Advertisement

ಪೆನ್ಷನ್‌ ಸ್ಕೀಮ್‌ ಎಂಬ ಕಿರಿಕಿರಿ

06:00 AM Dec 17, 2018 | |

ನಿವೃತ್ತಿ ನಂತರ ಪೆನ್ಷನ್‌ ಸಿಗುತ್ತದೆ ಅಂತ ಎನ್‌ಪಿಎಸ್‌ಗೆ ದುಡ್ಡು ಹಾಕಿದವರಿಗೆ ಈಗ ಢವಢವ ಶುರುವಾಗಿದೆ. ಏಕೆಂದರೆ, ಇದರಲ್ಲಿ ಹೂಡಿದ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಒಂದು ಪಕ್ಷ ಮಾರ್ಕೆಟ್‌ ಬಿದ್ದರೆ, ನಮ್ಮ ಬದುಕೇ ಬೀದಿಗೆ ಬೀಳುತ್ತದೆ ಎಂದು ಹಣ ಹೂಡಿದವರು ಎಲ್ಲರೂ ಯೋಚನೆ ಮಾಡುತಲಿದ್ದಾರೆ.

Advertisement

ನ್ಯೂ ಪೆನ್ಷನ್‌ ಸ್ಕೀಮ್‌ ಅಥವಾ ನ್ಯಾಶನಲ್‌ ಪೆನ್ಷನ್‌ಸ್ಕೀಂ  ಎಂದೇ ಹೆಸರಾಗಿರುವ ಈ ಎನ್‌.ಪಿ.ಎಸ್‌. ಎಂಬ ವಿಮಾ ಯೋಜನೆ ಹುಟ್ಟಿದ್ದು 2004ರಲ್ಲಿ. ಈ ನಂತರದಲ್ಲಿ ಕೇಂದ್ರ ಸರಕಾರದ ಸೇವೆಗೆ ದಾಖಲಾಗುವ ಎಲ್ಲ ಉದ್ಯೋಗಿಗಳಿಗೆ  ಪಾರಂಪರಿಕ ಪಿಂಚಣಿ ಸವಲತ್ತನ್ನು ರದ್ದು ಮಾಡಿ,  ಅದಕ್ಕೆ ಪರ್ಯಾಯವಾಗಿ  ಈ ನ್ಯೂ ಪೆನ್ಷನ್‌ ಸ್ಕೀಂ ಎಂಬ ಹೆಸರಿನಲ್ಲಿ ಹೊಸತೊಂದು ವಿಮಾ ಉತ್ಪನ್ನವನ್ನು ಸೃಷ್ಟಿ ಮಾಡಲಾಯಿತು. ಇ.ಪಿ.ಎಫ್, ಪಿ.ಪಿ.ಎಫ್ ನಂತೆಯೇ ಇದು ಕೂಡ ಒಂದು ವಿಮಾ ಯೋಜನೆ. ಪ್ರಾವಿಡೆಂಟ್‌ ಫ‌ಂಡ್‌ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಪಿ.ಎಫ್.,ಆರ್‌.ಡಿ.ಎ) ಅಡಿಯಲ್ಲಿ ಬರುವ ಒಂದು ಯೋಜನೆ.  ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಬರುವ ವೇತನದ ಒಟ್ಟು ಮೊತ್ತದಲ್ಲಿ ಅಂದರೆ ಡಿ.ಎ. ಸೇರಿದಂತೆ ಸಿಗುವ ಒಟ್ಟು ಬಾಬಿ¤ನಲ್ಲಿ ಶೇ.10ಅನ್ನು ಎನ್‌.ಪಿ.ಎಸ್‌.ಗೆ ಕಡಿತ ಮಾಡಲಾಗುತ್ತದೆ.  ಸರಕಾರ ಅಷ್ಟೇ ಪ್ರಮಾಣದ ಮೊತ್ತವನ್ನು ಸೇರಿಸಿ ವೇತನದಾರನ ಎನ್‌.ಪಿ.ಎಸ್‌. ಖಾತೆಗೆ ಜಮೆ ಮಾಡುತ್ತದೆ. ಇತ್ತೀಚೆಗೆ ಸರಕಾರದ ಪಾಲು ಶೇ. 14 ಎಂದು ಬದಲಾಗಿದೆ.  ಪಿ.ಎಫ್.ನಲ್ಲಿರುವಂತೆ ನಿಗದಿಯಾದ ನಿರ್ದಿಷ್ಟ ಬಡ್ಡಿಯ ಖಾತ್ರಿಯೂ ಇಲ್ಲ. ಎಲ್ಲವನ್ನೂ ಟ್ರಸ್ಟೀ ಬ್ಯಾಂಕಿಗೆ ವರ್ಗಾಯಿಸಲಾಗುತ್ತದೆ, ಪ್ರಸ್ತುತ ಬ್ಯಾಂಕ್‌ ಆಫ್ ಇಂಡಿಯಾ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಭಯ ಶುರುವಾಗಿರುವುದು ಇಲ್ಲಿ 
ಎನ್‌.ಪಿ.ಎಸ್‌. ಠೇವಣಿಯ ಶೇ.15 ಅನ್ನು ಶೇರು ಮಾರುಕಟ್ಟೆಯಲ್ಲಿ ಉಳಿದ ಶೇ. 85ರಷ್ಟನ್ನು ಸರಕಾರಿ ಬಾಂಡ್‌ ಹೂಡಿಕೆ ಮಾಡಲಾಗುತ್ತಿದೆ. ಆದರೆ ಇದೀಗ ಹೊಸದಾಗಿ ಜಾರಿಯಾಗುತ್ತಿರುವ ಮಸೂದೆಯ ಅನುಸಾರ, ಈ ಅನುಪಾತ ಶೇ. 50-50ರಷ್ಟು ಆಗಲಿದೆ.  ಅಂದರೆ,  ಶೇರು ಮಾರುಕಟ್ಟೆಯಲ್ಲಿ ಶೇ:50 ಭಾಗ ಹೂಡಲಾಗುತ್ತದೆ. ಒಂದುವೇಳೆ ತಮ್ಮ ಹಣವನ್ನು ಸರಕಾರ ಶೇರುಮಾರುಕಟ್ಟೆಯಲ್ಲಿ ಹೂಡಿ, ನಷ್ಟ ಸಂಭವಿಸಿ ಅದೇ ಕಾರಣದಿಂದಾಗಿ ಕೊನೆಗೆ ನಮಗೆ ಸಿಗುವ ಮೊತ್ತ ಅತ್ಯಲ್ಪವಾದರೆ ಅಥವಾ ಅಸಲಿಗೇ ಖೋತಾ ಆದರೆ ಏನು ಮಾಡುವುದು ಎಂಬ ಆತಂಕವೂ ಈ ಯೋಜನೆಯಲ್ಲಿ ಹಣ ಹೂಡಿರುವ ಜನರದ್ದಾಗಿದೆ. 

