Advertisement

Session; ಗದ್ದಲದ ನಡುವೆ 5 ಮಸೂದೆ ಅಂಗೀಕಾರ! ಕೆರಳಿದ ವಿಪಕ್ಷಗಳಿಂದ ಮುಂದುವರಿದ ಪ್ರತಿಭಟನೆ

12:06 AM Jul 26, 2024 | Team Udayavani |

ಬೆಂಗಳೂರು: ಅಹೋರಾತ್ರಿ ಧರಣಿ ಅನಂತರವೂ ಮುಡಾ ನಿವೇಶನ ಹಂಚಿಕೆ ಹಗರಣ ಕುರಿತ ಚರ್ಚೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಳ್ಳಿಹಾಕಿದ್ದರಿಂದ ಗುರುವಾರ ಕೂಡ ಮೇಲ್ಮನೆಯಲ್ಲಿ ವಿಪಕ್ಷಗಳ ಹೋರಾಟ ಮುಂದುವರಿಯಿತು. ಆ ಗದ್ದಲದ ನಡುವೆಯೇ ವಿಧಾನಸಭೆಯಿಂದ ಅಂಗೀಕೃತವಾಗಿದ್ದ ಬಹುತೇಕ ಎಲ್ಲ ಮಸೂದೆಗಳಿಗೆ ಅನುಮೋದನೆ ನೀಡಲಾಯಿತು.

Advertisement

ಕಲಾಪ ಆರಂಭವಾಗುತ್ತಿದ್ದಂತೆ ಮುಡಾ ಹಗರಣ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಬಾವಿಗಿಳಿದು ಧರಣಿ ನಡೆಸಿದ ವಿಪಕ್ಷಗಳ ಸದಸ್ಯರು, ಈಗಾಗಲೇ ಅಹೋರಾತ್ರಿ ಧರಣಿ ನಡೆಸಿದ್ದೇವೆ. ಒಂದು ದಿನದ ಹಿಂದೆಯೇ ಮರುಪರಿಶೀಲನೆ ಅರ್ಜಿ ಸಲ್ಲಿಸಲಾಗಿತ್ತು. ಅದರ ಪರಿಶೀಲನೆಗೆ ಸಾಕಷ್ಟು ಸಮಯಾವಕಾಶವನ್ನೂ ತೆಗೆದುಕೊಂಡಿದ್ದೀರಿ. ಈಗಲಾದರೂ ಅವಕಾಶ ಕಲ್ಪಿಸಬೇಕು ಎಂದು ಸಭಾಪತಿಗಳಿಗೆ ಮನವಿ ಮಾಡಿದರು.

ಪ್ರತಿಕ್ರಿಯಿಸಿದ ಸಭಾಪತಿಗಳು, ನಿಯಮ 62ರ ಅಡಿ ನಿಲುವಳಿ ಸೂಚನೆ ಮಂಡನೆಗೆ ವಿಪಕ್ಷ ನಾಯಕರು ಈಗಾಗಲೇ ನಿರಾಕರಿಸಿದ ಪ್ರಸ್ತಾವವನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ವಿಚಾರದ ಬಗ್ಗೆ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗ ನೇಮಕ ಮಾಡಿದ್ದು ತನಿಖೆ ನಡೆಯುತ್ತಿದೆ. ತನಿಖೆ ನಡೆಸಿ ವರದಿ ನೀಡುವಂತೆ ಸರಕಾರ ಆಯೋಗಕ್ಕೆ ಹೇಳಿದೆ. ಹಾಗಾಗಿ ಮರುಪರಿಶೀಲನೆ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ಪ್ರಕಟಿಸಿದರು. ಇದರ ಬೆನ್ನಲ್ಲೇ ಆಡಳಿತ ಪಕ್ಷದವರು ಮೇಜು ಕುಟ್ಟಿ ಸ್ವಾಗತಿಸಿದರು.

