Advertisement

ಪಕ್ಷಗಳ ಸಂಪಾದನೆಯೂ, ಭ್ರಷ್ಟಾಚಾರವೂ!

12:30 AM Feb 04, 2019 | |

ಇಂದು ಚುನಾವಣೆಗಳನ್ನು ನಡೆಸಲು ಪಕ್ಷಗಳಿಗೆ ಕೋಟಿಗಟ್ಟಲೆ ಹಣ ಬೇಕು. ಗ್ರಾಮ ಪಂಚಾಯಿತಿಯ ಒಂದು ವಾರ್ಡ್‌ ಚುನಾವಣೆಗೂ ಲಕ್ಷಗಟ್ಟಲೆ ಹಣವನ್ನು ಅನಧಿಕೃತವಾಗಿ ಖಾಲಿ ಮಾಡುವುದು ಸಕ್ರಮವಾಗಿದೆ. ಪ್ರಶ್ನೆ ಅದಲ್ಲ, ರಾಜಕೀಯ ಪಕ್ಷಗಳು ಚುನಾವಣಾ ವೆಚ್ಚಗಳನ್ನು ಭರಿಸಲು ಪ್ರಮುಖವಾಗಿ ಧನ ದಾನಗಳನ್ನೇ ನಂಬಬೇಕು. ಉದ್ಯಮಿಗಳು, ಅದೇ ಪಕ್ಷದ ಜನಪ್ರತಿನಿಧಿಗಳು ಈ ನಿಧಿಗೆ ಹಣ ಕೊಡುಗೆ ನೀಡುತ್ತಾರಾದರೂ ಅದರ ಹಿಂದೆ ನಿರೀಕ್ಷೆಗಳಿದ್ದೇ ಇರುತ್ತವೆ. ಉದ್ಯಮ ಪರ ನೀತಿಯನ್ನು ಅವರು ಆಶಿಸಿದರೆ, ಈ ರಾಜಕಾರಣಿ ಟಿಕೆಟ್‌ ಅಥವಾ ಕೊನೆಪಕ್ಷ ವರ್ಗಾವರ್ಗಿ ದಂಧೆಯಲ್ಲಿ ತನ್ನ ಪಾಲು ಕೇಳುತ್ತಾನೆ. 

Advertisement

ಭ್ರಷ್ಟಾಚಾರ ಇಲ್ಲದ ವ್ಯವಸ್ಥೆ ಚೆನ್ನ ಎಂಬ ಅಭಿಪ್ರಾಯ ಸರ್ವಮಾನ್ಯ. ಇದಕ್ಕಾಗಿ ಪ್ರಾಮಾಣಿಕತೆಯ ಬೆಳೆಯನ್ನು ಎಲ್ಲಿಂದ ತೆಗೆಯಬೇಕು ಎಂಬ ಬಗ್ಗೆ ಮಾತ್ರ ಸದಾ ಗೊಂದಲವಿದೆ. ನಾವು ನಮ್ಮ ಕಾಲಬುಡಕ್ಕೆ ಬಂದಾಗ ನಿಯತ್ತಿನ ಅಗ್ನಿಪರೀಕ್ಷೆಯಿಂದ ನೆಪಗಳ ಗುರಾಣಿ ಹಿಡಿದು ತಪ್ಪಿಸಿಕೊಳ್ಳುತ್ತೇವೆ. ಕಾಲಕ್ಕೆ ಬೇಕಾದ ಸಮರ್ಥನೆ ನಮ್ಮದಾಗಿರುತ್ತದೆ. ಲೋಕಾಯುಕ್ತ ಇರಲಿ, ಲೋಕಪಾಲ ವ್ಯವಸ್ಥೆ ಜಾರಿಯಾಗಲಿ…. ಈಗಿನ ಭ್ರಷ್ಟಾಚಾರ ಕಡಿಮೆಯಾಗುವುದು ಅನುಮಾನ. ಆ ಮಟ್ಟಿಗೆ ನಾವು ಬದಲಾಗುವುದರಿಂದ ಭ್ರಷ್ಟಾಚಾರ ಬಸವಳಿಯುತ್ತದೆ ಎಂದುಕೊಳ್ಳುವುದು ಮೂರ್ಖತನ.