ಪಿ.ಎಫ್.ಆರ್‌.ಡಿ.ಎ. ಈ ಯೋಜನೆಯಲ್ಲಿ ಕೊನೆಗೆ ಹೂಡಿಕೆದಾರರಿಗೆ ಇಷ್ಟೇ ಮೊತ್ತವನ್ನು ಕೊಡುತ್ತೇವೆ ಎಂಬ ಯಾವ ಭರವಸೆಯನ್ನೂ ಕೊಡುತ್ತಿಲ್ಲ. ಭರವಸೆ ಇಲ್ಲದ ಯೋಜನೆಯಲ್ಲಿ ಹೂಡಿಕೆ ಮಾಡಿ ಮೋಸ ಹೋಗುವ ಸಂದರ್ಭ ಬಂದರೆ ಏನು ಮಾಡುವುದು ಎಂಬುದು ನೌಕರರ ಮತ್ತೂಂದು ಚಿಂತೆ ಆಗಿದೆ. 

ಹೂಡಿಕೆ ಮಾಡಿದ ವೇತನದಾರ ವ್ಯಕ್ತಿ ತನ್ನ 60ನೇ ವಯಸ್ಸಿಗೆ ನಿವೃತ್ತನಾದರೆ ಒಟ್ಟು ಮೊತ್ತದ ಶೇ.60 ಆತನಿಗೆ ಸಿಗುತ್ತದೆ. ಉಳಿದ ಶೇ:40ನ್ನು ಬೇರೊಂದು ವಿಮಾಕಂಪೆನಿಗೆ ವರ್ಗಾಯಿಸಲಾಗುತ್ತದೆ. ಆ ಕಂಪೆನಿಯು ಶೇರು ಮಾರುಕಟ್ಟೆ ಅಥವಾ ಇನ್ನಿತರ ಬಾಬ್ತುಗಳಲ್ಲಿ ಹೂಡಿಕೆ ಮಾಡಿ ಅನ್ಯುಯಿಟಿ ರೂಪದಲ್ಲಿ ಆ ವ್ಯಕ್ತಿಗೆ ಪಿಂಚಣಿಯನ್ನು ಮಾಸಿಕ ಕಂತುಗಳಲ್ಲಿ ಕೊಡುತ್ತದೆ.  ಒಂದು ವೇಳೆ ಅರವತ್ತು ವರ್ಷಕ್ಕೂ ಮನ್ನ ವ್ಯಕ್ತಿ ನಿವೃತ್ತನಾದರೆ ಕೈಗೆ ಸಿಗುವುದು ಶೇ: 20 ಮಾತ್ರ. ಉಳಿದ ಶೇ:80 ಅನ್ನು ಅನ್ಯುಯಿಟಿಗಾಗಿ ಮೀಸಲಿಡಬೇಕಾಗುತ್ತದೆ.

