Advertisement

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

12:16 AM May 24, 2022 | Team Udayavani |

ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಗಳಿಂದ ರಾಜಕೀಯ ರಹಿತವಾದ ಅಭಿವೃದ್ಧಿಪರ ಚಿಂತನೆಗಳಿಗೆ ಆದ್ಯತೆ ಇದೆ. ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸುವಂತಹ ಅಭಿವೃದ್ಧಿ ಕೆಲಸಗಳು, ರಸ್ತೆ, ಕುಡಿಯುವ ನೀರು ಇತ್ಯಾದಿ ಶಾಶ್ವತ ಕಾರ್ಯಗಳು ನಡೆಯುತ್ತವೆ.

Advertisement

ಪಂಚಾಯತ್‌ರಾಜ್‌ ವ್ಯವಸ್ಥೆಗೊಳಪಟ್ಟ ಸ್ಥಳೀಯಾಡಳಿತಗಳ ಚುನಾವಣೆಗೆ ಸಂಬಂಧಿಸಿದಂತೆ ಮೇ 10ರಂದು ಸುಪ್ರೀಂ ಕೋರ್ಟು ನೀಡಿದ ಆದೇಶದಿಂದ ಕರ್ನಾಟಕಕ್ಕೂ ಬಿಸಿತಟ್ಟಿದೆ. ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿ ನೀಡಿದ ತೀರ್ಪು ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ ಎಂಬುದಾಗಿ ತೀರ್ಪಿನಲ್ಲಿ ನಿರ್ದಿಷ್ಟವಾಗಿ ತಿಳಿಸಲಾಗಿದೆ.
ಭಾರತ ಸರಕಾರ 1952ರಲ್ಲಿ ಗ್ರಾಮೀಣಾಭಿವೃದ್ಧಿಯನ್ನು ಗುರಿಯಾಗಿರಿಸಿ, ಅಭಿವೃದ್ಧಿ ಯೋಜನೆಗಳು ನಿರೀಕ್ಷಿತ ಮಟ್ಟ ದಲ್ಲಿ ಫ‌ಲ ನೀಡುವಂತಾಗ ಬೇಕು ಎನ್ನುವ ಕಾರಣಕ್ಕಾಗಿ ಪ್ರಜಾತಾಂತ್ರಿಕ (ಚುನಾಯಿತ) ವ್ಯವಸ್ಥೆಯನ್ನು ಹುಟ್ಟುಹಾಕುವ ವ್ಯವಸ್ಥೆ ಅಗತ್ಯ ಎಂದು ಮನಗಂಡಿತು. ಅದರಂತೆ 1960ರ ಹೊತ್ತಿಗೆ ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಗ್ರಾಮ ಪಂಚಾಯತ್‌, ಪಂಚಾಯತ್‌ ಸಮಿತಿ ಮತ್ತು ಜಿಲ್ಲಾ ಪರಿಷತ್‌ ತ್ರಿಸ್ತರ ಪಂಚಾಯತ್‌ ರಾಜ್‌ ಕಾಯಿದೆಯನ್ನು ರೂಪಿಸಲಾಯಿತು. ಆದರೆ ಕಾರಣಾಂತರಗಳಿಂದ ಈ ಸಂಸ್ಥೆಗಳು ಉಪೇಕ್ಷೆಗೆ ಒಳಪಟ್ಟು ನಿರೀಕ್ಷಿತ ಫ‌ಲ ನೀಡಲಿಲ್ಲ.

1977ರಲ್ಲಿ ಅಸ್ತಿತ್ವಕ್ಕೆ ಬಂದ “ಅಶೋಕ ಮೆಹ್ತಾ ಸಮಿತಿ’ ಪಂಚಾಯತ್‌ರಾಜ್‌ ವ್ಯವಸ್ಥೆ ಪ್ರಗತಿಯತ್ತ ಸಾಗಬೇಕೆಂದು ಜಿಲ್ಲಾ ಪರಿಷತ್‌, ತಾಲೂಕು ಸಮಿತಿ ಮತ್ತು ಮಂಡಲ ಪಂಚಾಯತ್‌ ಈ ಮೂರು ಸ್ತರಗಳ ಪಂಚಾಯತ್‌ ಆಡಳಿತ ವ್ಯವಸ್ಥೆಯ ರಚನೆಗೆ ಶಿಫಾರಸು ಮಾಡಿತು. ವಿಧಾನ ಮಂಡಲದ ಅನಂತರದ ಪ್ರಬಲ ಆಡಳಿತ ವಿಕೇಂದ್ರೀಕೃತ ವ್ಯವಸ್ಥೆ ಜಿಲ್ಲಾ ಪರಿಷತ್‌ ಆಗಿತ್ತು. ಇದರ ಪ್ರಕಾರ್ಯಗಳು ಸಂವಿಧಾನ ಬದ್ಧವಾಗಿರಬೇಕು. ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸುವ ಅವಕಾಶವಿರಬೇಕೆಂದು ಸೂಚಿಸಿತು. ಈ ಶಿಫಾರಸುಗಳನ್ನು ಕರ್ನಾಟಕ ರಾಜ್ಯ ಅತ್ಯಂತ ಗಂಭೀರವಾಗಿ ಅನುಷ್ಠಾನಿಸಿ ದೇಶಕ್ಕೆ ಮಾದರಿ ಎನಿಸಿತು. ಅನಂತರದ ದಿನಗಳಲ್ಲಿ ಮತ್ತೆ ತರಲಾದ ತಿದ್ದುಪಡಿಗಳು ವಿಫ‌ಲ ಗೊಂಡು ಕೊನೆಗೆ 1993ರಲ್ಲಿ ಸಮಗ್ರ ತಿದ್ದುಪಡಿಯೊಂದಿಗೆ ಪಂಚಾಯತ್‌ ರಾಜ್‌ ವ್ಯವಸ್ಥೆ ಜಾರಿಗೊಂಡಿತು.

