Advertisement

ಅಭಿಷೇಕ್‌ ಚಿತ್ರ ನಿರ್ದೇಶಿಸುವ ಬಗ್ಗೆ ಪವನ್‌ ಒಡೆಯರ್‌ ಅನುಮಾನ

10:42 AM Jan 10, 2018 | Team Udayavani |

ಅಂಬರೀಷ್‌ ಪುತ್ರ ಅಭಿಷೇಕ್‌ ಚಿತ್ರವನ್ನು ಪವನ್‌ ಒಡೆಯರ್‌ ನಿರ್ದೇಶಿಸುತ್ತಾರಂತೆ… ಹೀಗಂತ ಗಾಂಧಿನಗರಷ್ಟೇ ಅಲ್ಲ, ರಾಜ್ಯದೆಲ್ಲೆಡೆ ಹರಿದಾಡುತ್ತಿರುವ ಸುದ್ದಿ. ಅಸಲಿಗೆ ವಿಷಯವೇನೆಂದರೆ, ಅಭಿಷೇಕ್‌ ಚಿತ್ರವನ್ನು ಪವನ್‌ ಒಡೆಯರ್‌ ನಿರ್ದೇಶಿಸುವುದೇ ಅನುಮಾನ. ಹೌದು, ಈ ಮಾತನ್ನ ಸ್ವತಃ ಪವನ್‌ ಒಡೆಯರ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಅಭಿಷೇಕ್‌ ಚಿತ್ರಕ್ಕೆ ಪವನ್‌ ಒಡೆಯರ್‌ ಆ್ಯಕ್ಷನ್‌ ಕಟ್‌ ಹೇಳುತ್ತಾರೆ ಎಂಬ ಸುದ್ದಿ ಅವರಿಗೇ ಗೊತ್ತಿಲ್ಲ!

Advertisement

ಆದರೆ, ಒಂದಂತೂ ನಿಜ. ಮಾತುಕತೆ ಆಗಿದ್ದು ನಿಜ, ಕಥೆ ಹೇಳಿದ್ದೂ ನಿಜ. ಆದರೆ, ಯಾವುದೂ ಅಂತಿಮವಾಗಿಲ್ಲ ಅನ್ನೋದು ಅಷ್ಟೇ ಸತ್ಯ. ಹಾಗಾಗಿ, ಅಭಿಷೇಕ್‌ ಚಿತ್ರಕ್ಕೆ ಪವನ್‌ ಒಡೆಯರ್‌ ಆ್ಯಕ್ಷನ್‌-ಕಟ್‌ ಹೇಳುವುದು ಸದ್ಯ ಗೊಂದಲವಂತೂ ಹೌದು. ಈ ಕುರಿತು, “ಉದಯವಾಣಿ’ ಪವನ್‌ ಒಡೆಯರ್‌ ಅವರನ್ನೇ ಮಾತನಾಡಿಸಿದಾಗ, ಹೇಳಿದ್ದಿಷ್ಟು. “ಆ ಸುದ್ದಿ ಹೇಗೆ ಹರಡಿತೋ ಗೊತ್ತಿಲ್ಲ. ಚರ್ಚೆ ಆಗಿದ್ದು, ಕಥೆ ಹೇಳಿದ್ದೆಲ್ಲವೂ ಹೌದು.