Advertisement

ಅಮೆರಿಕ ಉದಾಹರಣೆ
ಇದೇ ರೀತಿಯ ಪಿಂಚಣಿ ಯೋಜನೆ ಅಮೆರಿಕಾದಲ್ಲೂ ಜಾರಿಯಲ್ಲಿದೆ.  ಇತ್ತೀಚೆಗೆ ಅಲ್ಲಿ ಶೇರು ಮಾರುಕಟ್ಟೆ ನಷ್ಟಕ್ಕೆ ಒಳಗಾಯಿತು. ವಿಮೆಯನ್ನು ನಂಬಿ ಹಣ ಹೂಡಿದ್ದ  ವೇತನದಾರರ ಮೂರುಲಕ್ಷ ಕೋಟಿ ಡಾಲರ್‌ ಮೊತ್ತ  ನೀರಿನಲ್ಲಿ ಹೋಮ ಮಾಡಿದಂತಾಯಿತು. ಪೆನ್ಷನ್‌ನ ಮೂಲ ಉದ್ದೇಶವೇ ನಿವೃತ್ತಿಯ ನಂತರದ  ಬದುಕಿಗೆ ಆಸರೆ ನೀಡುವುದು. ಈ ರೀತಿ ನಷ್ಟಕ್ಕೆ ಒಳಗಾಗಿ, ಭರವಸೆ ಇಲ್ಲದೇ ಹಣವೆಲ್ಲ ಸೋರಿ ಹೋದರೆ ಗತಿ  ಏನು ಎಂಬುದು ಅಲ್ಲಿನ ಮತ್ತು ಇಲ್ಲಿನ ನೌಕರರ ಕೂಗು.

ಅನ್ಯುನಿಟಿ ಯೋಜನೆ ಕುಟುಂಬಕ್ಕಿಲ್ಲ
ಅನ್ಯುನಿಟಿ  ಯೋಜನೆಯ ಅನುಸಾರ, ನಿವೃತ್ತಿ ಹೊಂದಿದ ವ್ಯಕ್ತಿಗೆ ಆತ ಜೀವಿತದಲ್ಲಿ ಇರುವಷ್ಟು ಕಾಲ ಮಾಸಿಕ ಪಿಂಚಣಿ ಸಿಗಬೇಕು.
ಒಂದು ಸರಳ ಉದಾಹರಣೆಯೊಂದಿಗೆ ಹೇಳುವುದಾದರೆ, ಒಬ್ಬ ನಿವೃತ್ತ ವ್ಯಕ್ತಿಯ ಅನ್ಯುನಿಟಿ ಸ್ಕೀಂನಲ್ಲಿ ಐದು ಲಕ್ಷ ರೂ. ನಿಧಿ ಇಟ್ಟಿದ್ದರೆ ಆತನಿಗೆ  ಮಾಸಿಕ ಐದುಸಾವಿರ ರೂ.ಗಳ ಪಿಂಚಣಿ ಸಿಗುತ್ತದೆ.  ಇದು ಆ ವ್ಯಕ್ತಿ ಜೀವಿತದಲ್ಲಿ ಇರುವ ಕಾಲಾವಧಿಗೆ ಮಾತ್ರ ಸೀಮಿತ. ಮರಣದ ನಂತರ ಕುಟುಂಬಕ್ಕೆ ಪಿಂಚಣಿ ಸೌಲಭ್ಯದ ಹಕ್ಕು ಇಲ್ಲ. ಅಂದರೆ, ಐದುಲಕ್ಷ ರೂ. ಇಡುಗಂಟು ಕೂಡ ರದ್ದಾಗಿ ಬಿಡುತ್ತದೆ.

