Advertisement

ಬಾಕಿ ಶೇ. 8ರಷ್ಟು ಜನರಿಗೂ ಶೀಘ್ರ ಲಸಿಕೆ ನೀಡಿ: ಲೋಕಾಯುಕ್ತ ನಿರ್ದೇಶ

01:08 AM Nov 17, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಈವರೆಗೂ ಲಸಿಕೆ ಪಡೆಯದೆ ಇರುವ ಶೇ.8ರಷ್ಟು ಮಂದಿಯ ಮನವೊಲಿಸಿ ಲಸಿಕೆ ಪಡೆಯುವಂತೆ ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ವಿಶೇಷ ಪ್ರಯತ್ನ ನಡೆಸಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.

Advertisement

ಜಿ.ಪಂ.ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 9.99 ಲಕ್ಷ ಜನರಿಗೆ ಕೋವಿಡ್‌ ಲಸಿಕೆ ಹಾಕಲು ಗುರುತಿಸಲಾಗಿದ್ದು 9.22 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಶೇ. 93.5 ರಷ್ಟು ಪ್ರಗತಿಯಾಗಿದೆ. 2ನೇ ಡೋಸ್‌ ಪಡೆಯಲು ಅರ್ಹರಿರುವ 6.29 ಲಕ್ಷ ಮಂದಿಯಲ್ಲಿ 5.81 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದ್ದು, ಶೇ. 58.16 ಮಂದಿ 2 ಡೋಸ್‌ ಪಡೆದಿದ್ದಾರೆ ಎಂದರು.

ಲಸಿಕೆ ಬಾಕಿ ವರ್ಗ
ಮೀನು ಹಿಡಿಯಲು ತೆರಳುವ ಕಾರ್ಮಿಕರಲ್ಲಿ ಅನೇಕರು ಲಸಿಕೆ ಪಡೆಯಲು ಬಾಕಿ ಇರುವುದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇವರಿಗೆ ಲಸಿಕೆ ನೀಡುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆಯದೆ ಇರುವುದು ಕಂಡು ಬಂದಿದೆ. ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ತ್ವರಿತ ಅರ್ಜಿ ವಿಲೇವಾರಿಗೆ ಕರೆ
ಸರಕಾರದ ವಿವಿಧ ಸೌಲಭ್ಯಕ್ಕಾಗಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಸಣ್ಣಪುಟ್ಟ ತಪ್ಪುಗಳಿಗೆ ವಜಾಗೊಳಿಸದೆ, ಅರ್ಜಿದಾರರಿಂದ ಸರಿಪಡಿಸಿ ನಿಯಮಾನುಸಾರ ವಿಲೇವಾರಿ ಮಾಡಿ, ನ್ಯಾಯ ಒದಗಿಸಬೇಕು. ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಸಾರ್ವಜನಿಕರಿಂದ ಕೆಲಸ ಆಗಿಲ್ಲ ಎಂಬ ದೂರು ಬಾರದಂತೆ ಎಚ್ಚರ ವಹಿಸಲು ಸೂಚಿಸಿದರು.
ಡಿಸಿ ಕೂರ್ಮಾ ರಾವ್‌ ಎಂ., ಜಿ. ಪಂ.ಸಿಇಒ ಡಾ| ನವೀನ್‌ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್‌, ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಂಪರ್ಕ ಸಿಗುತ್ತಿಲ್ಲ ಎಂಬ ದೂರುಗಳಿವೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಮೊಬೈಲ್‌ ಟವರ್‌ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದಾಗ, ವಿಳಂಬವಿಲ್ಲದೆ ನಿಯಮಾನುಸಾರ ಅವುಗಳಿಗೆ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡಬೇಕು. ಬಿಟ್‌ ಕಾಯಿನ್‌ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿ ಓದಿಯೆ ಬಿಟ್‌ ಕಾಯಿನ್‌ ಬಗ್ಗೆ ತಿಳಿದಿರುವುದು. ಬೇರೆ ಯಾವುದೆ ಮಾಹಿತಿ ತಿಳಿದಿಲ್ಲ.
– ನ್ಯಾ| ಪಿ.ವಿಶ್ವನಾಥ ಶೆಟ್ಟಿ,
ಕರ್ನಾಟಕ ಲೋಕಾಯುಕ್ತ

