Advertisement

ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

01:15 AM Jul 30, 2021 | Team Udayavani |

ಹೊನ್ನಾವರ: ಪರ್ತಗಾಳಿ ಮಠ ಪರಂಪರೆಯಲ್ಲಿ ಇಂದು ಮತ್ತೂಂದು ಐತಿಹಾಸಿಕ ಸಂಗತಿ ದಾಖಲಾಗಲಿದೆ. ಮಠದ ಪರಂಪರೆಯಲ್ಲಿ ಹಲವು ಶಾಶ್ವತ ಸುಧಾರಣೆ ಮಾಡಿ ಮಠ, ಮಂದಿರಗಳನ್ನು ಶಿಷ್ಯರಿಗೆ ಒಪ್ಪಿಸುವ ಮೊದಲು ಪೀಠ ಮುನ್ನಡೆಸಲು ಅರ್ಹರಾದ ಯುವಕರನ್ನು ಆಯ್ಕೆ ಮಾಡಿ, ಪಾಠ, ಪ್ರವಚನ, ಎಲ್ಲ ಮಾರ್ಗದರ್ಶನದೊಂದಿಗೆ ಸನ್ಯಾಸ ದೀಕ್ಷೆ ನೀಡಿ ಪರಂಧಾಮಗೈದ ಪರ್ತಗಾಳಿ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಗಳ ಉತ್ತರಾಧಿಕಾರಿಯಾಗಿ ಎಂಜಿನಿಯರಿಂಗ್‌ ಓದಿದ ವಿದ್ಯಾವಂತ ಯುವ ಸನ್ಯಾಸಿಯೊಬ್ಬರು ಇಂದು ಪೀಠಾರೋಹಣ ಮಾಡುವ ಮೂಲಕ ಮಠ ಹಾಗೂ ಶಿಷ್ಯರನ್ನು ಮುನ್ನಡೆಸಲಿದ್ದಾರೆ.

Advertisement

ವೈದಿಕ ಮನೆತನದಲ್ಲಿ ಜನಿಸಿ, ವೇದವಿದ್ಯೆ ಯೊಂದಿಗೆ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದುತ್ತಿರುವಾಗ ಸನ್ಯಾಸವನ್ನು ಮನಃಪೂರ್ವಕವಾಗಿ ಒಪ್ಪಿ ಬಂದ ಉದಯ ಲಕ್ಷ್ಮೀನಾರಾಯಣ ಭಟ್‌ ಪರ್ತಗಾಳಿ ಪೀಠದ 24ನೇ ಪೀಠಾಧಿಪತಿಗಳಾಗಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಅಭಿಧಾನದೊಂದಿಗೆ ಪೀಠ ಏರಲಿದ್ದಾರೆ.

ಮಠದ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಗಳನ್ನು ಅನಿರೀಕ್ಷಿತವಾಗಿ ಕಳೆದುಕೊಂಡ ಸಮಾಜ ದುಃಖದ ಮಡುವಿನಲ್ಲಿ ಇದ್ದಾಗಲೇ ತಮ್ಮ ಈ ವರೆಗಿನ ಚಟುವಟಿಕೆಯಿಂದ ವಿದ್ಯಾಧೀಶತೀರ್ಥ ಶ್ರೀಗಳು ಭಕ್ತರ ಆಶಾಕಿರಣವಾಗಿ ಭರವಸೆ ಮೂಡಿಸಿದ್ದು, ಮಠದ ಶಿಷ್ಯರ ಸಂತೋಷಕ್ಕೆ ಕಾರಣವಾಗಿದೆ.

ಪೀಠ ಏರಲಿರುವ ವಿದ್ಯಾಧೀಶ ಶ್ರೀಗಳು ಮೂಲತಃ ಉತ್ತರಕನ್ನಡ ಜಿಲ್ಲೆ ಭಟ್ಕಳದ ಗೋಪಾಲಕೃಷ್ಣ ದೇವಾಲಯದ ಅರ್ಚಕ ಲಕ್ಷ್ಮೀನಾರಾಯಣ ಭಟ್‌ ಮತ್ತು ಪದ್ಮಾವತಿ ಭಟ್‌ ಅವರ ದ್ವಿತೀಯ ಪುತ್ರ. 16-10-1995ರಲ್ಲಿ ಹೊನ್ನಾವರದ ಕಾಸರಕೋಡಿನಲ್ಲಿ ಜನಿಸಿದರು. ಈಗ 26ನೇ ವಯಸ್ಸು. ತಂದೆ ಲಕ್ಷ್ಮೀನಾರಾಯಣ ಭಟ್ಟರು 1996ರಲ್ಲಿ ಬೆಳಗಾವಿ ವಿದ್ಯಾಧಿರಾಜ ಭವನದಲ್ಲಿ ನೆಲೆಸಿದ್ದರು. ಬಾಲ್ಯವನ್ನು ಅಲ್ಲೇ ಕಳೆದು ಕಾಲೇಜಿನಲ್ಲಿ ಪಿಯುಸಿ ಸೈನ್ಸ್‌ ಓದಿ, ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಮಠದ ಕರೆಗೆ ಓಗೊಟ್ಟರು. ಮಾತೃಭಾಷೆ ಕೊಂಕಣಿ, ಬೆಳಗಾವಿ ವಾಸ್ತವ್ಯದಿಂದಾಗಿ ಮರಾಠಿ, ಹಿಂದಿ, ಇಂಗ್ಲಿಷ್‌ ಭಾಷೆಯಲ್ಲಿ ಜ್ಞಾನ ಪಡೆದರು. ತಂದೆಯೊಂದಿಗೆ ವೈದಿಕ ವೃತ್ತಿ ಕಲಿತರು. ಬಾಲ್ಯದಿಂದಲೂ ಧಾರ್ಮಿಕ ಪ್ರವೃತ್ತಿ ವಾತಾವರಣ ಸಹಜವಾಗಿ ಬಂದಿತ್ತು.

