Advertisement

ಪಾಂಗಾಳ : ಚೂರಿಯಿಂದ ಇರಿದು ಯುವಕನ ಬರ್ಬರ ಕೊಲೆ

11:16 PM Feb 05, 2023 | Team Udayavani |

ಕಾಪು : ಊರಿನ ಕೋಲದಲ್ಲಿ ಭಾಗವಹಿಸಿದ್ದ ಯುವಕನನ್ನು ಮಾತುಕತೆಗೆ ಕರೆದು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ ಘಟನೆ ರವಿವಾರ ಸಂಜೆ ಪಾಂಗಾಳದಲ್ಲಿ ನಡೆದಿದೆ.
ಪಾಂಗಾಳ ಮಂಡೇಡಿ ನಿವಾಸಿ ದಿ| ವಿಠಲ ಶೆಟ್ಟಿ ಮತ್ತು ಸುಲೋಚನಾ ಶೆಟ್ಟಿ ದಂಪತಿಯ ಪುತ್ರ ಶರತ್‌ ವಿ. ಶೆಟ್ಟಿ (42) ಹತ್ಯೆಗೀಡಾದ ಯುವಕ.

Advertisement

ಪಾಂಗಾಳ ಪರಿಸರದ ಬಹುತೇಕ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲನಾಗಿ ಪಾಲ್ಗೊಳ್ಳುತ್ತಿದ್ದ ಮೃತ ಶರತ್‌ ಶೆಟ್ಟಿ ಭೂ ವ್ಯವಹಾರ, ಗುತ್ತಿಗೆ ಕಾಮಗಾರಿ ಸಹಿತ ವಿವಿಧ ಕೆಲಸಗಳನ್ನು ನಡೆಸುತ್ತಿದ್ದರೆಂದು ತಿಳಿದು ಬಂದಿದೆ. ರವಿವಾರ ಹತ್ಯೆಗೀಡಾಗುವ ಮುನ್ನ ಘಟನಾ ಸ್ಥಳದ ಮುಂಭಾಗದಲ್ಲಿ ನಡೆಯುತ್ತಿದ್ದ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮದಲ್ಲೂ ಕ್ರಿಯಾಶೀಲನಾಗಿ ಪಾಲ್ಗೊಂಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕರೆ ಮಾಡಿ ಕರೆಯಿಸಿದರೇ ಹಂತಕರು ? : ಶನಿವಾರ ಮತ್ತು ರವಿವಾರ ಪಾಂಗಾಳ ಪಡು³ ಬಬ್ಬುಸ್ವಾಮಿ ದೈವಸ್ಥಾನದ ನೇಮ ನಡೆಯುತ್ತಿದ್ದು ರವಿವಾರ ಸಂಜೆ ಗುಳಿಗ ಕೋಲದಲ್ಲಿ ಗುಳಿದ ದೈವವನ್ನು ನಿಯಂತಿಸುತ್ತಿದ್ದ ಶರತ್‌ ಶೆಟ್ಟಿ ಅವರ ಮೊಬೈಲ್‌ಗೆ ಆ ಸಂದರ್ಭದಲ್ಲಿ ಬಂದಿದ್ದ ದೂರವಾಣಿ ಕರೆಯೇ ಯಮನಾಗಿ ಕಾಡಿದ್ದಿರಬೇಕೆಂಬ ಸಂಶಯ ವ್ಯಕ್ತವಾಗಿದೆ. ಮಾತುಕತೆಯ ನೆಪದಲ್ಲಿ ದೂರವಾಣಿ ಕರೆ ಮಾಡಿ ಕರೆಯಿಸಿಕೊಂಡ ಪರಿಚಿತರೇ ಹೆದ್ದಾರಿ ಬದಿಯ ಆಂಗಡಿಯ ಮುಂಭಾಗದಲ್ಲಿ ಚೂರಿಯಿಂದ ಇರಿದು ಹತ್ಯೆಗೈದಿರುವ ಸಾಧ್ಯತೆಗಳಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪಾಂಗಾಳ ಜನಾರ್ದನ ದೇವಸ್ಥಾನದ ಬಲಭಾಗದಲ್ಲಿರುವ ಕಾಂಪ್ಲೆಕ್ಸ್‌ವೊಂದರ ಬಳಿ ಈ ಘಟನೆ ನಡೆದಿದ್ದು ಆರೋಪಿಗಳು ಮೃತನ ಎದೆಯ ಭಾಗಕ್ಕೆ ಚೂರಿಯಿಂದ ತಿವಿದು ಗಂಭೀರ ಗಾಯಗೊಳಿಸಿದ್ದರು. ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಘಟನಾ ಸ್ಥಳದಿಂದ ಸ್ವಲ್ಪ ದೂರವರೆಗೆ ಓಡಿ ಹೋಗಿ, ಕಲ್ಲು ಕಂಬಗಳ ಮೇಲೆ ರಕ್ತ ಮಡುವಿನಲ್ಲಿ ಬಿದ್ದಿದ್ದರು. ಸುದ್ಧಿ ತಿಳಿದು ಆಪದ್ಭಾಂಧವರಂತೆ ಸ್ಥಳಕ್ಕೆ ಧಾವಿಸಿದ ರಾಜೇಶ್‌ ಶೆಟ್ಟಿ, ಶೈಲೇಶ್‌ ಶೆಟ್ಟಿ, ಸುಧೀರ್‌ ಶೆಟ್ಟಿ ಮೊದಲಾದವರು ಕೂಡಲೇ ಕಾರಿನಲ್ಲಿ ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಪೊಲೀಸ್‌ ಅಧಿಕಾರಿಗಳ ಭೇಟಿ : ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಅಕ್ಷಯ್‌ ಹಾಕೆ ಮಚ್ಚೀಂದ್ರಾ, ಕಾರ್ಕಳ ಡಿವೈಎಸ್ಪಿ ಅರವಿಂದ್‌ ಕಲಗುಜ್ಜಿ, ಕಾಪು ವೃತ್ತ ನಿರೀಕ್ಷಕ ಕೆಸಿ. ಪೂವಯ್ಯ, ಕಾಪು ಎಸ್ಸೆ$ç ಸುಮಾ ಬಿ., ಕ್ರೈಂ ಎಸೈ ಭರತೇಶ್‌ ಕಂಕಣವಾಡಿ, ಬೆರಳಚ್ಚು ಮತ್ತು ಶ್ವಾನದಳದ ಅಧಿಕಾರಿಗಳ ಸಹಿತವಾಗಿ ಪೊಲೀಸ್‌ ಸಿಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಸೊತ್ತುಗಳು ವಶಕ್ಕೆ : ಎರಡು ತಿಂಗಳ ಹಿಂದೆ ನಡೆದಿರುವ ಭೂ ವ್ಯವಹಾರದ ಕುರಿತಾದ ಪ್ರಕರಣ ಸಹಿತವಾಗಿ ಇನ್ನಿತರ ವಿಚಾರಗಳು, ಘಟನೆಗಳ ಬಗ್ಗೆ ಸವಿವರಾದ ಮಾಹಿತಿಗಳನ್ನು ಪಡೆದುಕೊಂಡು ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಚರುಕುಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಹತ್ಯೆಗೆ ಬಳಸಿದ್ದೆನ್ನಲಾಗಿರುವ ಚೂರಿ, ಶರತ್‌ ಗೆ ಸೇರಿದ ಮೊಬೈಲ್‌, ನಂಬರ್‌ ಪ್ಲೇಟ್‌ ಇಲ್ಲದ ಸ್ಕೂಟಿ ಸಹಿತ ಕೆಲವು ಸೊತ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

2-3 ಮಂದಿಯ ಕೃತ್ಯ: ಎರಡರಿಂದ ಮೂರು ಮಂದಿಯ ತಂಡ ಕೃತ್ಯವೆಸಗಿರುವ ಸಾಧ್ಯತೆಗಳಿದ್ದು ಆರೋಪಿಗಳು ಹತ್ಯೆ ನಡೆಸಿ ಬಳಿಕ ಪಾಂಗಾಳ ಸೇತುವೆ ಬಳಿಯ ಅಥವಾ ಪಾಂಗಾಳ ಆಲಡೆ ರಸ್ತೆಯ ಮೂಲಕವಾಗಿ ಪರಾರಿಯಾಗಿರುವ ಸಾಧ್ಯತೆಗಳಿವೆ ಎನ್ನುವುದನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಶ್ವಾನವು ಖಚಿತ ಪಡಿಸಿದೆ.