ಆದರೆ, ನಿರ್ದೇಶನ ಮಾಡುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಯಾಕೆ ಹರಿಬಿರಿಯಾಗಿ ಸುದ್ದಿ ಹರಡಿಕೊಂಡಿತೋ ಗೊತ್ತಿಲ್ಲ. ಅವರಿಗೆ ಹೇಳಿದ್ದು ದೊಡ್ಡ ಕಥೆ. ಅದೊಂದು ಬೇರೆ ರೀತಿಯಾಗಿರುವಂತಹ ಜಾನರ್‌. ಅದಕ್ಕೆ ಬಹಳ ತಯಾರಿ ಬೇಕು. ಕಥೆಯಲ್ಲೇ ಗೊಂದಲ ಇರುವಾಗ, ಇನ್ನು ನಿರ್ದೇಶನ ಮಾಡೋದೆಲ್ಲಿ? ಅಂತಹ ಕಥೆ ಇಟ್ಟುಕೊಂಡು ಅವಸರದಲ್ಲಿ ಬೇಗ ಮಾಡೋಕ್ಕೂ ಆಗೋದಿಲ್ಲ. ಅಭಿಷೇಕ್‌ ಇನ್ನೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಅವರ ತಯಾರಿಗೇ ತಿಂಗಳುಗಟ್ಟಲೇ ಬೇಕು. ಹೀಗಿರುವಾಗ, ಅವರು ಕಥೆ ಒಪ್ಪಿ, ನಾನು ನಿರ್ದೇಶನ ಮಾಡುತ್ತಿದ್ದೇನೆ ಅಂತೆಲ್ಲಾ ಸುದ್ದಿಯಾಯ್ತು. ಅದ್ಹೇಗೆ ಅನೌನ್ಸ್‌ ಆಗೋಯ್ತು ಗೊತ್ತಿಲ್ಲ. ನನಗೇ ಸ್ಪಷ್ಟತೆ ಸಿಕ್ಕಿಲ್ಲ. ವಿನಾಕಾರಣ ಸುದ್ದಿಯಾಗಿ, ಪೇಚಿಗೆ ಸಿಲುಕಿದಂತಾಗಿದೆ. ಈ ಸುದ್ದಿ ಹರಡಿದಾಗಿನಿಂದಲೂ ಅಂಬರೀಶ್‌ ಅವರ ಅಭಿಮಾನಿಗಳಿಂದ ಫೋನ್‌ ಕರೆಗಳು ಬರುತ್ತಿವೆ. ಪ್ರತಿ ದಿನ ಅವರೊಂದಿಗೆ ಮಾತಾಡುವುದೇ ಆಗಿದೆ.

ಹಾಗೆ ಮಾಡಿ , ಹೀಗೆ ತೋರಿಸಿ ಅಂತೆಲ್ಲಾ ಮಾತುಗಳನ್ನು ಕೇಳುತ್ತಿದ್ದೇನೆ. ನಿಜ ಹೇಳುವುದಾದರೆ, ಅಭಿಷೇಕ್‌ ಅವರಿಗೂ ಮೊದಲ ಸಿನಿಮಾ ಮುಖ್ಯವಾಗಿರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನ ಲೈಫ‌ು ಅದರಲ್ಲಿದೆ. ಆ ಬಗ್ಗೆ ಇನ್ನೂ ಏನೇನೂ ಆಗಿಲ್ಲ, ಈಗಲೇ ಇಲ್ಲದ್ದನ್ನೂ ಹೇಳಲು ಆಗೋದಿಲ್ಲ. ಆ ಚಿತ್ರ ನಿರ್ದೇಶನ ಮಾಡೋದೇ ಅನುಮಾನ. ಯಾಕೆಂದರೆ, ಯಾವುದೇ ಚರ್ಚೆಗಳು ಪರಿಪೂರ್ಣಗೊಂಡಿಲ್ಲ’ ಎಂಬುದು ಪವನ್‌ ಒಡೆಯರ್‌ ಮಾತು.

Advertisement

ಮೊದಲು ಪುನೀತ್‌ ಸಿನಿಮಾ: ಹಾಗಾದರೆ, ಪವನ್‌ ಒಡೆಯರ್‌ ಮುಂದೇನು ಮಾಡುತ್ತಾರೆ ಎಂದರೆ, “ಸದ್ಯಕ್ಕೆ ನಾನು ರಾಕ್‌ಲೈನ್‌ ವೆಂಕಟೇಶ್‌ ಅವರ ಬ್ಯಾನರ್‌ನಲ್ಲಿ ಪುನೀತ್‌ರಾಜ್‌ಕುಮಾರ್‌ ಚಿತ್ರ ಮಾಡುತ್ತಿದ್ದೇನೆ. ಅದಾದ ಮೇಲೆ ಯಶ್‌ ಅವರಿಗೊಂದು ಚಿತ್ರ ಮಾಡಬೇಕಿದೆ’ ಎನ್ನುತ್ತಾರೆ ಅವರು. “ಹೌದು, “ಗೂಗ್ಲಿ’ ಬಳಿಕವೇ ಜಯಣ್ಣ ಅವರಿಗೆ ಯಶ್‌ ಜತೆ ಚಿತ್ರ ಮಾಡಿಕೊಡುವ ಕುರಿತು ಮಾತುಕತೆಯಾಗಿತ್ತು. ಅದಿನ್ನೂ ದೂರವಿದೆ.

