Advertisement

Parliament: ಸಂಸತ್‌ಗೆ ಲಗ್ಗೆ: ಸಂಚಿನಲ್ಲಿ ಇನ್ನಷ್ಟು ಜನ?- ದಿಲ್ಲಿ ಪೊಲೀಸರಿಗೆ ಬಲವಾದ ಶಂಕೆ

10:00 PM Dec 15, 2023 | Pranav MS |

ನವದೆಹಲಿ: ಸಂಸತ್‌ ಭವನಕ್ಕೆ ನುಗ್ಗಿ ಯಲ್ಲೋ ಗ್ಯಾಸ್‌ ಸಿಂಪಡಿಸಿದ ಸಂಚಿನಲ್ಲಿ ಇದ್ದವರು ಎಷ್ಟು ಮಂದಿ? ಈ ಪ್ರಶ್ನೆ ದೆಹಲಿಯ ಪೊಲೀಸರನ್ನು ಕಾಡುತ್ತಿದೆ. ಸದ್ಯ ಬಂಧನವಾಗಿರುವ ಆರು ಮಂದಿ ಮಾತ್ರವಲ್ಲ. ಅವರಿಗೆ ಪ್ರಚೋದನೆ ನೀಡಿದವರಲ್ಲಿ ಇನ್ನೂ ಹಲವಾರು ಮಂದಿ ಪ್ರಕರಣದ ಹಿಂದೆ ಇರುವ ಸಾಧ್ಯತೆ ಇದೆ ಎಂದು ಪೊಲೀಸರನ್ನು ಕಾಡುತ್ತಿದೆ. ಹೀಗಾಗಿ, ಬುಧವಾರ (ಡಿ.13) ರಂದು ನಡೆದಿದ್ದ ಘಟನೆಯ ತನಿಖೆಯ ವ್ಯಾಪ್ತಿ ವಿಸ್ತಾರಗೊಳ್ಳುವುದರ ಸೂಚನೆಯನ್ನು ಅವರು ನೀಡಿದ್ದಾರೆ.

Advertisement

ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಉಲ್ಲೇಖೀಸಿ ವರದಿ ಮಾಡಿರುವ “ನ್ಯೂಸ್‌18′ ಇಂಗ್ಲಿಷ್‌ ಸುದ್ದಿವಾಹಿನಿಯ ಪ್ರಕಾರ “ಒಟ್ಟಾರೆ ಪ್ರಕರಣದಲ್ಲಿ ಲಲಿತ್‌ ಝಾ ಪ್ರಧಾನ ಸೂತ್ರಧಾರಿ ಎನ್ನುವುದೇ ಪ್ರಶ್ನಾರ್ಹ. ಸದ್ಯ ಬಂಧನದಲ್ಲಿರುವ ಆರು ಮಂದಿ ಇಷ್ಟು ತೀವ್ರವಾಗಿ ವರ್ತಿಸಬೇಕಾಗಿದ್ದರೆ ಅವರಿಗೆ ಪ್ರೇರಣೆ ನೀಡಿ, ಸಿದ್ಧಗೊಳಿಸಿದ ವ್ಯಕ್ತಿ ಅಥವಾ ಸಂಘಟನೆ ಬೇರೆ ಇರುವ ಸಾಧ್ಯತೆಗಳು ಇವೆ. ಅವರೇ ಒಟ್ಟಾರೆ ಘಟನೆಯ ಮಾಸ್ಟರ್‌ ಮೈಂಡ್‌ ಆಗಿರುವ ಸಾಧ್ಯತೆ ಅಧಿಕವಾಗಿದೆ. ಇವರೆಲ್ಲರೂ ಅವರ ಪರವಾಗಿ ವರ್ತಿಸಿರುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಪೊಲೀಸರು ಎಲ್ಲ ಆರೋಪಿಗಳ ಬ್ಯಾಂಕ್‌ ಖಾತೆಗಳ ವಿವರವನ್ನೂ ಪಡೆದಿದ್ದು, ಈ ಕೃತ್ಯಕ್ಕೆ ಅವರಿಗೆ ಹಣ ಸಂದಾಯವಾಗಿತ್ತೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.

