Advertisement

ಏರುತ್ತಿರುವ ವಾಹನಗಳ ಸಂಖ್ಯೆ: ಪಾರ್ಕಿಂಗ್‌ಗಾಗಿ ಪರದಾಟ

09:24 PM Jul 22, 2021 | Team Udayavani |

ಕುಂದಾಪುರ: ಕೊರೊನಾ ಲಾಕ್‌ಡೌನ್‌ ಬಳಿಕ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಒಂದೆಡೆ ಸಾರ್ವಜನಿಕ ಬಳಕೆಯ ವಾಹನಗಳ ಸಂಖ್ಯೆ ಹಾಗೂ ಓಡಾಟ ಕಡಿಮೆಯಾಗಿದ್ದರೆ ಇನ್ನೊಂದೆಡೆ ಖಾಸಗಿ ವಾಹನಗಳ ಭರಾಟೆ ಹೆಚ್ಚಾಗಿದೆ.

Advertisement

ಸಾರಿಗೆ ವಾಹನ:

ಹಳ್ಳಿಯಿಂದ ಅಥವಾ ಬೇರೆ ನಗರಗಳಿಂದ ಕುಂದಾಪುರ ಪೇಟೆಗೆ ಬರಲು ಖಾಸಗಿ ಬಸ್‌ ಹಾಗೂ ಸರಕಾರಿ ಬಸ್‌ನ ಸಂಖ್ಯೆ ಮೊದಲಿನಷ್ಟು ಇಲ್ಲ. ಅನೇಕ ಬಸ್‌ಗಳು ಓಡಾಟವನ್ನೇ ಆರಂಭಿಸಿಲ್ಲ. ಅದಲ್ಲದೇ ಇದ್ದರೂ ಲಾಕ್‌ಡೌನ್‌ ಸಮಯದಲ್ಲಿ ಅಭ್ಯಾಸವಾದಂತೆಯೋ ಏನೋ ಖಾಸಗಿ ವಾಹನಗಳ ಬಳಕೆ ಪ್ರಮಾಣ ಹೆಚ್ಚಾಗಿದೆ. ಬಹುತೇಕ ಮಂದಿ ವಾಹನ ಹೊಂದಿದವರು ನಗರಕ್ಕೆ ಬರುವಾಗ ಸ್ವಂತ ವಾಹನದಲ್ಲೇ ಬಂದು ಕೆಲಸ ಕಾರ್ಯ ಮುಗಿಸಿ ಬೇಗ ಮರಳುತ್ತಾರೆ. ಇಂತಹವರಿಗೆ ವಾಹನವನ್ನು ಎಲ್ಲಿ ನಿಲ್ಲಿಸುವುದು ಎನ್ನುವುದೇ ಸಮಸ್ಯೆಯಾಗಿದೆ.

ಜಾಗದ ಕೊರತೆ:

ಕುಂದಾಪುರ ನಗರ ವಿಶಿಷ್ಟ ವಿನ್ಯಾಸದ್ದಾಗಿದ್ದು ಹತ್ತಾರು ಪ್ರವೇಶ, ಹತ್ತಾರು ನಿರ್ಗಮನ ದಾರಿಗಳನ್ನು ಹೊಂದಿಲ್ಲ. ಪ್ರಮುಖವಾಗಿ ಒಂದೇ ಪ್ರವೇಶವನ್ನು ಹೊಂದಿದೆ. ಎರಡು ರಸ್ತೆಗಳು ಉದ್ದಕ್ಕೂ ಚಾಚಿದ್ದು ಅದರ ಎರಡು ಮಗ್ಗುಲಲ್ಲಿ ಇರುವ ಅಂಗಡಿ, ಮಳಿಗೆಗಳೇ ನಗರ. ಶಾಸಿŒ ಸರ್ಕಲ್‌ನಿಂದ ಹೊಸ ಬಸ್‌ ನಿಲ್ದಾಣದವರೆಗೆ ಪ್ರಮುಖ ಪೇಟೆ, ಅದರಿಂದ ಹೊರಟ ಹತ್ತಾರು ಕವಲು ರಸ್ತೆಗಳಲ್ಲಿ ಇರುವ ಅಂಗಡಿ ಮಳಿಗೆಗಳು, ಹೆದ್ದಾರಿ ಬದಿ ಇರುವ ಅಂಗಡಿಗಳು. ಇಲ್ಲೇ 25ಕ್ಕೂ ಅಧಿಕ ಸರಕಾರಿ ಕಚೇರಿ, ನ್ಯಾಯಾಲಯಗಳಿವೆ. ಜಿಲ್ಲಾ ಹೆಚ್ಚುವರಿ ನ್ಯಾಯಾಲಯ, ಜಿಲ್ಲೆಗೊಂದೇ ಇರುವ ಸಹಾಯಕ ಕಮಿಷನರ್‌ ಕಚೇರಿ, ದ.ಕ. ಜಿಲ್ಲೆಯ ಭಾಗಗಳೂ ಸೇರಿದಂತೆ ಜಿಲ್ಲೆಗಿರುವ ಅರಣ್ಯ ಇಲಾಖೆ ಉಪವಿಭಾಗ ಕಚೇರಿ ಇಲ್ಲೇ ಇರುವ ಕಾರಣ ಜಿಲ್ಲೆಯ ನಾನಾ ಭಾಗದಿಂದ ಜನ ಇಲ್ಲಿಗೆ ಆಗಮಿಸಬೇಕಿದೆ. ತಾಲೂಕು ಕಚೇರಿ, ತಾಲೂಕು ಪಂಚಾಯತ್‌ ಇತ್ಯಾದಿಗಳಿದ್ದೇ ಇವೆ. ಹಾಗಾಗಿ ಬೇರೆ ಬೇರೆ ಕಡೆಯಿಂದ ನಗರಕ್ಕೆ ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್‌ ಜಾಗ ಬೇಕು.