1993ರ ತಿದ್ದುಪಡಿಯಂತೆ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ಈ ರೀತಿ ‘ತ್ರಿಸ್ತರ’ಗ್ರಾಮೀಣ ಆಡಳಿತ ವ್ಯವಸ್ಥೆಗಳು ಸುಸೂತ್ರವಾಗಿ ನಡೆದುಕೊಂಡು ಬಂದಿದೆ. ಪ್ರತೀ ತಾಲೂಕು ಪಂಚಾಯತ್‌ ಕ್ಷೇತ್ರಕ್ಕೆ ಸುಮಾರು 2ರಿಂದ 3 ಗ್ರಾಮಗಳು ಮತ್ತು ಪ್ರತೀ ಜಿಲ್ಲಾ ಪಂಚಾಯತ್‌ ಕ್ಷೇತ್ರಕ್ಕೆ ಸುಮಾರು 5ರಿಂದ 6 ಗ್ರಾಮಗಳ ವ್ಯಾಪ್ತಿ ಒಳಪಟ್ಟಂತೆ ನಿರ್ದಿಷ್ಟ ಮತದಾರರ ಸಂಖ್ಯೆ ಇಲ್ಲಿ ಗಣನೆಗೆ ಬರುತ್ತದೆ. ತಾಲೂಕು ಪಂಚಾಯತ್‌ಗಳಿಗೆ ಅಭಿವೃದ್ಧಿ ಕಾರ್ಯಕ್ಕೆ ಸಾಕಷ್ಟು ಅನುದಾನ ಇಲ್ಲವೆನ್ನುವ ಮಾತಿದ್ದರೂ ತಾಲೂಕು ಮಟ್ಟದ ಇಲಾಖೆಗಳ ಆಡಳಿತಾತ್ಮಕ ಮೇಲುಸ್ತುವಾರಿ ಒಳಗೊಂಡಂತೆ ಗ್ರಾಮ ಪಂಚಾಯತ್‌ಗಳ ಅಡಳಿತ ಸಿಬಂದಿ ನಿರ್ವಹಣೆ, ಮೇಲ್ವಿಚಾರಣೆ, ಗ್ರಾಮಸಭೆ ಮತ್ತು ಪ್ರಕಾರ್ಯಗಳು ಮಾತ್ರವಲ್ಲದೆ, ತಾಲೂಕು ಪಂ. ಸದ ಸ್ಯರು ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳಿಗೆ ಕೂಡ ಸದಸ್ಯರ ಮೂಲಕ ಒಂದಷ್ಟು ಅನುದಾನಗಳು ಬಿಡುಗಡೆ ಯಾಗುತ್ತವೆ. ತಾಲೂಕು ಪಂಚಾಯತ್‌ ಸದಸ್ಯರಿಗೆ ನಿರ್ದಿಷ್ಟ ಚೌಕಟ್ಟಿನೊಳಗೆ ತಮ್ಮನ್ನು ಕ್ಷೇತ್ರಾಭಿವೃದ್ಧಿ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವಿದೆ.