ಇದರ ಇನ್ನೊಂದು ನ್ಯೂನತೆ. ಸಾಮಾನ್ಯವಾಗಿ ನಮ್ಮ ಹಳೆಯ ನಿವೃತ್ತಿವೇತನವನ್ನು ಉದಾಹರಣೆಗೆ ತೆಗೆದುಕೊಳ್ಳುವುದಾದರೆ  ಹತ್ತು ವರ್ಷಗಳ ಹಿಂದೆ ನಿವೃತ್ತರಾದ ಒಬ್ಬ ವ್ಯಕ್ತಿ ನಿವೃತ್ತಿಯಾದ ನಂತರ ತಕ್ಷಣದಿಂದ ಸರಿಸುಮಾರು ಶೇ.50 ರಷ್ಟು ನಿವೃತ್ತಿ ವೇತನ ಪಡೆಯುತ್ತಿದ್ದಾರೆ ಎಂದಿಟ್ಟುಕೊಳ್ಳಿ.  ನಮ್ಮ ದಿನಬಳಕೆ ವಸ್ತುಗಳ ಬೆಲೆ ದಿನೆ ದಿನೇ ಏರಿಕೆಯಾಗುತ್ತದೆ. ಅದನ್ನು ಅನುಸರಿಸಿ ವಾರ್ಷಿಕವಾಗಿ ತುಟ್ಟಿಭತ್ಯೆಯೂ ಹೆಚ್ಚಳವಾಗುತ್ತ ಹೋದಂತೆ ಪಿಂಚಣಿ ಮೊತ್ತವೂ ಏರುತ್ತದೆ.  ಈ ಹತ್ತು ವರುಷಗಳಲ್ಲಿ ಅವರು ಉದ್ಯೋಗದಲ್ಲಿದ್ದಾಗ ಪಡೆಯುತ್ತಿದ್ದ ವೇತನಕ್ಕಿಂತ ಹೆಚ್ಚಿನ ಮೊತ್ತವನ್ನು ಅವರು ಈಗ ಪಿಂಚಣಿ ರೂಪದಲ್ಲಿ ಪಡೆಯುತ್ತಿದ್ದಾರೆ. ಒಂದೊಮ್ಮೆ ಅವರು ಮರಣಿಸಿದ್ದರೆ ಅವರ ಪತ್ನಿಗೆ ಸಿಗುವ ಪಿಂಚಣಿ, ಆಕೆಯ ಪತಿ ಕೆಲಸ ಮಾಡುತ್ತಿದ್ದಾಗ ಸಿಗುತ್ತಿದ್ದ ಸಂಬಳದ ದುಪ್ಪಟ್ಟು ಇರುತ್ತದೆ.  ಜೀವನವೆಚ್ಚದ ಇಂಡೆಕ್ಸ್‌ಗೆ ಅನುಸಾರವಾಗಿ ಏರುತ್ತದೆ ಮತ್ತು ಜೊತೆಗೆ ಸಿಗುವ ಪಿಂಚಣಿಯೂ ಹೆಚ್ಚಿಗೆಯಾಗುತ್ತದೆ.  ಆದರೆ, ಈ ಎನ್‌.ಪಿ.ಎಸ್‌. ವಿಚಾರದಲ್ಲಿ ಹಾಗಲ್ಲ. ಅಲ್ಲಿ ಡಿ.ಎ. ಪ್ರಶ್ನೆಯೇ ಇಲ್ಲ. ಇದು ಈ ಯೋಜನೆಯ ಬಹುದೊಡ್ಡ ಕೊರತೆ.  ವೇತನದಾರರಲ್ಲಿ ಆತಂಕ ಉಂಟು ಮಾಡುವ ಪ್ರಮುಖ ಸಂಗತಿಗಳಲ್ಲಿ ಇದೂ ಒಂದು.  

ಮರಣಹೊಂದಿದರೆ..
ಹಿಂದಿನ ಪದ್ಧತಿಯಂತೆ ಒಬ್ಬ ಸರಕಾರಿ ನೌಕರ ವೃತ್ತಿನಿರತ ಅವಧಿಯಲ್ಲಿ ಮರಣ ಹೊಂದಿದರೆ ಆತನ ಅವಲಂಬಿತ ಕುಟುಂಬಕ್ಕೆ ಫ್ಯಾಮಿಲಿ ಪೆನ್ಷನ್‌, ಗ್ರಾಚ್ಯುಟಿಗೆ ಅನೇಕ ಸವಲತ್ತುಗಳು ಸಿಗುತ್ತಿದ್ದವು.  ಆದರಲ್ಲಿ ಎನ್‌.ಪಿ.ಎಸ್‌. ಗೆ ಒಳಪಟ್ಟವರಿಗೆ ಅದಾವುದೂ ಇಲ್ಲ. ಈಗ ವೇತನದಾರರ ಒತ್ತಾಯದ ಮೇರೆಗೆ ತಾತ್ಕಾಲಿಕ ನೆಲೆಯಲ್ಲಿ ಅಂಥ ಸವಲತ್ತು ಒದಗಿಸುವುದಕ್ಕೆ ಸರಕಾರ ಒಪ್ಪಿದೆ. ಆದರೆ ಅದನ್ನು ಖಾಯಂಗೊಳಿಸುವ ಖಾತರಿ ಕೊಟ್ಟಿಲ್ಲ.

