ಮಹಾನಗರ: ಜಿಲ್ಲಾ ಮಟ್ಟದಲ್ಲಿ ಆರ್ಥಿಕತೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸರಕಾರಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಕರಾವಳಿ ಉತ್ಸವಕ್ಕೆ ರಾಜ್ಯ ಸರಕಾರದಿಂದ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಈ ಬಾರಿಯೂ ಕರಾವಳಿ ಉತ್ಸವ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಈ ಬಾರಿ ಜನವರಿ ತಿಂಗಳಲ್ಲಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿ ಹಣಕಾಸಿನ ನೆರವಿಗೆ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಸರಕಾರದಿಂದ ಅನುದಾನ ಬಿಡುಗಡೆಯ ಬಗ್ಗೆ ಇನ್ನೂ ಯಾವುದೇ ಸೂಚನೆ ಬಂದಿಲ್ಲ. ಪ್ರತಿ ವರ್ಷಾಂತ್ಯ, ಆರಂಭಿಕ ತಿಂಗಳನ್ನು ಜೋಡಿಸಿಕೊಂಡು ಸುಮಾರು ಒಂದು ತಿಂಗಳ ಕಾಲ ಕರಾವಳಿ ಉತ್ಸವ ನಡೆಸಲಾಗುತ್ತದೆ. ಎರಡು ವರ್ಷಗಳಲ್ಲಿ ಕೊರೊನಾ ಕಾರಣಕ್ಕೆ ಈ ಉತ್ಸವ ಸ್ಥಗಿತಗೊಂಡಿತ್ತು. ಹಾಗಾಗಿ ಈ ವರ್ಷ ಹೊಸ ಹುಮ್ಮಸ್ಸಿನೊಂದಿಗೆ ಕರಾವಳಿ ಉತ್ಸವ ಆಯೋಜನೆಗೆ ಜಿಲ್ಲಾಡಳಿತ ಮುಂದಾಗಿತ್ತು.
ಕರಾವಳಿ ಉತ್ಸವ ಮೈದಾನವೆಂದೇ ಕರೆಯಲ್ಪಡುವ ಮಂಗಳಾ ಕ್ರೀಡಾಂಗಣ ಸಮೀಪದ ಮೈದಾನದಲ್ಲಿ ವಸ್ತು ಪ್ರದರ್ಶನ, ಮನೋರಂಜನ ಕ್ರೀಡೆಗಳ ಜತೆಯಲ್ಲೇ ನಗರದ ಕಡಲ ಕಿನಾರೆಯಲ್ಲಿ ಬೀಚ್ ಉತ್ಸವ, ಕದ್ರಿ ಪಾರ್ಕ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಉತ್ಸವ ಮೈದಾನದಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ಕರಾವಳಿ ಉತ್ಸವದ ಅಂಗವಾಗಿ ನಡೆಸಲಾಗುತ್ತದೆ. ಸ್ಥಳೀಯ ಕಲಾಪ್ರತಿಭೆಗಳ ಕಲಾನೈಪುಣ್ಯ ಪ್ರದರ್ಶನಕ್ಕೆ ಕರಾವಳಿ ಉತ್ಸವ ವೇದಿಕೆಯಾಗುವ
ಜತೆಗೆ ಹೊರ ರಾಜ್ಯ, ಜಿಲ್ಲೆಗಳ ಕಲಾ ಪ್ರದರ್ಶನಕ್ಕೂ ಕರಾವಳಿ ಉತ್ಸವದಲ್ಲಿ ಅವಕಾಶ ನೀಡಲಾಗುತ್ತದೆ. 2019ರಲ್ಲಿ ಜನವರಿ 10ರಿಂದ ಕರಾವಳಿ ಉತ್ಸವ ಆರಂಭವಾಗಿ, 9 ದಿನಗಳ ಕಾಲ ನಡೆದಿತ್ತು.
ಉತ್ಸವದುದ್ದಕ್ಕೂ ರಾಜ್ಯದ ವಿವಿಧ ಜಿಲ್ಲೆಗಳ ಕಲಾ ತಂಡಗಳಿಂದ ವೈವಿದ್ಯಮಯ ಕಲಾಪ್ರದರ್ಶನ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿತ್ತು. ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಯುವ ಉತ್ಸವ ಕದ್ರಿ ಪಾರ್ಕ್ನಲ್ಲಿ, ಪಣಂಬೂರಿನಲ್ಲಿ ಗಾಳಿಪಟ ಉತ್ಸವ ನಡೆದಿತ್ತು.
Related Articles
ವ್ಯಾಪಾರ ವಹಿವಾಟಿಗೆ ಉತ್ತೇಜನ ಉತ್ಸವದಲ್ಲಿ ಸ್ಥಳೀಯ ವ್ಯಾಪಾರ ವಹಿವಾಟಿಗೆ ಪ್ರದರ್ಶನದ ಮೂಲಕ ಉತ್ತೇಜನ ದೊರೆಯುವುದಲ್ಲದೆ, ವಿವಿಧ ಜಿಲ್ಲೆ ಹಾಗೂ ರಾಜ್ಯಗಳ ಮಳಿಗೆಗಳಿಗೂ ಟೆಂಡರ್ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ. ಪ್ರದರ್ಶನ ಸುಮಾರು ಒಂದು ತಿಂಗಳ ಕಾಲ ಮುಂದುವರಿಯುತ್ತದೆ. ಇದು ಕರಾವಳಿಯ ಆರ್ಥಿಕ ವಹಿವಾಟಿನ ಚೇತರಿಕೆ ಜತೆಗೆ ಸ್ಥಳೀಯರಿಗೆ ಮನೆಗೆ ಅಗತ್ಯದ ಸಾಮಗ್ರಿಗಳನ್ನು ಒಂದೇ ಕಡೆ ಕೊಳ್ಳಲು ಅವಕಾಶವಾದರೆ, ವೀಕೆಂಡ್ನ ಸಂಜೆ ಹೊತ್ತು ಕಳೆಯಲು ಕೂಡ ಅವಕಾಶ ಕಲ್ಪಿಸುತ್ತದೆ.
ಅನುದಾನ ಬಂದರೆ ಉತ್ಸವ
ಕರಾವಳಿ ಉತ್ಸವಕ್ಕೆ ಅನುದಾನ ಬಂದಿಲ್ಲ. ಸರಕಾರಕ್ಕೆ ಪತ್ರ ಹೋಗಿದೆ. ಜನವರಿಯಲ್ಲಿ ಉತ್ಸವ ನಡೆಸುವ ಚಿಂತನೆ ಇತ್ತು. ಅನುದಾನಕ್ಕಾಗಿ ಕಾಯಲಾಗುತ್ತಿದೆ. ಅನುದಾನ ಬಂದರೆ ಫೆಬ್ರವರಿ ತಿಂಗಳಲ್ಲಿ ನಡೆಸಲು ಯಾವುದೇ ಅಡ್ಡಿ ಇಲ್ಲ.
– ರವಿಕುಮಾರ್ ಎಂ.ಆರ್., ದ.ಕ. ಜಿಲ್ಲಾಧಿಕಾರಿ
ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ
ಕರಾವಳಿ ಉತ್ಸವಕ್ಕೆ ಸರಕಾರದಿಂದ ಅನುದಾನ ಬಿಡುಗಡೆ ಕುರಿತಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಅವರು ಈ ಬಗ್ಗೆ ವಿಚಾರಿಸುವುದಾಗಿ ಹೇಳಿದ್ದಾರೆ.
– ವೇದವ್ಯಾಸ ಕಾಮತ್,
ಶಾಸಕರು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