ಜಿಲ್ಲಾ ಪಂಚಾಯತ್‌ ಬಹಳ ಪ್ರಬಲವಾದ ವೇದಿಕೆ. ಜಿಲ್ಲಾ ವ್ಯಾಪ್ತಿಯಲ್ಲಿ ಬರುವಂತಹ ಬಹುತೇಕ ಇಲಾಖೆ ಗಳ ಸಂಪೂರ್ಣ ಹತೋಟಿ, ಉಸ್ತುವಾರಿ ಜಿಲ್ಲಾ ಪಂಚಾ ಯತ್‌ಗಿದೆ. ಬಹುತೇಕ ಎಲ್ಲ ಇಲಾಖೆಗಳು ಜಿಲ್ಲಾ ಪಂಚಾ ಯತ್‌ನ ಕಾರ್ಯ ವ್ಯಾಪ್ತಿಯಲ್ಲಿ ಬರುತ್ತವೆ. ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ವಿಶೇಷ ಗೌರವದ ಸ್ಥಾನಮಾನವಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿ ವೃದ್ಧಿ ಆರೋಗ್ಯ ಹೀಗೆ ಸುಮಾರು 21ರಷ್ಟು ಇಲಾಖೆಗಳು ಜಿಲ್ಲಾ ಪಂಚಾಯತ್‌ನ ಆಡಳಿತಕ್ಕೊಳಪಡುತ್ತವೆ. ಜಿಲ್ಲಾ ಪಂಚಾ ಯತ್‌ನ (ಕೆ.ಡಿ.ಪಿ.) ಪ್ರಗತಿ ಪರಿಶೀಲನ ಸಭೆಗೆ ಬಹಳ ಮಹತ್ವವಿದೆ.

Advertisement

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ನಲ್ಲಿ ರಾಜಕೀಯ ರಹಿತವಾದ ಅಭಿವೃದ್ಧಿಪರ ಚಿಂತನೆಗಳಿಗೆ ಆದ್ಯತೆ ಇದೆ. ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸುವಂತಹ ಕೆಲಸಗಳು ನಡೆಯುತ್ತವೆ. ಜಿಲ್ಲೆಯ ಅಭಿವೃದ್ಧಿ ಕೆಲಸಗಳು, ರಸ್ತೆ, ಕುಡಿಯುವ ನೀರು ಇತ್ಯಾದಿ ಶಾಶ್ವತ ಕಾರ್ಯಗಳು ಮತ್ತು ಜಿಲ್ಲಾ ಪಂಚಾಯತ್‌ನ ಅಧೀನದಲ್ಲಿ ಬರುವ ಪ್ರಗತಿ ಮತ್ತು ಕುಂದುಕೊರತೆಗಳ ಪರಿಶೀಲನೆ ಅಧಿಕಾರ ಜಿಲ್ಲಾ ಪಂಚಾಯತ್‌ಗೆ ಇದೆ. ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಮತ್ತು ಜನಪರವಾದ ಯೋಜನೆ ಕೆಲಸ ಕಾರ್ಯಗಳ ಬಗೆಗೆ ಕ್ರಮ ವಹಿಸಲು ಜಿಲ್ಲಾ ಪಂಚಾಯತ್‌ ಒಂದು ಪ್ರಮುಖ ವೇದಿಕೆಯಾಗಿದೆ. ಜನಸಾಮಾನ್ಯರ ಅಹವಾಲುಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ದೃಷ್ಟಿಯಲ್ಲಿ ಜಿಲ್ಲಾ ಪಂಚಾಯತ್‌ ಪ್ರಮುಖ ಪಾತ್ರ ವಹಿಸುತ್ತದೆ.

ರಾಜಕೀಯ ಪ್ರತಿಷ್ಠೆ ಇಲ್ಲದೆ ಪಕ್ಷಾತೀತವಾಗಿ ಸಾರ್ವಜನಿಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಮತ್ತು ಅಹವಾಲುಗಳಿಗೆ ಸೂಕ್ತವಾಗಿ ಸ್ಪಂದಿಸಲು ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳು ಪ್ರಮುಖ ವೇದಿಕೆಗಳು. ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಗ್ರಾಮೀಣ ಭಾಗದ ಕಡೆಗೆ ಗಮನಹರಿಸಿ ಕೆಲಸ ಮಾಡಲು ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಚುನಾಯಿತ ಆಡಳಿತ ಅತೀ ಅವಶ್ಯ. ಹಾಗಾಗಿ ಈ ಸಂಸ್ಥೆಗಳ ಚುನಾವಣೆಯನ್ನು ದೀರ್ಘ‌ ಕಾಲ ಮುಂದೂಡುವುದು ಸಮರ್ಥನೀಯವಲ್ಲ ಎನ್ನುವ ವಿಚಾರವನ್ನು ಗಮನದಲ್ಲಿರಿಸಿ ಕೊಂಡು ರಾಜ್ಯ ಸರಕಾರ ಈ ಸಂಸ್ಥೆಗಳಿಗೆ ಆದಷ್ಟು ಶೀಘ್ರ ಚುನಾವಣೆ ನಡೆಸಬೇಕು. ಈ ಎರಡೂ ಸಂಸ್ಥೆಗಳಲ್ಲಿ ಶೀಘ್ರವೇ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ ಎನ್ನುವುದು ಸಾರ್ವಜನಿಕರ ಆಶಯ ಕೂಡ.

– ಕಟಪಾಡಿ ಶಂಕರ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next