Advertisement

ಪಿಡಿಓ ವರ್ಗಾವಣೆ; ಸಾಗರ ತಾಪಂ ಎದುರು ಪ್ರತಿಭಟನೆ

10:32 PM Sep 21, 2022 | Vishnudas Patil |

ಸಾಗರ: ತಾಲೂಕಿನ ಯಡೇಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿ ವರ್ಗಾವಣೆಯಾಗಿ ಬಂದಿರುವ ಪಿಡಿಓ ಅವರ ನಿಯೋಜನೆಯನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ಯಡೇಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಗ್ರಾಮಸ್ಥರು ತಾಲೂಕು ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿ, ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಭೂಗಳ್ಳರಿಂದ ಯಡೇಹಳ್ಳಿ ಗ್ರಾಮ ಪಂಚಾಯ್ತಿಯನ್ನು ಉಳಿಸಲು ಗ್ರಾಮ ಪಂಚಾಯ್ತಿಯ ಪ್ರತಿಯೊಬ್ಬರೂ ಸಂಘಟನೆಯಾಗಬೇಕು. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿ ಗ್ರಾಮ ಪಂಚಾಯ್ತಿಯಲ್ಲಿ ಇರಬೇಕು ಎನ್ನುವ ಸ್ವಾರ್ಥವನ್ನು ಕೆಲವರು ಪ್ರದರ್ಶನ ಮಾಡುತ್ತಿದ್ದಾರೆ. ಯಡೇಹಳ್ಳಿ ಗ್ರಾಪಂಗೆ ವರ್ಗಾವಣೆಯಾಗಿ ಬಂದಿರುವ ಪಿಡಿಓ ಇಂದಿರಾ ಜ್ಯೋತಿ ತಮ್ಮ ಭೂಅಕ್ರಮಕ್ಕೆ ಸಹಕಾರ ನೀಡುವುದಿಲ್ಲ ಎಂದು ಅವರ ನಿಯೋಜನೆ ತಡೆ ಹಿಡಿಯುವ ಕೆಲಸವನ್ನು ಕೆಲವರು ಮಾಡುತ್ತಿರುವುದು ಖಂಡನೀಯ. ಮರ ಕಡಿಯುವವರು, ಭೂಕಬಳಿಸುವವರು, ಅರಣ್ಯ ಒತ್ತುವರಿ, ಕೆರೆ ಒತ್ತುವರಿ ಮಾಡುವವರ ಬೆಂಬಲಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ನಿಂತಿರುವುದು ಬೇಸರದ ಸಂಗತಿ. ಯಾವುದೇ ಕಾರಣಕ್ಕೂ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳು ಈಗಿನ ನಿಯೋಜನೆಯನ್ನು ರದ್ದು ಮಾಡಬಾರದು ಎಂದು ಒತ್ತಾಯಿಸಿದರು.

ನ್ಯಾಯವಾದಿ ಕೆ.ವಿ.ಪ್ರವೀಣ್ ಮಾತನಾಡಿ, ಯಡೇಹಳ್ಳಿ ಗ್ರಾಪಂ ಆಡಳಿತವನ್ನು ಸ್ಥಳೀಯರು ಗಮನಿಸುತ್ತಾರೆ. ಹೊರಗಿನಿಂದ ಬಂದರಿಗೆ ಇದರ ಉಸಾಬರಿ ಯಾಕೆ ಎಂಬ ಪ್ರಶ್ನೆ ಮೂಡುತ್ತದೆ. ೩೦ ಕಿಮೀ ಪಾದಯಾತ್ರೆ ಎಂದು ಕಾರಿನಲ್ಲಿ ಬಂದು ಬಿರಿಯಾನಿ ತಿನ್ನಿಸಿ, ತಲೆಗೆ ಇಂತಿಷ್ಟು ಎಂದು ಹಣ ಕೊಟ್ಟು, ಯಡೇಹಳ್ಳಿ ಗ್ರಾಮ ಪಂಚಾಯ್ತಿ ಜನರನ್ನು ಹೊರತುಪಡಿಸಿ ಅಕ್ಕಪಕ್ಕದ ಗ್ರಾಮಸ್ಥರನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿಸಿದ್ದು ಹಾಸ್ಯಾಸ್ಪದವಾಗಿದೆ. ತಮ್ಮ ಅಕ್ರಮಕ್ಕಾಗಿ ವರ್ಗಾವಣೆಯಾಗಿರುವ ಪಿಡಿಓ ಇಲ್ಲಿಯೇ ಇರಲಿ ಎಂದು ಒತ್ತಾಯಿಸುತ್ತಿದ್ದಾರೆಯೇ ವಿನಃ ಗ್ರಾಮ ಪಂಚಾಯ್ತಿ ಉತ್ತಮ ಆಡಳಿತ ನೀಡಲಿ ಎನ್ನುವ ಉದ್ದೇಶವಿಲ್ಲ. ಯಡೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ರಬ್ಬರ್ ಸ್ಟಾಂಪ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಕಾರ್ಯನಿರ್ವಾಹಣಾಧಿಕಾರಿ, ಹೊಸ ಪಿಡಿಓ ವಿರುದ್ಧ ಅನಗತ್ಯ ಆರೋಪ ಹೊರಿಸುತ್ತಿದ್ದಾರೆ. ಹೀಗೆ ಪ್ರತಿಭಟನೆ ಮಾಡುತ್‌ತಿರುವವರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನುಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಅರುಣ್ ಗೌಡ, ಶಿವಕುಮಾರ್, ಚೇತನ, ಜ್ಯೋತಿ, ಲೋಕಪ್ಪ, ಪ್ರಮುಖರಾದ ರವಿಕುಮಾರ್, ರೇವಪ್ಪ ಕೆ. ಹೊಸಕೊಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಅರುಣ ಕುಗ್ವೆ, ನವೀನ್ ಇರುವಕ್ಕಿ, ಮಹೇಶ್ ಗೌಡ, ನಾಗರಾಜ ಗೌಡ, ಗಂಗಾಧರಪ್ಪ, ಶಶಿಧರ್, ರೇವಣಯ್ಯ, ಬಂಗಾರಪ್ಪ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next