ಅದಕ್ಕೂ ಮುನ್ನ, ಪುನೀತ್‌ ರಾಜಕುಮಾರ್‌ ಚಿತ್ರ ಆಗಲಿದೆ. ಅದು ಸ್ವಮೇಕ್‌ ಕಥೆಯಾಗಿದ್ದು, ಕ್ಲೈಮ್ಯಾಕ್ಸ್‌ ಸ್ವಲ್ಪ ಬದಲಾಗಬೇಕಿದೆ. ಆ ಕುರಿತು ಅಪ್ಪು ಸರ್‌ ಜತೆ ಚರ್ಚೆಯಾಗುತ್ತಿದೆ. ಅದಾದ ಮೇಲೆ ಯಾವಾಗ ಸಿನಿಮಾ ಅನ್ನುವುದಕ್ಕೂ ಸ್ಪಷ್ಟ ಚಿತ್ರಣವಿಲ್ಲ. ಯಾಕೆಂದರೆ, ಶಶಾಂಕ್‌ ಅವರ ನಿರ್ದೇಶನದಲ್ಲಿ ಅಪ್ಪು ಸರ್‌ ಚಿತ್ರ ಆಗಬೇಕಿದೆ.

ಅದು ಮೊದಲೋ, ರಾಕ್‌ಲೈನ್‌ ಅವರ ಚಿತ್ರ ಮೊದಲೋ ಗೊತ್ತಿಲ್ಲ. ಒಟ್ನಲ್ಲಿ, ವಿನಾಕಾರಣ ಸುದ್ದಿಗಳು ಹರಿದಾಡಿ ನಾನು ತಗಲಾಕೊಂಡಂತಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್‌ ವೇಳೆಗೆ ರಾಕ್‌ಲೈನ್‌ ಬ್ಯಾನರ್‌ನಲ್ಲಿ ಸಿನಿಮಾ ಶುರುವಾಗಬಹುದು. ಇಲ್ಲವಾದರೆ, ಮುಂದಕ್ಕೂ ಹೋಗಬಹುದು.

ಸಂತೋಷ್‌ ಆನಂದರಾಮ್‌ ಅವರ ಜತೆ ಜೂನ್‌ ಅಥವಾ ಜುಲೈನಲ್ಲಿ ಅಪ್ಪು ಸರ್‌ ಚಿತ್ರ ಶುರುವಾಗಲಿದೆ. ನನ್ನ ಚಿತ್ರ ಯಾವಾಗ ಅಂತ ಗೊಂದಲದಲ್ಲಿದ್ದೇನೆ. ಈ ವರ್ಷ ಸಿನಿಮಾ ಆಗುವುದಂತೂ ನಿಜ. ಆಗಸ್ಟ್‌ನಲ್ಲಿ ಮದುವೆ ನಡೆಯಲಿದೆ. ಅದರ ಒಳಗೆ ಒಂದು ಸಿನಿಮಾ ಮಾಡ್ತೀನಿ. ಯಾವಾಗ, ಯಾರದ್ದು ಅನ್ನುವುದನ್ನು ಇಷ್ಟರಲ್ಲೇ ಹೇಳ್ತೀನಿ’ ಅಂತ ಹೇಳಿ ಸುಮ್ಮನಾಗುತ್ತಾರೆ ಪವನ್‌.

* ಅಭಿ ಚಿತ್ರ ನಿರ್ದೇಶಿಸುತ್ತಿರುವ ಸುದ್ದಿ ಹೇಗೆ ಹಬ್ಬಿತೋ ಗೊತ್ತಿಲ್ಲ
* ಅಭಿ ಚಿತ್ರ ನಿರ್ದೇಶನ ಮಾಡುವುದು ಅನುಮಾನ
* ಮಾತುಕತೆ ಆಗಿದ್ದು ನಿಜ, ಯಾವುದೂ ಅಂತಿಮವಾಗಿಲ್ಲ
* ಅಭಿಷೇಕ್‌ ತಯಾರಿಗೇ ತಿಂಗಳುಗಟ್ಟಲೇ ಬೇಕು
* ರಾಕ್‌ಲೈನ್‌ ಬ್ಯಾನರ್‌ನಲ್ಲಿ ಪುನೀತ್‌ ಚಿತ್ರ ನಿರ್ದೇಶನ
* ಅದಾದ ಮೇಲೆ ಯಶ್‌ಗೆ ಚಿತ್ರ ಮಾಡಬೇಕಿದೆ
* ಮದುವೆ ಒಳಗೆ ಒಂದು ಸಿನಿಮಾ ಮಾಡ್ತೀನಿ

Advertisement

Udayavani is now on Telegram. Click here to join our channel and stay updated with the latest news.

Next