Advertisement
ಆ ಕಾಲದಲ್ಲಿ ದಕ್ಷಿಣಕನ್ನಡ ಜಿಲ್ಲೆಗೆ ಯಾರೇ ಸಾಹಿತಿ ಬಂದರೂ ಅವರನ್ನು ಎಸ್ವಿಪಿಯವರು ನಮ್ಮ ಕನ್ನಡವಿಭಾಗಕ್ಕೆ ಕರೆಸಿ ಕಾರ್ಯಕ್ರಮ ನಡೆಸುತ್ತಿದ್ದರು. ಹಾಗೆಯೇ ಕಾರ್ಕಳಕ್ಕೆ ಬಂದಿದ್ದ ಜಿ. ಪಿ. ರಾಜರತ್ನಂ ಅವರನ್ನು ವಿಭಾಗಕ್ಕೆ ಕರೆಸಿದರು. ರಾಜರತ್ನಂ ಅವರ ಭಾಷಣವನ್ನು ನಮ್ಮ ಕರಂಗಲಪಾಡಿಯ ಕಟ್ಟಡದ ಹೊರಜಗಲಿಯಲ್ಲಿ ಹತ್ತಿರದಿಂದ ಕೇಳುವ ಅವಕಾಶ ದೊರೆತ ಹಾಗೆಯೇ ಅವರ ಜೊತೆಗೆ ಊಟ ಮಾಡಿದ, ಮಾತುಕತೆ ಆಡಿದ ಕ್ಷಣಗಳನ್ನು ನೆನಪಿಸಿಕೊಂಡಾಗ ಮನಸ್ಸು ಮುದಗೊಳ್ಳುತ್ತದೆ. ಕಾರ್ಕಳ ಸಮ್ಮೇಳನದಲ್ಲಿ ಸಮ್ಮಾನಿತರಾದ ಕವಿ ಪಾಂಡೇಶ್ವರ ಗಣಪತಿರಾಯರೂ ನಮ್ಮ ಕನ್ನಡವಿಭಾಗಕ್ಕೆ ಬಂದರು. ಚೆಂಗಲವೆ ಕವನಸಂಕಲನ, ಮಾರಾವತಾರ ಏಕವ್ಯಕ್ತಿ ಯಕ್ಷಗಾನ ಕೃತಿಗಳ ಕವಿ ಪಾಂಡೇಶ್ವರರ ಕವನವಾಚನದ ಶೈಲಿ ನಾನು ಮರೆಯಲಾಗದ ನಾಟಕೀಯ ನೋಟ. ಸ್ವಲ್ಪ ಗಿಡ್ಡಗಾತ್ರದ, ವೆಸ್ಟ್ಕೋಟು ಧರಿಸಿದ ಅವರು ಅಂದು ವಾಚಿಸಿದ ಕವನ ಆರಂಭವಾದದ್ದು ಬಂದು ಬಹಳ ದಿವಸವಾಯ್ತು ಮರಳಬೇಕು ಮನೆಗೆ ಎಂಬ ಸಾಲುಗಳಿಂದ. ಈ ಸಾಲುಗಳನ್ನು ನಾಟಕೀಯವಾಗಿ ಓದಿ ಪಾಂಡೇಶ್ವರರು ಪಕ್ಕಕ್ಕೆ ತಿರುಗಿದರು, ಅಲ್ಲಿಂದ ಹೊರಡುವ ಹಾಗೆ. ನಾವು ಅಂದುಕೊಂಡೆವು- ಅವರು ಅಲ್ಲಿಂದ ಹೊರಡುತ್ತಾರೆ, ಮನೆಗೆ ಮರಳುತ್ತಾರೆ ಎಂದು! ಅಷ್ಟು ಹೇಳಿದ ಮೇಲೆ ಮತ್ತೆ ಸ್ವಸ್ಥಾನಕ್ಕೆ ಬಂದು ಮುಂದುವರಿಸಿದರು, ಮೆತ್ತಗಿನ ಸ್ವರದಲ್ಲಿ- ಬಂದು ಬಹಳ ಸಮಯವಾಯ್ತು ಮರಳಬೇಕು ಮನೆಗೆ. ಕನ್ನಡ ಕವಿಗಳ ಕವನವಾಚನದ ಅನೇಕ ಮಾದರಿಗಳನ್ನು ನಾನು ಕಂಡಿದ್ದೇನೆ ಆಲಿಸಿದ್ದೇನೆ. ಅವುಗಳಲ್ಲಿ ಬೇಂದ್ರೆಯವರದ್ದು ಒಂದು ಮಾದರಿಯಾದರೆ, ಪಾಂಡೇಶ್ವರ ರದ್ದು ಇನ್ನೊಂದು ವಿಶಿಷ್ಟ ಮಾದರಿ. ಆ ಶೈಕ್ಷಣಿಕ ವರ್ಷದಲ್ಲಿ ನಮ್ಮ ವಿಭಾಗಕ್ಕೆ ಬಂದು ಉಪನ್ಯಾಸ ಕೊಟ್ಟವರು ಕನ್ನಡ ಸಾಹಿತ್ಯ ಸಂಶೋಧನೆ ಚಳುವಳಿಯ ಡಾ. ಸರೋಜಿನಿ ಮಹಿಷಿ ಮತ್ತು ಮೈಸೂರಿನ ಪ್ರಾಧ್ಯಾಪಕ ಕವಿ-ವಿಮರ್ಶಕ ಹೃದಯಸಂವಾದದ ಗಾಂಧಿವಾದಿ ಸುಜನಾ.