ಬೆಚ್ಚಿ ಬಿದ್ದ ಪಾಂಗಾಳದ ಜನತೆ: ರಾ. ಹೆ. 66ರ ಇಕ್ಕೆಲದಲ್ಲಿರುವ ಪಾಂಗಾಳ ಅಪಘಾತದ ಬ್ಲಾಕ್‌ ಸ್ಪಾಟ್‌ ಆಗಿದ್ದು ಸಣ್ಣ ಪುಟ್ಟ ಹಲ್ಲೆ, ಮತ್ತಿತರ ಘಟನೆಗಳಿಂದಾಗಿ ಕುಖ್ಯಾತಿಗೆ ಕಾರಣವಾಗಿತ್ತು. ಪಾಂಗಾಳದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ ಎನ್ನಲಾಗುತ್ತಿರುವ ಶರತ್‌ ಶೆಟ್ಟಿ ಹತ್ಯೆ ಪ್ರಕರಣವು ಪಾಂಗಾಳದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಸ್ಥಳೀಯವಾಗಿ ಎಲ್ಲರ ಜತೆಗೆ ಆತೀ¾ಯನಾಗಿ ಬೆರೆಯುತ್ತಿದ್ದ ತಮ್ಮೂರಿನ ಯುವಕನ ಹತ್ಯೆ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೊಳಪಡಿಸಬೇಕಿದೆ ಎಂದು ಬಬ್ಬುಸ್ವಾಮಿ ದೈವಸ್ಥಾನದ ಕತುೃì ಅಮರನಾಥ ಶೆಟ್ಟಿ ಪಾಂಗಾಳ ಒತ್ತಾಯಿಸಿದ್ದಾರೆ.

ಮನೆಗೆ ಒಬ್ಬನೇ ಮಗ : ಪಾಂಗಾಳ ಮಂಡೇಡಿ ನಿವಾಸಿ ದಿ| ವಿಠಲ ಶೆಟ್ಟಿ ಮತ್ತು ಸುಲೋಚನಾ ಶೆಟ್ಟಿ ದಂಪತಿಯ ಪುತ್ರ ಶರತ್‌ ಶೆಟ್ಟಿ ಅವಿವಾಹಿತನಾಗಿದ್ದು ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ. ತಂದೆ ಕೆಲವು ವರ್ಷಗಳ ಹಿಂದೆ ತೀರಿ ಹೋಗಿದ್ದು ಪ್ರಸ್ತುತ ತಾಯಿಯ ಜತೆಗೆ ವಾಸವಿದ್ದರು.

ಶೀಘ್ರ ಪ್ರಕರಣ ಭೇದಿಸುತ್ತೇವೆ : ಎಸ್ಪಿ
ಊರಿನ ಕೋಲಕ್ಕೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶರತ್‌ ಶೆಟ್ಟಿಯನ್ನು ಅವರ ಪರಿಚಿತರು ಪೋನ್‌ ಮಾಡಿ ಕರೆಯಿಸಿ ಚೂರಿಯಿಂದ ಇರಿದು ಹತ್ಯೆ ನಡೆಸಿರಬೇಕೆಂದು ಸಂಶಯಿಸಲಾಗಿದೆ. ಎದೆಯ ಎಡಭಾಗದಲ್ಲಿ ಚೂರಿಯಿಂದ ಇರಿದ ಗಾಯಗಳಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುವಾಗಿ ಪರಿಶೀಲನೆಯಿಂದ ತಿಳಿದು ಬಂದಿದೆ. ಘಟನೆಗೆ ಕಾರಣಗಳೇನು ಎನ್ನುವುದರ ಬಗ್ಗೆ ತನಿಖೆಯ ಬಳಿಕವೇ ತಿಳಿದು ಬರಲಿದೆ. ಪ್ರಕರಣವನ್ನು ಭೇದಿಸಲು ತಂಡಗಳನ್ನು ರಚಿಸಲಾಗಿದ್ದು ಶೀಘ್ರ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂದಿಸುತ್ತೇವೆ.
– ಹಾಕೆ ಅಕ್ಷಯ್ ಮಚ್ಚಿಂದ್ರ, ಎಸ್ಪಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next