Advertisement

ಪರ್ಕಳ ರಸ್ತೆ, ಮಣಿಪಾಲ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ಕಲ್ಪಿಸಿ

10:03 PM Dec 05, 2022 | Team Udayavani |

ಪರ್ಕಳ ಅರ್ಧಕ್ಕೆ ನಿಂತಿರುವ ರಸ್ತೆ, ಮಣಿಪಾಲ ಟ್ರಾಫಿಕ್‌, ಪಾರ್ಕಿಂಗ್‌ ಸಮಸ್ಯೆ, ಬಡಗಬೆಟ್ಟು ಗ್ರಾ. ಪಂ. ವ್ಯಾಪ್ತಿ ಕಸ ಸಂಗ್ರಹ ವಿಳಂಬದ ಬಗ್ಗೆ ಸಾರ್ವಜನಿಕರು ದೂರು ಹೇಳಿಕೊಂಡಿದ್ದು, ಅದರ ವಿಸ್ತೃತ ವರದಿ ಇಲ್ಲಿ ಪ್ರಕಟಿಸಲಾಗಿದೆ. ಯಾವುದೇ ರೀತಿಯ ನಾಗರಿಕ ಸಮಸ್ಯೆಗಳಿದ್ದರೆ ವಾಟ್ಸ್‌ ಆ್ಯಪ್‌ ಸಂಖ್ಯೆ 6362906071ಗೆ ಮಾಹಿತಿ ನೀಡಬಹುದು. ಉಡುಪಿಯ ಸುದ್ದಿಗಳನ್ನು news_udupi@manipalmedia.com ಗೆ ಕಳುಹಿಸಿ.

Advertisement

ಅರ್ಧದಲ್ಲೇ ನಿಂತ ಕಾಂಕ್ರೀಟ್‌ ರಸ್ತೆ ಕಾಮಗಾರಿ
ಪರ್ಕಳ ಅರ್ಜುನ ಯುವಕ ಮಂಡಲದ ಪಕ್ಕದಲ್ಲಿ ಸಾಗುವ ರಸ್ತೆ ಮುಂದೆ ಸಾಗಿ ಸರಳೇಬೆಟ್ಟು ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಹಳೆಯ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಕಾಂಕ್ರೀಟ್‌ ರಸ್ತೆ ಯೋಜನೆ ಕುಂಟುತ್ತ ಸಾಗುತ್ತಿದೆ. ಮಳೆಗಾಲದ ಮುನ್ನ ರಸ್ತೆಯನ್ನು ಅಗೆದಿದ್ದು ಕೆಸರು ಗದ್ದೆಯಂತಾಗಿತ್ತು. ಸ್ಥಳೀಯರು ಈ ಜಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಮಳೆ ಮುಗಿದು ತಿಂಗಳಾಗಿದ್ದರೂ, ರಸ್ತೆ ಅಭಿವೃದ್ಧಿ ಕೆಲಸ ನಡೆದಿಲ್ಲ. ಪ್ರಸ್ತುತ ರಾಮ ಮಂದಿರದ ಬಳಿ ರಸ್ತೆಯ ಎರಡು ಬದಿಯಲ್ಲಿ ಒಂದೇ ರೀತಿ ವಿಸ್ತರಿಸದೆ ಇರುವುದರಿಂದ ಸಮಸ್ಯೆಯಾಗಿದೆ. ಈ ರಸ್ತೆ ವಿಸ್ತರಣೆ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜನರಿಗೆ ಇದರಿಂದ ನಿತ್ಯ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಪ್ರಯಾಣಿಕರು ಅಗೆದು ಬಿಟ್ಟಿರುವ ಹಳೆ ಜಲ್ಲಿಯ ರಸ್ತೆಯಲ್ಲಿಯೇ ವಾಹನ ಸಂಚರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಈ ಬಗ್ಗೆ ಸೂಕ್ತ ಕ್ರಮ ತಗೆದುಕೊಂಡು ರಸ್ತೆ ಶೀಘ್ರ ಮುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಮಣಿಪಾಲ: ಟ್ರಾಫಿಕ್‌ ನಿರ್ವಹಣೆಗೆ ಮುಂಜಾಗ್ರತೆ ಅಗತ್ಯ
ಮಣಿಪಾಲ ಭಾಗದಲ್ಲಿ ಟ್ರಾಫಿಕ್‌ ಸಹಿತ ಪಾರ್ಕಿಂಗ್‌ ಸಮಸ್ಯೆಗಳಿಗೆ ಈಗಲೇ ಮುಂಜಾಗ್ರತೆ ಕ್ರಮಗಳನ್ನು ತಗೆದುಕೊಳ್ಳಬೇಕಿದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ. ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವಂತಾಗಿದೆ. ಪಾರ್ಕಿಂಗ್‌ ಸೌಲಭ್ಯವಿಲ್ಲದೇ ರಸ್ತೆ ಮೇಲೆ ಕಾರುಗಳು ನಿಂತಿರುತ್ತದೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಮಣಿಪಾಲ ಟೈಗರ್‌ ವೃತ್ತದಿಂದ ಈಶ್ವರನಗರದ ವರೆಗೂ ಎರಡೂ ಕಡೆಗಳಲ್ಲೂ ವಾಹನ ನಿಲ್ಲಿಸಿರುತ್ತಾರೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಸಿಂಡಿಕೇಟ್‌ ಸರ್ಕಲ್‌ನಲ್ಲಿ ಹಂಪ್ಸ್‌ ಅಳವಡಿಸುವ ಮೂಲಕ ವಾಹನಗಳ ಅಡ್ಡಾದಿಡ್ಡಿ ಸಂಚಾರ, ವೇಗ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನರ ಬೇಡಿಕೆಯಾಗಿದೆ. ನಗರಸಭೆ, ಪೊಲೀಸ್‌ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹಿಸಿದ್ದಾರೆ.