1971ರಲ್ಲಿ ಕಾರ್ಕಳದಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಡಾ | ಟಿ. ಎಂ . ಎ. ಪೈ ಅವರು ಶಿವರಾಮ ಕಾರಂತರನ್ನು ಸ್ವಾಗತಿಸುವ ಉಲ್ಲಾಸದ ಭಂಗಿ. (ಫೊಟೊ ಕೃಪೆ : “ಬಾಸಿಗ’ -ಕಾರ್ಕಳ , 1972)
Related Articles
Advertisement
ಕಮಕೋಡು ನರಸಿಂಹ ಶಾಸ್ತ್ರಿಗಳು (ಕನ) ತೀರ್ಥಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ವಿ. ಪರಮೇಶ್ವರ ಭಟ್ಟರ ಗುರುಗಳಾಗಿದ್ದರು, 1903ರಲ್ಲಿ ಜನಿಸಿದ ಗುರುಗಳಿಗೆ 70 ವರ್ಷ ಆಗುವಾಗ ಸಂಭಾವನಾ ಗ್ರಂಥವೊಂದನ್ನು ಸಿದ್ಧಪಡಿಸುವ ಬಯಕೆಯಿಂದ ಎಸ್ವಿಪಿ “ಕಮಕೋಡು ನರಸಿಂಹಶಾಸ್ತ್ರಿ ವ್ಯಕ್ತಿ ಅಭಿವ್ಯಕ್ತಿ’ (ಕನ್ನಡ ಸಂಘ, ಮಂಗಳಗಂಗೋತ್ರಿ, 1972) ಎಂಬ ಗ್ರಂಥದ ಸಂಪಾದಕರಾಗಿ “ಕನ’ ವ್ಯಕ್ತಿತ್ವ ಮತ್ತು ಸಾಹಿತ್ಯಕೃತಿಗಳ ಬಗ್ಗೆ ತೀರ್ಥಹಳ್ಳಿ ಪರಿಸರದ “ಕನ’ ಶಿಷ್ಯರಿಂದ ಲೇಖನ ಬರೆಸಿದರು. ಹಾಗೆಯೇ ಮಂಗಳಗಂಗೋತ್ರಿಯ ತಮ್ಮ ಶಿಷ್ಯರಲ್ಲೂ “ಕನ’ ಕೃತಿಗಳ ಬಗ್ಗೆ ಬರಹಗಳನ್ನು ಬರೆಯಿಸಿದರು. ಗುರುಗಳ ಆಣತಿಯಂತೆ ನಾನು “ಕನ’ ಅವರ ಮೇಘಸಂದೇಶ ಅನುವಾದದ ಬಗ್ಗೆ ಲೇಖನ ಬರೆದುಕೊಟ್ಟೆ. ಆವರೆಗೆ ಶಾಸ್ತ್ರಿಗಳನ್ನು ನಾನು ಕಾಣದಿದ್ದರೂ ಅವರ ಶಿಷ್ಯರ ಶಿಷ್ಯ-ಪ್ರಶಿಷ್ಯ ಎಂದು ಹೆಮ್ಮೆಪಟ್ಟೆ. ಶಾಸ್ತ್ರಿಗಳನ್ನು ಕಂಡಿದ್ದ ನಮ್ಮ ವಿದ್ಯಾರ್ಥಿಗಳಾಗಿದ್ದ ತೀರ್ಥಹಳ್ಳಿ ಪರಿಸರದ ನಾಗರಾಜ್ ಜವಳಿ, ಶರತ್ ಕಲ್ಕೋಡ್, ಮಮತಾ ಬಿ. ಆರ್., ಪದ್ಮಿನಿ ಟಿ. ಆರ್., ಸಾಗರದ ಮಾಲತಿ ಎಸ್. ಅವರ ಲೇಖನಗಳೂ ಆ ಗ್ರಂಥದಲ್ಲಿ ಇವೆ. ಆ ಗ್ರಂಥದ ಪುಟಗಳನ್ನು ತಿರುವಿಹಾಕಿದಾಗ ಹೈಸ್ಕೂಲು ಮೇಷ್ಟ್ರು ಶಾಸ್ತ್ರಿಗಳ ಶಿಷ್ಯಪರಂಪರೆಯ ಹೆಸರುಗಳನ್ನು ನೋಡಿ ರೋಮಾಂಚನಗೊಂಡೆ. ತೀರ್ಥಹಳ್ಳಿ ಶಾಲೆಯಲ್ಲಿ ಶಾಸ್ತ್ರಿಗಳ ಪಾಠ ಕೇಳಿದವರಲ್ಲಿ ಎಸ್. ವಿ. ಪರಮೇಶ್ವರ ಭಟ್ಟ, ಹಾ.