ಹಣದ ಹೊಳೆ!
2017-18ರ ಆದಾಯ ಲೆಕ್ಕಪತ್ರ ಸಲ್ಲಿಕೆ ಪ್ರಕಾರ ಭಾರತೀಯ ಜನತಾ ಪಕ್ಷದ ಆದಾಯ 1,027.339 ಕೋಟಿ ರೂ. ಇದರಲ್ಲಿ ಆ ಪಕ್ಷ 758.47 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಅಂದರೆ, ಅದರ ಬೊಕ್ಕಸಕ್ಕೆ ಸದರಿ ವರ್ಷ ಶೇ. 26ರಷ್ಟು ಹಣ ಸೇರ್ಪಡೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ 51.694 ಕೋಟಿ ರೂ. ಗಳಿಸಿ ಅದರಲ್ಲಿ 14.78 ಕೋಟಿ ರೂ. ಮಾತ್ರ ಖಾಲಿ ಮಾಡಿದೆ. ದಾಖಲೆಗಳ ಪ್ರಕಾರ ಕೇವಲ ಎನ್‌ಸಿಪಿ ಮಾತ್ರ ವಾರ್ಷಿಕ 8.15 ಕೋಟಿ ರೂ. ಆದಾಯ ಇದ್ದರೂ ಸುಮಾರು 69 ಲಕ್ಷ ರೂ. ಹೆಚ್ಚು ಖರ್ಚು ಮಾಡಿದೆ. ಪ್ರತಿ ರಾಜಕೀಯ ಪಕ್ಷಕ್ಕೆ ಲೆಕ್ಕಪತ್ರ ಸಲ್ಲಿಕೆಗೆ ಅಕ್ಟೋಬರ್‌ 30 ಕಡೆಯ ದಿನವಾದರೂ ಬಿಜೆಪಿ 24 ದಿನಗಳ ವಿಳಂಬದ ನಂತರ ತನ್ನ ಲೆಕ್ಕ ಒಪ್ಪಿಸಿತ್ತು. ಇತ್ತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ 2018ರ ಡಿಸೆಂಬರ್‌ 17ರವರೆಗಂತೂ ತನ್ನ ಆದಾಯ ಖರ್ಚುಗಳ ಆಡಿಟ್‌ ವರದಿಯನ್ನು ಸಲ್ಲಿಸಿರಲಿಲ್ಲ.

