ಬೆಂಗಳೂರು: ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಎರಡನೇ ದಿನವೂ ಐಟಿ ದಾಳಿ ಮುಂದುವರಿದಿರುವಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಚರ್ಚೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ಸಿಎಂ ಅಧಿಕೃತ ನಿವಾಸ ಕಾವೇರಿಗೆ ತೆರಳಿದ ಪರಮೇಶ್ವರ್, ಈ ದಾಳಿಯಿಂದ ಪಕ್ಷ ಹಾಗೂ ಸರ್ಕಾರದ ಮೇಲಾದ ಪರಿಣಾಮ ಮತ್ತು ರೆಸಾರ್ಟನಲ್ಲಿರುವ ಗುಜರಾತ್ ಶಾಸಕರ ಜವಾಬ್ದಾರಿ ನೋಡಿಕೊಳ್ಳುವ ಕುರಿತು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.ದಾಳಿಯಿಂದ ಗುಜರಾತ್ ಶಾಸಕರು ಆತಂಕಕ್ಕೆ ಒಳಗಾಗಿದ್ದು, ಉಸ್ತುವಾರಿಯನ್ನು ಬೇರೆ ಸಚಿವರಿಗೆ ವಹಿಸಿಕೊಡುವುದೋ ಅಥವಾ ಡಿಕೆಶಿ ಸೋದರ ಡಿ.ಕೆ.ಸುರೇಶ್ ಅವರಿಗೇ ಬಿಡಬೇಕೋ ಎಂಬ ಬಗ್ಗೆ ಚರ್ಚೆಯಾಗಿದೆ. ಬಳಿಕ ಪರಮೇಶ್ವರ್ ಅವರು, ರೆಸಾರ್ಟ್ಗೆ ಹೋಗಿ ಶಾಸಕರಿಗೆ ಧೈರ್ಯ ತುಂಬಿ ಬಂದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಇಂಥ ದಾಳಿ ತಂತ್ರಗಳಿಗೆ ಕೈಹಾಕಿದೆ. ಇದಕ್ಕೆ ಪ್ರತಿತಂತ್ರ ಹೂಡುವ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದ್ದಾರೆ. ಪಕ್ಷದ ಇತರ ನಾಯಕರ ಮೇಲೂ ಐಟಿ ಕಣ್ಣು ಇರುವುದರಿಂದ, ಎಲ್ಲರೂ ಎಚ್ಚರಿಕೆಯಿಂದ ಇರುವುದಲ್ಲದೇ, ಬಿಜೆಪಿ ನಾಯಕರ ಮೇಲಿರುವ ಪ್ರಕರಣಗಳ ತನಿಖೆ ಚುರುಕುಗೊಳಿಸುವ ಬಗ್ಗೆಯೂ ಮಾತುಕತೆಯಾಗಿದೆ ಎಂದು ಹೇಳಲಾಗಿದೆ.