ಮಾ. ನಾಯಕ, ಎಚ್. ತಿಪ್ಪೇರುದ್ರಸ್ವಾಮಿ, ಯು. ಆರ್. ಅನಂತಮೂರ್ತಿ ಮೊದಲಾದವರಿದ್ದಾರೆ. ರಾಜಕಾರಣಿ ಸಾಹಿತಿ ಕೋಣಂದೂರು ಲಿಂಗಪ್ಪ ತಮ್ಮ ಲೇಖನದಲ್ಲಿ “ಶ್ರೀ ಕ.ನ. ಅವರು ನನ್ನ ಗುರುಗಳು ಆಗಿದ್ದುದು ಮಾತ್ರವಲ್ಲ; ನನ್ನ ರಾಜಕೀಯ ಗುರುಗಳಾದ ಪೂಜ್ಯ ಶ್ರೀ ಗೋಪಾಲಗೌಡ ಶಾಂತವೇರಿ ಅವರ ಗುರುಗಳೂ ಆಗಿದ್ದರು’ ಎಂದು ಬರೆದಿದ್ದಾರೆ. ಹಾಮಾ ನಾಯಕರು ಶಾಸ್ತ್ರಿಗಳ ಬದುಕು-ಬರಹವನ್ನು ಅನನ್ಯವಾಗಿ ಕಟ್ಟಿಕೊಟ್ಟ ಲೇಖನ ಕೂಡ ಇದೆ.
ನರಸಿಂಹ ಶಾಸ್ತ್ರಿಗಳ ಅಭಿನಂದನಾ ಕಾರ್ಯಕ್ರಮ ಮತ್ತು ಸಂಭಾವನಾ ಗ್ರಂಥದ ಬಿಡುಗಡೆ ತೀರ್ಥಹಳ್ಳಿಯಲ್ಲಿ ನಡೆಯಿತು. 1972 ಎಪ್ರಿಲ್ ಕೊನೆಯ ವಾರ ಎಂದು ನೆನಪು. ಗುರುಗಳು ಎಸ್ವಿಪಿ ಜೊತೆಗೆ ನಾನೂ ತೀರ್ಥಹಳ್ಳಿಗೆ ಹೋಗಿದ್ದೆ. ಅಲ್ಲಿ ಶಾಸ್ತ್ರಿಗಳ ಶಿಷ್ಯ ಸಮುದಾಯ, ಅಭಿಮಾನಿ ಬಳಗವನ್ನು ಕಂಡು ಬದುಕು ಸಾರ್ಥಕ ಅನ್ನಿಸಿತು. ಗೋಪಾಲ ಗೌಡರ ಸಮಾಜವಾದಿ ಒಲವಿನ ತರುಣರ ಹಾಗೆಯೇ ಮನುಷ್ಯ ಪ್ರೀತಿ-ಪ್ರಾಮಾಣಿಕತೆಗೆ ಬೆಲೆ ಕೊಡುವ ಪರಂಪರೆಯ ಹಿರಿಯರೂ ದೊಡ್ಡ ಸಂಖ್ಯೆಯಲ್ಲಿ ಇದ್ದರು. ಯು. ಆರ್. ಅನಂತಮೂರ್ತಿ ತಮ್ಮ ಭಾರತೀಯ ಸಂಸ್ಕೃತಿ ಮತ್ತು ಲೇಖಕ ಎಂಬ ಪ್ರಬಂಧವನ್ನು ಮೊದಲು ಓದಿದ್ದು ಆ ದಿನ. ಮೊದಲ ಬಾರಿ ಅವರ ಮಹಣ್ತೀದ ಉಪನ್ಯಾಸವನ್ನು ನಾನು ಕೇಳಿದ್ದು. ಬಳಿಕ ನಡೆದ ಚರ್ಚೆಯನ್ನು ಗಮನಿಸಿದಾಗ ಶಾಸ್ತ್ರಿಗಳಂತಹ ಹೈಸ್ಕೂಲು ಅಧ್ಯಾಪಕರು ಹೇಗೆ ಬಹುಚಿಂತನೆಗಳ ಸಂಗಮಬಿಂದುವಾಗಬಲ್ಲರು ಎನ್ನುವ ಹೊಸ ತಿಳುವಳಿಕೆಯನ್ನು ಪಡೆದೆ. ಶಾಸ್ತ್ರಿಗಳ ಭಾಷಣದಲ್ಲಿ ಇದ್ದ ಸಜ್ಜನಿಕೆ, ಪ್ರೀತಿ ಲೋಕಜ್ಞಾನದ ಜೊತೆಗೆ, ಮೆತ್ತಗಿನ ಧ್ವನಿಯಲ್ಲಿ ಮನವನ್ನು ಅರಳಿಸುವ ಅಗಾಧಶಕ್ತಿಯನ್ನು ಕಂಡೆ.