ಕೆಳ ಪರ್ಕಳ: ಸರಣಿ ಅಪಘಾತ ವಲಯ
ಕೆಳ ಪರ್ಕಳ ರಸ್ತೆ ಅವ್ಯವಸ್ಥೆಯಿಂದಾಗಿ ಬೃಹತ್‌ ವಾಹನಗಳು ಆಗಾಗ ಮಗುಚಿ ಬೀಳುತ್ತಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ, ಇದರಿಂದಾಗಿ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿದ್ದು, ಸರಣಿ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಸವಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

400 ಮೀ. ಉದ್ದದ ನೇರ ರಸ್ತೆ (ಹೆದ್ದಾರಿ) ಕಾಮಗಾರಿ ನಡೆಯುತ್ತಿದ್ದು, ಕೆಳ ಪರ್ಕಳ ತಿರುವು ರಸ್ತೆ ಇರುವುದನ್ನು ನೇರ ರಸ್ತೆಯಾಗಿ ರೂಪಿಸಲಾಗುತ್ತಿದೆ. ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲು ವಿಳಂಬವಾಗುತ್ತಿದ್ದು, ಜಿಲ್ಲಾಡಳಿತ, ಹೆದ್ದಾರಿ ಸಚಿವಾಲಯ ಈ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳಬೇಕಿದೆ.

Advertisement

ಪ್ರಸ್ತುತ ಸಂಚಾರಕ್ಕೆ ಇರುವ ಪರ್ಯಾಯ ಮಾರ್ಗ ಕಿರಿದಾಗಿದ್ದು, ಸಂಪೂರ್ಣ ಹದಗೆಟ್ಟಿದೆ. ಇದರಿಂದಾಗಿ ನಿಯಂತ್ರಣ ತಪ್ಪುವ ಸರಕು, ಸಾಮಗ್ರಿ ತುಂಬಿರುವ ಘನ ವಾಹನಗಳು ಅಪಘಾತಕ್ಕೀಡಾಗುತ್ತಿರುವುದು ಸವಾರರ ಆತಂಕಕ್ಕೆ ಕಾರಣವಾಗಿದೆ.