ಮೈಸೂರು ವಿಳಾಸ ಇರುವ ಆಧಾರ್‌ ಜಪ್ತಿ: ಪೊಲೀಸರು
ಆರೋಪಿಗಳು ಧರಿಸಿದ್ದ ಶೂಗಳು ಮತ್ತು ಸಾಕ್ಸ್‌ಗಳನ್ನು ವಶಕ್ಕೆ ಪಡೆದು, ವಿಧಿವಿಜ್ಞಾನ ಪರೀಕ್ಷೆಗೆಂದು ರವಾನಿಸಲಾಗಿದೆ. ಅದೇ ರೀತಿ, ಲಕ್ನೋ ಮತ್ತು ಮೈಸೂರು ವಿಳಾಸವಿರುವ ಆಧಾರ್‌ ಕಾರ್ಡ್‌ಗಳು, ಅರ್ಧ ಹರಿದಿರುವ 2 ಕರಪತ್ರಗಳನ್ನೂ ಜಪ್ತಿ ಮಾಡಲಾಗಿದೆ. ಒಂದು ಕರಪತ್ರದಲ್ಲಿ “ಜೈ ಹಿಂದ್‌’ ಎಂದು ಇಂಗ್ಲಿಷ್‌ನಲ್ಲಿ ಬರೆದಿದ್ದು, ಭಾರತದ ತ್ರಿವರ್ಣ ಧ್ವಜದ ಬಣ್ಣಗಳಿರುವ “ಮುಷ್ಟಿ’ಯ ಚಿತ್ರವಿದೆ. ಮತ್ತೂಂದರಲ್ಲಿ, ಮಣಿಪುರ ಗಲಭೆ ಕುರಿತ ಉದ್ಘೋಷವಿದೆ. ಜತೆಗೆ, “ಮೋದಿ ನಾಪತ್ತೆಯಾಗಿದ್ದಾರೆ’ ಎಂದು ಬರೆದ ಪೋಸ್ಟರ್‌ ಕೂಡ ಪತ್ತೆಯಾಗಿದೆ ಎಂದಿದ್ದಾರೆ ಪೊಲೀಸರು.

ಶಂಕಿತರ ವಿಚಾರಣೆ:
ಸಂಸತ್‌ ಭದ್ರತಾ ಲೋಪ ಪ್ರಕರಣ ಸಂಬಂಧ ದೆಹಲಿ ಪೊಲೀಸರ ವಿಶೇಷ ಘಟಕವು ಶುಕ್ರವಾರ ಕೆಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದೆ. ರಾಜಸ್ಥಾನದಲ್ಲಿ ಲಲಿತ್‌ ಝಾಗೆ ನೆರವು ನೀಡಿದ ಇಬ್ಬರು ವ್ಯಕ್ತಿಗಳು, ಪಶ್ಚಿಮ ಬಂಗಾಳದ ವಿದ್ಯಾರ್ಥಿ ಸೇರಿದಂತೆ 3-4 ಮಂದಿಯನ್ನು ತನಿಖೆಗೆ ಒಳಪಡಿಸಲಾಗಿದೆ. ಜತೆಗೆ, ಭಗತ್‌ ಸಿಂಗ್‌ ಯುವ ಫ್ಯಾನ್‌ ಕ್ಲಬ್‌ ಎಂಬ ಆನ್‌ಲೈನ್‌ ಗ್ರೂಪ್‌ನಲ್ಲಿದ್ದ ಇತರೆ ಸದಸ್ಯರಿಗಾಗಿಯೂ ಹುಡುಕಾಟ ನಡೆಸಲಾಗುತ್ತಿದೆ. ಈ ಗ್ರೂಪ್‌ ಈಗ ಡಿಲೀಟ್‌ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕ್ಯಾನಿಸ್ಟರ್‌ ಸ್ಪ್ರೆ ಮನೋರಂಜನ್‌ ಐಡಿಯಾ?