2016-17ರಲ್ಲಿ ಕಾಂಗ್ರೆಸ್‌, ರಾಜಕೀಯ ಪಕ್ಷಗಳಲ್ಲಿಯೇ ಎರಡನೇ ಅತಿ ಹೆಚ್ಚಿನ ಆದಾಯವನ್ನು ತನ್ನದಾಗಿಸಿಕೊಂಡಿತ್ತು. ಅದು 225.36 ಕೋಟಿ ಆದಾಯವನ್ನು ಘೋಷಿಸಿಕೊಂಡಿತ್ತು. ಇತ್ತ ಬಿಜೆಪಿ 1034.27 ಕೋಟಿ ರೂ. ಪಕ್ಷದ ನಿಧಿಗೆ ಹರಿದುಬಂದಿರುವುದಾಗಿ ಹೇಳಿತ್ತು. ಆ ಮಟ್ಟಿಗೆ 2016-17ರ ವರ್ಷಕ್ಕೆ ಅವರ ಆದಾಯ ಶೇ. 0.67ರಷ್ಟು ಕುಸಿದಿತ್ತು. ಪ್ರಶ್ನೆ ಅದಲ್ಲ, ಎರಡು ಪ್ರಮುಖ ರಾಜಕೀಯ ಪಕ್ಷಗಳಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಆದಾಯದ ಮೇಲಿನ ಅಂತರ ಎರಡೂ ಪಕ್ಷಗಳು ಮುಂದಿನ ಚುನಾವಣೆಗಳಲ್ಲಿ ನಡೆಸುವ ಪ್ರಚಾರದ ವೈಖರಿಯಲ್ಲಿ ಅಗಾಧ ವ್ಯತ್ಯಾಸ ಇರುವುದನ್ನು ಹೇಳಬಲ್ಲದು. ಅದಕ್ಕಿಂತ ಮುಖ್ಯವಾಗಿ, ರಾಜಕೀಯ ಪಕ್ಷವೊಂದು ಅಧಿಕಾರದಲ್ಲಿದೆ ಎಂತಾದರೆ ಅದರ ಆದಾಯ ಎಷ್ಟು ಪಟ್ಟು ಹೆಚ್ಚುತ್ತದೆ ಎಂಬುದು ಮನವರಿಕೆಯಾಗುತ್ತದೆ. ರಾಜಕೀಯ ಪಕ್ಷಗಳು “ಅಧಿಕಾರದ ಮಿಷನ್‌’ ನಡೆಸುವುದು, ಅದಕ್ಕಾಗಿ ಶಾಸಕರು, ರೆಸಾರ್ಟ್‌ಗಳಿಗೆ ಹಣ ಖರ್ಚು ಮಾಡುವುದರ ಹಿಂದೆ ಈ ಉದ್ಯಮದ ಲಾಭಗಳತ್ತ ಕಣ್ಣು ಇದೆ ಎಂಬುದು ವ್ಯಕ್ತ!

ಆದಾಯ ಇಳಿಮುಖ!
ರಾಜಕೀಯ ಪಕ್ಷಗಳ ಆದಾಯದಲ್ಲಿ ಇಳಿಮುಖವಾಗಿದೆ ಎಂಬುದು ಅಂಕಿಸಂಖ್ಯೆಗಳ ಜೊತೆಗೆ ಆಡುವ ಆಟವಷ್ಟೇ. ಇಂದು ಚುನಾವಣೆಗಳನ್ನು ನಡೆಸಲು ಪಕ್ಷಗಳಿಗೆ ಕೋಟಿಗಟ್ಟಲೆ ಹಣ ಬೇಕು. ಗ್ರಾಮ ಪಂಚಾಯಿತಿಯ ಒಂದು ವಾರ್ಡ್‌ ಚುನಾವಣೆಗೂ ಲಕ್ಷಗಟ್ಟಲೆ ಹಣವನ್ನು ಅನಧಿಕೃತವಾಗಿ ಖಾಲಿ ಮಾಡುವುದು ಸಕ್ರಮವಾಗಿದೆ. ಪ್ರಶ್ನೆ ಅದಲ್ಲ, ರಾಜಕೀಯ ಪಕ್ಷಗಳು ಚುನಾವಣಾ ವೆಚ್ಚಗಳನ್ನು ಭರಿಸಲು ಪ್ರಮುಖವಾಗಿ ಧನ ದಾನಗಳನ್ನೇ ನಂಬಬೇಕು. ಉದ್ಯಮಿಗಳು, ಅದೇ ಪಕ್ಷದ ಜನಪ್ರತಿನಿಧಿಗಳು ಈ ನಿಧಿಗೆ ಹಣ ಕೊಡುಗೆ ನೀಡುತ್ತಾರಾದರೂ ಅದರ ಹಿಂದೆ ನಿರೀಕ್ಷೆಗಳಿದ್ದೇ ಇರುತ್ತವೆ. ಉದ್ಯಮ ಪರ ನೀತಿಯನ್ನು ಅವರು ಆಶಿಸಿದರೆ, ಈ ರಾಜಕಾರಣಿ ಟಿಕೆಟ್‌ ಅಥವಾ ಕೊನೆಪಕ್ಷ ವರ್ಗಾವರ್ಗಿ ದಂಧೆಯಲ್ಲಿ ತನ್ನ ಪಾಲು ಕೇಳುತ್ತಾನೆ. ಪಕ್ಷಗಳ ಚುನಾವಣಾ ನಿಧಿಗೆ ಹಣ ತುಂಬದ ರೈತ, ಜನಸಾಮಾನ್ಯನ ಪರ ರಾಜಕೀಯ ಪಕ್ಷಗಳು ನಿಲ್ಲಲೇ ಬೇಕು ಎಂತಾದರೆ ಹತ್ತಿರದಲ್ಲಿ ಚುನಾವಣೆ ಇರಬೇಕು! ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ರೂಪಿಸುತ್ತಿರುವ, ಜಾರಿಗೊಳಿಸುತ್ತಿರುವ ಕಾನೂನುಗಳು ಜನರ ಹಿತಕ್ಕಾಗಿ ಇಲ್ಲ, ಅವು ಹೊರ ಬೀಳುತ್ತವೆ ಎಂದರೆ ಜನ ವಿರೋಧಿಸುವಂತಾಗಿದೆ ಎಂಬುದರಲ್ಲಿ ಹೇಳಬೇಕಾದುದೆಲ್ಲವೂ ಇದೆ!