ಸಾಹಿತಿ, ಸಮಾಜವಾದಿ, ಚಿಂತಕ, ರೈತಹೋರಾಟಗಾರ ದಿನಕರ ದೇಸಾಯಿ ಅವರಿಗೆ ಅರುವತ್ತು ತುಂಬಿದ ನೆನಪಿನಲ್ಲಿ ಅವರ ಅಭಿಮಾನಿಗಳು ಅಂಕೋಲಾ ಕರ್ನಾಟಕ ಸಂಘದ ಹೆಸರಿನಲ್ಲಿ ಸಂಭಾವನಾ ಗ್ರಂಥ ದಿನಕರ ದರ್ಶನವನ್ನು ಸಿದ್ಧಪಡಿಸಿದ್ದರು. ಅಂಕೋಲಾದಲ್ಲಿ ಇದನ್ನು ಬಿಡುಗಡೆ ಮಾಡಲು ಎಸ್ವಿಪಿಯವರನ್ನು ಆಹ್ವಾನಿಸಿದರು. 1972 ಮೇ 26ರಂದು ಬಿಡುಗಡೆ ಸಮಾರಂಭಕ್ಕೆ ಹೋಗುವಾಗ ಗುರುಗಳ ಜೊತೆಗೆ ನಾನೂ ಅಂಕೋಲಾಕ್ಕೆ ಹೊರಟೆ. ಅಂಕೋಲಾಕ್ಕಿಂತ ಮೊದಲು ಗೋಕರ್ಣಕ್ಕೆ ಹೋಗಿ ಸಾಹಿತಿ, ದಾರ್ಶನಿಕ ಗೌರೀಶ ಕಾಯ್ಕಿಣಿ ಅವರ ದರ್ಶನ ಪಡೆದೆವು, ಮಾತುಕತೆ ಆಡಿದೆವು. ಅಂಕೋಲಾದಲ್ಲಿ ನನಗೆ ಆದ ಬಲುದೊಡ್ಡ ಲಾಭವೆಂದರೆ, ದಿನಕರ ದೇಸಾಯಿಯವರ ಜೊತೆಗೆ ನೇರವಾಗಿ ಮಾತಾಡಿದ್ದು. ಅವರು ತಮ್ಮ ಕೈಬರಹದಲ್ಲಿ “ಶ್ರೀ ವಿವೇಕ ರೈ ಇವರಿಗೆ ಪ್ರೀತಿಯ ಕಾಣಿಕೆ. ದಿನಕರ ದೇಸಾಯಿ, 26-5-1972′ ಎಂದು ಬರೆದುಕೊಟ್ಟ ಅವರ ಕವನಸಂಕಲನ ಹೂಗೊಂಚಲು ಈಗಲೂ ಅವರ ನೆನಪನ್ನು ಅಚ್ಚಳಿಯದೆ ಉಳಿಸಿದೆ. ದಿನಕರ ದರ್ಶನ ಗ್ರಂಥದ ಸಂಪಾದಕರು ಗೌರೀಶ ಕಾಯ್ಕಿಣಿ; ಕಾರ್ಯದರ್ಶಿ ವಿ. ಎ. ಜೋಶಿ. ಜೋಶಿ ಅವರು ನನಗೆ ಕೊಟ್ಟ ದಿನಕರ ದರ್ಶನದ ಪ್ರತಿಯನ್ನು ಆಗಾಗ ಓದುತ್ತ ದೇಸಾಯಿಯವರ ಬದುಕು-ಬರಹದ ಬೆಳಕನ್ನು ಕಾಣುತ್ತಿದ್ದೇನೆ. ಅವರ ಕವನ-ನನ್ನ ದೇಹದ ಬೂದಿಯ ಸಾಲುಗಳು…
ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ
ಬೂದಿಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟುಸಾವಿನಲ್ಲಿ. (ಫೊಟೊ ಕೃಪೆ : “ಅರುವತ್ತರ ಅರಳು’ -ಎಸ್. ವಿ. ಪರಮೇಶ್ವರ ಭಟ್ಟ , 1973) ಬಿ. ಎ. ವಿವೇಕ ರೈ