80 ಬಡಗುಬೆಟ್ಟು ಗ್ರಾ. ಪಂ: ತ್ಯಾಜ್ಯ ಸಂಗ್ರಹ ವಿಳಂಬ
80 ಬಡಗುಬೆಟ್ಟು ಪಂಚಾಯತ್‌ ವ್ಯಾಪ್ತಿಗೆ ಸೇರಿರುವ ದಶರಥನಗರದ 2ನೇ ಹಂತದಲ್ಲಿರುವ ಮನೆಗಳಿಗೆ ಗ್ರಾ.ಪಂ. ತ್ಯಾಜ್ಯ ಸಂಗ್ರಹ ಕೆಲವು ತಿಂಗಳಿಂದ ಸರಿಯಾಗಿ ನಡೆಯುತ್ತಿಲ್ಲ. ಪ್ರತಿನಿತ್ಯ ಹಸಿಕಸ ಹಾಗೂ ಬುಧವಾರದಂದು ಒಣಕಸವನ್ನು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಆದರೆ ಕಸ ಸಂಗ್ರಹಕ್ಕೆ ವಾರಕ್ಕೆ ಒಂದು ಬಾರಿಯೂ ಬರುತ್ತಿಲ್ಲ. ಇತ್ತೀಚೆಗೆ ಪಂಚಾಯತ್‌ ಆಡಳಿತದಲ್ಲಿ ಈ ಬಗ್ಗೆ ವಿಚಾರಿಸಿದ್ದು, ಮುಂದೆ ಸಮಸ್ಯೆಯಾಗುವುದಿಲ್ಲ ಎಂಬ ಭರವಸೆ ನೀಡಿದ್ದರು. ಗ್ರಾ. ಪಂ. ಆಶ್ವಾಸನೆ ಕಾರ್ಯರೂಪಕ್ಕೆ ಬಂದಿಲ್ಲ. ಕಸ ಸಂಗ್ರಹ ವ್ಯವಸ್ಥಿತವಾಗಿ ನಡೆಯುವಂತೆ ಗ್ರಾ.ಪಂ. ನೋಡಿಕೊಳ್ಳಬೇಕು ಎಂದು ಮಣಿಪಾಲದ ಕೆ. ಶಿವಶಂಕರ್‌ ವಿನಂತಿಸಿದ್ದಾರೆ.

ಸೂಕ್ತ ಕ್ರಮ ವಹಿಸಲು ಸೂಚನೆ
ಪರ್ಕಳ ಅರ್ಜುನ ಯುವಕ ಮಂಡಲದ ಪಕ್ಕದಿಂದ-ಸರಳೇಬೆಟ್ಟು ಜಂಕ್ಷನ್‌ಗೆ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಜಾಗದ ತಕರಾರಿನಿಂದ ಅರ್ಧಕ್ಕೆ ನಿಲ್ಲುವಂತಾಗಿದೆ. ಇದನ್ನು ಶೀಘ್ರ ಇತ್ಯರ್ಥಪಡಿಸಿ ರಸ್ತೆಯನ್ನು ಪೂರ್ಣಗೊಳಿಸಲಾಗುವುದು. ಮಣಿಪಾಲ ಪಾರ್ಕಿಂಗ್‌ ಸಮಸ್ಯೆ ಬಗ್ಗೆ ಹಲವು ದೂರುಗಳು ಬಂದಿವೆ. ಪೊಲೀಸ್‌ ಇಲಾಖೆ ಅವರಿಗೆ ಈ ಬಗ್ಗೆ ಸೂಕ್ತ ಕ್ರಮವಹಿಸಲು ಸೂಚನೆ ನೀಡಲಾಗುವುದು.
– ಸುಮಿತ್ರಾ ನಾಯಕ್‌, ಅಧ್ಯಕ್ಷರು, ನಗರಸಭೆ, ಉಡುಪಿ

ಕಸ ವಿಂಗಡಣೆೆ ಮಾಡಿ ಕೊಡುವುದು ಅಗತ್ಯ
80 ಬಡಗಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿಯ ಸಮಸ್ಯೆ ಇಲ್ಲ. ಒಣಕಸ ಮತ್ತು ಹಸಿ ಕಸ ವಿಂಗಡಣೆೆ ಮಾಡಿದರೆ ಮಾತ್ರ ತೆಗೆದುಕೊಂಡು ಹೋಗುವುದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಒಣಕಸದ ಜತೆಗೆ ಹಸಿಕಸ ಹಾಕಿದರೆ ತೆಗೆದುಕೊಂಡು ಹೋಗಲು ಕಷ್ಟ. ವಿಲೇವಾರಿಯೂ ಸಮಸ್ಯೆಯಾಗುತ್ತದೆ.
-ಅಶೋಕ್‌ ಕುಮಾರ್‌, ಪಿಡಿಒ, 80 ಬಡಗಬೆಟ್ಟು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next