Advertisement

ಎಲ್ಲಿಂದ ಬಂತು ಹಣ?
ದೇಣಿಗೆಗಳು ಹಾಗೂ ಸಹಾಯಗಳ ಮೂಲಕ ಹಣ ಸಂಗ್ರಹಿಸಿದ್ದೇವೆ ಎಂಬುದು ರಾಜಕೀಯ ಪಕ್ಷಗಳ ಹೇಳಿಕೆ. ಅದನ್ನು ಹೇಳಲು ಅವು ಕೆಲವು ದಾಖಲೆಗಳನ್ನು ಮುಂದಿಡುತ್ತವೆ. ವ್ಯವಸ್ಥೆ ಮೊನಚಾಗಿರಬೇಕಾದರೆ ಅಂಥ ದೇಣಿಗೆ, ಸಹಾಯಗಳ ಪರಿಶೀಲನೆ ಕಾಲಕಾಲಕ್ಕೆ ಪûಾತೀತವಾಗಿ ಆಗಬೇಕಾಗುತ್ತದೆ. 2017-18ರಲ್ಲಿ ಬಿಜೆಪಿಗೆ 989.707 ಕೋಟಿ ರೂ. ಬಂದಿದ್ದು, ಸಿಪಿಎಂಗೆ 39.02 ಕೋಟಿ, ಬಿಎಸ್‌ಪಿಗೆ 10.676 ಕೋಟಿ ರೂ. ಬಂದಿದ್ದು ಇದೇ ಮೂಲದಿಂದ. ಬಿಜೆಪಿಯ ಶೇ. 96.34 ಆದಾಯ ಬಂದಿದ್ದು ದೇಣಿಗೆ, ಸಹಾಯದಿಂದ. ಬಹುಪಾಲು ಪಕ್ಷಗಳು ತಮ್ಮ ಪ್ರಮುಖ ಆದಾಯ ಮೂಲಗಳಾಗಿ ದೇಣಿಗೆ, ಸಹಾಯ ಧನಗಳಿದ್ದು ಎನ್‌ಸಿಪಿಯಂಥ ಕೆಲವು ಪಕ್ಷಗಳು ಮಾತ್ರ ಕೂಪನ್‌, ಪ್ರಕಟಣೆಗಳ ಮಾರಾಟದಿಂದ ಗರಿಷ್ಠ ಆದಾಯ ಗಳಿಸಿರುವುದನ್ನು ಹೇಳಿಕೊಂಡಿವೆ.