30-5-2014ರಲ್ಲಿ ವಿದ್ಯಾಭ್ಯಾಸಕ್ಕಾಗಿ ಪರ್ತಗಾಳಿ ಮಠಕ್ಕೆ ಬಂದರು. ಇಬ್ಬರು ಪಂಡಿತರಿಂದ ಬ್ರಾಹ್ಮಿ ಮುಹೂರ್ತದಲ್ಲಿ  ವಿಶೇಷ ಪಾಠ ನಡೆಯುತ್ತಿತ್ತು, ಸ್ವತಃ ಶ್ರೀಗಳೇ ಪಾಠ ಮಾಡುತ್ತಿದ್ದರು. 2017ರಲ್ಲಿ  ಪ್ರಣವ ಮಂತ್ರೋಪದೇಶ ಆಯಿತು.

Advertisement

ಅನಂತರದ ದಿನಗಳಲ್ಲಿ ಶ್ರೀಗಳು ಯತಿಗಳನ್ನು ಜತೆಯಲ್ಲಿಯೇ ಉಳಿಸಿಕೊಂಡು ಅವರಿಗೆ ಪರ್ತಗಾಳಿ ಮಠ ಪರಂಪರೆಯ ಮತ್ತು ಶಾಖಾ ಮಠದ ದೇವಾಲಯಗಳ ಪರಂಪರೆ ಆಡಳಿತಗಳನ್ನು ಕಲಿಸಿಕೊಟ್ಟರು. ಚಾತುರ್ಮಾಸ್ಯ ವೃತವನ್ನು ಜತೆಯಲ್ಲಿಯೇ ಆಚರಿಸಿದರು. ಹೀಗೆ ತಮ್ಮದೇ ಪ್ರತಿರೂಪವಾಗಬಲ್ಲ ಯತಿಗಳನ್ನು ಸಮಾಜಕ್ಕೆ ಒಪ್ಪಿಸಿದರು.

ವಿದ್ಯಾಧೀಶತೀರ್ಥರು ಕೋವಿಡ್‌ ಕಾರಣಕ್ಕಾಗಿ ಸರಳವಾಗಿ ಪೀಠಾರೋಹಣಕ್ಕೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಿಂದ ಮನೆಯಲ್ಲಿಯೇ ಕುಳಿತು ಪೀಠಾರೋಹಣ ಸಮಾರಂಭ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ಭಾರತದಲ್ಲಿ ಧರ್ಮ ಸ್ಥಾಪನೆಗೆ ಕಾರಣರಾದ ಆಚಾರ್ಯತ್ರಯರಲ್ಲಿ ಮಧ್ವಾಚಾರ್ಯರ ಪರಂಪರೆಗೆ ಸೇರಿದ ಪರ್ತಗಾಳಿ ಮಠ ಪ್ರಮುಖವಾದುದು. ಗೌಡಸಾರಸ್ವತ ಸಮಾಜಕ್ಕೆ ಕಾಶಿ ಮಠ, ಕವಳೆ ಮಠಗಳೆಂಬ ಇನ್ನೆರಡು ಮಠಗಳಿದ್ದರೂ ಮಠಗಳು ಶಿಷ್ಯರಲ್ಲಿ ಭೇದ ಎಣಿಸುತ್ತಿಲ್ಲ. ವಿದೇಶೀಯರ ದಾಳಿಯಿಂದ ತಮ್ಮ ದೇವರೊಂದಿಗೆ ವಲಸೆ ಬಂದ ಗೌಡಸಾರಸ್ವತ ಸಮಾಜ ಕರಾವಳಿಯಲ್ಲಿ ನೆಲೆಗೊಳ್ಳುವಲ್ಲಿ ಮತ್ತು ವ್ಯಾಪಾರ, ವ್ಯವಹಾರ, ಕೃಷಿ ಮತ್ತು ವಿದ್ಯಾಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಸಮಾಜದ ಅಗ್ರಪಂಕ್ತಿಯಲ್ಲಿ ನಿಲ್ಲುವಲ್ಲಿ ಮಠದ ಪಾತ್ರ ಬಹಳ ಮಹತ್ವದ್ದು. ಹೀಗಾಗಿ ಪರ್ತಗಾಳಿ ಮಠದ ಗುರುಪೀಠಾರೋಹಣ ಐತಿಹಾಸಿಕ ಮಹತ್ವ ಪಡೆದಿದೆ.

 

-ಜೀಯು, ಹೊನ್ನಾವರ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next