Advertisement

ಪರೇಶ ಮೇಸ್ತ ಹತ್ಯೆ; ನ್ಯಾಯ ಸಿಗುವವರೆಗೂ ಹೋರಾಟ:ಸಚಿವ ಹೆಗಡೆ

04:01 PM Dec 09, 2017 | Team Udayavani |

ಹೊನ್ನಾವರ: ಒಂದೆಡೆ ಗಲಭೆ-ಸಂಘರ್ಷಕ್ಕೆ ಅಮಾನುಷವಾಗಿ ಬಲಿಯಾದವನಿಗಾಗಿ ಆಕ್ರಂದನ, ಇನ್ನೊಂದೆಡೆ ಬಲಿ ತೆಗೆದುಕೊಂಡವರ ವಿರುದ್ಧ ಮಡುಗಟ್ಟಿದ ಆಕ್ರೋಶದ ಮನಸ್ಥಿತಿಯಲ್ಲಿ ಪರೇಶ ಮೇಸ್ತನ ಪಾರ್ಥೀವ ಶರೀರದ ಮೆರವಣಿಗೆ ಸಹಸ್ರಾರು ಜನರ ನಡುವೆ ಶುಕ್ರವಾರ ಸಂಜೆ ನಡೆಯಿತು.

Advertisement

ಸರಕಾರಿ ಆಸ್ಪತ್ರೆ ಶವಾಗಾರದಿಂದ ತೆರೆದ ವಾಹನದಲ್ಲಿ ನಡೆಸಿದ ಮೆರವಣಿಗೆ ಶರಾವತಿ ವೃತ್ತದ ಮೂಲಕ
ಹಾಯ್ದು ಹೋಗುವಾಗ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಆಗಮಿಸಿ, ಪರೇಶ್‌ ಮೇಸ್ತನ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿ, ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿ ತೆರಳಿದರು.

ಮುಂದುವರಿದ ಮೆರವಣಿಗೆಯನ್ನು ಪೊಲೀಸ್‌ ಪರೇಡ್‌ ಮೈದಾನ, ಮಾಸ್ತಿಕಟ್ಟೆ, ಹೂವಿನಚೌಕ ಮಾರ್ಗವಾಗಿ ಸಾಗಿ ಸೇಂಟ್‌ ಥಾಮಸ್‌ ಪ್ರೌಢಶಾಲಾ ಆವರಣಕ್ಕೆ ತರಲಾಯಿತು. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಿಗಿಬಂದೋಬಸ್ತ ನಡೆಸಿದ್ದರು.

ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತ, ಪರೇಶ್‌ ಮೇಸ್ತನ ಬುಧವಾರ ರಾತ್ರಿ ನಡೆದ ಗಲಭೆಯಲ್ಲಿ ಸುಳಿವೇ ಸಿಗದೇ ನಾಪತ್ತೆಯಾಗಿ ಶುಕ್ರವಾರ ಬೆಳಗ್ಗೆ ಇಲ್ಲಿನ ಶೆಟ್ಟಿಕೆರೆಯಲ್ಲಿ ಹೆಣವಾಗಿ ಕಂಡುಬಂದಿದ್ದ. 