Advertisement

ಗ್ರಾಹಕರಿಗೆ:

ಹತ್ತಾರು ಮಳಿಗೆಗಳಿವೆ. ನೂರಾರು ಅಂಗಡಿಗಳಿವೆ. ಇವುಗಳಿಗೆ ಬರುವ ಗ್ರಾಹಕರು ವಾಹನ ನಿಲ್ಲಿಸಲು ಪರದಾಡಬೇಕಿದೆ. ವಿವಿಧ ಆಸ್ಪತ್ರೆಗಳಿಗೆ ಬರುವವರಿಗೆ ವಾಹನ ಎಲ್ಲಿ ಇಡುವುದು ಎನ್ನುವುದೇ ತಲೆನೋವು. ಹಳೆ ಕಾಲದ ಅಂಗಡಿಗಳು ಸೆಟ್‌ಬ್ಯಾಕ್‌ ಇಲ್ಲದ ಕಾರಣ ವಾಹನಗಳನ್ನು ನಿಲ್ಲಿಸಲು ಜಾಗ ಹೊಂದಿಲ್ಲದೆ ಇದ್ದರೆ ಇನ್ನು ಕೆಲವು ಪರವಾನಗಿ ಮಾಡುವಾಗ ಪಾರ್ಕಿಂಗ್‌ ಜಾಗ ತೋರಿಸಿದ್ದರೂ ಕಟ್ಟಡ ಪೂರ್ಣವಾಗಿ ವರ್ಷವಾಗುತ್ತಲೇ ಅಲ್ಲೊಂದು ಬಾಡಿಗೆಗೆ ಅಂಗಡಿ ಹಾಕಲು ಅವಕಾಶ ಕೊಟ್ಟು ಪಾರ್ಕಿಂಗ್‌ಗೆ ಸ್ಥಳ ಇಲ್ಲ ಎಂದು ಆಡಳಿತಕ್ಕೆ ಬೈಯುವ ಪರಿಸ್ಥಿತಿ ಇದೆ. ಅಧಿಕೃತ ಸೂಚನೆಯೇ ಇಲ್ಲದೆ ಅವರ ಪಾಡಿಗೆ ಅವರೇ ನೋ ಪಾರ್ಕಿಂಗ್‌ ಎಂದು ಫ‌ಲಕ ತಗುಲಿಸಿ ಇಟ್ಟದ್ದೂ ಇದೆ.

ಸರ್ವೇ ಆಗಿದೆ:

ಎಎಸ್‌ಪಿ ಹರಿರಾಮ್‌ ಶಂಕರ್‌, ಸಹಾಯಕ ಕಮಿಷನರ್‌ ಕೆ. ರಾಜು, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸಂಚಾರಿ ಠಾಣೆ ಎಸ್‌ಐ ಪುಷ್ಪಾ ಅವರು ಪಾರ್ಕಿಂಗ್‌ಗೆ ಸ್ಥಳ ಗುರುತು ಮಾಡಿದ್ದರು. ಈ ಸಂದರ್ಭ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಭೇಟಿ ನೀಡಿ ಸಲಹೆ ನೀಡಿದ್ದರು. ದ್ವಿಚಕ್ರ ವಾಹನ ಹಾಗೂ ಚತುಶ್ಚಕ್ರ ವಾಹನ ನಿಲುಗಡೆಗೆ ಪ್ರತ್ಯೇಕ ಜಾಗಗಳನ್ನು ಗುರುತಿಸಿ, ಪಾರಿಜಾತ ವೃತ್ತದಲ್ಲಿ ವಾಹನ  ತಿರುಗಲು ಅನುಕೂಲ ವಾತಾವರಣ ಸೃಷ್ಟಿ, ಈಗಾಗಲೇ ಪಾರ್ಕಿಂಗ್‌ ಆಗುತ್ತಿರುವಲ್ಲಿ  ಮಾರ್ಕಿಂಗ್‌ ಮಾಡಿ ಪಾರ್ಕಿಂಗ್‌ ಅಥವಾ ಹಲವೆಡೆ ನೋ ಪಾರ್ಕಿಂಗ್‌ ತಾಣಗಳನ್ನೂ ಮಾಡಲಾಗುತ್ತದೆ. ಕೋರ್ಟ್‌ ಮುಂದೆ, ತಹಶೀಲ್ದಾರ್‌ ಹಳೆ ಕಚೇರಿ ಎದುರು  ದ್ವಿಚಕ್ರ ವಾಹನ, ಚತುಶ್ಚಕ್ರ ವಾಹನಗಳು ನಿಲ್ಲುವ ಸ್ಥಳ ಗುರುತಿಸಲಾಗಿದೆ. ನಗರದ ಒಳಗೆ ಓಡಾಡುವ ವಾಹನಗಳ ವೇಗಮಿತಿಗಾಗಿ ಅಲ್ಲಲ್ಲಿ ಹಂಪ್‌ಗ್ಳು, ಪಾದಚಾರಿಗಳ, ಶಾಲಾ ಮಕ್ಕಳ ಸುರಕ್ಷಿತ ರಸ್ತೆ ದಾಟುವಿಕೆಗಾಗಿ ಝೀಬ್ರಾ ಕ್ರಾಸಿಂಗ್‌ ಮಾಡಬೇಕಾದ ಸ್ಥಳಗಳನ್ನು ಗುರುತಿಸಲಾಗಿದೆ.

ಬಸ್‌ ಶೆಲ್ಟರ್‌ಗಳನ್ನು ಎಲ್ಲೆಲ್ಲಿ ರಚಿಸಬೇಕೆಂದು ಗುರುತಿಸಿಟ್ಟುಕೊಳ್ಳಲಾಗಿದೆ. ಈವರೆಗೆ ಯಾವುದೂ ಕಾರ್ಯಗತವಾಗಿಲ್ಲ.

ಸರಣಿ : “ಉದಯವಾಣಿ’ “ಸುದಿನ’ ನಗರದ ಪಾರ್ಕಿಂಗ್‌ ಸಮಸ್ಯೆ ಕುರಿತು ಸರಣಿ ವರದಿ ಪ್ರಕಟಿಸಿತ್ತು. ಇದಕ್ಕೆ ಪುರಸಭೆ, ಪೊಲೀಸ್‌ ಇಲಾಖೆ ಸ್ಪಂದಿಸಿ ನಾಗರಿಕರ ಸಭೆ ಕರೆದು ಸೂಕ್ತ ವ್ಯವಸ್ಥೆ ಮಾಡುವ ಭರವಸೆ ನೀಡಿತ್ತು. ಅದಾದ ಬಳಿಕ ಲಾಕ್‌ಡೌನ್‌ ಘೋಷಣೆಯಾದ ಕಾರಣ ಬಾಕಿಯಾಗಿತ್ತು. ಈಗ ಲಾಕ್‌ಡೌನ್‌ ತೆರವಾಗಿದ್ದು ಸಭೆ ಸಾರ್ವಜನಿಕರ ಬಳಿ ಚರ್ಚಿಸಲು ಸಕಾಲ ಸನ್ನಿಹಿತವಾಗಿದೆ.

ಪಾರ್ಕಿಂಗ್‌ ಸಮಸ್ಯೆ ಕುರಿತು ಸಾರ್ವಜನಿಕ ಸಭೆ ಕರೆಯಲಾಗುವುದು. ನೋ ಪಾರ್ಕಿಂಗ್‌, ಪಾರ್ಕಿಂಗ್‌ ತಾಣ ನೋಟಿಫಿಕೇಶನ್‌ ಮಾಡಲಾಗುವುದು. ಫ್ಲೈಓವರ್‌ ಅಡಿಯಲ್ಲಿ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಾಗುವುದು.ಕೆ. ಶ್ರೀಕಾಂತ್‌,  ಡಿವೈಎಸ್‌ಪಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next