ಖರ್ಚಿನ ಪ್ರಶ್ನೆ ಬಂದಾಗ, ಬಿಜೆಪಿ ಚುನಾವಣೆ ಹಾಗೂ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಜಾಹೀರಾತು ಮೊದಲಾದ ಚಟುವಟಿಕೆಗಳಿಗಾಗಿಯೇ 2017-18ರ ಆರ್ಥಿಕ ವರ್ಷವೊಂದರಲ್ಲಿ 567.43 ಕೋಟಿ ರೂ. ವೆಚ್ಚ ಮಾಡಿದೆ. ಚುನಾವಣೆಗಳು ಬಜೆಟ್‌ಅನ್ನು ಬಯಸುವವರೆಗೆ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಕಷ್ಟ. ಈ ಮುನ್ನವೂ ಚುನಾವಣಾ ಆಯೋಗದ ಮುಂದೆ ಪಕ್ಷಗಳ ಚುನಾವಣಾ ವೆಚ್ಚವನ್ನು ಭರಿಸುವ ಸಲಹೆಯೊಂದನ್ನು ಪ್ರಸ್ತಾಪಿಸಲಾಗಿತ್ತು. ಈ ಕಾಲದಲ್ಲಿ ಅದನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮನೆ ಮನೆ ಪ್ರಚಾರವೊಂದನ್ನು ರಾಜಕೀಯ ಪಕ್ಷಗಳ ನಿಷ್ಕರ್ಷೆಗೆ ಬಿಟ್ಟು ಸಾರ್ವಜನಿಕ ಸಮಾರಂಭಗಳಿಗೆ ನಿರ್ದಿಷ್ಟ ವ್ಯವಸ್ಥೆಯನ್ನು ಆಯೋಗವೇ ಮಾಡಬೇಕು. ಈ ಹಿಂದೆ ರಾಜಕೀಯ ಪಕ್ಷಗಳಿಗೆ ರೇಡಿಯೋದಲ್ಲಿ ಪ್ರಚಾರ ಭಾಷಣ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇಲ್ಲೂ ಒಳದಾರಿಗಳನ್ನು ಹುಡುಕಲಾಗುತ್ತದೆ. ರಾಜಕೀಯ ಪಕ್ಷಗಳ ನಿಧಿಗೆ ನೀಡುವ ಹಣ, ನೀಡುವವರ ವಿವರ ಸಂಪೂರ್ಣ ಪಾರದರ್ಶಕವಾಗಬೇಕು. ಅದು ಆದಾಯ ತೆರಿಗೆ ಇಲಾಖೆಯ ಮೇಲ್ವಿಚಾರಣೆಗೊಳಪಡಬೇಕು. ದಾನಿಗಳ ವಿವರ, ಲೆಕ್ಕಪತ್ರ ಮಾಹಿತಿ ಹಕ್ಕು ಕಾಯ್ದೆಯಡಿ ದೇಶದ ಎಲ್ಲರಿಗೂ ಲಭ್ಯವಾಗುವಂತಾಗಬೇಕು. ಎಲ್ಲರೂ ಸಮಾನರು ಎಂಬ ಧ್ಯೇಯ ವಾಕ್ಯದಡಿ ರಾಜಕೀಯ ಪಕ್ಷಗಳಿಗೆ ಈವರೆಗೆ ನೀಡಲಾಗುತ್ತಿರುವ ಸ್ವಾತಂತ್ರ್ಯಗಳಿಗೆ ಕೊನೆ ಹಾಡಲೇಬೇಕು. ಇಲ್ಲದಿದ್ದರೆ ಭ್ರಷ್ಟಾಚಾರ ನಿರಂತರ.

