ಹೊಸದಿಲ್ಲಿ: ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತವನ್ನು ವಿಜಯದತ್ತ ಮುನ್ನಡೆಸಿದ ಸೇನಾ ಮುಖ್ಯಸ್ಥ ಜನರಲ್ ವಿಪಿ ಮಲಿಕ್ ಅವರು ಅಗ್ನಿಪಥ್ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಾರಣವಾದ ಗೂಂಡಾಗಳನ್ನು ನೇಮಿಸಿಕೊಳ್ಳಲು ಸೇನೆಯು ಆಸಕ್ತಿ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.
ಸೇನಾ ಆಕಾಂಕ್ಷಿಗಳ ಪ್ರತಿಭಟನೆಯು ತೀವ್ರಗೊಂಡು ಬಿಹಾರ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂಸಾಚಾರ ವರದಿಯಾಗಿದೆ. ಹಲವೆಡೆ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ. ಹೊಸ ಅಲ್ಪಾವಧಿ ನೇಮಕಾತಿ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೋಪಗೊಂಡ ಯುವಕರು ಪ್ರತಿಭಟನೆ ನಡೆಸಿದ್ದಾರೆ.
“ಸಶಸ್ತ್ರ ಪಡೆಗಳು ಸ್ವಯಂಸೇವಕ ಪಡೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇದು ಕಲ್ಯಾಣ ಸಂಘಟನೆಯಲ್ಲ ಮತ್ತು ದೇಶಕ್ಕಾಗಿ ಹೋರಾಡುವ, ದೇಶವನ್ನು ರಕ್ಷಿಸುವ ಅತ್ಯುತ್ತಮ ವ್ಯಕ್ತಿಗಳನ್ನು ಹೊಂದಿರಬೇಕು” ಎಂದು ಜನರಲ್ ಮಲಿಕ್ ಹೇಳಿದ್ದಾರೆ.
Related Articles
ಇದನ್ನೂ ಓದಿ:ಈ ಬಾರಿ ಭಕ್ತರು ಅಮರನಾಥ ಯಾತ್ರೆಯನ್ನು ಒಂದೇ ದಿನದಲ್ಲಿ ಮುಗಿಸಬಹುದು : ಹೇಗೆ ಗೊತ್ತೇ?
“ಗೂಂಡಾಗಿರಿಯಲ್ಲಿ ತೊಡಗಿರುವವರು, ರೈಲುಗಳು ಮತ್ತು ಬಸ್ಸುಗಳನ್ನು ಸುಡುವವರು, ಅವರು ಸಶಸ್ತ್ರ ಪಡೆಗಳಲ್ಲಿ ನಾವು ಹೊಂದಲು ಬಯಸುವ ಜನರಲ್ಲ” ಎಂದು ಅವರು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಗೊಂದಲಗಳಿಗೆ ಉತ್ತರ: ಇದೇ ವೇಳೆ, ಯೋಜನೆಯ ಕುರಿತು ಎದ್ದಿರುವ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ “ಮಿಥ್ಯೆ ವರ್ಸಸ್ ಸತ್ಯ’ ಎಂಬ ದಾಖಲೆಯನ್ನು ಜನರ ಮುಂದಿಟ್ಟಿದೆ. ಮುಂಬರುವ ದಿನಗಳಲ್ಲಿ ಅಗ್ನಿ ವೀರರ ನೇಮಕಾತಿಯು ಪ್ರಸ್ತುತ ಸೇನಾ ನೇಮಕಾತಿ ಗಿಂತ ಮೂರು ಪಟ್ಟು ಹೆಚ್ಚಲಿದೆ ಎಂದು ತಿಳಿಸಿದೆ. ಜತೆಗೆ, ಸೇನಾಪಡೆಗಳ ರೆಜಿಮೆಂಟಲ್ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ ಎಂಬ ಆರೋಪವನ್ನೂ ಸರ್ಕಾರ ಅಲ್ಲಗಳೆದಿದೆ.
ಕಾಲಕ್ರಮೇಣ ಯೋಧರ ಸರಾಸರಿ ವಯಸ್ಸು 32ರಿಂದ 26ಕ್ಕಿಳಿಕೆಯಾಗಲಿದೆ. 4 ವರ್ಷ ಪೂರ್ಣಗೊಂಡ ಬಳಿಕ ಶೇ.25ರಷ್ಟು ಮಂದಿಯನ್ನು ಅವರ ಕಾರ್ಯ ಕ್ಷಮತೆಯನ್ನು ಪರೀಕ್ಷಿಸಿಯೇ ಶಾಶ್ವತವಾಗಿ ಸೇನೆಗೆ ಸೇರಿಸಲಾಗುತ್ತದೆ. ಹೀಗಾಗಿ ಸೇನೆಯ ಮೇಲ್ವಿಚಾರಣಾ ಹುದ್ದೆಗಳಿಗೆ ಅತ್ಯುತ್ತಮ ಕಾರ್ಯಕ್ಷಮತೆಯುಳ್ಳ ಸಿಬ್ಬಂದಿಯೇ ನೇಮಕವಾ ದಂತಾ ಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.