ನಿರ್ಣಯವನ್ನು ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು 40 ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಒಂದೇ ಒಂದು ಕಪ್ಪುಚುಕ್ಕೆ ಇಲ್ಲ. ಇದರಿಂದ ವಿಪಕ್ಷಗಳಿಗೆ ಹೊಟ್ಟೆಕಿಚ್ಚು ಶುರುವಾಗಿದೆ. ಹಾಗಾಗಿ ನನಗೆ ಮಸಿ ಬಳಿಯಬೇಕು ಎಂಬ ದುರುದ್ದೇಶದಿಂದ ಹಗರಣವೇ ಇಲ್ಲದಿದ್ದರೂ ಹಗರಣದಂತೆ ಬಿಂಬಿಸಲು ಹೊರಟಿದ್ದಾರೆ. ಸಭಾಪತಿಗಳು ಯಾವುದೇ ಕಾರಣಕ್ಕೂ ನಿರ್ಣಯ ದಿಂದ ಹಿಂದೆ ಸರಿಯಬಾರದು ಎಂದರು.

ಮತ್ತಷ್ಟು ಕೆರಳಿದ ವಿಪಕ್ಷಗಳ ಸದಸ್ಯರು, ಮುಡಾ ನಿವೇಶನಗಳನ್ನು ನುಂಗಿ ನೀರುಕುಡಿದ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ… ಸಮಾಜವಾದಿ ಅಂತಾರೆ ಬಡವರ ಸೈಟ್‌ಗಳನ್ನು ನುಂಗುತ್ತಾರೆ…’ ಅಂತ ಘೋಷಣೆ ಕೂಗಿದರು. ಮತ್ತೂಂದೆಡೆ ಬಹುದೊಡ್ಡ ಹಗರಣ ಇದಾಗಿದ್ದರಿಂದ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸಭಾಪತಿಗಳನ್ನೂ ಒತ್ತಾಯಿಸಿದರು.

Advertisement

ಕೇವಲ ಅರ್ಧಗಂಟೆಯಲ್ಲಿ ಅಂಗೀಕಾರ
ಕೇವಲ ಅರ್ಧಗಂಟೆಯಲ್ಲಿ 5 ಮಸೂದೆಗಳು ಮತ್ತು 2 ನಿರ್ಣಯಗಳ ಮಂಡನೆ ಜತೆಗೆ ಅಂಗೀಕಾರಗೊಂಡವು. ಅಷ್ಟೇ ಅಲ್ಲ, ವರದಿ ಮತ್ತು ಕಾಗದಪತ್ರಗಳನ್ನು ಇದೇ ಅವಧಿಯಲ್ಲಿ ಮಂಡಿಸಲಾಯಿತು.

ಈ ಪೈಕಿ ಕರ್ನಾಟಕ ಧನವಿನಿಯೋಗ (ಸಂಖ್ಯೆ-4) ಮಸೂದೆ -2024, ಕರ್ನಾಟಕ ನೀರಾವರಿ (ತಿದ್ದುಪಡಿ) ಮಸೂದೆ, ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ಎರಡನೇ ತಿದ್ದುಪಡಿ) ಮಸೂದೆ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ದಿ) ಮಸೂದೆ, ಸರಕು-ಸೇವೆಗಳ ಮಸೂದೆಗಳು ಚರ್ಚೆ ಇಲ್ಲದೆ ಅಂಗೀಕಾರಗೊಂಡವು.

2026ರಲ್ಲಿನ ಅಥವಾ ಅದರ ಅನಂತರ ನಡೆಸುವ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ನಡೆಸಬಾರದು. 1971ರ ಜನಗಣತಿ ಆಧರಿಸಿ ನಿರ್ಧರಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು. ಜತೆಗೆ ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯ ಉಂಟುಮಾಡಲಿದೆ. ಹಾಗಾಗಿ ಈ ನೀತಿಯನ್ನು ಅನುಷ್ಠಾನಗೊಳಿಸಬಾರದು ಎಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನೂ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next