ಹಳ್ಳಿಗಳಿಗೂ ವ್ಯಾಪಿಸಿದ ಗಲಭೆ-ಸಾವಿನ ಪ್ರಕರಣದ ಹೊಗೆ
ಪಟ್ಟಣದಲ್ಲಿ ನಡೆದ ಗಲಭೆ ಮತ್ತು ಸಾವಿನ ಪ್ರಕರಣದ ಹೊಗೆ ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸಿದ್ದು, ಶುಕ್ರವಾರ
ಕಾಸರಕೋಡ್‌, ಸಂತೇಗುಳಿ, ಕವಲಕ್ಕಿಗಳಲ್ಲಿ ಈ ಸಂಬಂಧ  ಗಲಾಟೆ ನಡೆದಿದೆ. ಕಾಸರಕೋಡ ಹಿರೇಮಠದ ಅಯ್ಯಪ್ಪ
ಸನ್ನಿಧಾನದಲ್ಲಿ, ಅಯ್ಯಪ್ಪ ಸನ್ನಿಧಾನದ ಬ್ಯಾನರ್‌, ಫೋಟೋ ಕಿತ್ತೆಸೆದು, ಅಲ್ಲಿದ್ದ 10ಸಾವಿರ ರೂ.ಗಳನ್ನು ದೋಚಿರುವ
ಕುರಿತು ಸಿರಾಜ್‌ ಸಾಬ್‌ ವಿರುದ್ಧ ಜನ್ನಾ ಡಿಂಗಾ ತಾಂಡೇಲ್‌ರು ದೂರು ನೀಡಿದ್ದಾರೆ. ಸಂತೆಗುಳಿಯಲ್ಲಿ ಒಬ್ಬ ಬೈಕ್‌
ಜಖಂಗೊಳಿಸಿದ ಕುರಿತು ಮಾಹಿತಿ ಲಭ್ಯವಾಗಿದ್ದು, ಕವಲಕ್ಕಿಯಲ್ಲೂ ಸಂಜೆ ಚಕಮಕಿ ನಡೆದಿದೆ. ಇತ್ತ ಹೊನ್ನಾವರ
ಪಟ್ಟಣದಲ್ಲಿ ಎಲ್ಲ ಅಂಗಡಿ ಬಂದ್‌ ಮುಂದುವರಿದಿದೆ. ಪೆಟ್ರೋಲ್‌ ಬಂಕ್‌ಗಳನ್ನು ಬಂದ್‌ ಮಾಡಿರುವ ಹಿನ್ನೆಲೆಯಲ್ಲಿ
ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ಹೋಟೆಲ್‌ ಬಂದ್‌ ಇರುವ ಕಾರಣ ಊಟ ತಿಂಡಿಗಳಿಗಾಗಿ
ಹೊರಗಿನವರು ಪರದಾಡುವಂತಾಗಿದೆ. ಗ್ರಾಮೀಣ ಬಸ್‌ ಸಂಚಾರ ಸ್ಥಗಿತಗೊಂಡಿದ್ದವು.

Advertisement

ಐವರ ವಿರುದ್ಧ ಕೊಲೆ ಪ್ರಕರಣ
ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಗಲಭೆಯಲ್ಲಿ ಸುಳಿವೇ ಸಿಗದೇ ನಾಪತ್ತೆಯಾಗಿ ಶುಕ್ರವಾರ ಬೆಳಗ್ಗೆ ಶೆಟ್ಟಿಕೆರೆಯಲ್ಲಿ ಹೆಣವಾಗಿ ಪತ್ತೆಯಾದ ಪರೇಶ್‌ ಸಾವಿನ ಕುರಿತಂತೆ ಆತನ ತಂದೆ ನೀಡಿದ ದೂರಿನನ್ವಯ ಐವರು ಆರೋಪಿಗಳ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಜಾದ್‌ ಅಣ್ಣಿಗೇರಿ, ಅಸೀಫ್‌ ರಫೀಕ್‌ , ಇಮ್ತಿಯಾಜ್‌ , ಮಹಮ್ಮದ್‌ ಫೈಸಲ್‌ ಅಣ್ಣಿಗೇರಿ ಹಾಗೂ ಜಿಮ್‌ ಸಲೀಂ ವಿರುದ್ಧ ಕೊಲೆ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

21ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಪಟ್ಟಣದಲ್ಲಿ ಡಿ. 6ರಂದು ರಾತ್ರಿ ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳನ್ನು ನ್ಯಾಯಾಲಯದೆದುರು ಹಾಜರುಪಡಿಸಿದ್ದು ಡಿ.21 ರವರೆಗೆ ನ್ಯಾಯಾಂಗ ಬಂಧನ ವಿಧಿ ಸಿದೆ. ಈ ಗಲಭೆ ಪ್ರಕರಣದಲ್ಲಿ ಮುಸ್ಲಿಂನ 27 ಆರೋಪಿಗಳು ಹಾಗೂ ಹಿಂದುವಿನ 11ಆರೋಪಿಗಳನ್ನು ಪೊಲೀಸರು ನ್ಯಾಯಾಲಯದೆದುರು ಹಾಜರುಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next