ಪ್ರಯತ್ನಗಳಿವೆ, ಪ್ರಾಮುಖ್ಯತೆ ಇಲ್ಲ!
2013ರ ಸೆಪ್ಟೆಂಬರ್‌ 13ರಂದು ಸುಪ್ರೀಂಕೋರ್ಟ್‌ ಘೋಷಿಸಿದ ತೀರ್ಪಿನ ಪ್ರಕಾರ, ಯಾವುದೇ ಪಕ್ಷದ ಅಭ್ಯರ್ಥಿಯ ಅಫಿಡೆವಿಟ್‌ ಪರಿಪೂರ್ಣ ಮಾಹಿತಿ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಅಭ್ಯರ್ಥಿಗಳ ಅಫಿಡೆವಿಟ್‌ಗಳು ನಮಗೆ ಲಭ್ಯ. ಅಂತಜಾìಲದ ಸಹಾಯದಿಂದ ಇದೇ ಮನುಷ್ಯ 5 ವರ್ಷಗಳ ಹಿಂದೆ ಸಲ್ಲಿಸಿದ ಅಫಿಡೆವಿಟ್‌ ಕೂಡ ಸಾರ್ವಜನಿಕವಾಗಿ ದೊರಕುತ್ತದೆ. ಇಂಥ ಸ್ವಯಂ ಮಾಹಿತಿಯಲ್ಲಿಯೇ ಅಭ್ಯರ್ಥಿಗಳು ಅಸಹಜವಾದ ಮಾದರಿಯಲ್ಲಿ ತಮ್ಮ ಆದಾಯದ ಏರಿಕೆಯನ್ನೂ ತೋರಿಸಿರುವ ಹಲವಾರು ಉದಾಹರಣೆಗಳಿವೆ. ಪತ್ನಿ, ಮಕ್ಕಳ ಆದಾಯ ಅವರಿಗೆ ಆದಾಯ ಸೃಷ್ಟಿಯ ಮೂಲಗಳು ಕಾಣದೆಯೂ ಹೆಚ್ಚಿರುವುದನ್ನು ನೋಡುತ್ತೇವೆ. ಇದನ್ನು ಪ್ರಶ್ನಿಸಬೇಕಾದ ದೇಶದ ಎಲ್ಲ ಕಾನೂನು ಪ್ರಾಧಿಕಾರಗಳು ಸುಮ್ಮನುಳಿದರೆ ಏನು ಫ‌ಲವಿದೆ?

ರಾಜಕೀಯ ಪಕ್ಷಗಳಿಗೆ ಫಾರಂ 24ಎ ಮೂಲಕ ಸಂದಾಯವಾಗುವ ದೇಣಿಗೆಗಳಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಮೊತ್ತಗಳ ವಿಚಾರದಲ್ಲಿ ಎಲ್ಲ ಮಾಹಿತಿ ಒದಗಿಸುವಂತಾದರೆ ವ್ಯವಸ್ಥೆ ಪಾರದರ್ಶಕವಾಗುತ್ತದೆ. ಈ ನಿಯಮದ ಜಾರಿಗೆ ಚುನಾವಣಾ ಆಯೋಗ ಹೊರಟಾಗಲೆಲ್ಲ ರಾಜಕೀಯ ಪಕ್ಷಗಳು ವಿರೋಧಿಸಿವೆ. ಈ ರೀತಿ ದೇಣಿಗೆ ನೀಡಿದವರ ವಿವರಗಳನ್ನು ಸ್ವಯಂಪ್ರೇರಿತವಾಗಿ ರಾಜಕೀಯ ಪಕ್ಷಗಳು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದುಕೊಳ್ಳುವುದು ಮೂರ್ಖತನವಾದೀತು. ಕೊನೆಪಕ್ಷ, ಮಾಹಿತಿ ಹಕ್ಕಿನ ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನೂ ತಂದು, ಜನರಿಗೆ ಅರಿನ ಅಸ್ತ್ರ ಒದಗಿಸಿದರೆ ಒಂದಷ್ಟು ಬದಲಾವಣೆ ಸಾಧ್ಯವಾದೀತು. ಪಕ್ಕದ ಭೂತಾನ್‌, ನೇಪಾಳ, ಜರ್ಮನಿ, ಫ್ರಾನ್ಸ್‌, ಇಟಲಿ, ಬ್ರೆಜಿಲ್‌, ಬಲ್ಗೇರಿಯಾ, ಅಮೆರಿಕಾ ಹಾಗೂ ಜಪಾನ್‌ಗಳಲ್ಲಿ ಈಗಾಗಲೇ ಈ ಪಾರದರ್ಶಕತೆ  ಜಾರಿಯಲ್ಲಿದೆ.