ಗಾಯತ್ರಿ ಕುಟಿ ಏನು ಹೇಳುತ್ತದೆ?
ಆರನೇ ವೇತನ ಆಯೋಗದ ಅಡಿಯಲ್ಲಿ ನೇಮಕವಾದ ಗಾಯತ್ರಿ ಕುಟಿ ಈ ಕುರಿತು ಅಧ್ಯಯನ ಮಾಡಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ.  ಅದರ ಪ್ರಕಾರ, ಒಟ್ಟಾರೆ ಪಿಂಚಣಿ ನಿಧಿಯಲ್ಲಿ ಶೇ.54 ರಕ್ಷಣಾ ವಲಯದ ಪಾಲಿದೆ.  ರಕ್ಷಣಾ ಸಿಬ್ಬಂದಿ ಎನ್‌.ಪಿ.ಎಸ್‌. ಅಡಿಗೆ  ಬರುವುದಿಲ್ಲ.  ರೈಲ್ವೇ ಇಲಾಖೆ ಸಿಬ್ಬಂದಿ ದೊಡ್ಡ ಸಂಖ್ಯೆ¿åಲ್ಲಿದ್ದಾರೆ. ಅವರಿಗೆ ರೈಲ್ವೇ ಇಲಾಖೆಯ ಪ್ರತ್ಯೇಕ ನಿಧಿ ಇದ್ದು ಪ್ರತಿ ವರ್ಷದ ಬಜೆಟ್‌ ನಲ್ಲಿ ಅದಕ್ಕೆ ಮೊತ್ತ ನಿಗದಿಯಾಗುತ್ತದೆ. ಉಳಿದಂತೆ  ಪಿಂಚಣಿ ಬಾಬಿ¤ಗೆ ಸರಕಾರಕ್ಕೆ ತಗಲುವ ವೆಚ್ಚ ಜಿಡಿಪಿ ಅನುಪಾತದಲ್ಲಿ 1960ರಲ್ಲಿ ಶೇ. 2.7 ಇದ್ದರೆ ಅದು  2004-05 ರಲ್ಲಿ ಶೇ.1.8  ಕ್ಕೆ ಇಳಿದಿದೆ.  ಮುಂದುವರೆದು 2024-25ರ ವೇಳೆಯಲ್ಲಿ ಸರಕಾರಕ್ಕೆ ಆ ಬಾಬ್ತು ತಗಲುವ ವೆಚ್ಚ ಶೇ. 0-.54 ಆಗಲಿದೆ.  

ಯೋಜನೆಯ ಅಂತ್ಯದಲ್ಲಿ ಕೈಗೆ ಸಿಗುವ ಮೊತ್ತ ತೆರಿಗೆ ಮುಕ್ತ ಎಂಬುದು  ವೇತನದಾರರ ಮೂಗಿಗೆ ಸವರುವ ತುಪ್ಪ. ಅದು ಇಂದು ಯಾರಿಗೂ ಬೇಕಾಗಿಲ್ಲ. ಒಂದು ವೇಳೆ ಅದಕ್ಕೆ ತೆರಿಗೆ ಹಾಕುವುದಾದರೂ ಸರಿಯೇ ನಮ್ಮ ತಕರಾರಿಲ್ಲ, ಆದರೆ ಎಷ್ಟು ಸಿಗುತ್ತದೆ ಎಂಬ ಖಾತ್ರಿ ಇಲ್ಲವೆಂದ ಮೇಲೆ ತೆರಿಗೆ ವಿನಾಯಿತಿ ಕೊಟ್ಟು ಏನು ಪ್ರಯೋಜನ?  ಇದು ಸಾರ್ವತ್ರಿಕವಾಗಿ ಇರುವ ಅಭಿಪ್ರಾಯ.  

 – ನಿರಂಜನ

Advertisement

Udayavani is now on Telegram. Click here to join our channel and stay updated with the latest news.

Next