನ ಒಂದು ಕಡೆಯಾದರೆ, ನಗರ ಜೀವನಕ್ಕೆ ಮಾರುಹೋಗಿ ಅವರ ಜೀವನ ಶೈಲಿಯನ್ನು ಮೈಗೂಡಿಸಿಕೊಂಡವರು ಇನ್ನೊಂದು ಕಡೆ. ಹಾಗಾಗಿ ಇಂಥವರು ಕ್ಯಾನ್ಸರ್‌, ಅಧಿಕ ರಕ್ತದೊತ್ತಡ, ಮಧುಮೇಹ, ಖನ್ನತೆ, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ, ಬೊಜ್ಜು ಮತ್ತಿತರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಪ್ರಸ್ತುತ ಎಲ್ಲಿಯೂ ಕೂಡ ಜನರ ಜೀವನ ಶೈಲಿ ವ್ಯವಸ್ಥಿತವಾಗಿಲ್ಲ ಎನ್ನಬಹುದು. ಜೀವನಶೈಲಿಯನ್ನು ಸುವ್ಯವಸ್ಥಿತಗೊಳಿಸಲು ಇರುವುದು ಒಂದೇ ಮಾರ್ಗ ವ್ಯಕ್ತಿತ್ವ ವಿಕಸನ. ಇದು ಯೋಗಾಭ್ಯಾಸದಿಂದ ಮಾತ್ರ ಸಾಧ್ಯ.

Advertisement

ಹಳ್ಳಿಗಳಲ್ಲಿ ಸಾಕ್ಷರತೆಯ ಪ್ರಮಾಣ ಸ್ವಲ್ಪ ಕಡಿಮೆ. ಇಲ್ಲಿನ ಜನರಿಗೆ ಯೋಗ ಹಾಗೂ ಯೋಗಾಭ್ಯಾಸದ ಬಗ್ಗೆ ಅಷ್ಟೊಂದು ಜ್ಞಾನ ಇಲ್ಲ. ಯಾರು ವೇದಾಧ್ಯಯನ ಮಾಡಿದವರಿದ್ದಾರೋ ಯಾರು ಆಧ್ಯಾತ್ಮಿಕ ವ್ಯಕ್ತಿಗಳಿರುತ್ತಾರೋ ಅಂಥವರು ಯೋಗದ ಬಗ್ಗೆ ಜ್ಞಾನ ಉಳ್ಳವರಾಗಿದ್ದಾರೆ. ನಮಗೆಲ್ಲರಿಗೂ ಮೂಡುವ ಒಂದೇ ಒಂದು ಪ್ರಶ್ನೆ ಎಂದರೆ, ಹಳ್ಳಿಗಳಲ್ಲಿ ವಾಸಿಸುವ ಕೃಷಿಕರು, ಕೂಲಿಗಳು ಹೀಗೆ ಶಾರೀರಿಕ ಶ್ರಮದಿಂದ ಜೀವಿಸುವವರಿಗೆ ಯೋಗ ಬೇಕೇ ಎಂಬುದು. ಇಂಥವರಿಗೂ ಯೋಗ ಬಹಳ ಆವಶ್ಯಕ. ಯಾಕೆಂದರೆ ಅವರ ಕೆಲಸ-ಕಾರ್ಯಗಳು ಇಂಥವರಿಗೆ ಬರೀ ಶಾರೀರಿಕ ವ್ಯಾಯಾಮವನ್ನು ಕೊಡುತ್ತದೆ. ಆದರೆ ಯೋಗಾಭ್ಯಾಸವು ಶರೀರದಿಂದ ಮನಸ್ಸಿನವರೆಗೂ ಮುಂದುವರಿಯುತ್ತದೆ. ಅವರು ಮಾಡುವ ಯಾವುದೇ ಕೆಲಸ ಅವರ ಕೆಲವೊಂದು ಮಾಂಸಖಂಡಗಳಿಗೆ ವ್ಯಾಯಾಮ ಲಭಿಸುವಂತೆ ಮಾಡುತ್ತದೆ. ಜತೆಗೆ ಅವರಿಗೆ ಮಾನಸಿಕ ವಿಶ್ರಾಂತಿಯೂ ಇಲ್ಲ. ಯಾವಾಗಲೂ ಹಣಕಾಸು, ವ್ಯವಹಾರದ ಬಗ್ಗೆ ಚಿಂತಿತರಾಗಿರುತ್ತಾರೆ. ಇದರಿಂದಾಗಿ ಕುಡಿತದ ದಾಸರಾಗಿ ಆತ್ಮಹತ್ಯೆಗೆ ಶರಣಾಗುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಯೋಗಾಭ್ಯಾಸ ಮಾಡುವುದರಿಂದ ತನ್ನ ದೇಹದ ಎಲ್ಲ ಮಾಂಸಖಂಡಗಳಿಗೆ ವ್ಯಾಯಾಮ ದೊರೆಯುತ್ತದೆ. ಯೋಗಾಭ್ಯಾಸ ಮಾಡುವುದರಿಂದ ಶಾರೀರಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ  ಸಮತೋಲನ ದೊರೆಯುತ್ತದೆ.