ಪ್ರಾಮಾಣಿಕತೆಯ ತಿಳಿಗಾಳಿ ಎಲ್ಲಿ?
ನಮ್ಮಲ್ಲಿ ಕಾನೂನು, ಭಂಡರಲ್ಲಿ ಹೆದರಿಕೆ ಹುಟ್ಟಿಸುತ್ತಿಲ್ಲ. 2017ರ ಹಣಕಾಸು ನೀತಿಯನ್ನು ಹೇಳುವ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 13ಎ ಪ್ರಕಾರ, ರಾಜಕೀಯ ಪಕ್ಷಗಳನ್ನು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ತಮ್ಮ ಆದಾಯದ ಲೆಕ್ಕಪತ್ರವನ್ನು ನಿಗದಿತ ದಿನಾಂಕದೊಳಗೆ ಮಂಡಿಸಿದವರಿಗೆ ಮಾತ್ರ ಈ ಅವಕಾಶ ಎಂದು ಕಾಯ್ದೆ ಹೇಳುತ್ತದೆ. ಕೇವಲ 2017-18ರ ವಿಚಾರಕ್ಕೆ ಬಂದರೆ ಬಹುತೇಕ ರಾಜಕೀಯ ಪಕ್ಷಗಳು ಕ್ಯಾರೆ ಎಂದಿಲ್ಲ. ಅಂತಹ ಪಕ್ಷಗಳನ್ನು ಆದಾಯ ತೆರಿಗೆ ವ್ಯಾಪ್ತಿಗೆ ತಂದು ತೆರಿಗೆ ವಸೂಲಿಸಿದ್ದರೆ ದೇಶದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತಿತ್ತು.

ದೇಶದ ಇನ್ಸಿಟ್ಯೂಟ್‌ ಆಫ್ ಚಾರ್ಟೆಡ್‌ ಅಕೌಂಟ್ಸ್‌ ( ಐಸಿಎಐ) ಚುನಾವಣಾ ಆಯೋಗಕ್ಕೆ ಸಲಹೆಗಳ ಗುತ್ಛವನ್ನೇ ನೀಡಿದೆ. ರಾಜಕೀಯ ಪಕ್ಷಗಳ ಆರ್ಥಿಕ ವರದಿಗಳನ್ನು ಪ್ರತಿ ವರ್ಷ ನೀಡುವ ವಿಚಾರದಲ್ಲಿ ಸ್ಪಷ್ಟ ಚೌಕಟ್ಟನ್ನು ರೂಪಿಸಿ ಜಾರಿಗೊಳಿಸಲು ಒತ್ತಾಯಿಸಿದೆ. ಅದಕ್ಕೆ ಬೇಕಾದ ಸಿದ್ಧತೆ, ತಾಂತ್ರಿಕತೆಯನ್ನು ಅಧ್ಯಯನದ ಮೂಲಕ ರೂಪಿಸಿ ಪ್ರಸ್ತಾಪಿಸಿದೆ. ಅದು ಕ್ಷಿಪ್ರವಾಗಿ ಜಾರಿಯಾಗಿದ್ದೇ ಆದಲ್ಲಿ ಭ್ರಷ್ಟ ವಾತಾವರಣದಲ್ಲಿ ಚೂರೇ ಚೂರಾದರೂ ಪ್ರಾಮಾಣಿಕತೆಯ ತಿಳಿಗಾಳಿ ಬೀಸಬಹುದು.

– ಮಾ.ವೆಂ.ಸ.ಪ್ರಸಾದ್‌,
ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next