ಸಂಸತ್‌ ಭವನದ ಹೊರಗೆ ಬಳಕೆಯಾಗದ ಕ್ಯಾನಿಸ್ಟರ್‌ವೊಂದು ಪತ್ತೆಯಾಗಿದ್ದು, ಅದನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಸಂಸತ್‌ನಲ್ಲಿ ಹಳದಿ ಬಣ್ಣದ ಹೊಗೆ ಹೊರಸೂಸುವಂತೆ ಮಾಡಲು ಈ ಕ್ಯಾನಿಸ್ಟರ್‌ನಲ್ಲಿ ಫಾಸ್ಫರಸ್‌(ರಂಜಕ) ಅಥವಾ ಫಾಸೆ#àಟ್‌ ಆಧರಿತ ರಾಸಾಯನಿಕವನ್ನು ಬಳಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಿದರೆ ಅದು ಚರ್ಮದ ಮೇಲೆ ಸುಟ್ಟಗಾಯಗಳನ್ನು ಅಥವಾ ಗುಳ್ಳೆಗಳನ್ನು ಉಂಟುಮಾಡಬಹುದು.

ಅಲ್ಲದೆ, “ಗಾಳಿಯಾಡದ ಸ್ಥಳದಲ್ಲಿ, ಒಳಾಂಗಣದಲ್ಲಿ, ಹೆಚ್ಚು ಜನದಟ್ಟಣೆ ಇರುವಲ್ಲಿ ಬಳಸುವಂತಿಲ್ಲ. ಬಳಸುವಾಗ ಕನ್ನಡಕ, ಕೈಗವುಸು ಧರಿಸಿಕೊಳ್ಳಿ’ ಎಂಬ ಸೂಚನೆಯನ್ನೂ ಕ್ಯಾನಿಸ್ಟರ್‌ನ ಹೊರಗೆ ಬರೆಯಲಾಗಿದೆ. ಎಂಜಿನಿಯರಿಂಗ್‌ ಪದವೀಧರ ಆರೋಪಿ ಮೈಸೂರಿನ ಮನೋರಂಜನ್‌ ಡಿ ಈ ರಾಸಾಯನಿಕಗಳ ಮಿಶ್ರಣ ಮತ್ತು ಕ್ಯಾನಿಸ್ಟರ್‌ ಸ್ಪ್ರೆà ಬಳಕೆಯ ಐಡಿಯಾ ನೀಡಿರಬಹುದು ಎಂದೂ ಪೊಲೀಸರು ಶಂಕಿಸಿದ್ದಾರೆ.

ಭದ್ರತಾ ಲೋಪ ಒಪ್ಪಿದ ಅಮಿತ್‌ ಶಾ
ಲೋಕಸಭೆಗೆ ನುಗ್ಗಿದ ಘಟನೆ ಭದ್ರತಾ ಲೋಪವೆಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಲೋಕಸಭೆಯ ಸ್ಪೀಕರ್‌ ಗಮನ ಹರಿಸಿದ್ದಾರೆ. ಆದರೆ, ಪ್ರತಿಪಕ್ಷಗಳು ಈ ನಿಟ್ಟಿನಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಸ್ಪೀಕರ್‌ ಓಂ ಬಿರ್ಲಾ ಸೂಚನೆ ಹಿನ್ನೆಲೆಯಲ್ಲಿ ಐದರಿಂದ ಆರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ. ಅವರು ಮುಂದಿನ 15-20 ದಿನಗಳ ಅವಧಿಯಲ್ಲಿ ವರದಿ ನೀಡುವ ಸಾಧ್ಯತೆಗಳಿವೆ. ಅದರಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next