ಹಳ್ಳಿಗಳಲ್ಲಿ ಯೋಗದ ಅರಿವು ಮೂಡಿಸುವುದು ಹೇಗೆ?:

ನಗರವಾಸಿಗಳು ಅಂತರ್ಜಾಲ, ಸಮೂಹಮಾಧ್ಯಮಗಳ ಮೂಲಕ ಯೋಗಾಭ್ಯಾಸದ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಹಳ್ಳಿಗಳಲ್ಲಿ ಇವುಗಳ ಬಳಕೆಯಲ್ಲಿ ಹಿಂದುಳಿದಿರುವ ಕಾರಣ ಯೋಗಾಭ್ಯಾಸದ ಪ್ರಚಾರ ನಡೆಯಬೇಕಿದೆ. ಈ ಕೆಲಸವನ್ನು ಸ್ಥಳೀಯ ಸಂಘ-ಸಂಸ್ಥೆಗಳು ಉಚಿತ ಯೋಗ ಶಿಬಿರಗಳನ್ನು ಮಾಡುವ ಮೂಲಕ ಪ್ರಚಾರ ಮಾಡಬೇಕಿದೆ. ಊರಿನಲ್ಲಿ ಯಾರು ಯೋಗಾಸಕ್ತರಿರುತ್ತಾರೋ ಅವರಿಗೆ ಪ್ರತ್ಯೇಕ ಯೋಗಾಭ್ಯಾಸ ತರಬೇತಿ  ನೀಡಿ, ಇಂಥವರು ಉಳಿದ ಜನರಿಗೆ ಯೋಗವನ್ನು ಅಭ್ಯಸಿಸುವಂತೆ ಉತ್ತೇಜನ ನೀಡಬೇಕು. ಈ ಮೊದಲೇ ಯಾರು ಯೋಗ ಕಲಿತಿರುತ್ತಾರೋ ಅವರು ಯೋಗದ ಶಾರೀರಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಪ್ರಯೋಜನಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿಕೊಡಬೇಕು. ಈಗಾಗಲೇ ಯೋಗಾಸನ, ಪ್ರಾಣಾಯಾಮ, ಧ್ಯಾನದಿಂದ ಧನಾತ್ಮಕ ಲಾಭವನ್ನು ಪಡೆದವರು ತಮ್ಮ ಯೋಗಾನುಭವವನ್ನು ಅವರ ಸಂಬಂಧಿಗಳಿಗೆ, ಸ್ನೇಹಿತರಿಗೆ, ನೆರೆಹೊರೆಯವರಿಗೆ ಹೇಳಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು.

ಯೋಗ ಭಾರತದಲ್ಲೇ ಹುಟ್ಟಿದರೂ ಈಗ ವಿಶ್ವವ್ಯಾಪಿ ಪ್ರಚಲಿತದಲ್ಲಿದೆ. ಹಾಗೆಂದು ದೇಶದ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದೇನೂ ಅಲ್ಲ. ದೇಶದ ಹಿಂದುಳಿದ ಹಳ್ಳಿಗಳಲ್ಲಿ ಯೋಗದ ಬಗ್ಗೆ ಮಾಹಿತಿ ಇಲ್ಲದವರೂ ಇದ್ದಾರೆ. ಮುಂದಿನ ಕಾಲಘಟ್ಟದಲ್ಲಾದರೂ ಪ್ರತಿಯೊಬ್ಬ ಪ್ರಜೆಯೂ ಯೋಗಾಭ್ಯಾಸ ಮಾಡುವಂತಾಗಬೇಕು.

Advertisement

 

 ಡಾ| ಗ್ರೀಷ್ಮಾ ಗೌಡ ಆರ್ನೋಜಿ, ಮೂಡುಬಿದಿರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next