Advertisement

ಇದನ್ನೂ ಓದಿ:ಕ್ರಿಪ್ಟೋ: ಆರ್ಥಿಕತೆ ಮೇಲೆ ದುಷ್ಪರಿಣಾಮ; ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಆತಂಕ

ಕರ್ತವ್ಯ ಸುಧಾರಣೆಗೆ ನ್ಯಾಯಮೂರ್ತಿ ಸಲಹೆ
ಉಡುಪಿ: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯವರು ಮಂಗಳವಾರ ನಗರದ ಲಸಿಕಾ ಕೇಂದ್ರ, ಸರಕಾರಿ ಶಾಲೆ, ಅಂಗನವಾಡಿ ಹಾಗೂ ಮಹಿಳಾ ನಿಲಯಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ, ಸುಧಾರಣೆಗೆ ಅಗತ್ಯ ಸೂಚನೆ ನೀಡಿದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಲಸಿಕೆ ಪಡೆಯಲು ಬಂದಿದ್ದ ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ವಿಚಾರಿಸಿ, ಲಸಿಕೆ ಪಡೆಯುವ ಬಗ್ಗೆ ಜನಜಾಗೃತಿ ಮೂಡಿಸಲು ಮನವಿ ಮಾಡಿದರು.

ಬೋರ್ಡ್‌ ಹೈಸ್ಕೂಲ್‌ಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಚುನಾವಣೆ ಕುರಿತು ಪ್ರಬಂಧ ಬರೆಯಲು ಬಂದಿದ್ದ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಮಾತನಾಡಿಸಿ, ಚೆನ್ನಾಗಿ ಓದಿ ಒಳ್ಳೆಯ ಸ್ಥಾನ ಪಡೆಯಬೇಕು ಎಂದರು.

ಎಸ್‌ಡಿಎಂಸಿ ಸದಸ್ಯರು, ಸಿಬಂದಿ ಜತೆ ಮಾತನಾಡುವ ವೇಳೆ ತಮಗೆ ಬೋಧಿಸಿದ್ದ ಅನಂತಕೃಷ್ಣ ಸಾಮಗ ಅವರನ್ನು ನೆನಪು
ಮಾಡಿಕೊಂಡರು. ಹೈಸ್ಕೂಲ್‌ ಮುಖ್ಯೋ ಪಾಧ್ಯಾಯ ಸುರೇಶ್‌ ಭಟ್‌, ಪಿಯು ಕಾಲೇಜು ಪ್ರಾಂಶುಪಾಲೆ ಲೀಲಾಬಾಯಿ ಭಟ್‌ ಶಾಲಾ, ಕಾಲೇಜಿಗೆ ಅಗತ್ಯವಾಗಿ ಬೇಕಿರುವ ವಿಷಯಗಳನ್ನು ಲೋಕಾಯುಕ್ತರ ಗಮನಕ್ಕೆ ತಂದರು.

ವೇತನ ಹೆಚ್ಚಿಸಲು ಸೂಚನೆ
ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಹುಣಸೆಹಣ್ಣು ಸಂಸ್ಕರಣೆ ಹಾಗೂ ಅಗರಬತ್ತಿ ಸಿದ್ಧಪಡಿಸುತ್ತಿರುವ ಮಹಿಳೆಯನ್ನು ಮಾತನಾಡಿಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು, ಇಲ್ಲಿರುವ ಮಹಿಳೆಯರಿಗೆ ಎಷ್ಟು ವೇತನ ನೀಡುತ್ತಿದ್ದಿರಿ? ಆ ಎಲ್ಲ ಮಾಹಿತಿ ಒದಗಿಸುವಂತೆ ಸೂಚಿಸಿದರು. ಅಧಿಕಾರಿಗಳು ವೇತನಕ್ಕೆ ಸಂಬಂಧಿಸಿದ ಪಾಸ್‌ಬುಕ್‌ ಒದಗಿಸಿದರು. ಕನಿಷ್ಠ ವೇತನ ಅಥವಾ ಈಗ ನೀಡುವುದಕ್ಕಿಂತ ಹೆಚ್ಚು ವೇತನ ಕೊಡಲು ಬೇಕಾದ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next